ತಾಕತ್ ಇದ್ರೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು

|

Updated on: Mar 02, 2023 | 10:57 PM

ಲಂಚ ಹೊಡೆಯೋದು ಕಮ್ಮಿ ಮಾಡಿ, ಆಗ ಅಕ್ಕಿ ಕೊಡಲು ಸಾಧ್ಯವಾಗುತ್ತೆ ಅಂತ ಬುದ್ಧಿ ‌ಹೇಳಿದೆ. ಇವರ ಮನೆ ಹಾಳಗ, 7 ಕೆಜಿ ಅಕ್ಕಿಯಿಂದ 5 ಕೆಜಿಗೆ ಇಳಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಕತ್ ಇದ್ರೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು
ವಿಪಕ್ಷ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ‘ನಾನು ಸುಳ್ಳು ಹೇಳುತ್ತಿದ್ದೇನೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳುತ್ತಿದ್ದಾರೆ. ಬೊಮ್ಮಾಯಿಯವರೇ, ತಾತಕ್ ಇದ್ದರೆ ಒಂದೇ ವೇದಿಕೆಗೆ ನನ್ನ ಜತೆಗೆ ಚರ್ಚೆಗೆ ಬನ್ನಿ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಬಹಿರಂಗ ಸವಾಲು ಹಾಕಿದರು. ಹುಕ್ಕೇರಿಯಲ್ಲಿ (Hukkeri) ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಪ್ರಣಾಳಿಕೆ ತೆಗೆದುಕೊಂಡು ನೀವು ಬನ್ನಿ, ನನ್ನ ಪ್ರಣಾಳಿಕೆ ತೆಗೆದುಕೊಂಡು ನಾನು ಬರುತ್ತೇನೆ. ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಪ್ರಮಾಣವಚನ ಸ್ವೀಕರಿಸಿದ ದಿನವೇ 5 ಯೋಜನೆಗಳನ್ನು ಜಾರಿಗೆ ತರುವಂತೆ ಆದೇಶ ಮಾಡಿದ್ದೆ. ಎಲ್ಲಾ ಧರ್ಮದ, ಎಲ್ಲಾ ಜಾತಿಯ ‌ಜನರಿಗೆ ಅನ್ನಭಾಗ್ಯ ಯೋಜನೆ ಮಾಡಿದ್ದೆವು. ಲಂಚ ಹೊಡೆಯೋದು ಕಮ್ಮಿ ಮಾಡಿ, ಆಗ ಅಕ್ಕಿ ಕೊಡಲು ಸಾಧ್ಯವಾಗುತ್ತೆ ಅಂತ ಬುದ್ಧಿ ‌ಹೇಳಿದೆ. ಇವರ ಮನೆ ಹಾಳಗ, 7 ಕೆಜಿ ಅಕ್ಕಿಯಿಂದ 5 ಕೆಜಿಗೆ ಇಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೋಕಾಯುಕ್ತ ದಾಳಿಯಿಂದ ಬಿಜೆಪಿ ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ; ಡಿಕೆ ಶಿವಕುಮಾರ್

ನಾವು ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆಯನ್ನೂ ನೀಡಿದರು. ರೈತರ ಸಾಲ ಮನ್ನಾ ಮಾಡಿ ಅಂತ ಒತ್ತಾಯಿಸಿದರೆ ಯಡಿಯೂರಪ್ಪ ಅವರು ನೋಟ್ ಪ್ರಿಂಟ್ ಮಾಡುವ ಯಂತ್ರ ಇಟ್ಟಿಲ್ಲ ಎಂದರು. ಈ ಸರ್ಕಾರವನ್ನು ‘ಅಲಿಬಾಬಾ ಔರ್ ಚಾಲಿಸ್ ಚೋರ್’ ಅಂತ ಕರೆಯುತ್ತೇನೆ. ಬಿಜೆಪಿಯವರು ಗೆದ್ದಿಲ್ಲ, ಆದರೂ ಸಹ ವಿಜಯ ಸಂಕಲ್ಪ ಯಾತ್ರೆ ಮಾಡ್ಕೊಂಡು ತಿರುಗುತ್ತಿದ್ದಾರೆ. ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ. ಹುಕ್ಕೇರಿಗೆ ಬೇಕಾದ ಎಲ್ಲಾ ಅಭಿವೃದಿ ಕೆಲಸ ಮಾಡೋಣ‌. ನಮ್ಮನ್ನು ಬೆಂಬಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಇತ್ತೀಚೆಗೆ ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಸಿದ್ದರಾಮಯ್ಯ ವಿರುದ್ಧ ರೋಷಷಾವೇಶದಿಂದ ಮಾತನಾಡಿದ್ದ ಬೊಮ್ಮಾಯಿ, ಅರ್ಕಾವತಿ ಲೇಔಟ್ ಡಿನೋಟಿಫೈ ವಿಚಾರವಾಗಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ನಾನು ಅಧಿಕಾರಕ್ಕೆ ಬರುವ ಮುನ್ನ ಅರ್ಕಾವತಿ ಲೇಔಟ್ ಡಿನೋಟಿಫೈ ಆಗಿತ್ತು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ