ಅಧಿಕಾರಕ್ಕಾಗಿ ಕಾಂಗ್ರೆಸ್ ಯಾರನ್ನು ಬೇಕಾದ್ರೂ ಹತ್ಯೆ ಮಾಡುತ್ತೆ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಅಶ್ವತ್ಥ್ ನಾರಾಯಣ

|

Updated on: Feb 25, 2023 | 8:39 PM

ಅಧಿಕಾರಕ್ಕಾಗಿ ಕಾಂಗ್ರೆಸ್ ಯಾರನ್ನು ಬೇಕಾದ್ರೂ ಹತ್ಯೆ ಮಾಡುತ್ತೆ ಎಂದು ಸಚಿವ ಅಶ್ವತ್ಥ್ ನಾರಾಯಣ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆ: ಅಧಿಕಾರಕ್ಕಾಗಿ ಕಾಂಗ್ರೆಸ್ (Congress) ಯಾರನ್ನು ಬೇಕಾದ್ರೂ ಹತ್ಯೆ ಮಾಡುತ್ತೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಮಾಯಕ ಯೋಧರನ್ನು ಬಲಿ ಪಡೆದಿದ್ದು ಇದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ವರ್ತನೆಯಿಂದ ಅನೇಕ ಯೋಧರು ಹುತಾತ್ಮರಾದರು. ಒಂದು ಕಾಲದಲ್ಲಿ ವಿಶ್ವದಲ್ಲಿ ಅಮೆರಿಕದ ಬಗ್ಗೆ ಮಾತನಾಡುತ್ತಿದ್ದರು. ಇಂದು ವಿಶ್ವದಲ್ಲಿ ನಮ್ಮ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಣ. ಉಕ್ರೇನ್ ಯುದ್ಧದ ವೇಳೆ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ ಎಂದು ಹೇಳಿದರು.

ಟಿಪ್ಪುನನ್ನು ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ಹೊಡೆದು ಹಾಕೋಣ ಎಂದು ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್​ ನಾಯಕರುಗಳು ಅಶ್ವತ್ಥ ನಾರಾಯಣ ವಿರುದ್ಧ ಕಿರಿಕಾರಿದ್ದರು. ಮಾಜಿ ಸಿಎಂ ಸಿದ್ಧರಾಮಯ್ಯ ಅಶ್ವತ್ಥ್ ನಾರಾಯಣ ಹೇಳಿಕೆ ಪ್ರಚೋದನಾಕಾರಿ ಹೌದೋ? ಅಲ್ವೋ? ಎಂದು ಸದನದಲ್ಲಿ ಪ್ರಶ್ನಿಸಿದ್ದರು. ಸದ್ಯ ಇದರ ಮಧ್ಯೆ ಅಶ್ವತ್ಥ ನಾರಾಯಣ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಧಮ್​ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ: ಸದನದಲ್ಲಿ ಗುಡುಗಿದಲ್ಲಿ ಸಿದ್ದರಾಮಯ್ಯ

ಸ್ವಾಮೀಜಿಗಳು ಬಿಜೆಪಿ ಸೇರ್ಪಡೆಗೆ ಮುಕ್ತ ಆಹ್ವಾನ ನೀಡಿದ ಸಚಿವ

ಭಾರತೀಯ ಜನತಾ ಪಾರ್ಟಿಯಲ್ಲಿ ಎಲ್ಲರಿಗೂ ಮುಕ್ತ ಆಹ್ವಾನ ಇದೆ. ಯೋಗಿಯವರು ಸನ್ಯಾಸಿಯಾಗಿದ್ದುಕೊಂಡೇ ರಾಜಕೀಯದಲ್ಲಿದ್ದಾರೆ. ಶಾಸಕರಾಗಿ, ಮಂತ್ರಿಯಾಗಿ, ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್​ ಅಂತಹ ಆಲೋಚನೆ, ವಿಚಾರವುಳ್ಳ ಸ್ವಾಮೀಜಿಗಳು ಬಿಜೆಪಿ ಸೇರಬಹುದು. ಬಿಜೆಪಿಯಲ್ಲಿ ಎಲ್ಲರೂ ಇದ್ದಾರೆ, ಹೀಗಾಗಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಹೇಳುವುದೆಲ್ಲಾ ಸುಳ್ಳು

ಇನ್ನು ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ 8 ಸಾವಿರ ಕೋಟಿ ಹಗರಣ ನಡೆದಿರುವ ಬಗ್ಗೆ ನಾವು ಸದನದಲ್ಲೇ ಹೇಳಿದ್ದೇವೆ. ನಾವು ಯಾವುದೇ ಹೇಳಿದರು ಕೂಡ ಸತ್ಯ ಮಾತ್ರ ಹೇಳ್ತೇವೆ. ಕಾಂಗ್ರೆಸ್ ನಾಯಕರು ಹೇಳುವುದೆಲ್ಲಾ ಸುಳ್ಳು. 800 ಎಕರೆಗೂ ಹೆಚ್ಚು ಜಮೀನು ರೀಡೂ ಮಾಡಿ ಎಷ್ಟು ಹಣ ಲಾಭ ಮಾಡಿಕೊಂಡಿದ್ದಾರೆ ಅನ್ನೋದನ್ನ ಹೇಳಿದ್ದೇವೆ.

ಇದನ್ನೂ ಓದಿ: ಬೊಮ್ಮಾಯಿ ಕಣ್ಣುಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು; ಸಿದ್ದರಾಮಯ್ಯ ಪ್ರಶ್ನೆ

ಅಶ್ವತ್ಥ್ ನಾರಾಯಣ್ ವ್ಯಂಗ್ಯ

ಬಿಜೆಪಿ ಪೋಸ್ಟರ್​ಗಳ ಮೇಲೆ ಕಾಂಗ್ರೆಸ್ ಕಿವಿಗೆ ಹೂ ಪೋಸ್ಟರ್ ಹಚ್ಚಿದ ವಿಚಾರವಾಗಿ ಮಾತನಾಡಿ, ಇವರು ರಾಜ್ಯದ ಜನರ ಮೇಲೆ ಕಿವಿಗೆ ಹೂ ಇಡುವ ಕೆಲಸ ಮಾಡುತಿದ್ದಾರೆ. ಇವರು 52 ಸೀಟ್​ನ ಬಸ್​ನಲ್ಲಿ ಓಡಾಡುತಿದ್ದಾರೆ. ಇವರು ರಾಜ್ಯದಲ್ಲಿ 52 ಅಷ್ಟೆ ಸೀಟ್ ಗೆಲ್ಲುತ್ತಾರೆ. 120 ರಿಂದ 79 ಸೀಟ್ ಆದ್ರೂ ಇವಾಗ 52 ಕ್ಕೆ ಬರುತ್ತಾರೆ ಎಂದು ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:06 pm, Sat, 25 February 23