ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವುದು ತಪ್ಪಾ? ಎನ್​ಇಪಿ ರದ್ದತಿ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ಪ್ರಶ್ನೆ

NEP cancellation in Karnataka; ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎನ್ನಲು ಯಾವುದೇ ರೀತಿ ಸೂಕ್ತ ಕಾರಣಗಳಿಲ್ಲದೇ ಹೊದರೂ, ಅದನ್ನು ತಿರಸ್ಕರಿಸುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ದೇಶಕ್ಕಿಂತ ರಾಜಕೀಯವೇ ಮುಖ್ಯ ಎಂದು ಇಲ್ಲಿ ತೋರಿಬರುತ್ತಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವುದು ತಪ್ಪಾ? ಎನ್​ಇಪಿ ರದ್ದತಿ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ಪ್ರಶ್ನೆ
ಸಿಟಿ ರವಿ
Follow us
| Updated By: ಗಣಪತಿ ಶರ್ಮ

Updated on: Aug 15, 2023 | 5:43 PM

ಚಿಕ್ಕಮಗಳೂರು, ಆಗಸ್ಟ್ 15: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಗೊಳಿಸಲಾಗುವುದು ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಹೇಳಿಕೆಗೆ ಮಾಜಿ ಸಚಿವ, ಬಿಜೆಪಿ ನಾಯಕ ಸಿಟಿ ರವಿ (CT Ravi) ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಿಮ್ಮ (ಸಿದ್ದರಾಮಯ್ಯ) ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವಂತಹ ಮಾನಸಿಕತೆ ಹೊಂದಿರುವಂತದ್ದಾಗಿರಬೇಕು. ಮಾತೃಭಾಷೆಯಲ್ಲಿ ಶಿಕ್ಷಣ, ತಾಂತ್ರಿಕ ಕೌಶಲವುಳ್ಳ ಶಿಕ್ಷಣ ಒದಗಿಸುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯು ನೈತಿಕ ಮೌಲ್ಯಗಳನ್ನು ಒಳಗೊಂಡಿದ್ದು, ಮೂರು ವರ್ಷಗಳ ಕಾಲ ಅಭಿಪ್ರಾಯ ಪಡೆದು ಅದರ ಪಠ್ಯಕ್ರಮವನ್ನು ರೂಪಿಸಲಾಗಿದೆ. ಈಗ ಎನ್​ಇಪಿ ಬೇಡ ಎನ್ನಲು ಯಾವುದೇ ರೀತಿ ಸೂಕ್ತ ಕಾರಣಗಳಿಲ್ಲ ಎಂದರು.

ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೊದಲು ಕಸ್ತೂರಿ ರಂಗನ್​​​ ಅವರ ನೇತೃತ್ವದಲ್ಲಿ ಸಾವಿರಾರು ಜನರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಈ ಯೋಜನೆಯು ಯಾವುದೇ ರಾಜಕೀಯ ಉದ್ದೇಶಗಳನ್ನು ಹೊಂದಿರುವ ಯೋಜನೆಯಾಗಿರಲಿಲ್ಲ. ಬದಲಾಗಿ ಶಿಕ್ಷಣದ ಮೂಲಕ ದೇಶ ಕಟ್ಟುವ ಯೋಜನೆಯಾಗಿತ್ತು. ಈ ರೀತಿ ಉತ್ತಮ ಉದ್ದೇಶವನ್ನು ಹೊಂದಿರುವ ಯೋಜನೆಯನ್ನು ನಿಲ್ಲಿಸಿದ್ದಿರಿ. ನಿಮಗೆ ದೇಶಕ್ಕಿಂತ ರಾಜಕಾರಣವೇ ಮುಖ್ಯವಾ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಸೋಮವಾರ ಕೆಪಿಸಿಸಿ ನೂತನ ಕಚೇರಿಯಲ್ಲಿ ನಡೆದ ಸರ್ವ ಸದಸ್ಯ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಇಪಿ ರದ್ದುಗೊಳ್ಳಲಿದೆ. ಈ ಬಾರಿ ಸರ್ಕಾರ ರಚನೆಯಾಗುವ ಮೊದಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿತ್ತು. ದಿಢೀರ್ ಬದಲಾವಣೆಯಿಂದ ಯಾವುದೇ ರೀತಿ ತೊಂದರೆಯನ್ನು ವಿದ್ಯಾರ್ಥಿಗಳು ಎದುರಿಸಬಾರದು ಎನ್ನುವ ಕಾರಣದಿಂದ ಈ ವರ್ಷ ಯಾವುದೇ ಬದಲಾವಣೆ ಕೈಗೊಂಡಿರಲಿಲ್ಲ. ಆದರೆ ಮುಂದಿನ ವರ್ಷದಿಂದ ಈ ಬದಲಾವಣೆ ಜಾರಿಗೊಳ್ಳಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ; 2024-25ನೇ ಶೈಕ್ಷಣಿಕ ವರ್ಷದಿಂದ ಕರ್ನಾಟದಲ್ಲಿ ಎನ್​​ಇಪಿ ಇರಲ್ಲ; ಸಿಎಂ ಸಿದ್ದರಾಮಯ್ಯ ಘೋಷಣೆ

ರಾಷ್ಟ್ರೀಯ ಶಿಕ್ಷಣ ನೀತಿ (NEP)

2021ರಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾಗಿ ರೂಪುಗೊಂಡ ಯೋಜನೆಯು ಇದಾಗಿತ್ತು. 2030ರ ವೇಳೆಗೆ ದೇಶದ ಶಿಕ್ಷಣ ನೀತಿಯನ್ನು ಉನ್ನತೀಕರಿಸುವ ಆಶಯವನ್ನು ಈ ಯೋಜನೆ ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ