ತೇಜಸ್ವಿನಿ ಅನಂತಕುಮಾರ್​​​ಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ; ಹೇಳಿದ್ದೇನು?

‘ರಾತ್ರೋರಾತ್ರಿ ಕಾವೇರಿ ವಿಚಾರದಲ್ಲಿ ಅಪಿಡವಿಟ್ ಸಲ್ಲಿಸಿ, ರಾಜ್ಯದ ಹಿತ ಕಾಪಾಡಿದವರು ಅನಂತಕುಮಾರ್. ಮೊನ್ನೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರ ಮನೆಯಲ್ಲಿ ಅನಂತಕುಮಾರ್ ಅವರನ್ನು ನೆನೆಪಿಸಿಕೊಂಡೆ’ ಎಂದು ತೇಜಸ್ವಿನಿ ಅನಂತಕುಮಾರ್ ಜತೆ ಡಿಕೆ ಶಿವಕುಮಾರ್ ಹೇಳಿದ್ದಾರೆ.

ತೇಜಸ್ವಿನಿ ಅನಂತಕುಮಾರ್​​​ಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ; ಹೇಳಿದ್ದೇನು?
ತೇಜಸ್ವಿನಿ ಅನಂತಕುಮಾರ್ ಹಾಗೂ ಡಿಕೆ ಶಿವಕುಮಾರ್ (ಇತ್ತೀಚೆಗೆ ಭೇಟಿಯಾಗಿದ್ದ ಸಂದರ್ಭದ ಸಂಗ್ರಹ ಚಿತ್ರ)
Edited By:

Updated on: Sep 23, 2023 | 6:28 PM

ಬೆಂಗಳೂರು, ಸೆಪ್ಟೆಂಬರ್ 23: ಕೇಂದ್ರ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ (Tejaswini Ananth Kumar) ಅವರು ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿದ್ದು ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಆದರೆ, ತೇಜಸ್ವಿನಿ ಅವರ ಜತೆ ರಾಜಕೀಯ ವಿಚಾರ ಚರ್ಚಿಸಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇದೀಗ ಕಾವೇರಿ ವಿಚಾರವಾಗಿ ತೇಜಸ್ವಿನಿ ಅವರಿಗೆ ದೂರವಾಣಿ ಕರೆ ಮಾಡಿರುವ ಡಿಕೆ ಶಿವಕುಮಾರ್, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

‘ರಾತ್ರೋರಾತ್ರಿ ಕಾವೇರಿ ವಿಚಾರದಲ್ಲಿ ಅಪಿಡವಿಟ್ ಸಲ್ಲಿಸಿ, ರಾಜ್ಯದ ಹಿತ ಕಾಪಾಡಿದವರು ಅನಂತಕುಮಾರ್. ಮೊನ್ನೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರ ಮನೆಯಲ್ಲಿ ಅನಂತಕುಮಾರ್ ಅವರನ್ನು ನೆನೆಪಿಸಿಕೊಂಡೆ’ ಎಂದು ತೇಜಸ್ವಿನಿ ಅನಂತಕುಮಾರ್ ಜತೆ ಡಿಕೆ ಶಿವಕುಮಾರ್ ಹೇಳಿದ್ದಾರೆ.

‘ನೀವು ಮೃದು ಹೃದಯಿ. ನುಗ್ಗಬೇಕು, ದೈರ್ಯ ಮಾಡಬೇಕು. ಜನರ ಪ್ರತಿನಿಧಿ ಆಗಬೇಕು. ಇಲ್ಲವಾದಲ್ಲಿ ಅಡಿಗೆ ಮನೆ ಅದಮ್ಯ ಚೇತನದಲ್ಲೇ ಇರಬೇಕಾಗುತ್ತದೆ. ದೈರ್ಯವಾಗಿ ಮುನ್ನುಗ್ಗಿ, ಜನ ತಮ್ಮ ಬೆಂಬಲಕ್ಕೆ ಇದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ಅನಂತಕುಮಾರ್ ಕೊಡುಗೆ ಇದೆ, ಯಡಿಯೂರಪ್ಪ ಕೂಡ ತಮ್ಮ ಬೆಂಬಕ್ಕೆ ಇದ್ದಾರೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇಂತಹವರ ಕುಟುಂಬ ರಾಜಕೀಯದಲ್ಲಿ ಇರಬೇಕು ಎಂದು ಆಶಿಸಿದ್ದಾರೆ.

ಇದನ್ನೂ ಓದಿ: ತೇಜಸ್ವಿನಿ ಅನಂತಕುಮಾರ್‌ ಜತೆ ರಾಜಕೀಯ ಚರ್ಚೆ ಮಾಡಿಲ್ಲ; ಟ್ವೀಟ್​​ಗಾಗಿ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್

ಇತ್ತೀಚೆಗೆ ತೇಜಸ್ವಿನಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅನಂತಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದ ವಿಚಾರವಾಗಿ ಚರ್ಚಿಸಲು ಅವರು ಡಿಸಿಎಂ ಅನ್ನು ಭೇಟಿಯಾಗಿದ್ದರು. ಇದಾದ ನಂತರ ರಾಜಕೀಯ ಚರ್ಚಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಅವರ ಅಧಿಕೃತ ಟ್ವಿಟರ್​ ಹ್ಯಾಂಡಲ್​​ನಿಂದ ಟ್ವೀಟ್ ಮಾಡಲಾಗಿತ್ತು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಶಿವಕುಮಾರ್, ತೇಜಸ್ವಿನಿ ಅವರ ಜತೆ ರಾಜಕೀಯ ಚರ್ಚಿಸಿಲ್ಲ. ಆ ರೀತಿ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ