ಜಾತಿವಾದ, ಕೋಮುವಾದ, ಮನುವಾದದ ವಿಷ ತುಂಬಿರುವ ಸಾವಿರ ತಲೆಯ ವಿಷಪೂರಿತ ಹಾವು; ಯತೀಂದ್ರ ಸಿದ್ದರಾಮಯ್ಯ
ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಮುಖ್ಯವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ಮುಗಿಬಿದ್ದಿದ್ದಾರೆ. ಇದರ ಮಧ್ಯೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಸಹ ಆರ್ಎಸ್ಎಸ್ ಅನ್ನು ವಿಷದ ಸರ್ಪಕ್ಕೆ ಹೋಲಿಸಿ ವಾಗ್ದಾಳಿ ನಡೆಸಿದ್ದು, ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಮೈಸೂರು, (ಆಗಸ್ಟ್ 17): ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಕೋಮುವಾದ ಮತ್ತು ಜಾತಿವಾದದಿಂದ ಪ್ರೇರಿತವಾದ ‘ಸಾವಿರ ತಲೆಯ ವಿಷಪೂರಿತ ಹಾವು’ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ವಾಗ್ದಾಳಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಬಳಿಕ ಸ್ಥಳವನ್ನು ಶುದ್ಧೀಕರಣ ಮಾಡಿದನ್ನು ವಿರೋಧಿಸಿ ಆಗಸ್ಟ್ 15ರಂದು ಮೈಸೂರಿನ ಕಾಂಗ್ರೆಸ್ ಕಚೇರಿ ಮುಂದೆ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಯತೀಂದ್ರ, ‘ಆರ್ಎಸ್ಎಸ್ ಸಾವಿರ ತಲೆಯ ವಿಷಕಾರಿ ಹಾವಿನಂತಿದೆ. ಇದು ಜಾತಿವಾದ, ಕೋಮುವಾದ ಮತ್ತು ಮನುವಾದದ ವಿಷದಿಂದ ತುಂಬಿದೆ. ಇದು ವಿಷವನ್ನು ಕಾರುತ್ತಾ ಇಡೀ ಸಮಾಜವನ್ನೇ ವಿಷಪೂರಿತಗೊಳಿಸಲು ಯತ್ನಿಸುವ ಹಾವಾಗಿದೆ. ಇದನ್ನು ನಿಯಂತ್ರಿಸದೆ ಬಿಟ್ಟರೆ, ನಮ್ಮ ಸಮಾಜ ಹಾಳಾಗುತ್ತದೆ ಮತ್ತು ದೇಶಕ್ಕೂ ಹಾನಿಯಾಗುತ್ತದೆ’ ಎಂದು ಕಿಡಿಕಾರಿದ್ದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಂತರ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಪ್ರಕ್ರಿಯೆಯ ಸಂಬಂಧ, ಆರ್ಎಸ್ಎಸ್, ಬಿಜೆಪಿ ಮತ್ತು ಶ್ರೀರಾಮ ಸೇನೆಗಳು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: “ಬೆದರಿಕೆ ಹಾಕೋದು ನನ್ನತ್ರ ನಡೆಯಲ್ಲ”: ಸುಪ್ರೀಂ ಆದೇಶದಂತೆ ಬಿಲ್ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
‘ಆರ್ಎಸ್ಎಸ್, ಬಿಜೆಪಿ ಮತ್ತು ಶ್ರೀರಾಮ ಸೇನೆ ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಅವರು ಹಾಗೆ ಮಾಡುವವರೆಗೂ ನಾವು ಎದೆಗುಂದದೇ ಈ ಪ್ರತಿಭಟನೆಯನ್ನು ಮುಂದುವರಿಸಬೇಕು. ಪ್ರತಿಯೊಬ್ಬರೂ ಆರ್ಎಸ್ಎಸ್ನ ಹೀನ ಮನಸ್ಥಿತಿಯನ್ನು ಖಂಡಿಸಬೇಕು ಮತ್ತು ಅದರ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದರು.
ಯತೀಂದ್ರ ವಿರುದ್ಧ ಯತ್ನಾಳ್ ಕಿಡಿ
ಇನ್ನು ಯತೀಂದ್ರ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಲ್ಲಿ ತಲೆ ಇಲ್ಲ, ಬುಡ ಇಲ್ಲ. ಕರ್ನಾಟಕದಲ್ಲಿ ಇಬ್ಬರಿಗೆ ಆರ್ಎಸ್ಎಸ್ ಜ್ವರ ಬಂದಿದೆ. ಸಾವಿರ ತಲೆಗಳ ವಿಷ ಇರೋದು ಕಾಂಗ್ರೆಸ್ಗೆ ಹೊರತು RSSಗೆ ಅಲ್ಲ ಎಂದು ತಿರುಗೇಟು ನೀಡಿದರು.
ಸ್ವಾತಂತ್ರ್ಯ ಸಂಗ್ರಾಮ ವೇಳೆ ಕಾಂಗ್ರೆಸ್ ಯಾವ ರೀತಿ ನಡೆದುಕೊಳ್ತು. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಿದೆ ಅಂತಾ ಗೊತ್ತಿದೆ. ಆರ್ಎಸ್ಎಸ್ ಪಥಸಂಚಲನಗಳಿಂದ ಎಲ್ಲೂ ಕೋಮು ಗಲಭೆ ಆಗಿಲ್ಲ. ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿ ಇವರಿಬ್ಬರು ಗಿರಾಕಿಗಳು ಮಾತನಾಡುತ್ತಿದ್ದಾರೆ. ಸಂಘಕ್ಕೆ ನೆಹರು, ಇಂದಿರಾಗಾಂಧಿ ಅವರೇ ಏನೂ ಮಾಡಲು ಆಗಿಲ್ಲ. ಮುಸ್ಲಿಮರನ್ನು ಖುಷಿ ಪಡಿಸಲು ಹೀಗೆ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದರು.
Published On - 4:21 pm, Mon, 17 August 26




