ಲೋಕಸಭೆ ಚುನಾವಣೆಗೆ ಸದ್ದಿಲ್ಲದೇ ತಯಾರಿ, ವೈಮನಸ್ಸು ಮರೆತು ಒಂದಾಗಿ ಕೆಲಸ ಮಾಡುತ್ತಿರುವ ‘ತ್ರಿಮೂರ್ತಿ’ಗಳು

| Updated By: ರಮೇಶ್ ಬಿ. ಜವಳಗೇರಾ

Updated on: Sep 06, 2023 | 8:02 AM

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಾರ್ಗೆಟ್ ಟ್ವೆಂಟಿ ತಲುಪಲು ಕಾಂಗ್ರೆಸ್​ನಿಂದ ಸದ್ದಿಲ್ಲದೇ ಮಾಸ್ಟರ್ ಪ್ಲ್ಯಾನ್​ಗಳು ನಡೆದಿವೆ. ಅದರಲ್ಲೂ ಕಾಂಗ್ರೆಸ್​​ನ ಈ 'ತ್ರಿಮೂರ್ತಿ'ಗಳು ವೈಮನಸ್ಸು ಮರೆತು ಒಂದಾಗಿ ಬಿಜೆಪಿಯ ಲೆಕ್ಕಾಚಾರ ಮೀರಿ ಭರ್ಜರಿ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ. ಈಗಾಗಲೇ ತೆರೆಮರೆಯ ಸಭೆ ನಡೆಸಿರುವ ತ್ರಿಮೂರ್ತಿಗಳು, ಸಂಭನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸದ್ದಿಲ್ಲದೇ ತಯಾರಿ, ವೈಮನಸ್ಸು ಮರೆತು ಒಂದಾಗಿ ಕೆಲಸ ಮಾಡುತ್ತಿರುವ ತ್ರಿಮೂರ್ತಿಗಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಸೆಪ್ಟೆಂಬರ್ 06): ಆಪರೇಷನ್ ಹಸ್ತದ (Operation Hasta) ಜೊತೆ ಜೊತೆಗೆ ಕಾಂಗ್ರೆಸ್ (Congress)  ಲೋಕಸಭಾ ಚುನಾವಣೆಗೆ(Loksabha Elections 2024) ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದೆ. ಈ ಬಾರಿ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್​ ಸದ್ದಿಲ್ಲದೇ ಚುನಾವಣಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್​​ನ ಕೆಲ ಹಿರಿಯ ನಾಯಕರ ನಡುವೆ ಮುಸುಕಿನ ಗುದ್ದಾಟಗಳು ಕೇಳಿಬರುತ್ತಿವೆ. ಆದ್ರೆ, ಇದೀಗ ಹೈಕಮಾಂಡ್ ಸೂಚನೆಯಂತೆ ಎಲ್ಲರು ಒಗ್ಗಟಾಗಿ ಲೋಕಸಸಭಾ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈ ‘ತ್ರಿಮೂರ್ತಿ’ಗಳು ವೈಮನಸ್ಸು ಮರೆತು ಒಂದಾಗಿ ಕೆಲಸ ಶುರು ಮಾಡಿಕೊಂಡಿದ್ದು, ಬಿಜೆಪಿಯ ಲೆಕ್ಕಾಚಾರ ಮೀರಿ ಭರ್ಜರಿ ಪ್ಲ್ಯಾನಿಂಗ್ ಮಾಡಿದ್ದಾರೆ.

ಸಂಸದ ಡಿಕೆ ಸುರೇಶ್, ಸಚಿವ ಎಂಬಿ ಪಾಟೀಲ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ವೈಮನಸ್ಸು ಮರೆತು ಒಂದಾಗಿ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಎಂಬಿ ಪಾಟೀಲ್​ ಉತ್ತರ ಕರ್ನಾಟಕದ ಪ್ರಭಾವ ಲಿಂಗಾಯತ ನಾಯಕರ ಜೊತೆ ನಿರಂತರ ಸಂಪರ್ಕದಲ್ಲದ್ದರೆ, ಡಿಕೆ ಶಿವಕುಮಾರ್ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಯತೀಂದ್ರ ಸಿದ್ದರಾಮಯ್ಯನವರು ಮೈಸೂರು, ಚಾಮರಾಜನಗರ ಸೇರಿದಂತೆ ಹೆಚ್ಚು ಕುರುಬ ಸಮುದಾಯ ಇರುವ ಕ್ಷೇತ್ರಗಳತ್ತ ಗಮನಹರಿಸಿದ್ದು, ಈಗಾಗಲೇ 10ಕ್ಕೂ ಹೆಚ್ಚು ಸಭೆ ನಡೆಸಿರುವ ಈ ತ್ರಿಮೂರ್ತಿಗಳು, ಲೋಕಸಭಾ ಕ್ಷೇತ್ರವಾರು ಆ್ಯಕ್ಟಿವ್ ಆಗಿರುವ ನಾಯಕರ ಶಾರ್ಟ್ ಲಿಸ್ಟ್ ಮಾಡಿ ಅವರದೊಂದಿಗೆ ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲೇ ‘ಗೃಹಲಕ್ಷ್ಮೀ’ಗೆ ಚಾಲನೆ ಹಿಂದೆ ‘ಕೈ’ ಮಾಸ್ಟರ್ ಪ್ಲ್ಯಾನ್, ಈ 4 ಕ್ಷೇತ್ರಗಳು ಟಾರ್ಗೆಟ್!

ಮೀಟಿಂಗ್ ನಲ್ಲಿ ಸ್ಥಳೀಯ ನಾಯಕರಿಗೆ ಟಾರ್ಗೆಟ್ ಹಾಗೂ ಟಾಸ್ಕ್ ನೀಡಲಾಗಿದೆ. ಸ್ಥಳೀಯ ಮಟ್ಟದ ಹೋರಾಟಗಳು, ಸಮಸ್ಯೆಗಳ ಬಗೆಹರಿಸಲು ಟಾಸ್ಕ್ ಕೊಡಲಾಗಿದ್ದು, ಆ ಟಾಸ್ಕ್ ಪೂರೈಸಿರುವ ವರದಿಯನ್ನು ಡಿಕೆ ಸುರೇಶ್, ಎಂಬಿ ಪಾಟೀಲ್ ಹಾಗೂ ಯತೀಂದ್ರ ಪ್ರತಿವಾರ ಪಡೆದು ಮುಂದಿನ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಇವರು ಲೋಕಸಭಾವಾರು ಅಭ್ಯರ್ಥಿಗಳ ಸಂಭನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಟಿಕೇಟ್ ಆಕಾಂಕ್ಷಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸ್ಥಳೀಯ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ