ಆಗದ ವಿಪಕ್ಷ ನಾಯಕನ ಆಯ್ಕೆ: ಸೇನಾನಿ ಇಲ್ಲದೆ ಯುದ್ಧ ಗೆಲ್ಲಬಹುದು ಎಂದ ಸಿಟಿ ರವಿ

| Updated By: Rakesh Nayak Manchi

Updated on: Sep 10, 2023 | 2:32 PM

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ರಚನೆಯಾಗಿ ನೂರು ದಿನಗಳು ಕಳೆದರೂ ಬಿಜೆಪಿ ಹೈಕಮಾಂಡ್ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ರಾಜ್ಯಧ್ಯಕ್ಷ ಬಲದಾವಣೆ ಬಗ್ಗೆಯೂ ಹೈಕಮಾಂಡ್ ನಿರ್ಣಯಿಸಿದೆ. ಅಧ್ಯಕ್ಷನ ಆಯ್ಕೆಯೂ ತಡವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಸಿ.ಟಿ.ರವಿ, ಸೇನಾನಿ ಇಲ್ಲದೆಯೂ ಯುದ್ಧ ಗೆದ್ದ ಉದಾಹರಣೆಯೂ ಇದೆ. ಕಾರಣವಿಲ್ಲದೆ ನಿರ್ಣಯ ಮುಂದೂಡಿಲ್ಲ ಎಂಬುದು ನನ್ನ ನಂಬಿಕೆಯಾಗಿದೆ ಎಂದಿದ್ದಾರೆ.

ಆಗದ ವಿಪಕ್ಷ ನಾಯಕನ ಆಯ್ಕೆ: ಸೇನಾನಿ ಇಲ್ಲದೆ ಯುದ್ಧ ಗೆಲ್ಲಬಹುದು ಎಂದ ಸಿಟಿ ರವಿ
ಬಿಜೆಪಿ ಮಾಜಿ ಶಾಸಕ ಸಿಟಿ ರವಿ
Follow us on

ಶಿವಮೊಗ್ಗ, ಸೆ.10: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ (BJP Opposition Leader) ನೇಮಕವಾಗದ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕ ಸಿ.ಟಿ.ರವಿ (C.T.Ravi), ಕಾರಣವಿಲ್ಲದೆ ನಿರ್ಣಯ ಮುಂದೂಡಿಲ್ಲ ಎಂಬ ನಂಬಿಕೆ ನನ್ನದು. ಸೇನಾನಿ ಇಲ್ಲದೆಯೂ ಯುದ್ಧ ಗೆದ್ದ ಉದಾಹರಣೆಯೂ ಇದೆ. ಆದರೆ ಸೇನಾನಿ ಬೇಕೇ ಬೇಕು. ಪ್ರಯೋಗಗಳು ಬೇಕೇ ಬೇಕು, ಇದೂ ಕೂಡ ಒಂದು ಪ್ರಯೋಗ ಎಂದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೆ ಮೂಲಸೌಕರ್ಯ, ಸ್ವಾವಲಂಬಿ ಮಾಡುವುದು ಅಗತ್ಯ. ಆದರೆ ಬೇಡುವ ಮಾನಸಿಕತೆ ದೀರ್ಘ ಕಾಲ ಇರುವುದು ಒಳ್ಳೆಯದಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಆಗಬೇಕು. ಆದರೆ ಇವರಿಗೆ (ಕಾಂಗ್ರೆಸ್) ಇವರಿಗೆ ಪ್ರೇರಣೆ ಆಗಿದ್ದು ಟಿಪ್ಪು. ಸರ್ಕಾರ 100 ದಿನಗಳ ಒಳಗೆ ಪ್ರತಿಭಟನೆ ಎದುರಿಸುವಂತಾಗಿದೆ. ರೈತರದ್ದಾಯ್ತು, ಈಗ ಖಾಸಗಿ ವಾಹನ ಚಾಲಕರು ಮುಂದಾಗಿದ್ದಾರೆ ಎಂದರು.

ಇದನ್ನೂ ಓದಿ: ಸಚಿವ ಉದಯನಿಧಿ ಸ್ಟಾಲಿನ್ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು: ಮಾಜಿ ಶಾಸಕ ಸಿಟಿ ರವಿ ಕಿಡಿ

ಇಡೀ ಜಗತ್ತು ಭಾರತ ದೇಶಕ್ಕೆ ಬಂದು ಹೊಗಳುತ್ತಿದೆ. ಆದರೆ ರಾಹುಲ್ ಗಾಂಧಿ​ ವಿದೇಶಕ್ಕೆ ಹೋಗಿ ಭಾರತವನ್ನು ತೆಗಳುತ್ತಿದ್ದಾರೆ. ಭಯೋತ್ಪಾದಕರು ಮಾತ್ರ ರಾಷ್ಟ್ರದ್ರೋಹಿಗಳಲ್ಲ. ಭಾರತದ ವಿರುದ್ಧ ಅಪಪ್ರಚಾರ ಮಾಡುವವರೂ ದೇಶದ್ರೋಹಿಗಳೇ. ಆ ಸಾಲಿಗೆ ಕಾಂಗ್ರೆಸ್​ ನಾಯಕ ರಾಹುಲ್ ಸೇರದಿರಲಿ ಎಂದು ಸಿಟಿ ರವಿ ಹೇಳಿದರು.

ಕಾಂಗ್ರೆಸ್ ಅಸಮಾಧಾನ ಇನ್ನಷ್ಟು ಹೆಚ್ಚಾಗಲಿ. ಅದು ನಮಗೆ ಸಂಬಂಧಿಸಿದ್ದಲ್ಲ, ಈ ಬಗ್ಗೆ ನಾವು ಯಾಕೆ ದುಃಖಪಡಬೇಕು ಎಂದರು. ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಸಿಟಿ ರವಿ, ಡಿಕೆ ಶಿವಕುಮಾರ್ ಇದರ ಪ್ರೊಡ್ಯುಸರ್, ಡೈರೆಕ್ಟರ್ ಇರಬಹುದು. ನನಗೆ ಗೊತ್ತಿಲ್ಲ, ಇಂಟೆಲಿಜೆನ್ಸಿ ಸಿದ್ದರಾಮಯ್ಯ ಬಳಿ ಇದೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ, ಗೊತ್ತಿರಲಾರದಷ್ಟು ಅಮಾಯಕರಲ್ಲ ಎಂದರು.

ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ: ಸಿಟಿ ರವಿ

ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಮೈತ್ರಿ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಊರಿಗೆ ಬಂದವಳು ನೀರಿಗೆ ಬರಲೇಬೇಕು. ಅದೇ ರೀತಿ ಹೊಂದಾಣಿಕೆ ಬಗ್ಗೆ ಚರ್ಚೆಯಾಗಿದ್ದರೆ ಬಹಿರಂಗ ಆಗಲೇಬೇಕು. ಬಿಎಸ್ ಯಡಿಯೂರಪ್ಪ, ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ಗಮನಿಸಿದ್ದೇನೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಕರ್ನಾಟಕದ 28 ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆ ನಡೆಯುತ್ತಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ