ಜನಧನ್ ಖಾತೆಗಳಿಂದ ಸಾವಿರಾರು ಕೋಟಿ ಕಳವು: ಎಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ

ಇದರಲ್ಲಿ ಎರಡೂ ಪಕ್ಷಗಳು ಶಾಮೀಲಾಗಿವೆ. ಇದೊಂದು ಅಂತರರಾಷ್ಟ್ರೀಯ ಮಟ್ಟದ ಹಗರಣ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಜನಧನ್ ಖಾತೆಗಳಿಂದ ಸಾವಿರಾರು ಕೋಟಿ ಕಳವು: ಎಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ
ಹೆಚ್‌.ಡಿ.ಕುಮಾರಸ್ವಾಮಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 11, 2021 | 5:11 PM

ಬೆಂಗಳೂರು: ಜನಧನ್​ ಖಾತೆಗಳಿಂದ ಸಾವಿರಾರು ಕೋಟಿ ಕಳುವಾಗಿರುವ ಶಂಕೆಯಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿ ಜನಧನ್​ ಖಾತೆಯ ಮೂಲಕ ಒಂದು ಅಥವಾ ಎರಡು ರೂಪಾಯಿ ಕದ್ದಿರುವ ಮಾಹಿತಿಯಿದೆ. ಇದರಲ್ಲಿ ಎರಡೂ ಪಕ್ಷಗಳು ಶಾಮೀಲಾಗಿವೆ. ಇದೊಂದು ಅಂತರರಾಷ್ಟ್ರೀಯ ಮಟ್ಟದ ಹಗರಣ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದಾರೆ. ಅವರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.

ಜನರಿಗೆ ರಾಜಕಾರಣಿಗಳ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿಯೂ ಭಾರತದ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಅಭಿವೃದ್ಧಿ ಕಾರ್ಯಗಳ ಕುರಿತ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿರಬಹುದು ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಮೂವರಲ್ಲ ನಾಲ್ವರು ಮುಖ್ಯಮಂತ್ರಿ ಆಗಬಹುದು ಎಂದು ಮತ್ತೊಂದು ಬಾಂಬ್ ಸಿಡಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನನ್ನು ಸೇರಿ ನಾಲ್ಕು ಜನ ಆಗಬಹುದು ಎಂದರು.

ಬಿಟ್​ಕಾಯಿನ್ ಹಗರಣದ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿದೆ. ಇದು ಹೇಗೆ ಸಾಧ್ಯವಾಯಿತು? ಜಾಮೀನು ಕೊಡಲು ವಾದಿಸಿದ್ದು, ಜಾಮೀನು ಕೊಟ್ಟವರು ಯಾರು? ಬಿಟ್​ಕಾಯಿನ್ ಪ್ರಕರಣದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ ಚಾರ್ಜ್​​ಶೀಟ್​ ಹಾಕುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಲಭ್ಯವಾಗಿದೆ. ದೊಡ್ಡಮಟ್ಟದಲ್ಲೇ ಈ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಗಳು ನಡೆಯುತ್ತಿವೆ. ಅಷ್ಟು ಸುಲಭವಾಗಿ ಆರೋಪಿಗೆ ಜಾಮೀನು ಹೇಗೆ ಸಿಕ್ಕಿತು? ಸರ್ಕಾರಿ ಅಭಿಯೋಜಕರು ಹೇಗೆ ವಾದ ಮಾಡಿದರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಎಚ್​ಡಿ ಕುಮಾರಸ್ವಾಮಿಗೆ ಹಾರ ಹಾಕಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಹೂವಿನ ವ್ಯಾಪಾರಿ
ಇದನ್ನೂ ಓದಿ: ಬಿಟ್​ಕಾಯಿನ್ ದಂಧೆ ಬಗ್ಗೆ ಇಡಿ ತನಿಖೆಗೆ ಎಚ್​ಡಿ ಕುಮಾರಸ್ವಾಮಿ ಒತ್ತಾಯ