Breaking News: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2022 | 12:46 PM

ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರು ಇರಿಸಲಾಗಿದೆ ಎಂದು ಹೇಳಿದರು.

Breaking News: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ
Follow us on

ಬೆಂಗಳೂರು: ಬಿಜೆಪಿಯ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿಉದ್ಯಮಿ ಜಿ.ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರು ಇರಿಸಲಾಗಿದೆ ಎಂದು ಹೇಳಿದರು. ನಗರದಲ್ಲಿರುವ ರೆಡ್ಡಿ ಅವರ ಮನೆ ‘ಪಾರಿಜಾತ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು (Sriramulu) ಹತ್ತಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಯ ಮುಂದೆ  ಹೇಳಿದರು.

ನೂತನ ಪಕ್ಷ ಘೋಷಿಸಿದ ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುತ್ತೇನೆ. ರಾಜ್ಯಾದ್ಯಂತ ಹೊಸ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಪಕ್ಷ ರಾಜ್ಯದ ಜನರ ಮನ ಗೆಲ್ಲಲಿದೆ. ಯಾವೆಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂಬ ಬಗ್ಗೆ ಶೀಘ್ರದಲ್ಲೇ ಹೇಳುತ್ತೇನೆ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ದೇವರು ಮತ್ತು ವಿವಿಧ ಮಠಗಳ ಪೂಜ್ಯರ ಆಶಿರ್ವಾದ ಇರಬೇಕು ಎಂದು ಕೋರಿದರು.

ಶ್ರೀರಾಮುಲು ಅವರನ್ನು ನಾವು ಮನೆಯಲ್ಲಿ ಮಗನ ಹಾಗೇ ನೋಡಿದ್ದೀವಿ. ರಾಮುಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಅಧಿಕಾರ ತ್ಯಜಿಸಿ ನನ್ನ ಪಕ್ಷಕ್ಕೆ ಬನ್ನಿ ಎಂದು ನಾನು ಹೇಳಲಾರೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ನನ್ನ ಪತ್ನಿಯೂ ನನ್ನ ಜೊತೆಗೆ ಇರುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಸರ್ಕಾರ ನನ್ನನ್ನು ಹಿಂದೆಯೂ ಟಾರ್ಗೆಟ್ ಮಾಡಿದೆ, ಮುಂದೆಯೂ ಟಾರ್ಗೆಟ್ ಮಾಡಲಿದೆ ಎಂದು ವಿಶ್ಲೇಷಿಸಿದರು. ಪಕ್ಷದ ಪ್ರಣಾಳಿಕೆಯನ್ನು ಶೀಘ್ರ ಘೋಷಿಸುತ್ತೇನೆ ಎಂದರು.

ಬಿಜೆಪಿ ನಾಯಕರನ್ನು ನಾನು ಸಂಪರ್ಕಿಸಲು ಯತ್ನಿಸಿದ್ದು ನಿಜ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸುಮ್ಮನಾದೆ. ಆದರೆ ಮಾಧ್ಯಮಗಳಲ್ಲಿ ಬಿಜೆಪಿಯ ಕದ ತಟ್ಟುತ್ತಿರುವ ರೆಡ್ಡಿ ಎಂಬ ವರದಿಗಳು ಪ್ರಕಟವಾದವು. ನಾನು ಆತ್ಮಾಭಿಮಾನ ಇರುವ ವ್ಯಕ್ತಿ. ಎಂದಿಯೂ ಅಂಥ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ವಿಜಯೇಂದ್ರ ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ನಾಮಪತ್ರ ಸಲ್ಲಿಸಲೂ ಮುಂದಾಗಿದ್ದರು. ಅವರಿಗೆ ಟಿಕೆಟ್ ಕೊಡುವುದಿಲ್ಲ ಎಂದು ಪಕ್ಷವು ಆಗಲೇ ಹೇಳಬಹುದಿತ್ತು. ನಾಮಿನೇಷನ್ ದಿನ ಹತ್ತಾರು ಸಾವಿರಾರು ಜನ ಸೇರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಎಸ್​ವೈ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದರು. ಅಲ್ಲಿ ವಿಜಯೇಂದ್ರ ನಿಂತಿದ್ರೆ ಇನ್ನೂ ನಾಲ್ಕು ಸೀಟ್ ಜಾಸ್ತಿ ಬರ್ತಿತ್ತು. ನನ್ನನ್ನು ಮೊಣಕಾಲ್ಮೂರಿಗೆ ಸೀಮಿತ ಮಾಡದೇ ಕಲ್ಯಾಣ ಕರ್ನಾಟಕಕ್ಕೆ ಅವಕಾಶ ಕೊಟ್ಟಿದ್ದರೆ 104 ಅಲ್ಲ 134 ಸೀಟು ಬರುತ್ತಿತ್ತು. ಬಿಜೆಪಿಗೆ ಸ್ವಂತ ಬಲದ ಮೇಲೆ ಅಧಿಕಾರ ಸಿಗುತ್ತಿತ್ತು. ಪಕ್ಷದ ಇನ್ನಷ್ಟು ಮಂದಿ ಮಂತ್ರಿಗಾಳಾಗಬಹುದಿತ್ತು. ಈಗ ಇದೊಂದುತರ ಸಮ್ಮಿಶ್ರ ಸರ್ಕಾರದಂತೆಯೇ ನಡೆಯತ್ತಿರೋ ವಿಚಾರ ನಿಮಗೆ ಗೊತ್ತು ಎಂದು ಹೇಳಿದರು.

ನಾನು ಬಳ್ಳಾರಿಯಲ್ಲಿ ಇರಬಾರದು ಎಂದು ಕಳೆದ ಸೆಪ್ಟೆಂಬರ್ ಸಿಬಿಐ ಅರ್ಜಿ ಹಾಕಿಕೊಂಡಿದೆ. 12 ವರ್ಷದ ಹಿಂದೆ 1200 ಕೋಟಿ ಅಕ್ರಮ ಆಗಿದೆ ಅಂತ ಅರ್ಜಿ ಹಾಕಿದ್ದರು. ನಂತರ ವಿಚಾರಣೆ ನಡೆದು ನಾನು ಬಳ್ಳಾರಿಗೆ ಹೋಗಲೂ ಕೋರ್ಟ್ ಅವಕಾಶ ಕೊಟ್ಟಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಅರ್ಜಿ ಹಾಕೋಕೆ ಯಾರು ಒತ್ತಡ ಹಾಕಿದ್ದರೋ ನನಗೆ ಗೊತ್ತಿಲ್ಲ. ನನ್ನ ಮಗಳ ಹೆರಿಗೆ ಆಗಿದ್ದಾಗ ಮನೆಗೆ ಸಿಬಿಐ ಅಧಿಕಾರಿಗಳು ಬಂದು ಫೋಟೋ ತೆಗೆದರು. ಈ ಘಟನೆ ಬಗ್ಗೆ ನನ್ನ ಹೆಂಡತಿ ತೀವ್ರ ಬೇಸರ ಮಾಡಿಕೊಂಡರು. ಈ ದೇಶದಲ್ಲಿ ಏನು ನಡೆಯುತ್ತಿದೆ? ಈವರೆಗೂ ನಮ್ಮ ಸರ್ಕಾರ ಇದೆ ಅಂತಿದ್ಯಲ್ಲ ಎಂದು ಹೆಂಡತಿ ಕೇಳಿದರು. ಅದಕ್ಕೆ ನನ್ನ ಬಳಿ ಉತ್ತರ ಇರಲಿಲ್ಲ ಎಂದು ಬೇಸರ ತೋಡಿಕೊಂಡರು.

ನಾನು ವ್ಯಾಪಾರ ಬದಿಗಿಟ್ಟು, ಯಾರಿಗೂ ಭಯಪಡದೆ ರಾಜಕಾರಣ ಮಾಡಿದೆ. ಮತಎಣಿಕೆ ದಿನ ಸುಷ್ಮಾ ಸ್ವರಾಜ್ ಅವರು ಬಳ್ಳಾರಿಗೆ ಬಂದಿದ್ದರು. ಆಗ ನಮ್ಮ ಮನೆಗೆ ಬಂದು, ನಮ್ಮ ಮಕ್ಕಳ‌ ಜೊತೆ ಆಡುತ್ತಾ. ನಮ್ಮ ಜೊತೆ ಇದ್ದರು. ದೇವತೆಯಂತೆ ಅವರು ನಮ್ಮೊಂದಿಗೆ ನಡೆದುಕೊಂಡರು. ಅವರ ಸೋಲಿನಿಂದ ನಮ್ಮ ಕುಟುಂಬಕ್ಕೆ ದುಃಖವಾಗಿತ್ತು. ಬಳ್ಳಾರಿಗೆ ಪ್ರತಿ ವರ್ಷ ಸುಷ್ಮಾ ಬರುತ್ತಿದ್ದರು. ಆಗ ನಾನು ವರಮಹಾಲಕ್ಷ್ಮಿ ಹಬ್ಬ, ಸಾಮೂಹಿಕ ಮದುವೆ ಮಾಡುತ್ತಿದ್ದೆ. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. 2001 ರಲ್ಲಿ ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೆ ಬಂತು. ಆಗ 7 ಜನ ಮುಸ್ಲಿಂ ಜನ ಗೆದ್ದರು. ‌ಇದೊಂದು ಇತಿಹಾಸ. 2004 ರಲ್ಲಿ ಕರುಣಾಕರ ರೆಡ್ಡಿ ಬಿಜೆಪಿ ಎಂಪಿ ಆದರು. ಶ್ರೀರಾಮುಲು ಬಳ್ಳಾರಿ ಶಾಸಕ ಆದರು. 2003ರಲ್ಲಿ ನಾನು ಬಳ್ಳಾರಿಯ ಬಿಜೆಪಿ ಘಟಕದ ಅಧ್ಯಕ್ಷನಾಗಿದ್ದೆ. 2005ರಲ್ಲಿ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದೆವು ಎಂದು ನೆನಪಿಸಿಕೊಂಡರು.

2011ರ ನಂತರ ಪರಿಸ್ಥಿತಿ ಬದಲಾಯಿತು. ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ನಮ್ಮ ಕುಟುಂಬವನ್ನು ಸಂತೈಸಿದ್ದರು. ಬೇರೆ ಯಾರೂ ಬಂದಿರಲಿಲ್ಲ. ಆಗ ನಮ್ಮವರು ಯಾರು ಎಂದು ಅರಿವಾಯಿತು. 2018ರಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಅಮಿತ್ ಶಾ, ಬಿಜೆಪಿಗೂ ಜನಾರ್ದನ ರೆಡ್ಡಿಗೂ ಸಂಬಂಧ ಇಲ್ಲ ಎಂದಿದ್ದರು. ಮನೆಯಲ್ಲಿ ಕುಳಿತು ಅದನ್ನು ನೋಡಿದೆ. ನನಗೆ ಮತ್ತು ನನ್ನ ಹೆಂಡತಿಗೆ ತೀವ್ರ ಬೇಸರವಾಯಿತು. ಎರಡು ದಿನಗಳ ನಂತರ ದೆಹಲಿಯಿಂದ ಕರೆ ಬಂತು. ‘ನಾನು ಆ ಹೇಳಿಕೆ ಕೊಡಬಾದಿತ್ತು. ನನ್ನ ಹೇಳಿಕೆಯಿಂದ ಸಕಷ್ಟು ಡ್ಯಾಮೇಜ್ ಆಗಿದೆ. ಆದ್ರೆ ನಾನು ನಿಮ್ಮನ್ನ ಪಕ್ಷಕ್ಕೆ ಬರೋಕೆ ಹೇಳಿದ್ರೆ ತಪ್ಪಾಗುತ್ತೆ. ಆದರೆ ನೀವು ಶೀರಾಮುಲು ಜೊತೆ ನಿಲ್ಲಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡೋಣ’ ಎಂದರು. ಆಗ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಮಾತುಕೊಟ್ಟು ಬಂದಿದ್ದೆ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಗಂಗಾವತಿಯಲ್ಲಿ ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ಕೊಟ್ಟ ಜನಾರ್ದನ ರೆಡ್ಡಿ: ಕಾಂಗ್ರೆಸ್, ಬಿಜೆಪಿ ಪಾಳಯದಲ್ಲಿ ನಡುಕ

‘ಇಂದು ಭಾರತ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಎಲ್ಲರಿಗೂ ಕ್ರಿಸ್ಮಸ್ ಹಬ್ದದ ಶುಭಾಶಯಗಳು. ಅಣ್ಣ ಬಸವಣ್ಣನವರ ವಚನ ಕಾಯಕವೇ ಕೈಲಾಸದ ತತ್ವ ನಂಬಿದವನು ನಾನು. ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಈವರೆಗೆ ಬಂದು ತಲುಪಿದ್ದೇನೆ. ಸತ್ಯದ ವಿಚಾರವನ್ನೇ ಹೇಳಿಕೊಂಡು ಬಂದಿದ್ದೇನೆ. ನನ್ನ 21ನೇ ವಯಸ್ಸಿನಲ್ಲಿ ಇನೋಬ್ಲಿಟಿ ಸಂಸ್ಥೆ ಆರಂಭಿಸಿದ್ದೆ. ನನ್ನ ಮೈನಿಂಗ್ ಕಂಪನಿಯಲ್ಲಿ ದೇವರು ಕೇಳಿಕೊಂಡಿದ್ದಕ್ಕೂ ಹೆಚ್ಚು ಕೊಟ್ಟಿದ್ದಾನೆ’ ಎಂದು ಸ್ಮರಿಸಿದರು.

‘ಶ್ರೀರಾಮಲು ಹಾಗೂ ನನ್ನ ಸ್ನೇಹಕ್ಕೆ ಹಲವು ವರ್ಷಗಳ ಹಿನ್ನೆಲೆಯಿದೆ. ನಾವು ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಶ್ರೀರಾಮಲು ಬಡವರ ಪರವಾಗಿ ಇರುವ ನಾಯಕ. ರಾಜೀವ್​ಗಾಂಧಿ ಬಳ್ಳಾರಿಗೆ ಬಂದಾಗ ಶ್ರೀರಾಮುಲುಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ಆಗ ಬಳ್ಳಾರಿಯಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದಾಗ ಶ್ರೀರಾಮುಲುಗೆ ಟೆನ್ಷನ್ ಆಗಿತ್ತು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ನಂತರ ಏನೆಲ್ಲಾ ಬೆಳವಣಿಗೆಗಳು ಆಯಿತು ಎನ್ನುವುದು ಈಗ ಇತಿಹಾಸ’ ಎಂದು ವಿವರಿಸಿದರು.

ಮೊದಲ ಬಾರಿ ಪರಿಚಯವಾದಾಗ ಶ್ರೀರಾಮುಲುಗೆ 17 ವರ್ಷ ನನಗೆ 21 ವರ್ಷ. ಅವರ ಸೋದರಮಾವ ಸಾರ್ವಜನಿಕ ಜೀವನದಲ್ಲಿ ‌ಇದ್ದರು. ರಾಜೀವ್ ಗಾಂಧಿಯವರು ಶ್ರೀರಾಮುಲು ಸೋದರಮಾವನನ್ನು ಗುರುತಿಸಿದ್ದರು. ಶ್ರೀರಾಮುಲು ಮೇಲೆಯೂ ಶತ್ರುಗಳ ಕಣ್ಣು ಇತ್ತು. ನಂತರ ಶ್ರೀರಾಮಲು ನನ್ನ ಆಶ್ರಯಕ್ಕೆ ಬಂದರು. ನಗರಸಭೆ ಸದಸ್ಯರಾಗಿ ಆಯ್ಕೆಯಾದರು. ಬಿಜೆಪಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋದರಮಾವನ ಕನಸು ನನಸು ಮಾಡಿದರು ಎಂದರು.

Published On - 12:13 pm, Sun, 25 December 22