AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bypolls 2021: ಹಾನಗಲ್ ಉಪಚುನಾವಣೆ: ಮೂರೂ ಪಕ್ಷಗಳಲ್ಲಿ ಸಿದ್ಧತೆ ಚುರುಕು, ತ್ರಿಕೋನ ಸ್ಪರ್ಧೆ ನಿರೀಕ್ಷಿತ

ಶ್ರೀನಿವಾಸ್‌ ಮಾನೆ  ಅವರನ್ನು ಕಾಂಗ್ರೆಸ್ ತನ್ನ ಉಮೇದುವಾರರಾಗಿ ಘೋಷಿಸಿದೆ. ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ

Karnataka Bypolls 2021: ಹಾನಗಲ್ ಉಪಚುನಾವಣೆ: ಮೂರೂ ಪಕ್ಷಗಳಲ್ಲಿ ಸಿದ್ಧತೆ ಚುರುಕು, ತ್ರಿಕೋನ ಸ್ಪರ್ಧೆ ನಿರೀಕ್ಷಿತ
ಸಾಂದರ್ಭಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 05, 2021 | 7:43 PM

Share

ಬೆಂಗಳೂರು: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕವೇನೋ ಪ್ರಕಟವಾಗಿದೆ. ಆದರೆ ಅಭ್ಯರ್ಥಿ ವಿಚಾರದಲ್ಲಿ ಬಿಜೆಪಿ ನಡೆ ನಿಗೂಢವಾಗಿದೆ. ಇನ್ನೊಂದೆಡೆ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಒತ್ತಾಯ-ಒತ್ತಡದ ತಂತ್ರ ವ್ಯಾಪಕವಾಗಿ ನಡೆಯಿತು. ಇದೀಗ ಶ್ರೀನಿವಾಸ್‌ ಮಾನೆ  ಅವರನ್ನು ಕಾಂಗ್ರೆಸ್ ತನ್ನ ಉಮೇದುವಾರರಾಗಿ ಘೋಷಿಸಿದೆ. ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ.

ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯವರೇ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಡೆ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೆಡಿಎಸ್ ಪಕ್ಷವು ಈಗಾಗಲೇ ಅಭ್ಯರ್ಥಿಗಳ ಹೆಸರು ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಡಿ ತನ್ನನ್ನು ಒರೆಗೆ ಹಚ್ಚಿಕೊಳ್ಳಲು ತಯಾರಿ ನಡೆಸಿದೆ. ಸದ್ಯದ ಸ್ಥಿತಿಗತಿ ಗಮನಿಸಿದರೆ ಈ ಕ್ಷೇತ್ರ ತ್ರಿಕೋನ ಸ್ಪರ್ಧೆ ಎದುರಿಸುವ ಸಾಧ್ಯತೆ ಗೋಚರಿಸುತ್ತಿದೆ.

ಸಚಿವರಾಗಿದ್ದು ಜನಪ್ರಿಯತೆ ಪಡೆದಿದ್ದ ಶಾಸಕ ಸಿ.ಎಂ.ಉದಾಸಿ ಅವರ ನಿಧನದಿಂದಾಗಿ ತೆರವಾದ ಶಾಸಕ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಕೊವಿಡ್ ಹಿನ್ನೆಲೆಯಲ್ಲಿ ಆಯೋಗ ಯಾವಾಗ ಚುನಾವಣೆ ಘೋಷಣೆ ಮಾಡಲಿದೆ ಎಂದು ಗೊಂದಲ ಮುಂದುವರಿದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿಂದಿನ ಚುನಾವಣೆಯಲ್ಲಿ ಸೋತರೂ ಹಾನಗಲ್ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇನ್ನೊಂದೆಡೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಬಣ ಹೊರಗಿನವರಿಗೆ ಅವಕಾಶ ಬೇಡ ಎಂದು ಪಟ್ಟು ಹಿಡಿದು ಈಗಲೇ ಹೋರಾಟಕ್ಕೆ ಮುಂದಾಗಿತ್ತು. ಇದು ವರಿಷ್ಠರಿಗೆ ನುಂಗಲಾರದ ಉಗುಳಲೂ ಬಾರದ ಬಿಸಿತುಪ್ಪ ಎಂಬಂಥ ಸಂದಿಗ್ಧಕ್ಕೆ ಸಿಲುಕಿಸಿತ್ತು.

ಹಾನಗಲ್ ಕ್ಷೇತ್ರವು ಬಿಜೆಪಿ ಹಾಗೂ ಉದಾಸಿ ಅವರ ಭದ್ರಕೋಟೆಯಾಗಿತ್ತು. ಆದರೆ, ಸಿ.ಎಂ.ಉದಾಸಿ ಅವರ ನಿಧನದ ನಂತರ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಚರ್ಚೆಯ ವಸ್ತುವಾಗಿದೆ. ಸಿ.ಎಂ.ಉದಾಸಿ ಅವರ ನಿಧನದ ಅನುಕಂಪದ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೇ ಅವಕಾಶ ನೀಡಿ ಅನುಕಂಪದ ಅಲೆಯ ಪ್ರಯೋಜನ ಗಿಟ್ಟಿಸಬಹುದು ಎಂಬ ನಿರೀಕ್ಷೆ ಇದೆ. ಸಂಸದ ಶಿವಕುಮಾರ ಉದಾಸಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸೀತೇ ಎಂಬ ಸಂಶಯವೂ ರಾಜಕೀಯ ವಲಯದಲ್ಲಿದೆ. ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಬರುವರೇ ಎಂಬುದೂ ಯಕ್ಷಪ್ರಶ್ನೆಯಾಗಿದೆ. ಉದಾಸಿ ಕುಟುಂಬ ಬಿಟ್ಟರೆ ಬೇರೆಯವರಿಗಾದರೆ ಯಾರಿಗೆ ಅವಕಾಶ ಸಿಗಬಹುದು ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದ ನಿಯಾಜ್ ಶೇಖ್ ಒಮ್ಮಿಂದೊಮ್ಮೆಲೆ ಪಕ್ಷ ತೊರೆದು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿಕೊಂಡಿದ್ದಾರೆ. ಅಲ್ಲದೇ ಅವರನ್ನೇ ಹಾನಗಲ್ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಕಟಿಸಿದ್ದರೂ ಸ್ಥಳೀಯ ಕಾರ್ಯಕರ್ತರು ಇದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದೆಲ್ಲದರ ನಡುವೆ ಜನಹಿತ ರಕ್ಷಣಾ ವೇದಿಕೆಯ ಬಿ.ಕೆ. ಮೋಹನಕುಮಾರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಮ್ಮದೇ ಕಾರ್ಯಕರ್ತರ ಜೊತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಪಕ್ಷ ಈ ಬಾರಿ ನನಗೆ ಅಭ್ಯರ್ಥಿಯಾಗುವ ಅವಕಾಶ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಅವರು, ಎಬಿವಿಪಿ ಮೂಲಕ ಸಂಘ ಪರಿವಾರದ ಸಂಬಂಧದಲ್ಲಿ ರಾಜಕೀಯ ನೆಲೆ ಕಂಡುಕೊಂಡವರು. ಸಂಘಟನೆ, ಸಂಘ ಪರಿವಾರದ ಆಶೀರ್ವಾದದಿಂದ ಅವಕಾಶ ಸಿಕ್ಕರೂ ಸಿಗಬಹುದು ಎಂಬ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಕೂಡ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿದೆ.

ಹಾನಗಲ್​ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡಿದ ಮೋಟೆಬೆನ್ನೂರಿನ ಸಿ.ಆರ್.ಬಳ್ಳಾರಿ ನನಗೆ ಪಕ್ಷದ ಹಿರಿಯರ ಆಶೀರ್ವಾದವಿದೆ. ನಾನು ಹಾನಗಲ್ ಅಭ್ಯರ್ಥಿ ಎಂದು ಮಠ ಮಂದಿರಗಳಿಗೆ ಓಡಾಡುತ್ತಿದ್ದಾರೆ. ಈ ನಡುವೆ ಕೃಷ್ಣ ಈಳಿಗೇರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ ಅವರು ಪಕ್ಷಕ್ಕಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದು, ನಮಗೆ ಅವಕಾಶ ಬೇಕೆಂದು ಕೋರುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರ ಆಂತರಿಕ ಗೊಂದಲದಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಭ್ಯರ್ಥಿಯಾದರು. ಅಲ್ಲದೇ ಅಂದಿನಿಂದಲೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ನಿರಂತರವಾಗಿ ಓಡಾಡಿದ್ದಾರೆ. ಆದರೆ, ಈವರೆಗೆ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲವಾದರೂ ಮತ್ತೊಂದು ಬಣ ಈಗಲೇ ಮಾನೆ ಅವರನ್ನು ಪರೋಕ್ಷವಾಗಿ ವಿರೋಧಿಸಲು ಆರಂಭಿಸಿತ್ತು. ಮಾಜಿ ಸಚಿವ ಮನೋಹರ ತಹಶೀಲ್ದಾರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಶಿವಯೋಗಿ ಹಿರೇಮಠ, ನಾಗಪ್ಪ ಸವದತ್ತಿ, ಸೋಮಶೇಖರ ಕೋತಂಬರಿ, ನಜೀರಸಾಬ ಸವಣೂರ ಮುಂತಾದವರು ಆಕಾಂಕ್ಷಿಗಳಾಗಿದ್ದರು. ಆದರೆ, ಶ್ರೀನಿವಾಸ ಮಾನೆ ಪಾಳಯದಲ್ಲಿ ಅವರ ಹೆಸರು ಮಾತ್ರ ಚಾಲ್ತಿಯಲ್ಲಿತ್ತು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷವೂ ಅವರ ಹೆಸರನ್ನು ಅಂತಿಮಗೊಳಿಸಿದೆ.

ಇಲ್ಲಿ ವಿಧಾನಸಭಾ ಚುನಾವಣೆ ಎಂದರೆ ಅದು ಕೇವಲ ಸಿ.ಎಂ.ಉದಾಸಿ ಹಾಗೂ ಮನೋಹರ ತಹಶೀಲ್ದಾರ ನಡುವಿನ ಜಿದ್ದಾಜಿದ್ದಿಯ ಅಖಾಡವಾಗಿ ಎಂದೇ ಜನಜನಿತವಾಗಿದೆ. ಉಳಿದ ಯಾರೇ ಅಭ್ಯರ್ಥಿಯಾದರೂ ನೆಪ ಮಾತ್ರಕ್ಕೆ ಎಂಬಂತಿತ್ತು. ಆದರೆ, ಸಿ.ಎಂ.ಉದಾಸಿ ಅವರ ನಿಧನದಿಂದ ಕ್ಷೇತ್ರದಲ್ಲಿ ಹೊಸ ರಾಜಕೀಯ ಗಾಳಿ ಬೀಸಿದರೆ ಅಚ್ಚರಿಯಿಲ್ಲ ಮುಂಬರುವ ಉಪ ಚುನಾವಣೆಗೆ ಹೊಸ ಮುಖಗಳು, ಪಕ್ಷಕ್ಕಾಗಿ ಶ್ರಮಪಟ್ಟವರು, ಯುವಕರಿಗೆ ಆದ್ಯತೆ ದೊರೆತು ಹಾನಗಲ್ ಚುನಾವಣಾ ಇತಿಹಾಸಕ್ಕೆ ಹೊಸ ನೀರು ಬರಬಹುದೇ ಎಂಬ ಚರ್ಚೆ ಜನರಲ್ಲೂ ನಡೆಯುತ್ತಿದೆ.

ಪಕ್ಷದ ಹಿರಿಯರೂ, ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದ ಸಿ.ಎಂ. ಉದಾಸಿ ಅವರ ನಿಧನದಿಂದ ನಾವಿನ್ನೂ ಹೊರಬಂದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ರಾಜ್ಯಾಧ್ಯಕ್ಷರ ಮೂಲಕ ಹೈಕಮಾಂಡ್​ಗೆ ಕಳುಹಿಸಿಕೊಡಲಾಗಿದೆ. ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಹಾನಗಲ್ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಯಾರಾಗಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ. ಒಳಗಿನವರು-ಹೊರಗಿನ ಎಂಬ ಯಾವ ಅಂಶವೂ ಗಣನೆಗೆ ಬರುವುದಿಲ್ಲ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಎಲ್ಲರನ್ನೂ ಕೂರಿಸಿಕೊಂಡು ಸಮಸ್ಯೆ ಬಗೆಹರಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

(Hanagal By Election Preparation in JDS Congress BJP Triangular Fight Expected)

ಇದನ್ನೂ ಓದಿ: ಕೊನೆಗೂ ಹಾನಗಲ್ ಉಪಚುನಾವಣೆ ಬಿಜೆಪಿ ಉಸ್ತುವಾರಿ ಪಟ್ಟಿಗೆ ಬಿವೈ ವಿಜಯೇಂದ್ರ ಸೇರ್ಪಡೆ

ಇದನ್ನೂ ಓದಿ: Hangal Bypoll 2021: ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾರು? ಬಿಜೆಪಿ- ಕಾಂಗ್ರೆಸ್ ಪೈಪೋಟಿ ಹೇಗಿದೆ?

Published On - 7:42 pm, Tue, 5 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ