ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು

ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ರಾಜ್ಯಾದ್ಯಕ್ಷ ಎಚ್​ಡಿ ಕುಮಾರಸ್ವಾಮಿ ಅವರು ದೆಹಲಿಯಿಂದ ವಾಪಸ್​ ಬೆಂಗಳೂರಿಗೆ ಮರಳಿದ್ದಾರೆ. ದಿಢೀರ್​ ಎಂದು ನಿನ್ನೆ(ಫೆಬ್ರವರಿ 21) ಕುಮಾರಸ್ವಾಮಿ ಪುತ್ರನ ಜೊತೆ ದೆಹಲಿಗೆ ತೆರಳಿ ಕೇಂದ್ರ ಅಮಿತ್ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿ ಇಂದು(ಫೆ,22) ವಾಪಸ್ ಬೆಂಗಳೂರಿಗೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಏಕಾಏಕಿ ದೆಹಲಿಗೆ ಹೋಗಿರುವ ಕಾರಣವನ್ನು ತಿಳಿಸಿದ್ದಾರೆ.

ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 22, 2024 | 8:10 PM

ಬೆಂಗಳೂರು, (ಫೆಬ್ರವರಿ 22): ಸುದ್ದಿ ಸುಳಿವು ನೀಡದೇ ಏಕಾಏಕಿ ದೆಹಲಿಗೆ (Delhi) ಹಾರಿದ್ದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ(HD Kumaraswamy), ಇಂದು (ಗುರುವಾರ) ವಾಪಸ್​​ ಬೆಂಗಳೂರಿಗೆ(Bengaluru)  ಬಂದಿಳಿದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ನಮ್ಮ ರಾಜ್ಯದ ಪರವಾಗಿ ಕಾನೂನು ಹೋರಾಟ ನಡೆಸಿದ್ದ ನಾರಿಮನ್ ಅವರ ನಿಧನ ಹಿನ್ನೆಲೆ ಗೌರವ ಸಲ್ಲಿಸಲು ಹೋಗಿದ್ದೆ. ದೆಹಲಿಗೆ ಬಂದಾಗ ಬೇಟಿ ಮಾಡಬೇಕು ಅಂತ ಅಮಿತ್ ಶಾ ಹೇಳಿದ್ರು. ಹೀಗಾಗಿ ಅವರನ್ನ ಭೇಟಿ ಮಾಡಿ ಬಂದಿದ್ದೇನೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವುದು (ಮಂಡ್ಯ ಜೆಡಿಎಸ್​ ಪಾಲು) ಯಾವುದು ವಾಸ್ತವಾಂಶ ಸುದ್ದಿಯಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆಗೆ ಇನ್ನೂ 2 ತಿಂಗಳು ಸಮಯವಿದೆ ಮುಂದಿನ ವಾರದ ಒಳಗೆ ಎಲ್ಲಾ ಬಗೆ ಹರಿಯುತ್ತೆ. ಸೀಟು ಹಂಚಿಕೆ ಸಂಬಂಧ ಜೆಡಿಎಸ್ ಬಿಜೆಪಿ ನಡುವೆ ಯಾವುದೆ ಗೊಂದಲಗಳಿಲ್ಲ. ಈಗ ಬರುತ್ತಿರುವ ಧಾರವಾಹಿಗಳಿಗೆ ಹೆಚ್ಚಿನ ಮಹತ್ವವಿಲ್ಲ. ರಾಜ್ಯದ 28 ಕ್ಷೇತ್ರ ಗೆಲ್ಲಬೇಕೆನ್ನುವುದು ನಮ್ಮ ಗುರಿ. ಮಂಡ್ಯದಲ್ಲಿ ಯಾರು ಹಾಸನದಲ್ಲಿ ಯಾರು ಅಂತ ಒಂದು ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಡಿ. ನಮಗೆ 28 ಕ್ಷೇತ್ರಗಳು ಒಂದೇ. ಅವಶ್ಯಕತೆ ಬಿದ್ರೆ ಮತ್ತೊಮ್ಮೆ ದೆಹಲಿಗೆ ಹೋಗುತ್ತೇನೆ ಎಂದರು. ಈ ಮೂಲಕ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳು ಜೆಡಿಎಸ್​ ಪಾಲಾಗಿವೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದರು. ಸೀಟು ಹಂಚಿಕೆ ಬಗ್ಗೆ ಚರ್ಚೆ ಆಗಿರಬಹುದು. ಆದ್ರೆ, ಈ ಬಗ್ಗೆ ಕುಮಾರಸ್ವಾಮಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ಫಿಕ್ಸ್; ಹೆಚ್​ಡಿ ಕುಮಾರಸ್ವಾಮಿ, ಅಮಿತ್ ಶಾ ಮಾತುಕತೆ

ಇನ್ನು ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ​ರಾಜ್ಯಸಭಾ ಚುನಾವಣೆಗೆ ಅವರ ಸೂಚನೆ ಮೆರೆಗೆ ನಾನು ಅಭ್ಯರ್ಥಿ ಹಾಕಿರುವುದು. ನಾನು ಆತ್ಮ ಸಾಕ್ಷಿಯಾಗಿ ಮತಕ್ಕೆ ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಅವರಿಗೆ ಏನಾಗುತ್ತೋ ನೋಡೋಣ. ಕೇಸ್ ಮಾಡಿದ್ದು ಯಾಕೆ? ಕೇಸ್ ಕೊಟ್ಟವರು ಯಾರು? ಯಾರ ಹೆಸರಲ್ಲಿ ಕೊಟ್ಟಿದ್ದಾರೆ? ಅವರು ಯಾರು ಕೊಟ್ಟಿಲ್ಲ. ಬೇರೆಯವರು ದೂರು ಕೊಟ್ಟಿದ್ದಾರೆ. ಅವರಿಗೆ ಮಾಡಲು ಕೆಲಸವಿಲ್ಲ ಎಂದು ಕಿಡಿಕಾರಿದರು.

ಶಾ ಭೇಟಿ ಬೆನ್ನಲ್ಲೇ ರಾಜ್ಯ ರಾಜಕಾರಣದಕ್ಕೆ ಸಂಚಲನ

ಇನ್ನು ಕುಮಾರಸ್ವಾಮಿ ಅವರು ದಿಢೀರ್ ದೆಹಲಿ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ ಎನ್ನುವ ಸುದ್ದಿ ಹಬ್ಬಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಸೀಟು ಹಂಚಿಕೆ ಆಗಿರಲಿಲ್ಲ. ಜೆಡಿಎಸ್‌ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಆರು ಕ್ಷೇತ್ರಗಳ ಬೇಡಿಕೆ ಇಟ್ಟಿತ್ತು. ಇದರಲ್ಲಿ ಬಿಜೆಪಿ ಐದು ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಜೆಡಿಎಸ್‌ನ ಪ್ರಮುಖ ಕಣಗಳೆಂದೇ ಹೆಸರಾದ ಹಾಸನ ಮತ್ತು ಮಂಡ್ಯದ ವಿಚಾರದಲ್ಲೇ ಸಾಕಷ್ಟು ಗೊಂದಲಗಳು ಮೂಡಿದ್ದವು. ಅಲ್ಲಿನ ಸ್ಥಳೀಯ ನಾಯಕರು ಯಾವ ಕಾರಣಕ್ಕೂ ಈ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂದು ಸಾರ್ವಜನಿಕವಾಗಿಯೇ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಇದು ಜೆಡಿಎಸ್‌ಗೆ ಭಾರಿ ಮುಜುಗರ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಉನ್ನತ ಮಟ್ಟದಲ್ಲೇ ಫೈನಲ್‌ ಮಾಡಿಕೊಳ್ಳಲು ಎಚ್‌.ಡಿ ಕುಮಾರಸ್ವಾಮಿ ಬಯಸಿದ್ದರು. ಅದರಂತೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕುದುರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮಿತ್‌ ಶಾ ಅವರ ಬಳಿಯೇ ಚರ್ಚಿಸಿ ಕ್ಷೇತ್ರ ಫೈನಲ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಸೀಟು ಹಂಚಿಕೆ ಸಂಬಂಧ ಅಮಿತ್ ಶಾ ಜೊತೆ ಚರ್ಚೆ ಆಗಿದ್ದರೂ ಆಗಿರಬಹುದು. ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆಳುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಯಾವುದೇ ಮಾಹಿತಿ ಹೇಳದೇ ಗೌಪ್ಯತೆ ಕಾಪಾಡಿಕೊಂಡಿರಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲ್ ಕ್ಲಿಕ್ ಮಾಡಿ