ಚುನಾವಣೆಗೆ ಜೆಡಿಎಸ್ ಪ್ಲಾನ್ ಸಿದ್ಧ: ಪದಾಧಿಕಾರಿಗಳಿಗೆ ಮಹತ್ವದ ಟಾಸ್ಕ್​ ಕೊಟ್ಟ ಕುಮಾರಸ್ವಾಮಿ

ಮುಂಬರುವ ಅಸ್ಲೆಂಬಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಕುಮಾರಸ್ವಾಮಿ ಮಹತ್ವದ ಪ್ಲಾನ್​ಗಳನ್ನ ಮಾಡಿಕೊಂಡಿದ್ದಾರೆ. ಅಲ್ಲದೇ ಪದಾಧಿಕಾರಿಗಳಿಗೆ ಹಲವು ಟಾಸ್ಕ್​ಗಳನ್ನು ಸಹ ನೀಡಿದ್ದಾರೆ.

ಚುನಾವಣೆಗೆ ಜೆಡಿಎಸ್ ಪ್ಲಾನ್ ಸಿದ್ಧ: ಪದಾಧಿಕಾರಿಗಳಿಗೆ ಮಹತ್ವದ ಟಾಸ್ಕ್​ ಕೊಟ್ಟ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated By: Digi Tech Desk

Updated on: Sep 26, 2022 | 5:10 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023)  ಇನ್ನೇನು ಆರೇಳು ತಿಂಗಳು ಬಾಕಿ ಇದ್ದು, ಆಗಲೇ ರಾಜಕೀಯ ಪಕ್ಷಗಳ ಚುನಾವಣೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿವೆ. ಬಿಜೆಪಿ ಎರಡು ತಂಡಗಳನ್ನ ಮಾಡಿಕೊಂಡು ಕರ್ನಾಟಕ ಪ್ರವಾಸ ಮಾಡುತ್ತಿದ್ರೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಇದೀಗ ಜೆಡಿಎಸ್​ (JDS) ನಾನೇನು ಕಮ್ಮಿ ಇಲ್ಲ ಎಂದು ಅಖಾಡಕ್ಕಿಳಿದಿದೆ.

ಹೌದು….ಮುಂಬರುವ ಅಸ್ಲೆಂಬಿ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ,(HD Kumaraswamy) ಸಂಘಟನೆ ದೃಷ್ಟಿಯಿಂದ ಇಂದು(ಸೆ.26) ಬೆಂಗಳೂರಿನಲ್ಲಿ JDS​ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆ ನಡೆಸಿದರು. ಅಲ್ಲದೇ ಸಭೆಯಲ್ಲಿ ನಾಯಕರುಗಳಿಗೆ ಮಹತ್ವದ ಕರೆ ಕೊಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಳೆದ ತಿಂಗಳೇ ಪಂಚರತ್ನ ಯಾತ್ರೆ ಘೋಷಣೆ ಮಾಡಬೇಕಿತ್ತು. ಮಳೆಯಿಂದಾಗಿ ಪಂಚರತ್ನ ಪಾದಯಾತ್ರೆ ಮುಂದೂಡಲಾಗಿತ್ತು. ಪಂಚರತ್ನ ಕಾರ್ಯಕ್ರಮ ನವೆಂಬರ್ 1 ರಂದು ನಡೆಯಬಹುದು. ಶೀಘ್ರದಲ್ಲೇ ಪಂಚರತ್ನ ಯಾತ್ರೆಯ ಅಧಿಕೃತ ದಿನಾಂಕ ಘೋಷಣೆ ಮಾಡ್ತೇವೆ . ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ನಡೆಯುತ್ತಿದೆ. ಅವರ ಯಾತ್ರೆ ಬೇರೆ ರಾಜ್ಯಕ್ಕೆ ತೆರಳಿದ ಮೇಲೆ ಪಂಚರತ್ನ ಆರಂಭ ಮಾಡುತ್ತೇವೆ. ನಮ್ಮದು ಸಣ್ಣ ಪಕ್ಷ, ದೊಡ್ಡ ಪಕ್ಷದವರು ಪ್ರಚಾರಕ್ಕೆ ಖರ್ಚು ಮಾಡುವಷ್ಟು ಹಣ ನಮ್ಮಲ್ಲಿ ಇಲ್ಲ‌. ಹೀಗಾಗಿ ಅವರ ಕಾರ್ಯಕ್ರಮ ಮುಗಿದ ಮೇಲೆ ಪಂಚರತ್ನ ಯಾತ್ರೆ ಅಂಭಿಸುತ್ತೇವೆ ಎಂದರು.

ನಮ್ಮ ಕಾರ್ಯಕ್ರಮ ಜನತೆಗೆ ತಲುಪಬೇಕಾಗಿದೆ. ನಮ್ಮದು ಸಣ್ಣ ಪಕ್ಷ, ಜನರ ಗಮನ ಕಾರ್ಯಕ್ರಮದ ಮೇಲೆ ಇರಬೇಕು. ಹಾಗಾಗಿ ಬೇರೆ ಪಕ್ಷದ ಕಾರ್ಯಕ್ರಮ ಮುಗಿಯಲಿ ಅಂತ ಅಷ್ಟೇ. ಪದಾಧಿಕಾರಿಗಳಿಗೆ ಇಂದು ಕಠಿಣವಾಗಿಯೇ ಮಾತನಾಡಿದ್ದೇನೆ. ಹಿಂದಿನ‌ ಒಂದಿಷ್ಟು ವಿಚಾರಗಳನ್ನು ಹೇಳಿ ಸಂಘಟನೆ ಬಗ್ಗೆ ಮಾತನಾಡಿದ್ದೇನೆ ಎಂದು ವಿವರಿಸಿದರು.

ಕಾಂಗ್ರೆಸ್ಸಿಗರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಭಾರತ್ ಜೋಡೋ ಮುಗಿದ ಬಳಿಕ ಪಂಚರತ್ನ ಯಾತ್ರೆ ಶುರುವಾಗಲಿದೆ, ಸಂಘಟನೆಯ ದೃಷ್ಟಿಯಿಂದ ಪದಾಧಿಕಾರಿಗಳ ಸಭೆ ನಡೆಸಿದ್ದೇವೆ. ಮುಂದಿನ 6 ತಿಂಗಳು ಹೇಗೆ ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದೇನೆ. ಪ್ರವಾಸ ಮಾಡಬೇಕೆಂದು ಪದಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಾನು ಬೇರೆ ಪಕ್ಷದ ಬಗ್ಗೆ ಟೀಕೆ ಮಾಡಲ್ಲ. ನಾವು ನಮ್ಮ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಅಕ್ಟೋಬರ್ 8 ರಂದು ಜನತಾ ಮಿತ್ರ ಸಮಾರೋಪ ಮಾಡುತ್ತೇವೆ. ಬಿಬಿಎಂಪಿ ಚುನಾವಣೆಗೆ ಸದಸ್ಯರ ಸಭೆ ಮಾಡಲಾಗಿದೆ. ಮುಂದಿನ ರಾಜ್ಯ ಕಾರ್ಯಕಾರಣಿ ಸಭೆ ಬಗ್ಗೆಯೂ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

 ವಾರ್ನಿಂಗ್ ಜತೆ ಪದಾಧಿಕಾರಿಗಳಿಗೆ ಟಾಸ್ಕ್
ಪಕ್ಷದ ಕೆಲಸ ಮಾಡದೇ ನಿರ್ಲಕ್ಷ್ಯ ಮಾಡಿದ್ರೆ ಯಾರಿಗೂ ಜಾಗವಿಲ್ಲ ಎಂದು ಪದಾಧಿಕಾರಿಗಳ ಸಭೆಯಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಪದಾಧಿಕಾರಿಗಳು ಬದ್ಧತೆಯಿಂದ ಪಕ್ಷದ ಕೆಲಸ ಮಾಡಬೇಕು. ಚುನಾವಣಾ ವರ್ಷದಲ್ಲಿ ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಪದಾಧಿಕಾರಿಗಳು ತಮ್ಮ ಜಿಲ್ಲೆ, ತಾಲೂಕುಗಳ ಪ್ರವಾಸ ಮಾಡಬೇಕು. ಮುಂದಿನ 6 ತಿಂಗಳು ಸವಾಲಾಗಿ ಸ್ವೀಕರಿಸಿ ಪಕ್ಷಕ್ಕಾಗಿ ಶ್ರಮಿಸಬೇಕು ಎಂದು ಪದಾಧಿಕಾರಿಗಳಿಗೆ ಟಾಸ್ಕ್​ ಕೊಟ್ಟರು.

ಬಿಜೆಪಿ ಸರ್ಕಾರದ ವಿರುದ್ಧ ಕಿಡಿ
ಪೇ ಸಿಎಂ ಎಂಬ ಕಾರ್ಯಕ್ರಮ ಒಂದು ಪಕ್ಷ ಶುರು ಮಾಡಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಅಂತ ಹೊರಟಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರಲಿಲ್ವಾ? ಪರ್ಸೆಂಟೇಜ್ ಮಾತಾಡಿದ್ರೆ ದಾಖಲೆ ಇಡಬೇಕಲ್ವಾ? ಕಮಿಷನ್ ಸಾರ್ವಜನಿಕವಾಗಿ ಎಷ್ಟು ಬೆಳೆದಿದೆ, ನಮ್ಮ ಕೊಡುಗೆ ಹಿಂದೆ ಏನಿತ್ತು ಮುಂದೆ ಏನಿರುತ್ತದೆ ಅಂತ ಜನರ ಮುಂದೆ ಇಡಬೇಕಲ್ವಾ? ಇಂತಹ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇಲ್ಲ. ಇವರು ಏನು ಮಾಡ್ತಾರೆ ಅಂತ ಜನರ ಮುಂದೆ ಇಡಬೇಕು. ಈ‌ ಸರ್ಕಾರದ ಮುಂದೆ ಯಾವುದೂ ಇಲ್ಲ. ಸರ್ಕಾರ ಅತ್ಯಂತ ಭಂಡತನದಿಂದ ವಿತಂಡವಾದ ಮಂಡಿಸುತ್ತಿದೆ ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾ:ಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಲ್ಲಿ ಕ್ಲಿಕ್ ಮಾಡಿ

Published On - 5:08 pm, Mon, 26 September 22