ಹಣಕಾಸಿನ ವ್ಯವಹಾರವೇ ಆಗಿದ್ದರೂ ಮುನಿಗಳ ಹತ್ಯೆ ಏಕೆ ಆಯ್ತು: ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಐಎಸ್ಐ ಉಗ್ರರು ಮಾಡುವುದಕ್ಕಿಂತ ಅತ್ಯಂತ ಹೇಯ ಕೃತ್ಯವೆಸಗಿದ್ದಾರೆ. ಮುನಿಗಳಿಗೆ ಎ1 ನಾರಾಯಣ್​ ಜೊತೆ ಯಾವುದೇ ಹಣಕಾಸಿನ ವ್ಯವಹಾರವೇ ನಡೆದಿಲ್ಲ ಆದರೂ ಮುನಿಗಳ ಹತ್ಯೆ ಏಕೆ ಆಯ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ವಿಧಾನಸಭೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆಗಳು ಆಗುತ್ತಿವೆ. ಶೂನ್ಯವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಕರಣ ಕುರಿತಾಗಿ ಪ್ರಸ್ತಾಪ ಮಾಡಿದ್ದು, ಜೈನಮುನಿ ಮಹಾರಾಜರನ್ನು ವ್ಯವಸ್ಥಿತವಾಗಿ, ಅತ್ಯಂತ ಹತ್ತಿರದವರೇ ಕೊಲೆ ಮಾಡಿದ್ದಾರೆ. ಐಎಸ್ಐ ಉಗ್ರರು ಮಾಡುವುದಕ್ಕಿಂತ ಅತ್ಯಂತ ಹೇಯ ಕೃತ್ಯವೆಸಗಿದ್ದಾರೆ ಎಂದು ಹೇಳಿದರು.

ಮುನಿಗಳಿಗೆ ಎ1 ನಾರಾಯಣ್​ ಜೊತೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಹಣಕಾಸಿನ ವ್ಯವಹಾರವೇ ಬೇರೆ ಆಗಿದ್ದರೂ ಮುನಿಗಳ ಹತ್ಯೆ ಏಕೆ ಆಯ್ತು ಎಂದು ಪ್ರಶ್ನಿಸಿದರು. ಮೂಲವನ್ನು ತನಿಖೆ ಮಾಡದೇ ಇಷ್ಟು ಬೇಗ ಪ್ರಕರಣದ ಬಗ್ಗೆ ಪೊಲೀಸರು ಸಾರಾಂಶಕ್ಕೆ ಬಂದಿದ್ದಾರೆ ಎಂದರು.

ಇದನ್ನೂ ಓದಿ: ಜೈನ ಮುನಿ ಹತ್ಯೆ ಪ್ರಕರಣ: ಎರಡನೇ ಆರೋಪಿ ಹೆಸರು ಹೇಳದಿರುವುದು ಸಂಶಯಕ್ಕೆ ಕಾರಣ ಎಂದ ಅಭಯ್ ಪಾಟೀಲ್

ಈ ಸರ್ಕಾರ ಬಂದ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿದೆ: ಶಾಸಕ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಮಾತನಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು. ಪ್ರಕರಣದ ಆರೋಪಿ ಹಸನ್ ಡಲಾಯತ್​​​ ಹೆಸರು ಹೇಳುತ್ತಿಲ್ಲ. ಒಂದು ಕೋಮನ್ನು ಸಂತೃಪ್ತಗೊಳಿಸಲು ಹೆಸರು ಹೇಳುತ್ತಿಲ್ಲ. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಆಗಿದೆ. ಈ ಸರ್ಕಾರ ಬಂದ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿದೆ. ಯತ್ನಾಳ್​ ಹೇಳಿಕೆಗೆ ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಈ ವಿಚಾರದಲ್ಲಿ ರಾಜಕೀಯದ ಮಾತು ಬೇಡ ಎಂದು ಸ್ಪೀಕರ್​ ಹೇಳಿದ್ದಾರೆ. ​​​

ಪೊಲೀಸರು ಒತ್ತಡದಿಂದ ಹಸನ್​ ಹೆಸರು ಹೇಳುತ್ತಿಲ್ಲ. ಸಂಜೆ ಆಗುತ್ತಿದ್ದಂತೆಯೇ ಪೊಲೀಸರ ಟ್ಯೂನ್ ಬೇರೆ ಆಗುತ್ತದೆ. ಹಿಂದೆ ಹೀಗೆಯೇ ಮಾಡಿ ನನ್ನ ಮೇಲೆ 23 ಕೇಸ್ ಹಾಕಿದ್ದರು. ಜೈನ ಮುನಿ ಹತ್ಯೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಕನಿಷ್ಠ ಸಂತಾಪ ಕೂಡಾ ಸೂಚಿಸಲಿಲ್ಲ. ಇನ್ನೊಂದು ಕೋಮಿನವರು ಆಗಿರುತ್ತಿದ್ದರೆ ರಾಜ್ಯ ಇಡೀ ಮಾಡುತ್ತಿದ್ದರು‌ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಿ, ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ -ಗುಣಧರನಂದಿಶ್ರೀ

ಕೃತ್ಯದ ಹಿಂದೆ ಬರೀ ಇಬ್ಬರು ಆರೋಪಿಗಳು ಮಾತ್ರ ಇದ್ದಾರಾ ಅಥವಾ ಬೇರೆಯವರ ಕೈವಾಡ ಇದ್ಯಾ?

ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಜೈನ‌ಮುನಿಗಳ ಹತ್ಯೆ ರಾಜ್ಯವನ್ನೇ ತಲ್ಲಣಗೊಳಿಸಿದೆ. ಜೈನಮುನಿಗಳು ಅಹಿಂಸಾ ತತ್ವವನ್ನ ಕಠೋರವಾಗಿ ಪಾಲಿಸುತ್ತಾರೆ. ವಿದ್ಯುತ್ ಶಾಕ್ ಮೂಲಕ ಕೊಂದು ಒಂಬತ್ತು ಭಾಗ ಮಾಡಿ ಕೊಳವೆ ಬಾವಿಗೆ ಹಾಕಿದ್ದಾರೆ. ಭಕ್ತಾಧಿಗಳು ಕಣ್ಣೀರಿನ ಕೋಡಿ ಹರಿಸುತ್ತಿದ್ದಾರೆ. ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡುತ್ತಾರೆ.

ಸ್ವಾಮೀಜಿಗಳಿಗೆ ರಕ್ಷಣೆ ಕೊಡಿ ಎಂದು ಪೂಜ್ಯ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಈ ಘೋರ ಕೃತ್ಯದ ಹಿಂದೆ ಬರೀ ಇಬ್ಬರು ಆರೋಪಿಗಳು ಮಾತ್ರ ಇದ್ದಾರಾ? ಅಥವಾ ಬೇರೆಯವರ ಕೈವಾಡ ಇದೆಯಾ ಎಂದು ಪ್ರಶ್ನಿಸಿದರು. ಸರ್ಕಾರ ನಿರ್ಲಕ್ಷ್ಯ ಮನೋಭಾವನೆ ತೊರಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us