Breaking News ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

Jaiveer Shergill ನಿರ್ಣಯಗಳು ಸಾರ್ವಜನಿಕ ಮತ್ತು ದೇಶದ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ಹೇಳಲು ನನಗೆ ನೋವಾಗಿದೆ ಎಂದು ಹೇಳಿ ರಾಜೀನಾಮೆ ನೀಡಿದ ಜೈವೀರ್ ಶೆರ್ಗಿಲ್

Breaking News ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ
ಜೈವೀರ್ ಶೆರ್ಗಿಲ್
Updated By: ರಶ್ಮಿ ಕಲ್ಲಕಟ್ಟ

Updated on: Aug 24, 2022 | 4:46 PM

ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ (Jaiveer shergill) ಬುಧವಾರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿರ್ಣಯಗಳು ಸಾರ್ವಜನಿಕ ಮತ್ತು ದೇಶದ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ಹೇಳಲು ನನಗೆ ನೋವಾಗಿದೆ. ಬದಲಿಗೆ ಇದು ವ್ಯಕ್ತಿಗಳ ಸ್ವ-ಸೇವೆಯ ಹಿತಾಸಕ್ತಿಗಳಿಂದ ಪ್ರಭಾವಿತವಾಗಿರುತ್ತದೆ ಮತ್ತು ನೆಲದ ವಾಸ್ತವ ಸಂಗತಿಗಳನ್ನು  ಕಡೆಗಣಿಸುತ್ತದೆ ಎಂದು  ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರಗದಲ್ಲಿ ಶೆರ್ಗಿಲ್ ಹೇಳಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ  ವಕೀಲರಾಗಿರುವ ಶೆರ್ಗಿಲ್ ಪಕ್ಷದ ಕಾರ್ಯಕರ್ತರಿಗೆ ಕಾನೂನು ಸಹಾಯ ನೀಡುವುದಕ್ಕಾಗಿ  24x 7 ಕಾನೂನು ಸಹಾಯಿ ಟೋಲ್  ಫ್ರೀ ಸಹಾಯವಾಣಿ ಆರಂಭಿಸಿ ಸುದ್ದಿಯಾಗಿದ್ದರು.

ಕೆಲವು ವರದಿಗಳ ಪ್ರಕಾರ ಜೈವೀರ್ ಅವರಿಗೆ ಕೆಲವು ತಿಂಗಳಿನಿಂದ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಆವಕಾ ಕೊಟ್ಟಿರಲಿಲ್ಲ. ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಅವರು ಪಕ್ಷದ ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜೈವೀರ್ ರಾಜೀನಾಮೆ ಬಂದಿದೆ.

ಕಳೆದ  ಭಾನುವಾರ ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ  ಅವರು ಪಕ್ಷದ ಹಿಮಾಚಲ ಪ್ರದೇಶ ಘಟಕದ ಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸಮಾಲೋಚನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಶರ್ಮಾ ಆರೋಪಿಸಿದ್ದಾರೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಶರ್ಮಾ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕನಾಗಿದ್ದ ಶರ್ಮಾಅವರನ್ನು ಹಿಮಾಚಲ ಪ್ರದೇಶದ ಚಾಲನಾ ಸಮಿತಿಯ ಮುಖ್ಯಸ್ಥರಾಗಿ ಏಪ್ರಿಲ್ 26ರಂದು ನೇಮಕ ಮಾಡಲಾಗಿತ್ತು. ಶರ್ಮಾ ಅವರು ಹಿಮಾಚಲ ಪ್ರದೇಶದ ಹಿರಿಯ ನಾಯಕರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಚುನಾವಣೆ ನಡೆಯಲಿದ್ದು, ಬಿಜಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಶರ್ಮಾ ಅವರು 1982ರಲ್ಲಿ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಶರ್ಮಾ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದರು. ಶರ್ಮಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಹುದ್ದೆಗಳನ್ನು ನಿರ್ವಹಿಸಿದ್ದಾರೆ .

ಜಮ್ಮು ಮತ್ತು ಕಾಶ್ಮೀರದಲ್ಲಿ ಗುಲಾಂನಬಿ ಆಜಾದ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಬೆನ್ನಲ್ಲೇ ಶರ್ಮಾ ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ . ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿರುವ ಜಿ 23 ಗುಂಪಿನ ಪ್ರಧಾನ ನಾಯಕರಾಗಿದ್ದಾರೆ ಶರ್ಮಾ ಮತ್ತು ಆಜಾದ್.

ಭೂಪಿಂದರ್ ಸಿಂಗ್ ಹೂಡಾ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಅನುಭವಿಗಳನ್ನು ಒಳಗೊಂಡ ಗುಂಪು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮತಿಗೂ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದೆ.

ಹಿಮಾಚಲ ಪ್ರದೇಶದಿಂದ ಪಕ್ಷದ ಅತ್ಯಂತ ಹಿರಿಯ , ಉನ್ನತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಶರ್ಮಾ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ಪತ್ರದಲ್ಲಿ, ಪಕ್ಷದ ಯಾವುದೇ ಸಭೆಗಳಲ್ಲಿ ತಮ್ಮ ಸಲಹೆ ಕೇಳದ ಕಾರಣ ಅಥವಾ ಆಹ್ವಾನಿಸದ ಕಾರಣ ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ಹಿಮಾಚಲದಲ್ಲಿ ನಡೆಯುವ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸುತ್ತಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.

 

Published On - 3:35 pm, Wed, 24 August 22