ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಆಪರೇಷನ್, ಬಿಜೆಪಿ ಶಾಸಕರಿಗೆ ಕಾಂಗ್ರೆಸ್​ ಗಾಳ? ಲಿಸ್ಟ್​ನಲ್ಲಿ ಯಾರ್ಯಾರು?

| Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 8:04 AM

ಆಪರೇಷನ್.. ರಾಜ್ಯ ರಾಜಕೀಯದಲ್ಲಿ ಮತ್ತೆ ಶಾಸಕರ ಆಪರೇಷನ್ ವಿಚಾರ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದ್ರೆ ನೆನಪಿರಲಿ ಈ ಆಪರೇಷನ್ ಸುದ್ದಿ ಸುತ್ತು ಹಾಕುತ್ತಿರುವುದು ಕಾಂಗ್ರೆಸ್ ಸುತ್ತ. ವಿಧಾನಸಭೆಯಲ್ಲಿ ಪ್ರಚಂಡ ಬಹುಮತ ಪಡೆದಿರುವ ಕಾಂಗ್ರೆಸ್ ಅದರಲ್ಲೂ ಡಿಸಿಎಂ ಡಿಕೆಶಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸವುದಕ್ಕಾಗಿ ಈ ಆಪರೇಷನ್ ಅಸ್ತ್ರ ಹೂಡಿದ್ದಾರೆ ಎನ್ನಲಾಗಿದೆ. ಹಾಗಿದ್ರೆ ಏನಿದು ಆಪರೇಷನ್ ಹಸ್ತದ ರಹಸ್ಯ ವರದಿ ಇಲ್ಲಿದೆ ನೋಡಿ.

ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಆಪರೇಷನ್, ಬಿಜೆಪಿ ಶಾಸಕರಿಗೆ ಕಾಂಗ್ರೆಸ್​ ಗಾಳ? ಲಿಸ್ಟ್​ನಲ್ಲಿ ಯಾರ್ಯಾರು?
ಬಿಜೆಪಿ-ಕಾಂಗ್ರೆಸ್​
Follow us on

ಬೆಂಗಳೂರು, (ಆಗಸ್ಟ್ 17): ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka Politics) ಮತ್ತೆ ಆಪರೇಷನ್ (Operation Hasta) ಬಿರುಗಾಳಿ ಎದ್ದಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಗೆ (Loksabha Elections 2023) ಸಿದ್ಧವಾಗುತ್ತಿದೆ. ಲೋಕಸಭೆ ಗೆಲುವಿನ ತಂತ್ರದ ಭಾಗವಾಗೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಭರ್ಜರಿ ಪ್ಲ್ಯಾನ್ ರೂಪಿಸಿದ್ದು.. ಖುದ್ದು ಡಿಕೆ ಶಿವಕುಮಾರ್ ಆಪರೇಷನ್ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಆಪರೇಷನ್​ಗೆ ಇಂಬುಕೊಡುವಂತೆ ಡಿಕೆ ಸಹೋದರ ಡಿ.ಕೆ.ಸುರೇಶ್ ಸಹ, ಯಾರೇ ಬಂದರೂ ಪಕ್ಷಕ್ಕೆ ಸ್ವಾಗತ ಎಂದಿದ್ದಾರೆ. ಹಾಗಿದ್ರೆ ಕಾಂಗ್ರೆಸ್ ಆಪರೇಷನ್​ಗೆ ಪ್ಲ್ಯಾನ್ ಏನು.. ಬಿಜೆಪಿ ಸೇರಿರೋ ಯಾವ ಯಾವ ಶಾಸಕರನ್ನ ಸೆಳೆಯೋಕೆ ಕಾಂಗ್ರೆಸ್ ಪ್ಲ್ಯಾನ್ ಮಾಡುತ್ತಿದೆ. ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿರುವ ಆಪರೇಷನ್ ಕಹಾನಿ ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.

ವಿ.ಸೋಮಣ್ಣ ಕಾಂಗ್ರೆಸ್​ಗೆ ಹೋಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈಗಾಗಲೇ ಬಿಜೆಪಿಯಲ್ಲಿ ವಿ.ಸೋಮಣ್ಣ ರಾಜ್ಯಾಧ್ಯಕ್ಷ ಮತ್ತು ಲೋಕಸಭೆ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಆ ಸ್ಥಾನ ಮಾನ ನೀಡದೇ ಹೋದ್ರೆ ಅದನ್ನೇ ಕಾರಣವಾಗಿ ಮುಂದಿಟ್ಟು, ಬಿಜೆಪಿ ಬಿಡುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಸೋಮಣ್ಣ ಕಾಂಗ್ರೆಸ್​ಗೆ ಬಂದ್ರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನೆರವು ಆಗುತ್ತೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಅಧಿಕಾರದ ಬೆನ್ನೇರಿ ಬಾಂಬೆ ಟೀಮ್​ನ 17 ಶಾಸಕರು ಮತ್ತೆ ಕಾಂಗ್ರೆಸ್​​ ಕದ ತಟ್ಟುತ್ತಾರಾ? ಮುಖ್ಯವಾಗಿ ಮುನಿರತ್ನ ಏನಂದರು?

ಇನ್ನು ಭೈರತಿ ಬಸವರಾಜ್ ಸಹ ಕಾಂಗ್ರೆಸ್​ಗೆ ವಾಪಸ್ ಬರುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದ್ರೆ. ಈ ಬಗ್ಗೆ ಇನ್ನೂ ಪಕ್ಕಾ ಆಗಿಲ್ಲ. ಇನ್ನು ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯರನ್ನ ಸೆಳೆಯಲು ವಿಧಾನಸಭೆ ಚುನಾವಣೆಗೂ ಮೊದಲೇ ಕಾಂಗ್ರೆಸ್ ಪ್ಲ್ಯಾನ್ ರೂಪಿಸಿತ್ತು. ಆಪ್ತರು ಹಾಗೂ ಮಾಜಿ ಕಾರ್ಪೊರೇಟರ್​ ಮೂಲಕ ಗೋಪಾಲಯ್ಯರನ್ನ ಕಾಂಗ್ರೆಸ್ ಸಂಪರ್ಕಿಸಿತ್ತು. ಇದೀಗ ಲೋಕಸಭೆ ಚುನಾವಣೆ ವೇಳೆ ಗೋಪಾಲಯ್ಯ ಅವರನ್ನ ಸೆಳೆಯುವುದಕ್ಕೆ ಮತ್ತೆ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ. ಹೀಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೆಲ ಶಾಸಕರನ್ನು ಸೆಳೆಯುವ ಮೂಲಕ ಡಿಕೆ ಶಿವಕುಮಾರ್ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯಲು ಯೋಜನೆ ರೂಪಿಸುತ್ತಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅನುಕೂಲವಾಗುವಂತೆ ತಂತ್ರ

ಬಿಬಿಎಂಪಿಯ ಕಮಿಷನ್​ ಆರೋಪದ ಬಗ್ಗೆ ತನಿಖೆಗೆ ಪ್ಲ್ಯಾನ್ ಮಾಡಿರುವ ಡಿಕೆ, ಲೋಕಾಸಭಾ ಚುನಾವಣೆಗೆ ಜನಾಭಿಪ್ರಾಯ ಕಾಂಗ್ರೆಸ್ ಪರ ವಾಲುವಂತೆ ಮಾಡಲು ಭಾರಿ ಯೋಜನೆ ರೂಪಿಸಿದ್ದಾರಂತೆ. ಅದರಲ್ಲೂ ಬಿಜೆಪಿ ಬೆಂಗಳೂರಲ್ಲಿ ವೀಕ್ ಆಗುವಂತೆ ಮಾಡುವುದು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಲಾಭವಾಗು ವಂತೆ ನೋಡಿಕೊಳ್ಳುವುದು ಡಿಕೆ ತಂತ್ರವಾಗಿದೆ.

ಡಿಕೆ ನನ್ನ ರಾಜಕೀಯ ಗುರು..ಕುತೂಹಲ ಹುಟ್ಟಿಸಿದ STS ಹೇಳಿಕೆ!

ಪರೇಷನ್ ಹಸ್ತ ಸದ್ದು ಮಾಡುತ್ತಿರುವಾಗಲೇ, ಅಂದ್ರೆ ಕಳೆದ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಸ್​.ಟಿ.ಸೋಮಶೇಖರ್ ಮತ್ತು ಡಿಕೆಶಿ ವೇದಿಕೆ ಹಂಚಿಕೊಂಡಿದ್ದರು. ಸಾಲದ್ದಕ್ಕೆ ಸೋಮಶೇಖರ್ ಡಿಸಿಎಂ ಡಿಕೆ ನನ್ನ ಗುರುಗಳು ಎಂದು ಹಾಡಿಹೊಗಳಿದ್ದರು. ಇವತ್ತು ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ನಮ್ಮ ಗುರುಗಳಾದ ಡಿ.ಕೆ.ಶಿವಕುಮಾರ್ ಅವರು ಕಾರಣ ಎಂದು ಗುಣಗಾನ ಮಾಡಿದ್ದರು. ಡಿಕೆ ಶಿವಕುಮಾರ್ ನನ್ನ ಗುರುಗಳು ಎಂದಿರುವ ಸೋಮಶೇಖರ್, ತಿಂಗಳ ಹಿಂದಷ್ಟೇ ನಾನು ಸಿದ್ದರಾಮಯ್ಯನವರ ಶಿಷ್ಯ ಎಂದಿದ್ದರು.

ಹೀಗೆ ಡಿಕೆ ಶಿವಕುಮಾರ್ ನನ್ನ ಗುರು, ನಾನು ಸಿದ್ದರಾಮಯ್ಯ ಶಿಷ್ಯ ಎಂದು ಗುಣಗಾನ ಮಾಡುತ್ತಿರುವ ಸೋಮಶೇಖರ್ ದಿನೇ ದಿನೇ ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಮಧ್ಯೆ ಬಿಜೆಪಿ ಸೇರಿದ್ದ ಮುನಿರತ್ನ ಕೂಡ ಮರಳಿ ಕಾಂಗ್ರೆಸ್‌ ಗೂಡು ಸೇರು್ತತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುನಿರತ್ನ, ನಾನು ಬಿಜೆಪಿಯಲ್ಲೇ ಇರುತ್ತೇನೆ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಸಿ.ಟಿ.ರವಿ, ಕಾಂಗ್ರೆಸ್​ಗೆ ಹೋಗುವವರ ಯಾರೂ ಇಲ್ಲ. ಆದ್ರೆ ಅನುಮಾನ ಬಂದ್ರೆ ಅಪನಂಬಿಕೆಯಿಂದ ನೋಡಬೇಕಾಗುತ್ತದೆ ಎಂದಿದ್ದಾರೆ. ಏನೇ ಆದರೂ ಆಪರೇಷನ್ ಹಸ್ತ ಚಾಲ್ತಿಯಲ್ಲಿರುವುದ ಬಹುತೇಕ ಪಕ್ಕಾ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ ಯಾರು, ಯಾವಾಗ, ಎಲ್ಲಿ ಹೇಗೆ ಆಪರೇಷನ್​ ಖೆಡ್ಡಾಕ್ಕೆ ಬಿದ್ದು ಕೈ ಹಿಡಿತಾರೋ ಕಾಲವೇ ಉತ್ತರ ನೀಡಲಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ