AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ನಲ್ಲಿ ಮತ್ತೆ ದಲಿತ ಸಿಎಂ ಕೂಗು? ಕಿಚ್ಚು ಹಚ್ಚಿದ ಸಚಿವ ಡಾ ಮಹದೇವಪ್ಪ ಹೇಳಿಕೆ

ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬರಲಿದೆಯೇ? ಸಮಾಜ ಕಲ್ಯಾಣ ಸಚಿವ ಡಾ. ಹೆಚ್​ಸಿ ಮಹದೇವಪ್ಪ ನೀಡಿರುವ ಹೇಳಿಕೆ ಇದೀಗ ಈ ಅನುಮಾನಕ್ಕೆ ಕಾರಣವಾಗಿದೆ. ಅಧಿಕಾರಕ್ಕೆ ತರಲು ಶ್ರಮಿಸಿದರೂ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುವ ಸ್ಥಿತಿ ದಲಿತ ನಾಯಕರದ್ದಾಗಿದೆ ಎಂದು ಅವರು ಬೇಸರದಿಂದ ಹೇಳಿದ್ದಾರೆ.

ಕಾಂಗ್ರೆಸ್​​ನಲ್ಲಿ ಮತ್ತೆ ದಲಿತ ಸಿಎಂ ಕೂಗು? ಕಿಚ್ಚು ಹಚ್ಚಿದ ಸಚಿವ ಡಾ ಮಹದೇವಪ್ಪ ಹೇಳಿಕೆ
ಡಾ. ಮಹದೇವಪ್ಪ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on:Mar 06, 2024 | 12:41 PM

Share

ಬೆಂಗಳೂರು, ಮಾರ್ಚ್​ 6: ಕಾಂಗ್ರೆಸ್ (Congress) ಪಕ್ಷದಲ್ಲಿ ದಲಿತ ಸಿಎಂ (Dalit CM) ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬರುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂದು ಸಚಿವ ಡಾ. ಮಹದೇವಪ್ಪ (Dr HC Mahadevappa) ಬೇಸರ ವ್ಯಕ್ತಪಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚುವ ಸಾಧ್ಯತೆ ಇದೆ. ರಾಜ್ಯಮಟ್ಟದ ಎಸ್​ಸಿ, ಎಸ್​ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಹೇಗೆ ಸಿಎಂ ಆದರು ಎಂದು ವಿವರಿಸಿದರು. ಆದರೆ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ನಾನು ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೀವು ನಾಯಕರನ್ನು ಫಾಲೋ ಮಾಡುತ್ತಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಯಾಕೆ ಸಿಎಂ ಆದರು? ರಾಜ್ಯದಲ್ಲಿ ಒಗ್ಗಟಾಗಿ ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ. ಮತ ನಮ್ಮದಿದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಮಹದೇವಪ್ಪ ಬೇಸರದಿಂದ ಹೇಳಿದರು.

ಡಾ. ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ. ಅಂಬೇಡ್ಕರ್ ಬಳಿಕ ಮತ್ತೊಬ್ಬ ದಲಿತ ನಾಯಕ ಸಿಗಲಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ಆದರೂ ನಮ್ಮ ಪ್ರಭಾವ ಬಳಿಸಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ, ಮುಂಬಡ್ತಿ ಮೀಸಲಾತಿ ಸೇರಿದಂತೆ ಕೆಲ ಐತಿಹಾಸಿಕ ತೀರ್ಮಾನ ಮಾಡಿಸಿದ್ದೇವೆ. ಇದು ಇವತ್ತಿನ ದೇಶದ ರಾಜಕೀಯ ಸನ್ನಿವೇಶ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1987 ರಲ್ಲಿ 27 ಜನ ದಲಿತ ಶಾಸಕರು ಇದ್ದರು. ಬಿ ರಾಚಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಎದ್ದು ಹೇಳಿದವನು ನಾನೊಬ್ಬನೇ ಶಾಸಕ. ಉಳಿದ 26 ಜನ ದಲಿತ ಶಾಸಕರು ತಲೆ ಮೇಲೆ ಸೆರಗು ಹಾಕಿಕೊಂಡು ಕೂತಿದ್ದರು. ಕೊನೇ ಪಕ್ಷ 26 ಜನರೂ ಎದ್ದಿದ್ದರೆ ನಾಯಕತ್ವ ರಕ್ಷಣೆ ಮಾಡಬಹುದಿತ್ತು. ಆಗ ದೇವೇಗೌಡರು ‘ನಾನೇನಪ್ಪ ಮಾಡಲಿ ಮಹದೇವಪ್ಪ ಬಿಟ್ಟರೆ ಯಾರೂ ಮತ್ತೊಬ್ಬರು ಹೇಳಲೇ ಇಲ್ಲ’ ಎಂದು ಹೇಳಿದ್ದರು. ಇದು ನಮ್ಮ ಹಣೆಬರಹ ಎಂದು ಸಚಿವ ಮಹದೇವಪ್ಪ ಅಸಮಾಧಾನ ಹೊರಹಾಕಿದರು.

ದಲಿತ ಸಿಎಂ ಕೂಗು ಇದೇ ಮೊದಲಲ್ಲ

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಕೂಡ ಕೆಲವು ಬಾರಿ ದಲಿತ ಸಿಎಂ ವಿಚಾರ ಚರ್ಚೆಗೆ ಬಂದಿತ್ತು. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್ ಮತ್ತಿತರ ದಲಿತ ನಾಯಕರ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬಂದಿದ್ದವು. ಇದನ್ನು ರಾಜಕೀಯ ದಾಳ ಮಾಡಿಕೊಂಡಿದ್ದ ಬಿಜೆಪಿ ಕೂಡ ದಲಿತರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್, ಅವರಿಗೆ ಅಧಿಕಾರ ನೀಡುತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿತ್ತು.

ಇದನ್ನೂ ಓದಿ: 2 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ, ಮಂಗನ ಕಾಯಿಲೆ ತಡೆಗೆ ಕ್ರಮ: ಶಿರಸಿಯಲ್ಲಿ ಇನ್ನೂ ಏನೇನಂದ್ರು ಸಿಎಂ ಸಿದ್ದರಾಮಯ್ಯ?

ಇದೀಗ ಮಹದೇವಪ್ಪ ಹೇಳಿಕೆ ಮತ್ತೆ ಪ್ರತಿಪಕ್ಷಗಳ ಅಸ್ತ್ರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿಯೂ ಮತ್ತೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Wed, 6 March 24