AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ರಾಜೀನಾಮೆ ಗೊಂದಲ: ವಲಸಿಗ ಸಚಿವರನ್ನು ಕಾಡುತ್ತಿದೆ ಭವಿಷ್ಯ ಏನೆಂಬ ಪ್ರಶ್ನೆ

Karnataka Politics: ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೆಂದು ಪಕ್ಷಾಂತರ ಮಾಡಿದ ವಲಸಿಗರಲ್ಲಿ, ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ ನಮ್ಮ ರಾಜಕೀಯ ಭವಿಷ್ಯ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ.

ಯಡಿಯೂರಪ್ಪ ರಾಜೀನಾಮೆ ಗೊಂದಲ: ವಲಸಿಗ ಸಚಿವರನ್ನು ಕಾಡುತ್ತಿದೆ ಭವಿಷ್ಯ ಏನೆಂಬ ಪ್ರಶ್ನೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jul 22, 2021 | 8:24 PM

Share

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಗೊಂದಲ ಮುಂದುವರಿದಿರುವಂತೆಯೇ ವಲಸಿಗ ಸಚಿವರಲ್ಲಿ ಗೊಂದಲದ ಮಾತುಗಳು ಕೇಳಿಬರುವುದು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೆಂದು ಪಕ್ಷಾಂತರ ಮಾಡಿದ ವಲಸಿಗರಲ್ಲಿ, ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ ನಮ್ಮ ರಾಜಕೀಯ ಭವಿಷ್ಯ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ.

ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿಯೇ ಮುಂದುವರಿಸುವಂತೆ ಹೈಕಮಾಂಡ್​ಗೆ ಮನವಿ ಮಾಡಲು ವಲಸಿಗ ಸಚಿವರಲ್ಲಿ ಗಂಭೀರ ಚರ್ಚೆ ನಡೆದಿದೆ. ಆದರೆ ಈ ವಿಷಯವನ್ನು ಹೈಕಮಾಂಡ್​ ಬಳಿ ಕೊಂಡೊಯ್ದರೆ ಫಲಿತಾಂಶ ಮತ್ತು ತಮ್ಮ ಭವಿಷ್ಯ ಏನಾಗಬಹುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆಯೂ ವಲಸಿಗ ಸಚಿವರಲ್ಲಿ ಗೊಂದಲ ಮತ್ತು ಆತಂಕ ಮುಂದುವರಿದಿದೆ. ಹೊಸ ಮುಖ್ಯಮಂತ್ರಿ ಬಂದರೆ ತಮ್ಮ ಸ್ಥಾನಮಾನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ವಲಸಿಗರಲ್ಲಿ ಕಂಡುಬರುತ್ತಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಸೌಧದಲ್ಲಿ ಗುರುವಾರ ಸಂಜೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜುಲೈ 25ರಂದು ಹೈಕಮಾಂಡ್​ ಸಂದೇಶ ಪಾಲಿಸುವುದಾಗಿ ಹೇಳಿದ್ದಾರೆ. ನಾವೆಲ್ಲರೂ ಯಡಿಯೂರಪ್ಪ ಇರುವವರೆಗೂ ಅವರ ಜತೆಗೆ ಇರುತ್ತೇವೆ. ಹೈಕಮಾಂಡ್ ಕೊಡುವ ನಿರ್ದೇಶನ ಪಾಲಿಸುತ್ತೇವೆ. ನಮಗೆ ಯಾವುದೇ ಆತಂಕ ಇಲ್ಲ. ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುತ್ತೇವೆ ಎಂದು ಹೇಳಿದರು.

ಸಚಿವ ಸಂಪುಟ ಸಭೆಯ ನಂತರ ವಾಡಿಕೆಯಂತೆ ಮುಖ್ಯಮಂತ್ರಿ ಕಚೇರಿಗೆ ಹೋಗಿ, ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದೆವು. ಯಡಿಯೂರಪ್ಪ ಅವರು ಈ ವೇಳೆ, ‘ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಕಡೆಗೆ ಹೆಚ್ಚು ಗಮನ ನೀಡುವುದಾಗಿ ಹೇಳಿದ್ದಾರೆ. ಅಗತ್ಯಬಿದ್ದರೆ ನಾವು ದೆಹಲಿಗೂ ಹೋಗಿ ಬರಲು ಸಿದ್ಧರಿರುವುದಾಗಿ ಕೆಲ ಸಚಿವರು ತಿಳಿಸಿದ್ದಾರೆ ಎಂದು ಸುಧಾಕರ್ ತಿಳಿಸಿದರು.

ನಾವು ಯಡಿಯೂರಪ್ಪ ಬಳಿಗೆ ರಾಜೀನಾಮೆ ಪತ್ರ ನೀಡಲು ಹೋಗಿರಲಿಲ್ಲ ಎಂದು ಮುಖ್ಯಮಂತ್ರಿಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದರು. ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿ, ಅನುದಾನಗಳ ಕುರಿತು ಚರ್ಚಿಸಿದ್ದೇನೆ. ಕೆಲ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದು ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ನಾವು ರಾಜೀನಾಮೆ ನೀಡಲು ಹೋಗಿರಲಿಲ್ಲ. ಕೆಲ ದಾಖಲೆಗಳಿಗೆ ಮುಖ್ಯಮಂತ್ರಿ ಸಹಿ ಬೇಕಿತ್ತು. ಅದನ್ನು ಪಡೆದುಕೊಳ್ಳಲು ಹೋಗಿದ್ದೆವು. ನಾವು ರಾಜೀನಾಮೆ ನೀಡಲು ಮುಂದಾಗಿದ್ದೇವೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ. ನಾವು ಯಾಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದರು.

(BS Yediyurappa resignation confusion in bjp haunts migrated ministers)

ಇದನ್ನೂ ಓದಿ: ಲಿಂಗಾಯತ ಸಮುದಾಯದ ನಾಯಕತ್ವ ತಮ್ಮ ಕುಟುಂಬದ ಆಚೆಗೆ ಹೋಗದಿರಲು ಹೈಕಮಾಂಡ್​ಗೆ ಷರತ್ತು ವಿಧಿಸಿದರೆ ಯಡಿಯೂರಪ್ಪ?

ಇದನ್ನೂ ಓದಿ: Karnataka Politics: ಸಿಎಂ ಸ್ಥಾನ ಉಳಿಸಿಕೊಳ್ಳಲು ವಲಸಿಗ ಸಚಿವರ ಮೂಲಕ ಒತ್ತಡ ಹಾಕಿದರಾ ಯಡಿಯೂರಪ್ಪ?