ಕರ್ನಾಟಕದಲ್ಲಿ ನಮ್ಮ ನಾಯಕರನ್ನು ಗುರಿಯಾಗಿಸಿ ಇ.ಡಿ, ಐಟಿ ದಾಳಿಯ ಸುಳಿವು ದೊರೆತಿದೆ; ಕಾಂಗ್ರೆಸ್

|

Updated on: Apr 04, 2023 | 11:02 PM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್​​ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಸೋಲುವ ಭೀತಿಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್​​ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಮಂಗಳವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು, ನಾಳೆಯಿಂದ ಕರ್ನಾಟಕದಲ್ಲಿ ಇ.ಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದರು. ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ಇ.ಡಿ, ಐಟಿ ದಾಳಿ ಸಾಧ್ಯತೆ ಇದೆ. ಆದರೆ, ಅವರಿಂದ ಕಾಂಗ್ರೆಸ್‌ ಪಕ್ಷವನ್ನು ಏನೂ ಮಾಡಲಾಗದು. 150 ಸೀಟ್‌ ಗೆಲ್ಲುವ ಕಾಂಗ್ರೆಸ್‌ ಗುರಿಯನ್ನು ತಡೆಯಲಾಗದು ಎಂದು ಸುರ್ಜೇವಾಲ ಹೇಳಿದ್ದಾರೆ.

ಬಿಜೆಪಿಯ ಸಚಿವರು ಮತ್ತು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದರಿಂದ ಬಿಜೆಪಿಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಧಿಕೃತ ಮಾಹಿತಿ ನಮಗೆ ದೊರೆತಿದೆ. ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಸಾಮೂಹಿಕ ವಲಸೆ ನಡೆಯುತ್ತಿದೆ. ಸುಮಾರು 10 ಶಾಸಕರು, ಎಂಎಲ್‌ಸಿಗಳು, ಮಾಜಿ ಶಾಸಕರು ಮತ್ತು ಮಾಜಿ ಎಂಎಲ್‌ಸಿಗಳು, ಅವರ ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರು ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಸುರ್ಜೇವಾಲ ಹೇಳಿದರು.

ಈ ಎಲ್ಲ ಬೆಳವಣಿಗೆಗಳ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಸ್ತ್ರಾಗಾರದಲ್ಲಿ ಅಂತಿಮ ಆಯುಧಗಳನ್ನು ಬಳಸಲು ನಿರ್ಧರಿಸಿದ್ದಾರೆ. ಆದರೆ ಅದು ಕೂಡ ವಿಫಲಗೊಳ್ಳಲಿದೆ ಎಂದು ಹೇಳಲು ಬಯಸುತ್ತೇವೆ. ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಅಭ್ಯರ್ಥಿಗಳು, ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಲು ನೂರಾರು ಐಟಿ ಮತ್ತು ಇಡಿ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ನಮ್ಮಲ್ಲಿದೆ. ಆದರೆ ಅವರ ಮೋಸದ ದಾಳಿಗಳು ಅಧಿಕಾರಕ್ಕೆ ಬರುವ ಹೊಸ್ತಿಲಲ್ಲಿರುವ ಕಾಂಗ್ರೆಸ್‌ಗೆ ಏನೂ ಮಾಡಲಾರವು ಎಂಬುದನ್ನು ಪ್ರಧಾನಿ ಮೋದಿ ಮತ್ತು ಅವರ ಇ.ಡಿ ಮತ್ತು ಐಟಿ ತಿಳಿದಿರಬೇಕು ಎಂದು ಸುರ್ಜೇವಾಲ ಹೇಳಿದ್ದಾರೆ.

‘ಸೋಲುವ ಭೀತಿಯಲ್ಲಿ ತನಿಖಾ ಸಂಸ್ಥೆಗಳ ದುರ್ಬಳಕೆ ಯತ್ನ’

ಈಗಾಗಲೇ ಇ.ಡಿ ಮತ್ತು ಐಟಿಯ ಸಾವಿರಾರು ಅಧಿಕಾರಿಗಳು ದೆಹಲಿಯಿಂದ ಕರ್ನಾಟಕದತ್ತ ಹೊರಟಿದ್ದಾರೆ. ನಮಗೆ ಸಹಾಯ ಮಾಡದಂತೆ ಹಿತೈಷಿಗಳನ್ನು ಹೆದರಿಸುತ್ತಿದ್ದಾರೆ. ಸೋಲುವ ಭೀತಿಯಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ದುರ್ಬಳಕೆಗೆ ಯತ್ನಿಸುತ್ತಿದೆ ಎಂದು ಡಿಕೆ ಶಿವಕುಮಾರ್‌ ಆರೋಪಿಸಿದ್ದಾರೆ.

ಬಿಜೆಪಿ ನಡೆಯನ್ನು ಖಂಡಿಸುತ್ತೇವೆ; ಸಿದ್ದರಾಮಯ್ಯ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಸೋಲುವ ಭೀತಿಯಿಂದ ಕಾಂಗ್ರೆಸ್ ನಾಯಕರನ್ನು ಬಿಜೆಪಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಾರ್ಗೆಟ್‌ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಇಡಿ, ಐಟಿ ದಾಳಿಗೆ ಸಿದ್ಧತೆ ನಡೆದಿದೆ. ಕಾಂಗ್ರೆಸ್‌ ಬೆಂಬಲಿಗರ ಮೇಲೆಯೂ ಇಡಿ, ಐಟಿ ದಾಳಿಗೆ ಸಿದ್ಧತೆ ನಡೆದಿದೆ. ಈ ಮೂಲಕ ಹೆದರಿಸಲು ಯತ್ನಿಸುತ್ತಿದ್ದಾರೆ. ನಮಗಿರುವ ಮಾಹಿತಿಯಂತೆ ಈಗಾಗಲೇ ಅಧಿಕಾರಿಗಳು ಕರ್ನಾಟಕಕ್ಕೆ ತೆರಳಿದ್ದಾರೆ. ಸೋಲುವ ಭೀತಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆಗೆ ಯತ್ನಿಸಲಾಗುತ್ತಿದೆ. ಇಂತಹ ಬೆದರಿಕೆಗಳಿಗೆ ಯಾವ ಕಾಂಗ್ರೆಸ್​​ನ ಯಾವ ನಾಯಕರೂ ಹೆದರಲ್ಲ. ಬಿಜೆಪಿ ನಾಯಕರ ಈ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Tue, 4 April 23