ತಿರುಪತಿ ಲಡ್ಡುಗೆ ನಂದಿನಿ ತು‍ಪ್ಪ ಸ್ಥಗಿತ, ಬಿಜೆಪಿ ಆರೋಪಗಳಿಗೆ ಕೆಎಂಎಫ್ ಅಧ್ಯಕ್ಷ ತಿರುಗೇಟು

| Updated By: ರಮೇಶ್ ಬಿ. ಜವಳಗೇರಾ

Updated on: Aug 01, 2023 | 11:22 AM

ತಿರುಪತಿ ಲಡ್ಡು ಅಂದ್ರೆ ವರ್ಲ್ಡ್ ವೈಡ್ ಫೇಮಸ್. ಇದೇ ತಿರುಪತಿ ಲಡ್ಡುವಿನ ರುಚಿಗೆ ಕರ್ನಾಟಕದ ನಂದಿನಿ ತುಪ್ಪದ ಘಮಲು ಕೂಡ ಕಾರಣವಾಗಿತ್ತು.. ಆದ್ರೆ, ಕರ್ನಾಟಕದ ಕೆಎಂಎಫ್‌ ತಿರುಪತಿಗೆ ಸರಬರಾಜು ಮಾಡುತ್ತಿದ್ದ ನಂದಿನಿ ತುಪ್ಪವನ್ನ ಸ್ಥಗಿತಗೊಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಲಡ್ಡು ಲಡಾಯಿಗೆ ಕಾರಣವಾಗಿದೆ.

ತಿರುಪತಿ ಲಡ್ಡುಗೆ ನಂದಿನಿ ತು‍ಪ್ಪ ಸ್ಥಗಿತ, ಬಿಜೆಪಿ ಆರೋಪಗಳಿಗೆ ಕೆಎಂಎಫ್ ಅಧ್ಯಕ್ಷ ತಿರುಗೇಟು
ಭೀಮ ನಾಯ್ಕ್
Follow us on

ಬೆಂಗಳೂರು, (ಆಗಸ್ಟ್ 01): ತಿರುಪತಿ(tirupati )ತಿರುಮಲ ಅಂದ್ರೆ ಥಟ್ ಅಂತ ಮೊದಲು ನೆನಪಿಗೆ ಬರುವುದೇ ಅಲ್ಲಿನ ಪ್ರಸಾದ ಲಡ್ಡು. ಹೌದು…ವಿಶ್ವ ವಿಖ್ಯಾತಿ ಗಳಿಸಿರುವ ತಿಮ್ಮಪ್ಪನ ಪ್ರಸಾದ ಲಡ್ಡು (tirupati laddu)ಬಾಯಲ್ಲಿ ನೀರೂರುತ್ತೆ. ಅಷ್ಟು ಸ್ವಾದಿಷ್ಟ ಅಷ್ಟು ರುಚಿ, ಅಷ್ಟು ಪರಿಮಳ.ಈ ಲಡ್ಡು ಪ್ರಸಾದಕ್ಕೆ ಮನಸೋಲದವರೇ ಇಲ್ಲ ಅನ್ಸುತ್ತೆ. ಹೀಗೆ ವಿಶ್ವ ವಿಖ್ಯಾತ ಗಳಿಸಿರುವ ತಿಮ್ಮಪ್ಪನ ಪ್ರಸಾದಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಆದ್ರೆ, ಇದೀಗ ಕರ್ನಾಟಕದ ಕೆಎಂಎಫ್‌ (KMF) ತಿರುಪತಿಗೆ ಸರಬರಾಜು ಮಾಡುತ್ತಿದ್ದ ನಂದಿನಿ ತುಪ್ಪವನ್ನ ಸ್ಥಗಿತಗೊಳಿಸಿದೆ. ಇದರಿಂದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ. ಇದಕ್ಕೆ ಇದೀಗ ಸ್ವತಃ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Tirupati Laddu: ಇನ್ನುಮುಂದೆ ತಿರುಪತಿ ಲಡ್ಡುವಿನಲ್ಲಿ ಇರುವುದಿಲ್ಲ ನಂದಿನಿ ತುಪ್ಪದ ಘಮ

ಬಿಜೆಪಿಗೆ ರಾಜ್ಯದ ನಾಲ್ಕು ಗ್ಯಾರಂಟಿಗಳ ಈಡೇರಿಸುವ ಸರ್ಕಾರದ ಯಶಸ್ವಿ ಯೋಜನೆಗಳನ್ನ ಸಹಿಸಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಜನಪರ ಕ್ರಾಂತಿಕಾರಿ ಯೋಜನೆಗಳನ್ನ ಜಾರಿಮಾಡುತ್ತಿದ್ದೇವೆ. ಸಿಟಿ ರವಿಗೆ ಮಾಡಲು ಬೇರೆ ಕೆಲಸ ಇಲ್ಲ, ವಿರೋಧ ಪಕ್ಷದ ನಾಯಕನ ಸ್ಥಾನ ಇಲ್ಲದೆ ಸದನ ನಡೆದಿದೆ. ಕೆಎಂಎಫ್ ವಿಚಾರವನ್ನು ದಯಮಾಡಿ ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡಿದರು.

ತಿರುಪತಿಗೆ 2005 ರಿಂದ 2020 ರವರೆಗೆ ನಂದಿನಿ ತುಪ್ಪ ಸಪ್ಲೈ ಆಗಿದೆ. ಟಿಟಿಡಿ ಆರು ತಿಂಗಳಿಗೊಮ್ಮೆ 1700-2000 ಮೆಟ್ರಿಕ್ ಟನ್ ತುಪ್ಪಕ್ಕೆ ಟೆಂಡರ್ ಕರೆಯುತ್ತಾರೆ.ಆಗ ಶೇ.45 ರಷ್ಟು ತುಪ್ಪ ಸರಬರಾಜು ಮಾಡುತ್ತೇವೆ. ನಮ್ಮ ನಂದಿನಿ ತುಪ್ಪ ವಿಶ್ವಾಸಾರ್ಹ, ಮನೆಯಲ್ಲಿ ತಯಾರಿಸುವಷ್ಟು ಉತ್ಕೃಷ್ಟ ಗುಣಮಟ್ಟ ಹೊಂದಿದೆ. 2020 ರಿಂದ L3 ಟೆಂಡರ್ ದಾರರು ನಾವು. L1 ಮತ್ತು L2 ಟೆಂಡರ್ ದಾರರ ಪೂರೈಕೆ ಬಳಿಕ ನಾವು ಸಪ್ಲೈ ಮಾಡಬೇಕು. 2021-22 ರಲ್ಲಿ ಪತ್ರ ಬರೆದು ತುಪ್ಪ ಬೇಡಿಕೆಯಿಟ್ಟಿದ್ದರು. ತಿರುಪತಿಗೆ 345 ಮೆಟ್ರಿಕ್ ಟನ್ ನಂದಿನಿ ತುಪ್ಪ ಸಪ್ಲೈ ಮಾಡಿದ್ದೇವೆ. ಈ ಹಿಂದೆ 94 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡ್ತಿದ್ವಿ, ಈಗ 84 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ ಎಂದು ಮಾಹಿತಿ ನೀಡಿದರು.

ನಮ್ಮ ತುಪ್ಪಕ್ಕೆ ಸೂಕ್ತ ಮೌಲ್ಯ ಕೊಡುವುದಾದರೆ ಖಂಡಿತಾ ಸಪ್ಲೈ ಮಾಡುತ್ತೇವೆ. ನಂದಿನಿ ತುಪ್ಪಕ್ಕೆ ಬಹಳಷ್ಟು ಬೇಡಿಕೆ ಇದೆ. ಕೆಲಸವಿಲ್ಲದೇ ರಾಜಕೀಯ ಮಾಡಲು ಅನವಶ್ಯಕವಾಗಿ ವಿವಾದವನ್ನು ಬಿಜೆಪಿ ನಾಯಕರು ಸೃಷ್ಟಿಸುತ್ತಿದ್ದಾರೆ. ರೈತ ಸಂಕಷ್ಟದಲ್ಲಿ ಇದ್ದಾನೆ, ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ನಮ್ಮ ಸರ್ಕಾರ ರೈತರನ್ನ ಸಬಲರನ್ನಾಗಿಸಲು 3 ರೂ. ಹಾಲಿನ ದರ ಏರಿಸಿ ನೇರವಾಗಿ ರೈತರಿಗೆ ತಲುಪುವಂತೆ ಮಾಡಿದೆ ಎಂದು ಹೇಳಿದರು.

ಇನ್ನು ಸಿಟಿ ರವಿ ಹೇಳಿಕೆಯಂತೆ ಕೇರಳದಲ್ಲಿ ನಂದಿನಿ ಮಾರುಕಟ್ಟೆ ಕಳೆದುಕೊಂಡಿಲ್ಲ. ನಾಳೆಯೂ ಕೂಡ ನಮ್ಮ ನಂದಿನಿ ಹಾಲಿಗೆ ಬೇಡಿಕೆ ಇಟ್ಟಿದ್ದಾರೆ, ಅದರ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:06 am, Tue, 1 August 23