ಸೋಮಣ್ಣ-ಡಿಕೆಶಿ ಜೊತೆ ಜೊತೆಯಲಿ ಫೋಟೋ ವೈರಲ್​: ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟ ಉಭಯ ನಾಯಕರು

|

Updated on: Mar 14, 2023 | 1:01 PM

ಯಾವುದೋ‌ ಕಾಲದಲ್ಲಿನ ಫೋಟೋ ತಗೊಂಡು ನೀವು ಏನೋ ಹಾಕಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ನಾನು ಬಿಜೆಪಿಯ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ, ನನಗೆ ನನ್ನ ಇತಿಮಿತಿ ಗೊತ್ತಿದೆ, ಎಷ್ಟು ಗೌರವವಾಗಿ ನಡೆದುಕೊಳ್ಳಬೇಕು ಗೊತ್ತಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದರು.

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ (V Somanna) ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದಾರೆ, ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress)​ ಸೇರುತ್ತಾರೆ ಎಂಬ ವಂದತಿಗಳು ಎದ್ದಿವೆ. ಇದೀಗ ವಿ. ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivkumar) ಅವರೊಂದಿಗೆ ಇದ್ದ ಫೋಟೋ ವೈರಲ್​ ಆಗಿದ್ದು, ಕೈ ಸೇರುವುದು ಪಕ್ಕಾ ಆಯ್ತೆ ಎಂಬ ಊಹಾಪೋಹ ಎದ್ದಿತ್ತು. ಈ ಬಗ್ಗೆ ಮಾತನಾಡಿದ ವಿ ಸೋಮಣ್ಣ ಯಾವುದೋ‌ ಕಾಲದಲ್ಲಿನ ಫೋಟೋ ತಗೊಂಡು ನೀವು ಏನೋ ಹಾಕಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ನಾನು ಬಿಜೆಪಿಯ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ, ನನಗೆ ನನ್ನ ಇತಿಮಿತಿ ಗೊತ್ತಿದೆ, ಎಷ್ಟು ಗೌರವವಾಗಿ ನಡೆದುಕೊಳ್ಳಬೇಕು ಗೊತ್ತಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಯಾರ ಹತ್ರನೂ ಹೇಳಿಸಿಕೊಳ್ಳಬೇಕಿಲ್ಲ. ನಾನು ಬಿಜೆಪಿಯಲ್ಲೇ ಸಕ್ರೀಯನಾಗಿ ಕೆಲಸ ಮಾಡುತ್ತಿದ್ದೇನೆ. ನಮಗೆ ನರೇಂದ್ರ ಮೋದಿಯವರು ನಾಯಕರು. ರಾಜ್ಯದಲ್ಲಿ ಬೊಮ್ಮಾಯಿ ನಾಯಕತ್ವ ಇದೆ, ಯಡಿಯೂರಪ್ಪ ಅವರ ಮಾರ್ಗದರ್ಶನ ಇದೆ, ಕಟೀಲ್ ಅವರು ಅಧ್ಯಕ್ಷರಾಗಿದ್ದಾರೆ. ಆ ತರಹದ ಊಹಾಪೋಹಗಳು ನಂದಲ್ಲ, ಮಾಧ್ಯಮಗಳು ಮಾಡಿಕೊಂಡಿರೋ ಸೃಷ್ಟಿ ಎಂದು ಸಿಡಿಮಿಡಿಗೊಂಡರು.

ಇದನ್ನೂ ಓದಿ: ಮರಳಿ ಗೂಡು ಸೇರಲು ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ಆಫರ್ ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ನನಗೆ ಚಿಲ್ಲರೆ ಬುದ್ದಿ ಗೊತ್ತಿಲ್ಲ, ಚಿಲ್ಲರೆ ರಾಜಕಾರಣ ನಾನು ಮಾಡಲ್ಲ. ಇನ್ನೊಬ್ಬರ ತರ ಆಟ ಆಡಿಸೋದು ಗೊತ್ತಿಲ್ಲ. ಕೆಲವು ಸಂಗತಿಗಳನ್ನು ಹೇಳುವಾಗ ನಿಷ್ಠುರವಾಗಿ ಮಾತಾಡುತ್ತೇನೆ. ಆ ನಿಷ್ಠುರ ಪಕ್ಷಕ್ಕೆ ಅಲ್ಲ, ಕೆಲವು ಕಹಿ ಘಟನೆಗಳು ಆಗಬಾರದು ಅನ್ನೋ ದೃಷ್ಟಿಯಿಂದ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ನಮ್ಮ ತಾಲ್ಲೂಕಿನವರು. ಡಿಕೆ ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿಲ್ಲ. ಕೆಲಸ ಆದರೆ ಅದೇ ದೇವರು, ಇನ್ನೊಂದು ಪಾರ್ಟಿ, ಮತ್ತೊಂದು ಪಾರ್ಟಿ, ಮಗದೊಂದು ಪಾರ್ಟಿ ಅಂತಿಲ್ಲ ಎಂದು ಹೇಳಿದ್ದಾರೆ.

ಸಚಿವ ವಿ.ಸೋಮಣ್ಣ ಕಾಂಗ್ರೆಸ್​ ಸೇರ್ಪಡೆ ಕೈಬಿಟ್ಟ ವಿಚಾರ

ಸಚಿವ ವಿ.ಸೋಮಣ್ಣ ಕಾಂಗ್ರೆಸ್​ ಸೇರ್ಪಡೆ ಕೈಬಿಟ್ಟ ವಿಚಾರ. ಸೋಮಣ್ಣ ನಮ್ಮ ಕನಕಪುರ ತಾಲೂಕಿನವರು. ದೇವಸ್ಥಾನ, ಮಠ-ಮಾನ್ಯ ಕೆಲಸಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಕನಕಪುರ ಕ್ಷೇತ್ರದಲ್ಲೇ ಸಚಿವ ಸೋಮಣ್ಣನವರ ಊರು ಇದೆ. ನಮ್ಮ ಕ್ಷೇತ್ರಕ್ಕೆ ಸೋಮಣ್ಣ ಅಷ್ಟು-ಇಷ್ಟು ಸೇವೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್​ಗೆ ಬರುವುದಾಗಿ ಎಂದೂ ಸೋಮಣ್ಣ ಹೇಳಿಕೊಂಡಿಲ್ಲ. ನಾವು ಕೂಡ ಕಾಂಗ್ರೆಸ್​ಗೆ​ ಬನ್ನಿ ಎಂದು ಆಹ್ವಾನಿಸಿಲ್ಲ. ರಾಜಕಾರಣವೇ ಬೇರೆ ನಮ್ಮ ವೈಯಕ್ತಿಕ ಬಾಂಧವ್ಯಗಳೆ ಬೇರೆ. ಫೋಟೋ ವೈರಲ್ ವಿಚಾರವಾಗಿ ಮಾತನಾಡಿದ ಅವರು ಬೆಳಗಾವಿಯಿಂದ ಫ್ಲೈಟ್​ನಲ್ಲಿ ಒಟ್ಟಿಗೆ ಬರುತ್ತಿದ್ದಾಗ ತೆಗೆಸಿಕೊಂಡಿದ್ದು. ಆಗಿನ ತೆಗೆಸಿಕೊಂಡಿದ್ದ ಫೋಟೋ ಈಗ ವೈರಲ್ ಆಗುತ್ತಿದೆ. ಪಕ್ಕದಲ್ಲಿ ಕೂತ್ಕೊಂಡ್ರೆ ಏನಿದೆ..? ಎಲ್ಲರ ಪಕ್ಕದಲ್ಲಿ ಕೂತುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Tue, 14 March 23