ಸರ್ಕಾರ ಪತನ: ಶಿಂಧೆ ಹೇಳಿಕೆ ಬೆನ್ನಲ್ಲೇ ಶಾಸಕರಲ್ಲಿ ಅಸಮಾಧಾನ ಸಹಜ ಎಂದು ಒಪ್ಪಿಕೊಂಡ ಸತೀಶ್ ಜಾರಕಿಹೊಳಿ

|

Updated on: May 14, 2024 | 4:27 PM

ಇತ್ತೀಚೆಗಷ್ಟೇ ವಿಪಕ್ಷ ನಾಯಕ ಆರ್​.ಅಶೋಕ್ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪತನವಾಗುತ್ತೆ ಎಂದು ದೊಡ್ಡ ಆಪರೇಷನ್ ಸುಳಿವು ನೀಡಿದ್ದರು. ಮಾಜಿ ಸಿಎಂ ಎಚ್​ಡಿಕೆ ಸಹ ಆಗಾಗ, ಕರ್ನಾಟಕ ಅಜಿತ್ ಪವಾರ್ ಯಾರಾಗ್ತಾರೆ ಕಾದು ನೋಡಿ ಎನ್ನುವ ಮೂಲಕ ಚರ್ಚೆಯನ್ನ ಬೇರೆ ದಿಕ್ಕಿಗೆ ಒಯ್ದಿದ್ದರು. ಆದ್ರೆ, ಇದನ್ನು ಕಾಂಗ್ರೆಸ್ ಅಷ್ಟಾಗಿ ಗಂಭಿರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಕರ್ನಾಟಕ ಸರ್ಕಾರದ ಪತನದ ವಿಚಾರವಾಗಿ ಖುದ್ದು ಮಹಾರಾಷ್ಟ್ರ ಸಿಎಂ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇತ್ತ ಸತೀಶ್ ಜಾರಕಿಹೊಳಿ ಶಾಸಕರ ಅಸಮಧಾನ ಇದ್ದೆ ಇರುತ್ತೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸರ್ಕಾರ ಪತನ: ಶಿಂಧೆ ಹೇಳಿಕೆ ಬೆನ್ನಲ್ಲೇ ಶಾಸಕರಲ್ಲಿ ಅಸಮಾಧಾನ ಸಹಜ ಎಂದು ಒಪ್ಪಿಕೊಂಡ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ, ಏಕನಾಥ್ ಶಿಂಧೆ
Follow us on

ಬೆಂಗಳೂರು, (ಮೇ 14): ಬರೊಬ್ಬರಿ 135 ಸ್ಥಾನಗಳನ್ನ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ (C0ngress) ಲೋಕಸಭೆ ಚುನಾವಣೆಯಲ್ಲೂ (Loksabha Elections 2024) ಹೆಚ್ಚಿನ ಸ್ಥಾನ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ಅಧಿಕಾರಕ್ಕೇರಿದಾಗಿನಿಂದ ಸರ್ಕಾರ ಪತನದ ಮಾತುಗಳು ಕೇಳಿಬರುತ್ತಲೇ ಇವೆ. ಇದೇ ವಿಚಾರ ಈಗ ಮುನ್ನೆಲೆಗೆ ಬಂದಿರುವುದು ಪಕ್ಕದ ರಾಜ್ಯ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ(eknath shinde ), ನಾಥ್ ಮಾದರಿ ಆಪರೇಷನ್ ಎಲ್ಲಾ ಕಡೆ ಫೇಮಸ್ ಆಗಿದೆ. ಅದೇ ಮಾದರಿಯ ಆಪರೇಷನ್​ಗೆ ಕರ್ನಾಟಕದಿಂದಲೂ ಆಹ್ವಾನ ಬಂದಿದೆ. ಚುನಾವಣೆ ಬಳಿಕ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದೇನೆ ಎಂದು ಸ್ಫೋಟಕ ಮಾತುಗಳನ್ನ ಆಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಕಾಂಗ್ರೆಸ್​ ಮನೆಯಲ್ಲಿ ಕಂಪನ ಸೃಷ್ಟಿಸಿದೆ. ಇದರ ಮಧ್ಯ ಇದೀಗ ಸಚಿವ ಸತೀಶ್ ಜಾರಕಿಹೊಳಿ(Satish Jarkiholi)  ಅವರು ಪಕ್ಷದ ಶಾಸಕರಲ್ಲಿ ಅಸಮಾಧಾನ ಇದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಸಂಚಲನ ಮೂಡಿಸಿದೆ.

ಇಂದು (ಮೇ 14) ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವಿಶೇಷತೆ ಏನು ಇಲ್ಲ. ಚುನಾವಣೆ ವಿಚಾರವಾಗಿ ಮಾತುಕತೆ ಮಾಡಿದ್ದೇವೆ. ಎಷ್ಟು ಸೀಟ್ ಗೆಲ್ಲುತ್ತೇವೆ ಎಂಬ ಚರ್ಚೆ ಮಾಡಿದ್ದೇವೆ. ಡಿಸಿಎಂ ಬಗ್ಗೆ ಚುನಾವಣೆ ವೇಳೆ ಕೂಗು ಇತ್ತು. ಈಗ ಚುನಾವಣೆ ಮುಗಿದಿದೆ. ಚುನಾವಣೆಗೆ ಅನುಕೂಲ ಆಗಲಿ ಅಂತ ಕೂಗು ‌ಇತ್ತು. ಈಗ ಡಿಸಿಎಂ ಕೂಗು ಇಲ್ಲ. ಸರ್ಕಾರ ಬಿಳಿಸಲು ಸುಮ್ಮನೆ ಹೇಳುತ್ತಾರೆ. ಸರ್ಕಾರ ಏನು ಬಿದ್ದು ಹೋಯ್ತಾ. ಸುಮ್ಮನೆ ಸರ್ಕಾರ ಬಿಳುತ್ತೆ‌ಅಂತಾರೆ. ಶಾಸಕರ ಅಸಮಧಾನ ಇದ್ದೆ ಇರುತ್ತೆ. ಆಡಳಿತ ಪಕ್ಷ ಅಂದ ಮೇಲೆ ಅಸಮಧಾನ ಸಹಜ ಎಂದರು. ಈ ಮೂಲಕ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸತೀಶ್ ಜಾರಕಿಹೊಳಿ ಒಪ್ಪಿಕೊಂಡರು.

ಇದನ್ನೂ ಓದಿ: ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್: ಮಹಾ ಸಿಎಂ ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ

ಸರ್ಕಾರದ ರಚನೆ ಆರಂಭದಲ್ಲೇ ಮುನಿಸಿಕೊಂಡಿದ್ದ ಸತೀಶ್

ಹೌದು..ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕೆಲ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡಿದ್ದರು. ಅಲ್ಲದೇ ತಮ್ಮ ಆಪ್ತ ಶಾಸಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರು. ಈ ಮೂಲಕ ಹೈಕಮಾಂಡ್​ಗೆ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದರು. ಇದನ್ನು ಅರಿತ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ ಸತೀಶ್ ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಶಾಸಕರಲ್ಲಿ ಅಸಮಾಧಾನ ಇದೆ ಎಂದು ಬಹಿರಂಗ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಡಿರೋ ಇದೇ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜಕಾರಣದಲ್ಲಿ ಕಳೆದ 20 ವರ್ಷಗಳಲ್ಲಿ ಈ ರೀತಿಯ ಹಲವು ಬೆಳವಣಿಗೆಗಳಾಗಿವೆ. ದೊಡ್ಡ ದೊಡ್ಡ ನಾಯಕರು, ಪಕ್ಷದ ನಿಷ್ಠಾವಂತರು ಎನಿಸಿಕೊಂಡವರೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮತ್ತೊಂದು ಪಕ್ಷಕ್ಕೆ ಸೇರಿದ ಉದಾಹರಣೆಗಳಿವೆ. ಮೈತ್ರಿ ಮಾಡಿಕೊಂಡು ರಚಿಸಿದ್ದ ಸರ್ಕಾರಗಳು ಇದ್ದಕ್ಕಿದ್ದಂತೆಯೇ ಪತನವಾಗಿವೆ. ಹೀಗಾಗಿ ಸರ್ಕಾರ ಪತನದ ಮಾತೀಗ ರಾಜ್ಯ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರಗಳನ್ನು ಹಾಕುವಂತೆ ಮಾಡಿದೆ.

ಏಕನಾಥ್ ಶಿಂಧೆ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಅವರದ್ದು ಭ್ರಮೆ, ಹಗಲುಗನಸು ಅಂತಾ ವಾಗ್ದಾಳಿ ನಡೆಸಿದ್ದಾರೆ. ಡಿಕೆ.ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಆದ್ಮೇಲೆ ಶಿಂಧೆ ಸರ್ಕಾರ ಇರೋದೇ ಡೌಟ್ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಮುಂದೆ ಯಾವ ಬೆಳವಣಿಗೆಗಳು ನಡೆಯುತ್ತವೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ