ಬಿಜೆಪಿಯಲ್ಲಿ ಯಾರ ಮನೆ ಕಾಯಬೇಕಿಲ್ಲ, ಭವಾನಿ ರೇವಣ್ಣ ಪಕ್ಷ ಸೇರುವುದಾದರೆ ಸ್ವಾಗತ: ಅಶ್ವತ್ಥ್ ನಾರಾಯಣ

ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಕುಮಾರಸ್ವಾಮಿ ಅವರು ಭವಾನಿ ಅವರಿಗೆ ಹಾಸನ ಸುರಕ್ಷಿತವಲ್ಲ ಎಂದಿದ್ದಾರೆ. ಆದರೆ ಬಿಜೆಪಿ ನಾಯಕ ಸಿ.ಟಿ.ರವಿ ಅವರು ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಸಿದ್ಧ ಎಂದಿದ್ದರು.

ಬಿಜೆಪಿಯಲ್ಲಿ ಯಾರ ಮನೆ ಕಾಯಬೇಕಿಲ್ಲ, ಭವಾನಿ ರೇವಣ್ಣ ಪಕ್ಷ ಸೇರುವುದಾದರೆ ಸ್ವಾಗತ: ಅಶ್ವತ್ಥ್ ನಾರಾಯಣ
ಸಚಿವ ಅಶ್ವತ್ಥನಾರಾಯಣ ಮತ್ತು ಭವಾನಿ ರೇವಣ್ಣ
Edited By: Rakesh Nayak Manchi

Updated on: Jan 28, 2023 | 3:53 PM

ಮೈಸೂರು: ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ ಕಾಯಬೇಕಿಲ್ಲ, ಯಾರ ಗೇಟನ್ನು ಕಾಯಬೇಕಿಲ್ಲ, ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ. ಹೀಗಾಗಿ ಜೆಡಿಎಸ್​ನ ಭವಾನಿ ರೇವಣ್ಣ ಅವರು ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr. C.N. Ashwathnarayan) ಹೇಳಿದ್ದಾರೆ. ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪಟ್ಟು ಹಿಡಿದಿದ್ದಾರೆ. ಆದರೆ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಭವಾನಿ ಅವರಿಗೆ ಹಾಸನದಲ್ಲಿ ಕೊಡಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ನಾಯಕ ಸಿ.ಟಿ.ರವಿ (C.T.Ravi) ಅವರು ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಸಿದ್ಧ ಎಂದಿದ್ದರು. ಈ ಹೇಳಿಕೆಯನ್ನು ಸಮರ್ಥಿಸಿಕೊಂಡು ಅಶ್ವತ್ಥನಾರಾಯಣ ಅವರು ಹೇಳಿಕೆ ನೀಡಿದ್ದಾರೆ.

ಇನ್ನು, ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಈ ಬಗ್ಗೆ ಲೇವಡಿ ಮಾಡಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವರು, ಕಾಂಗ್ರೆಸ್​ನವರು ಖಾಲಿಯಾಗಿದ್ದಾರೆ, ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸುಖಾಸುಮ್ಮನೇ ಮಾತನಾಡುತ್ತಿದ್ದಾರೆ ಎಂದರು.

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ವಿಪಕ್ಷಗಳ ಕ್ಯಾತೆ ಇದ್ದೇ ಇದೆ. ನಮ್ಮದು ಅಭಿವೃದ್ಧಿ ಪರ ಸರ್ಕಾರ, ಅದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್​ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಜೆಡಿಎಸ್‌ಗೆ ಮತ ನೀಡಿದರೆ ಪ್ರಯೋಜನವಿಲ್ಲ ಎಂದರು.

ಇದನ್ನೂ ಓದಿ: Hassan Politics: ಹಾಸನ ಟಿಕೆಟ್ ದೇವೇಗೌಡರು ಡಿಸೈಡ್ ಮಾಡ್ತಾರೆ; ಎಚ್​ಡಿಕೆಗೆ ಟಾಂಗ್​ ಕೊಟ್ಟ ಸೂರಜ್ ರೇವಣ್ಣ

ಅಭ್ಯರ್ಥಿ ಘೋಷಣೆಗೂ ಮುನ್ನವೇ ಹಾಸನದ ಸಿಂಹಾಸನಕ್ಕಾಗಿ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಅಖಾಡಕ್ಕೆ ಇಳಿಯೋಕೆ ಸನ್ನದ್ಧರಾಗಿದ್ದಾರೆ. ಆದ್ರೆ, ಇತ್ತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ನಡುವೆ ಹೇಳಿಕೆ ನೀಡಿದ್ದ ಸಿ.ಟಿ.ರವಿ, ಭವಾನಿ ಅಕ್ಕ ನಮ್ಮ ಪಾರ್ಟಿ ಅಭ್ಯರ್ಥಿಯಾಗಲೆಂದು ನನ್ನ ಮನಸ್ಸಲ್ಲಿ ಆಸೆಯಿದೆ. ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ ಎಂದಿದ್ದರು. ಆದರೆ ಇಂದು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಿ.ಟಿ.ರವಿ, ಭವಾನಿ ರೇವಣ್ಣರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದು ತಮಾಷೆಗೆ, ಅದನ್ನೇ ಗಂಭೀರವಾಗಿ ಪರಿಗಣಿಸಬಾರದು ಎಂದಿದ್ದಾರೆ.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Sat, 28 January 23

TV9 Web

TV9 Kannada

Read More
Follow Us