INDIA: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ

| Updated By: ಗಣಪತಿ ಶರ್ಮ

Updated on: Jul 18, 2023 | 4:46 PM

ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ್ ಸಭೆಯ ಬಳಿಕ ಖರ್ಗೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಯಕರು ಈ ನಿರ್ಧಾರ ಘೋಷಿಸಿದರು. ಭಾರತದ ಪ್ರಜಾಪ್ರಭುತ್ವ ಉಳಿವಿಗೆ ನಮ್ಮ ಹೋರಾಟ ನಡೆಯುತ್ತಿದೆ. ಒಂದೇ ಧ್ವನಿಯಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಖರ್ಗೆ ತಿಳಿಸಿದರು.

INDIA: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ
ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ
Image Credit source: ANI
Follow us on

ಬೆಂಗಳೂರು: ಪ್ರತಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ‘ಇಂಡಿಯನ್​ ನ್ಯಾಷನಲ್ ಡೆಮಾಕ್ರಟಿಕ್​​ ಇನ್​ಕ್ಲೂಸಿವ್​​​​ ಅಲೈನ್ಸ್ (INDIA / Indian National Developmental Inclusive Alliance) ಎಂದು ನಾಮಕರಣ ಮಾಡಿರುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಂಗಳವಾರ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ್ ಸಭೆಯ ಬಳಿಕ ಖರ್ಗೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಯಕರು ಈ ನಿರ್ಧಾರ ಘೋಷಿಸಿದರು. ಭಾರತದ ಪ್ರಜಾಪ್ರಭುತ್ವ ಉಳಿವಿಗೆ ನಮ್ಮ ಹೋರಾಟ ನಡೆಯುತ್ತಿದೆ. ಒಂದೇ ಧ್ವನಿಯಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಖರ್ಗೆ ತಿಳಿಸಿದರು.

26 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ. 11 ಜನರ ಸಮಿತಿ ರಚನೆ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಈ 11 ಜನರ ಹೆಸರು ಸದ್ಯದಲ್ಲೇ ಘೋಷಣೆ ಮಾಡುತ್ತೇವೆ. ಮಹಾರಾಷ್ಟ್ರ, ಮುಂಬೈನಲ್ಲಿ ಮತ್ತೆ ಸಭೆ ಸೇರಲಿದ್ದೇವೆ. ಕ್ಯಾಂಪೇನ್ ಮ್ಯಾನೇಜ್ಮೆಂಟ್​​ಗೆ ಕಾರ್ಯದರ್ಶಿ ನೇಮಕ ಮಾಡಲಾಗುವುದು. ದೆಹಲಿಯಲ್ಲಿ ಈ ಬಗ್ಗೆ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ. ಮುಂಬೈನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಖರ್ಗೆ ತಿಳಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಸಂವಿಧಾನವನ್ನು ಕೂಡ ನಾಶ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.

ಮೋದಿ ಜತೆಗಿರುವುದು ತುಕಡೇ ತುಕಡೇ ಪಕ್ಷಗಳು; ಖರ್ಗೆ ವ್ಯಂಗ್ಯ

ನಾವು ಭಾರತದ ಪ್ರಜಾಪ್ರಭುವತ್ವವನ್ನು ರಕ್ಷಿಸಬೇಕಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ನಿರ್ಣಯ ಕೈಗೊಂಡಿದ್ದೇವೆ. ಪಾಟ್ನಾದಲ್ಲಿ 16 ಪಕ್ಷಗಳು ಸಭೆ ಸೇರಿ ಚರ್ಚೆ ನಡೆಸಿದ್ದೆವು. ಇದೀಗ ಬೆಂಗಳೂರಿನಲ್ಲಿ 26 ಪಕ್ಷಗಳು ಸೇರಿ ಸಭೆ ನಡೆಸಿದ್ದೇವೆ. ಪ್ರಧಾನಿ ಮೋದಿ ಎನ್​ಡಿಎ ಮಿತ್ರಪಕ್ಷಗಳ ಸಭೆಯನ್ನು ಕರೆದಿದ್ದಾರೆ. 30 ಪಕ್ಷಗಳು ಎಲ್ಲಿದ್ದಾವೆ ಎಂಬುದು ನಮಗೆ ಗೊತ್ತಿಲ್ಲ. ಚುಣಾವಣಾ ಆಯೋಗದಲ್ಲಿ ಪಕ್ಷಗಳು ಹೆಸರು ಇಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದಾರೆ. ಅವರ ಜೊತೆಗಿರೋ ಪಕ್ಷಗಳು ತುಕಡೇ ತುಕಡೇ ಆಗಿವೆ. ವಿಪಕ್ಷಗಳ ಸಭೆ ಮಾಡೋದನ್ನು ನೋಡಿ ಮೋದಿಗೆ ಭಯ ಉಂಟಾಗಿದೆ. ಹೀಗಾಗಿ ಮೋದಿ ನೇತೃತ್ವದಲ್ಲಿ ಸಭೆ ಮಾಡ್ತಿದ್ದಾರೆ ಎಂದು ಖರ್ಗೆ ಲೇವಡಿ ಮಾಡಿದರು.

ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೆಹಲಿ ಮುಖ್ಯಮಂತ್ರಿ, ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಪ್ರತಿಯೊಂದು ಸೆಕ್ಟರ್​ಗಳನ್ನು ನಾಶ ಮಾಡ್ತಿದ್ದಾರೆ. ವಿಮಾನಯಾನ, ರೈಲ್ವೆ ವ್ಯವಸ್ಥೆಯನ್ನೂ ಕೂಡ ಹಾಳು ಮಾಡಿದ್ದಾರೆ. ಪ್ರಧಾನಿ ಮೋದಿ ಇಡೀ ದೇಶದ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಅವರು ಕಿಡಿಕಾರಿದರು.

ಇದನ್ನೂ ಓದಿ: ಪ್ರತಿಪಕ್ಷಗಳ ಮಹಾ ಘಟಬಂದನಕ್ಕೆ ಇದೆ ಸಾಲು ಸಾಲು ಸವಾಲು; ಅವುಗಳು ಯಾವುವು?

ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ದೇಶದ ಜನರು ಹೆದರಬೇಕಿಲ್ಲ, ನಾವು ನಿಮ್ಮ ಜೊತೆಗಿದ್ದೇವೆ. ಪ್ರಧಾನಿ ಮೋದಿ ದೇಶದ ಜನರನ್ನು ಆತಂಕಕ್ಕೆ ದೂಡಿದ್ದಾರೆ ಎಂದು ಹೇಳಿದರು.

ಇಂಡಿಯಾ vs ಎನ್​​ಡಿಎ ಎಂದ ರಾಹುಲ್ ಗಾಂಧಿ

ಬಿಜೆಪಿಯ ವಿಚಾರಧಾರೆಯ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ. ದೇಶದ ಎಲ್ಲ ಸಂಪತ್ತು ಕೆಲವೇ ಕೆಲವರ ಕೈಲಿ ಸೇರುತ್ತಿದೆ. ವಿಪಕ್ಷ ಹಾಗೂ ಬಿಜೆಪಿಯ ನಡುವಿನ ಸಮರ ಅಲ್ಲ ಇದು. ದೇಶದ ಜನರ ಧ್ವನಿ ಅಡಗಿಸುತ್ತಿರುವವರ ವಿರುದ್ದ ಸಮರ. ಇದಕ್ಕಾಗಿ ಈ ಹೆಸರನ್ನು ಆಯ್ಜೆ ಮಾಡಿದ್ದೇವೆ. ಈ ಯುದ್ಧ ಇಂಡಿಯಾ ಮತ್ತು ಎನ್​​ಡಿಎ ವಿರುದ್ಧ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದು. ಇಂಡಿಯಾ ವಿರುದ್ದ ಯಾರೇ ಸಮರ ಸಾರಿದರೂ ಅದರ ಪರಿಣಾಮ ಏನಾಗುತ್ತೆ ನಿಮಗೇ ಗೊತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Tue, 18 July 23