
ಮುಂಬೈ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ (Presidential Election 2022) ನಡೆದಿದ್ದು ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು. ಅದೇ ದಿನ ಸಂಜೆ 5ಕ್ಕೆ ಮತದಾನ ಮುಗಿದಿತ್ತು. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು (Droupadi Murmu) ಮತ್ತು ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ(Yashwant Sinha) ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬುಡಕಟ್ಟು ಜನಾಂಗದ ನಾಯಕಿಯಾಗಿರುವ ದ್ರೌಪದಿ ಮುರ್ಮು ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಯಶವಂತ ಸಿನ್ಹಾ ಅವರು ಕೇಂದ್ರದಲ್ಲಿ ಎರಡು ಬಾರಿ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದಾರೆ. ಜುಲೈ 18ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ 30 ಕೇಂದ್ರಗಳಲ್ಲಿ ಮತದಾನ ನಡೆದಿದೆ. ಈ ದಿನ ಶೇ 99.18 ಮತದಾನವಾಗಿದೆ. 11 ರಾಜ್ಯಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.
ಜುಲೈ 21 (ನಾಳೆ) ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನ ನಂತರ ಫಲಿತಾಂಶ ಪ್ರಕಟವಾಗಲಿದೆ. ವಿವಿಧ ಸುದ್ದಿವಾಹಿನಿಗಳಲ್ಲಿ ಮತ ಎಣಿಕೆ ನೇರ ಪ್ರಸಾರವಾಗಲಿದೆ. ಸಂಸದ್ ಟಿವಿ ಮತ್ತು ಇತರ ಸರ್ಕಾರಿ ವಾಹಿನಿಗಳಲ್ಲಿ ನೇರ ಪ್ರಸಾರವಿರಲಿದೆ.