ತುಮಕೂರು ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ: ಡಿಕೆ ಶಿವಕುಮಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2022 | 11:51 AM

ಮಾರ್ಚ್ 31ರಂದು ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ರಾಹುಲ್ ಗಾಂಧಿ ತುಮಕೂರಿಗೆ ಭೇಟಿ ನೀಡಲಿದ್ದಾರೆ. ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ತುಮಕೂರು ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​
Follow us on

ಬೆಂಗಳೂರು: ಬಿಜೆಪಿಯವರು ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಬಡ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮುಸ್ಲಿಮರ ವ್ಯಾಪಾರ, ವಹಿವಾಟಿಗೆ ಅಡ್ಡಿಪಡಿಸುತ್ತಿದ್ದಾರೆ. ಮುಸ್ಲಿಮರಿಗೆ ನಿರ್ಬಂಧ ಖಂಡಿಸಿ ಪತ್ರ ಬರೆದಿರುವ ಪ್ರಗತಿಪರರಿಗೆ ನಮ್ಮ ಬೆಂಬಲವಿದೆ. ಯಾರೂ ಯಾರ ವ್ಯಾಪಾರಕ್ಕೂ ಅಡ್ಡಿಪಡಿಸಬಾರದು ಎಂದು ಅವರು ತಾಕೀತು ಮಾಡಿದರು.

ಮೃದು ಹಿಂದುತ್ವ ವಿಚಾರ ಕುರಿತು ಕಾಂಗ್ರೆಸ್ ನಾಯಕರ ವಿರುದ್ಧ ಮಾಡುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ನೀವೆಲ್ಲ ಯಾರು ಎಂದು ಪ್ರಶ್ನಿಸಿದರು. ಹಿಂದೂ ಆಗಿರುವುದಕ್ಕೂ ಹಿಂದುತ್ವ ಸಿದ್ಧಾಂತಕ್ಕೂ ಇರುವ ಅಂತರ ಏನು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನೀವು (ಬಿಜೆಪಿ) ಜನರನ್ನು ಒಡೆದು ಆಳುತ್ತಿದ್ದೀರಿ. ಅವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ. ಅವರ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸುತ್ತಿದ್ದೀರಿ ಎಂದು ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಿದರು.

ಏಪ್ರಿಲ್ 1ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಿರಿಯ ನಾಯಕರ ಸಭೆ ನಡೆಯಲಿದೆ. ಸಭೆ ಬಳಿಕ ಸದಸ್ಯತ್ವ ನೋಂದಣಿ ವಿಚಾರವಾಗಿ ಜೂಮ್ ಮೀಟಿಂಗ್ ನಡೆಯಲಿದ್ದು, ಸಮಯಾವಕಾಶವಿದ್ದರೆ ಹಿರಿಯ ನಾಯಕರ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮಾರ್ಚ್ 31ರಂದು ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ರಾಹುಲ್ ಗಾಂಧಿ ತುಮಕೂರಿಗೆ ಭೇಟಿ ನೀಡಲಿದ್ದು, ಸಿದ್ದಗಂಗಾ ಮಠದಲ್ಲಿರುವ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಯೇ ಪ್ರಸಾದ ಸ್ವೀಕರಿಸಿ, ನಂತರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ನಾಯಕರೂ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಟಿಪ್ಪು ಹೆಸರನ್ನು ಪಠ್ಯಪುಸ್ತಕಗಳಿಂದ ತೆಗೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ದೇಶದ ಇತಿಹಾಸ ಬದಲಿಸಲು ಸಾಧ್ಯವಿಲ್ಲ. ದೇಶದ ಇತಿಹಾಸದ ಜೊತೆ ಟಿಪ್ಪು ಹೆಸರು ಸೇರಿಕೊಂಡಿದೆ. ಹಿಂದೆ ರಾಷ್ಟ್ರಪತಿ ಅವರೇ ಟಿಪ್ಪು ಅವರನ್ನ ಹೊಗಳಿದ್ದರು. ನಾವು ಆತುರದಲ್ಲಿ ಯಾವುದೇ ನಿರ್ಧಾರ ಮಾಡಬಾರದು. ಸಮಿತಿಯಲ್ಲಿರುವವರು ತಜ್ಙರಿದ್ದಾರೆ , ಪ್ರಾಜ್ಙರಿದ್ದಾರೆ ಅಂತಾ ಭಾವಿಸಿದ್ದಾರೆ. ಹೀಗಾಗಿ ನಾವು ಜಂಪ್ ಮಾಡೋದು ಬೇಡ ಎಂದು ಸಲಹೆ ಮಾಡಿದರು.

ಬೆಲೆ ಏರಿಕೆ ವಿರೋಧಿಸಿ ಮಾರ್ಚ್ 31 ರಂದು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಗ್ಯಾಸ್ ಸಿಲಿಂಡರ್, ಬೈಕ್‌ಗೆ ಹೂವಿನ ಹಾರ ಹಾಕಿದ ಫೋಟೊಗಳನ್ನು ಜನರು ಅಪ್​ಲೋಡ್ ಮಾಡಲಿದ್ದಾರೆ. ಏಪ್ರಿಲ್ 3ರಂದು ಜಿಲ್ಲಾಮಟ್ಟದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದೆ ಎಂದರು.

ಇದನ್ನೂ ಓದಿ: ಪಂಚ ರಾಜ್ಯ ಸೋಲಿಂದ ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ; ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಡೋಣ: ಡಿಕೆ ಶಿವಕುಮಾರ್

ಇದನ್ನೂ ಓದಿ: ಸ್ವಾಮೀಜಿಗಳ ಬಗ್ಗೆ  ಮಾತಾಡಿರುವುದಕ್ಕೆ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ ಎಂದರು ಡಿಕೆ ಶಿವಕುಮಾರ್

Published On - 11:50 am, Tue, 29 March 22