ರಾಜ್ಯದಲ್ಲಿ ನನ್ನ ಭಯ ಬಿಜೆಪಿಗೆ ಕಾಡುತ್ತಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಭಾರತ್ ಜೋಡೋ ಯಾತ್ರೆ ಮೂಲಕ ಬಿಜೆಪಿಗೆ ನಡುಕ ಉಂಟಾಗಿದ್ದು, ಕರ್ನಾಟಕದಲ್ಲಿ ನನ್ನ ಭಯ್ತ ಬಿಜೆಪಿಯವರನ್ನು ಕಾಡುತ್ತಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ನನ್ನ ಭಯ ಬಿಜೆಪಿಗೆ ಕಾಡುತ್ತಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಸುದ್ದಿಗೋಷ್ಠಿ
Edited By: Rakesh Nayak Manchi

Updated on: Oct 10, 2022 | 2:17 PM

ರಾಯಚೂರು: ದೇಶದಲ್ಲಿ ಬಿಜೆಪಿಯವರಿಗೆ ಭಾರತ್ ಜೋಡೋ ಯಾತ್ರೆ ನಡುಕ ಹುಟ್ಟುಹಾಕಿದ್ದು, ಕರ್ನಾಟಕ ರಾಜ್ಯದಲ್ಲಿ ನನ್ನ ಭಯ ಬಿಜೆಪಿ ನಾಯಕರಿಗೆ ಕಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಮಿಷನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೇಳಿದರೆ ದಾಖಲಾತಿ ಕೇಳುತ್ತಿದ್ದಾರೆ. ಆದರೆ ನಾವು ಸಿಬಿಐಗೆ ಕೊಟ್ಟಾಗ ದಾಖಲಾತಿ ಕೊಟ್ಟಿದ್ದೀರಾ? ಎಂದು ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ನಡುಕ ಶುವಾಗಿದೆ. ರಾಜ್ಯದಲ್ಲಿ ನನ್ನ ಭಯ ಬಿಜೆಪಿಗೆ ಕಾಡುತ್ತಿದೆ ಎಂದು ಹೇಳಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಕಮಿಷನ್ ಆರೋಪದ ಬಗ್ಗೆ ಪ್ರಧಾನಿ ತನಿಖೆ ಮಾಡಿಸಬೇಕಿತ್ತು. ನ್ಯಾಯಾಂಗ ತನಿಖೆ ಮಾಡಿ ಅಂದರೆ ದಾಖಲೆ ಕೇಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಒಂದು ಆರೋಪ ಬಂದರೆ ಪ್ರಕರಣವನ್ನು ಸಿಬಿಐಗೆ ಕೊಡುತ್ತಿದೆ. ಮೋದಿ ಪ್ರಧಾನಿ ಆಗಿದ್ದಾಗಲೂ ಎಷ್ಟೋ ಕೇಸ್​ಗಳನ್ನು​ ಸಿಬಿಐಗೆ ಕೊಟ್ಟಿದ್ದೆ ಎಂದರು.

ಪರೇಶ್ ಮೆಸ್ತ ಕೊಲೆ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ. ಆದರೂ ತಪ್ಪು ಅಂತ ಹೇಳುತ್ತಾರೆ. ಹಾಗಾದರೆ ಗೃಹಸಚಿವ ಅಮಿತ್​ ಶಾ ಅವರೇ ಫೇಲ್​ ಅಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಆತ್ಮಹತ್ಯೆ ಪ್ರಕರಣಗಳನ್ನು ಕೊಲೆ ಎಂದು ಬಿಂಬಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೊಂದು ಐತಿಹಾಸಿಕ ಯಾತ್ರೆ

ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್​ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ನಡೆಯುತ್ತಿದೆ. ಹೀಗಾಗಿ ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿದೆ. ಈ ಹಿಂದೆ ಅಡ್ವಾಣಿ, ವಿನೋಭಾ ಬಾವೆ ಅವ್ರೂ ಪಾದಯಾತ್ರೆ ಮಾಡಿದ್ದಾರೆ. ಆದರೆ ಈ ಪಾದಯಾತ್ರೆಯಲ್ಲಿ ವಿಶೇಷತೆ ಎಂದರೆ, ಮೋದಿ ಪ್ರಧಾನಿ ಆದ ಬಳಿಕ ದ್ವೇಷದ ರಾಜಕಾರಣ ಹೆಚ್ಚುತ್ತಿದೆ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಲಾಗುತ್ತಿದೆ, ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಈ ಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.

ಅ.21ರಂದು ರಾಯಚೂರಿಗೆ ಯಾತ್ರೆ ಪ್ರವೇಶ

ಅಕ್ಟೋಬರ್​ 15ರಂದು ಬಳ್ಳಾರಿಯಲ್ಲಿ ರಾಹುಲ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ​ ಹಮ್ಮಿಕೊಳ್ಳಲಾಗಿದೆ, ಅಕ್ಟೋಬರ್​​ 16ರಂದು ಆಂಧ್ರಪ್ರದೇಶಕ್ಕೆ ಪಾದಯಾತ್ರೆ ಪ್ರವೇಶ ಮಾಡಲಿದ್ದು, ನಂತರ ಅ.21ರಂದು ರಾಯಚೂರಿಗೆ ಯಾತ್ರೆ ಪ್ರವೇಶಿಸಲಿದೆ. ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ಪಾದಯಾತ್ರೆ ಮುಂದುವರಿಕೆಯಾಗಿದೆಲಿ. ಆದರೆ ರಾಯಚೂರಿನಲ್ಲಿ ಯಾವುದೇ ಸಾರ್ವಜನಿಕ ಸಭೆ ನಡೆಯುವುದಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರ ಜೊತೆ ರಾಹುಲ್​ ಗಾಂಧಿ ಸಂವಾದ ನಡೆಸಲಿದ್ದಾರೆ. ನಂತರ ಯಾತ್ರೆ ತೆಲಂಗಾಣದಕ್ಕೆ ಹೋಗಲಿದೆ.

ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಾವು

SC, ST ಮೀಸಲಾತಿ ಹೆಚ್ಚಳದ ಕುರಿತು ಹೇಳಿಕೆ ನೀಡಿದ ಸಿದ್ದರಾಮಯ್ಯ, ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಾವು. 2020ರ ಜುಲೈ 7ರಂದು ವರದಿ ಸಲ್ಲಿಕೆ ಆಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಇದುವರೆಗೂ ಅದನ್ನ ಮಂಡನೆ ಮಾಡಿರಲಿಲ್ಲ. ಒಬ್ಬನೇ ಒಬ್ಬ ಬಿಜೆಪಿ ಶಾಸಕ ಈ ವಿಷಯ ಮಾತನಾಡಲಿಲ್ಲ. ನಮ್ಮ ಶಾಸಕರು ಅಸೆಂಬ್ಲಿಯಲ್ಲಿ ಧರಣಿ ಹಾಗೂ ಗಲಾಟೆ ಮಾಡಿದ್ದಾರೆ ಎಂದರು.

ಸದಾಶಿವ ಆಯೋಗದ ಒಳ ಮೀಸಲಾತಿಗೆ ಕೆಲ ಸಮುದಾಯಗಳ ವಿರೋಧ ಇದೆ. ಬರೀ ಎಡ-ಬಲ ಅಲ್ಲ, ಅಲ್ಲಿ ಸಾಕಷ್ಟು ಸಮುದಾಯಗಳಿವೆ. ಹೀಗಾಗಿ ಅದನ್ನ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿದೆವು. ಆದರೆ ಅಲ್ಲಿ ಆಗಲಿಲ್ಲ. ಮುಂದೆ ನಮ್ಮ ಸರ್ಕಾರ ಬಂದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇವೆ ಎಂದರು. ಕುರುಬ ಸಮುದಾಯಕ್ಕೆ ಎಸ್​​ಟಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಮೆಂಡ್ ಮೆಂಟ್ ಮಾಡಿ ಕಳಿಸಲು ಯಾರು ಅಡ್ಡಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Mon, 10 October 22

Web contact

TV9 Kannada

Read More
Follow Us