RSS ನಾಯಕರಿಂದ ಸಿಎಂ ಬೊಮ್ಮಾಯಿ ಮೇಲಿಂದ ಮೇಲೆ ಭೇಟಿ: ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ!

| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2022 | 4:16 PM

ಕರ್ನಾಟಕದಲ್ಲೂ ಸಹ ಗುಜರಾತ್ ಮಾದರಿಯಲ್ಲಿ ಚುನಾವಣೆ ನಡೆಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ಜೋರಾಗಿದೆ. ಇದರ ಬೆನ್ನಲ್ಲೇ ಇದೀಗ ಆರ್​ಎಸ್​ಎಸ್​ ಅಖಾಡಕ್ಕಿಳಿದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

RSS ನಾಯಕರಿಂದ ಸಿಎಂ ಬೊಮ್ಮಾಯಿ ಮೇಲಿಂದ ಮೇಲೆ ಭೇಟಿ: ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ!
RSS And Basavaraj bommai
Follow us on

ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ (Gujarat Election 2022) ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಇತ್ತ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅದರಲ್ಲೂ ರಾಜ್ಯ ಬಿಜೆಪಿಯಲ್ಲಿ ಗುಜರಾತ್​ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆಯೊಂದಿಗೆ ಚುನಾವಣೆಗೆ ಹೋಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಆರ್​​ಎಸ್​ಎಸ್ (Rashtriya Swayamsevak Sangh)​ ನಾಯಕರು ಮೇಲಿಂದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಅವರನ್ನು ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: ಮರಳಿ ಕಾಂಗ್ರೆಸ್‌ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!

ಹೌದು…ಕರ್ನಾಟಕ ವಿಧಾನಸಭೆ ಚುನಾಚವಣೆ(Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ಗರಿಗೆದರಿದ್ದು, ಆರ್​​ಎಸ್​ಎಸ್​ ನಾಯಕರು ಸಹ ಅಖಾಡಕ್ಕಿಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆರ್​​ಎಸ್​ಎಸ್​ ನಾಯಕರು ಮೇಲಿಂದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. ಮೊನ್ನೇ ಅಷ್ಟೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಸಿಎಂ ಭೇಟಿ ಮಾಡಿದ್ದರು. ಇದೀಗ ನಿನ್ನೆ(ಡಿಸೆಂಬರ್ 09) ಆರ್​​ಎಸ್​​ಎಸ್​ ಸಹಸಂಚಾಲಕ ಮುಕುಂದ್​ ಅವರು ಒಂದೇ ದಿನ 2 ಬಾರಿ ಭೇಟಿ ಮಾಡಿ ಎರಡು ಗಂಟೆಗಳ ಕಾಲ ಚರ್ಚೆ ಮಾಡಿದ್ದು, ಸಂಚಲನ ಮೂಡಿಸಿದೆ.

ಸಿಎಂ ಬೊಮ್ಮಾಯಿ ಜತೆ ಮುಕುಂದ್​ ನಿನ್ನೆ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಸಭೆ ಮಾಡಿದ್ದು, ಈ ವೇಳೆ ಸಚಿವ ಸಂಪುಟಕ್ಕೆ ಹೊಸ ಮುಖಗಳಿಗೆ ಅವಕಾಶ ನೀಡುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಘ ಪರಿವಾರ ಮೂಲದವರಿಗೆ ಟಿಕೆಟ್ ನೀಡುವ ವಿಚಾರವಾಗಿ ಕೂಡಾ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಜರಾತ್​ನಂತೆ ಕರ್ನಾಟಕದಲ್ಲೂ ಹಳಬರನ್ನು ಕೈಬಿಡುವ ಮಾತು ಕೇಳಿಬರುತ್ತಿದೆ ಎಂದ ಭೈರತಿ ಬಸವರಾಜ್

ಎರಡು ಗಂಟೆಗೆಳ ಕಾಲ ಸುದೀರ್ಘ ಸಭೆಯಲ್ಲಿ ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಆರ್​ಎಸ್​ಎಸ್ ಕಾರ್ಯಕರ್ತರ ನಡುವಿನ ಸಂಪರ್ಕಕೊಂಡಿ ಬೆಸೆಯುವ ಬಗ್ಗೆಯೂ ಸಹ ಮಾತುಕತೆಗಳು ನಡೆದಿವೆ. ಸಂಘಟ ಪರಿವಾರದ ಕಾರ್ಯಕರ್ತರು ಹಾಗೂ ನಾಯಕರನ್ನು ಗಣನೆಗೆ ತೆಗೆದುಕೊಂಡು ಮುಂದಿನ ವಿಧಾನಸಭೆಗೆ ಕಾರ್ಯತಂತ್ರಗಳ ಬಗ್ಗೆಯೂ ಉಭಯ ನಾಯುರ ಮಧ್ಯೆ ಚರ್ಚೆಗಳಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಪುಟ ವಿಸ್ತರಣೆ ಮತ್ತೆ ಮುನ್ನಲೆಗೆ

ಗುಜರಾತ್ ಚುನಾವಣೆ ಮುಗಿದ ಬಳಿಕ ರಾಜ್ಯ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಹೇಳಿದ್ದರು. ಅದರಂತೆ ಇದೀಗ ಗುಜರಾತ್ ಚುನಾವಣೆ ಮುಗಿದಿದೆ. ಈ ಹಿನ್ನಲೆಯಲ್ಲಿ ಆರ್​ಎಸ್​ಎಸ್ ಮುಖಂಡರಿಂದ ಸತತ ಸಿಎಂ ಭೇಟಿಯಿಂದ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಸಂಘಟದ ಜೊತೆ ನಿಕಟ ಸಂಪರ್ಕ ಹೊಂದಿರುವ ಶಾಸಕರುಗಳಿಗೆ ಸಂಪುಟದಲ್ಲಿ ಸ್ಥಾನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಸಿಪಿ ಯೋಗೇಶ್ವರ್​ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ ಜೊತೆಗೆ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಹೊಸ ವಿಧೇಯಕಗಳ ಬಗ್ಗೆಯೂ ಮಾತುಕತೆ ನಡೆದಿವೆ ಎನ್ನಲಾಗಿದೆ.

ಒಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆರ್​ಎಸ್​ಎಸ್​ ನಾಯಕರು ಮೇಲಿಂದ ಮೇಲೆ ಸಿಎಂ ಭೇಟಿ ಮಾಡುತ್ತಿರುವುದು ಸಂಚಲನ ಮೂಡಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:13 pm, Sat, 10 December 22