ಆಯನೂರು ಮಂಜುನಾಥ್ ಸೇರ್ಪಡೆಗೆ ಕಾಂಗ್ರೆಸ್​​ನಲ್ಲಿ ವಿರೋಧ, ಬಿಜೆಪಿ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಕೈ ಮುಖಂಡ

| Updated By: ರಮೇಶ್ ಬಿ. ಜವಳಗೇರಾ

Updated on: Aug 20, 2023 | 6:27 PM

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್​ ಇದೀಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಈ ಬಗ್ಗೆ ಮಾತುಕತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಸಂಚಲನ ಮೂಡಿಸಿದೆ. ಇತ್ತ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ಆಕ್ರೋಶ ಭುಗಿಲೆದ್ದಿದೆ.​

ಆಯನೂರು ಮಂಜುನಾಥ್ ಸೇರ್ಪಡೆಗೆ ಕಾಂಗ್ರೆಸ್​​ನಲ್ಲಿ ವಿರೋಧ, ಬಿಜೆಪಿ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಕೈ ಮುಖಂಡ
ಆಯನೂರು ಮಂಜನಾಥ್, ಡಿಕೆ ಶಿವಕುಮಾರ್​
Follow us on

ಶಿವಮೊಗ್ಗ ( ಆಗಸ್ಟ್ 20) : ಆಯನೂರು ಮಂಜುನಾಥ್ (Ayanur Manjunath) ಜೆಡಿಎಸ್​ ತೊರೆದು ಕಾಂಗ್ರೆಸ್ (Congress) ಪಕ್ಷ ಸೇರಬಹುದು ಎಂಬ ವಿಷಯ ಹೊರಬರುತ್ತಲೇ ಶಿವಮೊಗ್ಗ(Shovamogga) ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳವ ಬಗ್ಗೆ ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ (Yogesh H C) ಆಕ್ಷೇಪಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ (KPCC) ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದ ವ್ಯಕ್ತಿ ಈಗ ಕಾಂಗ್ರೆಸ್ ಪಕ್ಷ ಸೇರುತ್ತಿರುವುದಕ್ಕೆ ವಿರೋಧವಿದೆ ಎಂದರು.

ಈ ಮೊದಲು ಸಿದ್ದರಾಮಯ್ಯನರವರ ಬಗ್ಗೆ ಮಾತನಾಡಿ, ಈಗ ಪಕ್ಷ ಸೇರ್ಪಡೆಗೆ ಅವರ ಮನೆ ಬಾಗಿಲನ್ನೇ ತಟ್ಟುತ್ತಿದ್ದಾರೆ. ಮಂಜುನಾಥ್ ರವರು ವರ್ಷದಲ್ಲಿ ಮೂರು ಕಾಲ ಬದಲಾದಂತೆ ಪಕ್ಷ ಬದಲಿಸುತ್ತಾರೆ. ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಯಲ್ಲಿ ಕಾಂಗ್ರೆಸ್ ಬಾಗಿಲು ಮುಚ್ಚಿದೆ ಎಂದಾಗ ಜೆಡಿಎಸ್ ಪಕ್ಷ ಸೇರಿದ್ದರು. ಈಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ಯುವಕರಿಗೆ ಏನು ಸಂದೇಶ ನೀಡುತ್ತಿರಾ? ನಿಮಗೆ ಧಮ್ ಇದ್ದರೆ ನೀವಿರುವ ಪಕ್ಷದಲ್ಲೇ ಇದ್ದು ಸಾಧಿಸಿ ತೋರಸಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಬಿಜೆಪಿ ಬಿಟ್ಟು ಜೆಡಿಎಸ್​ ಸೇರಿದ್ದ ನಾಯಕ ಈಗ ಕಾಂಗ್ರೆಸ್​ ಸೇರುತ್ತಾರಾ? ಡಿಕೆ ಶಿವಕುಮಾರ್​ ಭೇಟಿ ಹಿಂದಿನ ರಹಸ್ಯವೇನು?

ಜೆಡಿಎಸ್ ಸೇರ್ಪಡೆ ವೇಳೆ ಇವರೊಂದಿಗೆ ಪಕ್ಷಾಂತರವಾದವರನ್ನು ಬಿಟ್ಟು ಇವರೊಬ್ಬರೇ ಪಕ್ಷ ಸೇರುತ್ತಿದ್ದಾರೆ. ಮರದಿಂದ ಮರಕ್ಕೆ ಹಾರುವುದು ಎಂದರೆ ಇದೇನಾ? ಈ ಪಕ್ಷಾಂತರವು ಯಾವುದೇ ಅಭಿವೃದ್ಧಿ ಕಾರ್ಯಕ್ಕಾಗಿ ನಡೆಯುತ್ತಿಲ್ಲ, ಇದು ಕೇವಲ ಈಶ್ವರಪ್ಪರವರ ಮೇಲಿನ ವಯಕ್ತಿಕ ಅಸಮಾಧಾನದಿಂದ ನಡೆಯುತ್ತಿದೆ. ಗುದ್ದಲಿ ಪೂಜೆಗೆ ತಮ್ಮನ್ನು ಆಹ್ವಾನಿಸಲಿಲ್ಲ ಎಂದು ಮಂಜುನಾಥ್ ಹಾಗೂ ಈಶ್ವರಪ್ಪರವರ ನಡುವೆ ಗಲಾಟೆ ನಡೆದಿತ್ತು. ಅದೇ ಕಾರಣಕ್ಕಾಗಿ ಆಯನೂರು ಮಂಜುನಾಥ್ ರವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.

ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್ ಗೆ ಪದವೀದರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಯ ನಂತರ ನಿಮ್ಮ ಗೆಲವು ಖಚಿತ. ಆದರೆ ಈಗ ಆಯನೂರು ಮಂಜುನಾಥ್ ರವರ ಪಕ್ಷ ಸೇರ್ಪಡೆಗೆ ನಮ್ಮೆಲ್ಲರ ವಿರೋಧವಿದೆ. 2023ರ ಚುನಾವಣೆಯಲ್ಲಿ ಇವರು ಕೇವಲ 8863 ಮತಗಳನ್ನು ಪಡೆದುಕೊಂಡಿದ್ದಾರೆ. ಠೇವಣಿಗೂ ಯೋಗ್ಯವಿಲ್ಲದ ವ್ಯಕ್ತಿ ಪಕ್ಷ ಸೇರ್ಪಡೆಯಾಗುತ್ತೇನೆ ಎಂದಿದ್ದಾರೆ. ಆದ್ದರಿಂದ ಪಕ್ಷ ಸೇರ್ಪಡೆಯ ಬಗ್ಗೆ ನಮ್ಮ ನಾಯಕರು ಯೋಚಿಸಬೇಕು ಎಂದು ಸಲಹೆ ನೀಡಿದರು.

ಇವರ ಸೇರ್ಪಡೆಯಿಂದ ಲೋಕಸಭಾ ಚುನಾವಣೆಯಲ್ಲಿಯೂ ಯಾವುದೇ ಉಪಯೋಗವಿಲ್ಲ. ಇವರು ಕಾಂಗ್ರೆಸ್ ಪಕ್ಷದ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವಿಡಿಯೋವನ್ನು ಈಗಾಗಲೇ ಹೈಕಮಾಂಡ್​ಗೆ ಕಳುಹಿಸಲಾಗಿದೆ. ಈಗಿರುವ ಪಕ್ಷದ ಕಾರ್ಯಕರ್ತರೆ ಪಕ್ಷವನ್ನು ಕಟ್ಟುತ್ತೇವೆ, ನೀವು ಸೂಚಿಸಿದ ವ್ಯಕ್ತಿಯನ್ನೇ ಗೆಲ್ಲಿಸುತ್ತೇವೆ, ನಮ್ಮ ಮೇಲೆ ನಂಬಿಕೆ ಇಡಬೇಕು. ಕಾಂಗ್ರೆಸ್ ಪಕ್ಷ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿಗೆ ಪಕ್ಷದಲ್ಲಿ ಅವಕಾಶ ನೀಡಬಾರದು ಎಂದು ಹೆಚ್ ಸಿ ಯೋಗೇಶ್ ರಾಜ್ಯ ನಾಯಕರಿಗೆ ಮನವಿ ಮಾಡಿಕೊಂಡರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ