AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಟಿಕೆಟ್​ ಎಂದ ಡಿಕೆ ಶಿವಕುಮಾರ್, ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಅಂದ್ರು ಮುನಿಯಪ್ಪ: ಸಿದ್ದರಾಮಯ್ಯಗೆ ಶುರುವಾಯ್ತು ಟೆನ್ಷನ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆ.ಎಚ್​. ಮುನಿಯಪ್ಪ ಅವರ ಹೇಳಿಕೆಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಮತ್ತೆ ಕೇತ್ರದ ಟೆನ್ಷನ್​ ಶುರುವಾಗಿದೆ.

ಒಂದೇ ಟಿಕೆಟ್​ ಎಂದ ಡಿಕೆ ಶಿವಕುಮಾರ್, ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಅಂದ್ರು ಮುನಿಯಪ್ಪ: ಸಿದ್ದರಾಮಯ್ಯಗೆ ಶುರುವಾಯ್ತು ಟೆನ್ಷನ್
KH Muniyappa, siddaramaiah And DK Shivakuamr
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Nov 16, 2022 | 5:55 PM

Share

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ (Karnataka Congress) ಪಾಳಯದಲ್ಲಿ ಟಿಕೆಟ್ ರಾಜಕಾರಣ ಜೋರಾಗಿದ್ದು, ಟಿಕೆಟ್ ಗೊಂದಲ ಗುದ್ದಾಟಕ್ಕೆ ಕಾರಣವಾದಂತೆ ಕಾಣುತ್ತಿದೆ. ಒಂದು ಕಡೆ ಸಿದ್ದರಾಮಯ್ಯ (Siddarmaiah) ಕೋಲಾರದಲ್ಲಿ ಸ್ಪರ್ಧಿಸಬೇಕಾ ಅಥವಾ ವರುಣಾದಲ್ಲಿ ಸ್ಪರ್ಧಿಸಬೇಕಾ ಎನ್ನುವ ಚಿಂತನೆಯಲ್ಲಿದ್ದಾರೆ. ಇನ್ನೂ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಹೇಗೆ ಎಂದು ಆಪ್ತರೊಂದಿಗೆ ಸಿದ್ದು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಬ್ಬರಿಗೆ ಒಂದೇ ಕ್ಷೇತ್ರ ಎಂದು ಹೇಳಿದ್ದು, ಕೈ ಪಾಳಯದಲ್ಲಿ ಸಂಚಲನ ಮೂಡಿಸಿದೆ.

Karnataka Assembly Election 2023: ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಹೌದು… ಪ್ರಸಕ್ತ ಚುನಾವಣೆಯಲ್ಲಿ ಒಬ್ಬರಿಗೆ ಒಂದು ಕ್ಷೇತ್ರದಲ್ಲಿ ಮಾತ್ರ ಟಿಕೆಟ್‌. ಒಬ್ಬರಿಗೆ 2 ಕ್ಷೇತ್ರದಲ್ಲಿ ಟಿಕೆಟ್‌ ನೀಡಲು ಅಸಾಧ್ಯವೆಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಕೆ.ಎಚ್​. ಮುನಿಯಪ್ಪ ಕೋಲಾರ ಕಡೆ ಮುಖ ಮಾಡಿದ್ದ ಸಿದ್ದರಾಮಯ್ಯಗೆ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಎಂದು ಹೇಳಿದ್ದು, ಸಿದ್ದರಾಮಯ್ಯನವರನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ.

ಕೋಲಾರ ಕಡೆ ಮುಖ ಮಾಡಿದ್ದ ಸಿದ್ದರಾಮಯ್ಯಗೆ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಎಂದಿರುವ ಕೆ ಎಚ್ ಮುನಿಯಪ್ಪ, ಕೇವಲ ರಮೇಶ್ ಕುಮಾರ್ ಬಣವನ್ನು ನಂಬಿ ಬಂದರೆ ಕಷ್ಟ ಸಾಧ್ಯ. ಕೋಲಾರದಲ್ಲಿ ಕೇವಲ ಎರಡು ಮೂರು ದಿನ ಮಾತ್ರ ಉಳಿದುಕೊಂಡರೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದರಿಂದ ಕ್ಷೇತ್ರ ಆಯ್ಕೆಗೆ ಮುಂದಾದ ಸಿದ್ದರಾಮಯ್ಯಗೆ ಕ್ಷೇತ್ರದ ಟೆನ್ಷನ್ ಹೆಚ್ಚಾಗಿದೆ.

ಇನ್ನು ತಾವೇ ಕನಕಪುರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿರುವ ಡಿಕೆಶಿ., ಆ ಮೂಲಕ ಪಕ್ಷದ ಹಿರಿಯ ನಾಯಕರಿಗೆ ತಾವೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದರೂ ಸಿದ್ದರಾಮಯ್ಯ ಮಾತ್ರ ಇನ್ನೂ ಕ್ಷೇತ್ರ ಫೈನಲ್ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ನೀಡುತ್ತಿರುವ ಹೇಳಿಕೆಗಳು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡುವಂತಿವೆ.

ಯತೀಂದ್ರ ಅರ್ಜಿ ಸಲ್ಲಿಕೆ ಯೆಸ್…ವರುಣಾ ಕ್ಷೇತ್ರದ ಟಿಕೆಟ್​ಗಾಗಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಇಂದು (ನ.16) ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಈಗ ಕೋಲಾರ ಕ್ಷೇತ್ರ ಒಂದೇ ಉಳಿದುಕೊಂಡಿದ್ದು, ಎಲ್ಲಾ ಅಳೆದು ತೂಗಿ ಎರಡ್ಮೂರು ದಿನಗಳಲ್ಲಿ ಅಂತಿಮವಾಗಿ ಸಿದ್ದರಾಮಯ್ಯವರೂ ಸಹ ಟಿಕೆಟ್​ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Wed, 16 November 22