AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯಕ್ಕೆ ಮರಳುವುದಿಲ್ಲ ಎಂದ ಸೂಪರ್​​ಸ್ಟಾರ್ ರಜನಿಕಾಂತ್

ರಜನಿಕಾಂತ್ ಅವರು ಸೋಮವಾರ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಪಾಲರೊಂದಿಗೆ ರಾಜಕೀಯದ ಕುರಿತು ಚರ್ಚಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ರಾಜಕೀಯಕ್ಕೆ ಮರಳುವುದಿಲ್ಲ ಎಂದ ಸೂಪರ್​​ಸ್ಟಾರ್ ರಜನಿಕಾಂತ್
ರಜನಿಕಾಂತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 08, 2022 | 8:20 PM

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು 2017-2021 ರವರೆಗೆ ರಜಿನಿ ಮಕ್ಕಳ್ ಮಂದ್ರಂ (RMM) ಎಂಬ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಕಾಲಿಟ್ಟಿದ್ದರು. 2017, ಡಿಸೆಂಬರ್ 31ರಂದು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಆಗ ಅವರು ಘೋಷಿಸಿದ್ದರು. ಇದಾಗಿ 12 ಜುಲೈ 2021 ರಂದು ಅವರು ಪಕ್ಷವನ್ನು ವಿಸರ್ಜಿಸಿದರು. ಪಕ್ಷವನ್ನು ವಿಸರ್ಜಿಸಿದಾಗ ಅವರು ರಾಜಕೀಯಕ್ಕೆ ಮರಳುವ ಉದ್ದೇಶವಿಲ್ಲ ಎಂದು ಹೇಳಿದ್ದರು. ಇಂದು (ಸೋಮವಾರ)ಸೂಪರ್‌ಸ್ಟಾರ್ ರಜನಿಕಾಂತ್ ಅವರಲ್ಲಿ ರಾಜಕೀಯಕ್ಕೆ ಮರಳಲು ಯೋಜಿಸುತ್ತೀರಾ ಎಂದು ಕೇಳಿದಾಗ “ಇಲ್ಲ” ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.  ರಜನಿಕಾಂತ್ ಅವರು ಸೋಮವಾರ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಪಾಲರೊಂದಿಗೆ ರಾಜಕೀಯದ ಕುರಿತು ಚರ್ಚಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಆದರೆ ಅವರು ರಾಜ್ಯಪಾಲರೊಂದಿಗಿನ ಭೇಟಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ರಾಜ್ಯಪಾಲರೊಂದಿಗಿನ ಕರೆ ‘ಸೌಜನ್ಯದ ಭೇಟಿ’ ಎಂದಿದ್ದಾರೆ ತಲೈವಾ. ರಜನಿಕಾಂತ್ ಅವರು 31 ಡಿಸೆಂಬರ್ 2017 ರಂದು ರಾಜಕೀಯ ಪ್ರವೇಶವನ್ನು ಘೋಷಿಸಿದ್ದರು.  2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದಾಗ್ಯೂ, ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಹೇಳಿದ್ದರು. 12 ಜುಲೈ 2021 ರಂದು ರಜನಿಕಾಂತ್ ತಮ್ಮ ಪಕ್ಷ ರಜಿನಿ ಮಕ್ಕಳ್ ಮಂದ್ರಮ್ (RMM) ಅನ್ನು ವಿಸರ್ಜಿಸಿದರು.

ಅದಕ್ಕೂ ಮುನ್ನ ರಜನಿಕಾಂತ್ ಅವರು ಡಿಎಂಕೆ ಮತ್ತು ತಮಿಳು ಮನ್ನಿಲಾ ಕಾಂಗ್ರೆಸ್ ಮೈತ್ರಿಗೆ ಬೆಂಬಲ ನೀಡಿದ್ದರು. ತಮಿಳುನಾಡಿನ ಜನರು ಮತ್ತು ಅವರ ಅಭಿಮಾನಿಗಳು ಆ ಮೈತ್ರಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಈ ಮೈತ್ರಿಕೂಟವು 1996 ರಲ್ಲಿ ಬಹುಮತದಿಂದ  ಜಯ ಸಾಧಿಸಿತು. ರಜನಿಕಾಂತ್ ಅವರು 1996 ರ ಭಾರತೀಯ ಸಾರ್ವತ್ರಿಕ ಚುನಾವಣೆ ಮತ್ತು 1998 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಡಿಎಂಕೆ-ತಮಿಳು ಮನ್ನಿಲಾ ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಿದರು.

2004 ರಲ್ಲಿ ರಜನಿ, ವೈಯಕ್ತಿಕವಾಗಿ ಬಿಜೆಪಿಗೆ ಮತ ಹಾಕುವುದಾಗಿ ಘೋಷಿಸಿದರು. ಆದರೆ ಭಾರತದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಯಾವುದೇ ಒಕ್ಕೂಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಲಿಲ್ಲ.

ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ರಜನಿಕಾಂತ್ ಭಾಗಿಯಾಗಿದ್ದರು. ನಟ ಅನುಪಮ್ ಖೇರ್ ಅವರು ರಜನಿ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದ ನನ್ನ ಸ್ನೇಹಿತ ಎಂದು ಕರೆದಿದ್ದಾರೆ. ಜುಲೈ 24 ರಂದು, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ತೆರಿಗೆಗಳನ್ನು ನಿಯಮಿತವಾಗಿ ಪಾವತಿಸಿದ್ದಕ್ಕಾಗಿ ಚೆನ್ನೈನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಗೌರವಿಸಲಾಯಿತು. ಏತನ್ಮಧ್ಯೆ, ರಜನಿಕಾಂತ್ ಅವರು ಚಲನಚಿತ್ರ ನಿರ್ಮಾಪಕ ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗೆ ‘ಜೈಲರ್’ ಎಂಬ ಹೊಸ ಚಿತ್ರದ ಕೆಲಸದಲ್ಲಿ ತೊಡಗಿದ್ದಾರೆ. ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಈ ಯೋಜನೆಯು ಶೀಘ್ರದಲ್ಲೇ ಆರಂಭವಾಗಲಿದೆ. ಜೈಲರ್ ಸಿನಿಮಾ ಚಿತ್ರೀಕರಣವು ಆಗಸ್ಟ್ 15 ಅಥವಾ ಆಗಸ್ಟ್ 25 ರಂದು ಪ್ರಾರಂಭವಾಗಲಿದೆ ಎಂದು ನಟ ಹೇಳಿದ್ದಾರೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ