ಮುಂದಿನ ಲೋಕಸಭಾ ಚುನಾವಣೆಗೆ ವಿ ಸೋಮಣ್ಣ ಸ್ಪರ್ಧೆ: ಯಾವ ಕ್ಷೇತ್ರ? ಬಿಜೆಪಿ ನಾಯಕನ ಆಡಿಯೋ ವೈರಲ್

|

Updated on: Jun 07, 2023 | 9:44 AM

ಲೋಕಸಭೆ ಚುನಾವಣೆ ಗೆಲುವಿಗಾಗಿ ಬಿಜೆಪಿ ತಯಾರಿ ನಡೆಸಿದ್ಯಾ? ವರ್ಷಕ್ಕಿಂತ ಮೊದಲೇ ಬಿಜೆಪಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಯ್ಕೆ ಮಾಡುತ್ತಿದ್ಯಾ? ಹೌದು ಅನ್ನುವಂತಿದೆ ಬಿಜೆಪಿ ಸಂಸದರ ಭಾಷಣದ ಆಡಿಯೋ.

ಮುಂದಿನ ಲೋಕಸಭಾ ಚುನಾವಣೆಗೆ ವಿ ಸೋಮಣ್ಣ ಸ್ಪರ್ಧೆ: ಯಾವ ಕ್ಷೇತ್ರ? ಬಿಜೆಪಿ ನಾಯಕನ ಆಡಿಯೋ ವೈರಲ್
ವಿ ಸೋಮಣ್ಣ
Follow us on

ತುಮಕೂರು: ವಿಧಾನಸಭಾ ಚುನಾವಣೆಯ (Karnataka Assembly Elections 2024) ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆಗೆ(lok sabha election 2024) ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ವಿಧಾನಸಭೆ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಹೀಗಾಗಿ ವರ್ಷಕ್ಕಿಂತ ಮೊದಲೇ ಬಿಜೆಪಿ(BJP) ಚನಾವಣೆಗೆ ಭರ್ಜರಿ ತಯಾರಿ ಆರಂಭಿಸಿದ್ದು,  ಈ ಬಾರಿ ಅಭ್ಯರ್ಥಿಗಳಲ್ಲಿ ಮಹತ್ತರ ಬದಲಾವಣೆಗಳಾಗುವ ಮಾತುಗಳು ಕೇಳಿಬರುತ್ತಿವೆ. ಹೌದು…2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಒಂದು ಆಡಿಯೋ ಸಹ ವೈರಲ್ ಆಗಿದೆ. ಖುದ್ದು ಹಾಲಿ ಸಂಸದ ಜಿಎಸ್ ಬಸವರಾಜು ಅವರು ಮಾತನಾಡಿರುವ ಎನ್ನಲಾದ ಆಡಿಯೋ ಇದಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ? ಹೀಗಿದೆ ಕ್ಷೇತ್ರ ಹಂಚಿಕೆ ಲೆಕ್ಕಾಚಾರ

ಸಮುದಾಯದ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ನನ್ನ ಸೀಟ್​ ಅನ್ನು ಮಾಜಿ ಸಚಿವ ವಿ.ಸೋಮಣ್ಣಗೆ ಕೊಡುತ್ತಾರೆ. ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಈಗಾಗಲೇ ನಾನು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ ಎಂದು ಸಂಸದ G.S.ಬಸವರಾಜು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್ ಬಸವರಾಜು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಸಮಾಜ ಒಗ್ಗಟ್ಟಾಗಿದ್ರೆ ಏನಾಬೇಕಾದರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದರೆ ನಿಮ್ಮನ್ನೇ ಒದ್ದು ಓಡಿಸುತ್ತಾರೆ. ಅದು ಕೂಡ ಸನ್ನಿತವಾಗಿದೆ. ಯಾವಾಗ ಒಗ್ಗಟ್ಟು ಮುರಿಯುತ್ತೆ ಏನೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ. ಕೆಲವೇ ಜನ ಇದ್ದಿರಾ ಒಟ್ಟಾಗಿರಿ ಎಚ್ಚರಿಕೆ ಕೊಡುತ್ತಿದ್ದೇನೆ. ಈ ನನ್ನದಾಯ್ತು, ನನ್ನ ಸೀಟ್ ಸೋಮಣ್ಣಗೆ ಕೊಡುತ್ತಾರೆ. ಮುಂದೆ ಬರುವವರನ್ನು ಉಪಯೋಗಿಸಿಕೊಳ್ಳಿ, ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಇವರ ಮೇಲೆ ಅವರನ್ನು ಅವರ ಮೇಲೆ ಇವರನ್ನು ಎತ್ತಿಕಟ್ಟಬೇಡಿ ಎಂದು ಸಮಾಜದ ಮುಖಂಡರಿಗೆ ಸಲಹೆ ನೀಡಿದ್ದಾರೆ.

ಮುಂದೆ ತುಂಬಾ ಜನ ಬರಬೇಕು. ನಾನು 8 ಸಾಲ ನಿಂತಿದ್ದೇನೆ, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತ್ತಿದ್ದೇನೆ. ನಮ್ಮವರೇ ನನ್ನ ಸೋಲಿಸಿದ್ದು. ನಾನು ಸೋತರೂ, ಗೆದ್ದರೂ ಒಂದೇ ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ ಎಂದು ಹೇಳಿದ್ದು, ಇದೀಗ ಆಡಿಯೋ ವೈರಲ್ ಆಗಿದೆ.

ವಿ ಸೋಮಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿ ಸೋಲುಕಂಡಿದ್ದಾರೆ.  ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರೆ, ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ ವಿರುದ್ಧ ಪರಭಾವಗೊಂಡು ಮುಖಭಂಗ ಅನುಭವಿಸಿದ್ದಾರೆ. ಇನ್ನು ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜ್ ನಗರ ಕ್ಷೇತ್ರ ಬಿಟ್ಟು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಹೇಳಿದ್ದೇ ಹೈಕಮಾಂಡ್ ಎನ್ನಲಾಗಿದ್ದು, ಇದೀಗ ಸೋಮಣ್ಣ ಎರಡು ಕ್ಷೇತ್ರದಲ್ಲಿ ಸೋಲು ಕಂಗೆಟ್ಟಿದ್ದಾರೆ. ಹೀಗಾಗಿ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ. ಲಿಂಗಾಯತ ಸಮುದಾಯ ಹೆಚ್ಚಿರುವ ತುಮಕೂರಿನಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ. ಇದರ ಮಧ್ಯೆ ಜಿಎಸ್ ಬಸವರಾಜು ಆಡಿಯೋ ವೈರಲ್​ ಆಗಿದ್ದು, ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್​ ಎನ್ನಲಾಗಿದೆ.

Published On - 9:41 am, Wed, 7 June 23