ಮೈತ್ರಿ ಪಕ್ಷಗಳಿಗೆ ಶಾಕ್ ಕೊಟ್ಟ ಎಸ್​ಟಿ ಸೋಮಶೇಖರ್, ಸ್ವಪಕ್ಷದ ವಿರುದ್ಧವೇ ಕೆಂಡಾಮಂಡಲ

ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಎಸ್‌ ಟಿ ಸೋಮಶೇಖರ್‌ ಅವರು ಇದೀಗ ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ವಿಧಾನ ಪರಿಷತ್​ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್​ ಹಾಗು ಬಿಜೆಪಿ ಮೈತ್ರಿ ಅಭ್ಯರ್ಥಿ ಬಿಟ್ಟು ಕಾಂಗ್ರೆಸ್​ ಪರ ಮತಯಾಚನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ ಕಾರಣವನ್ನೂ ಸಹ ಕೊಟ್ಟಿದ್ದಾರೆ.

ಮೈತ್ರಿ ಪಕ್ಷಗಳಿಗೆ ಶಾಕ್ ಕೊಟ್ಟ ಎಸ್​ಟಿ ಸೋಮಶೇಖರ್, ಸ್ವಪಕ್ಷದ ವಿರುದ್ಧವೇ ಕೆಂಡಾಮಂಡಲ
ಎಸ್​ಟಿ ಸೋಮಶೇಖರ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 13, 2024 | 5:45 PM

ಬೆಂಗಳೂರು, (ಫೆಬ್ರವರಿ 13): ವಿಧಾನ ಪರಿಷತ್​ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ (Bengaluru teachers constituency by poll) ಸಂಬಂಧ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ (st somashekar )ಅವರು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದಾರೆ. ಇದರೊಂದಿಗೆ ಬಿಜೆಪಿ ಹಾಗೂ ಜೆಡಿಎಸ್​​ ಮೈತ್ರಿ ಪಕ್ಷಗಳಿಗೆ ಶಾಕ್ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್​ಟಿ ಸೋಮಶೇಖರ್, ಈ ಹಿಂದೆ ಎ.ಪಿ.ರಂಗನಾಥ್(ಮೈತ್ರಿ ಅಭ್ಯರ್ಥಿ) ನಮ್ಮ ವಿರುದ್ಧವೇ ಪ್ರಚಾರ ಮಾಡಿದ್ದರು ಅಶ್ವತ್ಥ್ ಸೇರಿದಂತೆ ವಿಜಯೇಂದ್ರ, ಬಿಎಸ್​ವೈ ವಿರುದ್ಧವೇ ವಿರುದ್ಧ ಪ್ರಚಾರ ಮಾಡಿದ್ದರು. ನಮಗೆ ಸ್ವಾಭಿಮಾನ ಇಲ್ವಾ. ಅಂತಹವರ ಪರ ನಾವು ಮಾತನಾಡಬೇಕಾ ಎಂದು ಗುಡುಗಿದರು. ಅಲ್ಲದೇ ಇದೇ ವೇಳೆ ಎಪಿ ರಂಗನಾಥ್​ ಅವರು ತಮ್ಮ ವಿರುದ್ಧ ಪ್ರಚಾರ ಮಾಡಿದ್ದ ವಿಡಿಯೋವನ್ನು ಸಹ ಬಹಿರಂಗಪಡಿಸಿದರು.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​ಟಿ ಸೋಮಶೇಖರ್, ನನ್ನ ಕ್ಷೇತ್ರದಲ್ಲಿ ಎಲ್ಲಾ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆ. ಆದರೆ ನನಗೆ ಮಾಹಿತಿಯೇ ಇಲ್ಲ. ಅಪಪ್ರಚಾರ ಮಾಡಿದವರ ಬಗ್ಗೆ ನಾವು ಕ್ಯಾಂಪೇನ್ ಮಾಡಬೇಕಾ? ಪಾರ್ಟಿ ಕಟ್ಟಿಕೊಂಡು ಏನಾಗಬೇಕ್ರಿ. ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಎಂದು ಬಿಜೆಪಿಯವರು ಹೇಳಿಲ್ಲ ಎಂದು ಪರೋಕ್ಷವಾಗಿ ಸ್ವಪಕ್ಷದ ವಿರುದ್ಧವೇ ಗುಡುಗಿದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪ್ರಚಾರ!

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನ್ನ ಕಚೇರಿಯಲ್ಲಿ ಸಭೆ ಮಾಡುತ್ತಿದ್ದೆ. ಆಗ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬರಬಹುದಾ ಅಂದ್ರು,  ಬಾ ಅಂತ ಹೇಳಿದೆ. ಸಭೆಯಲ್ಲಿ ನನ್ನ ಪರ ಅಪ್ರೋಚ್ ಮಾಡಿ ಎಂದು ಪುಟ್ಟಣ್ಣ ಹೇಳಿದರು. ಆಗ ಸಭೆಗೆ ಬಂದಿದ್ದವರಿಗೆ ಮತ ಹಾಕಲು ಹೇಳಿದೆ. ಬಿಜೆಪಿಗರು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ನನ್ನನ್ನು ಕರೆದಿಲ್ಲ. ಪುಟ್ಟಣ್ಣ ಕೇಳಿದ್ರು, ಹಾಗಾಗಿ ಮತ ಹಾಕಲು ಕೇಳಿಕೊಂಡೆ ತಪ್ಪೇನು? ಪಕ್ಷ ವಿರೋಧಿ ಅಂತಾದ್ರೂ ಅಂದುಕೊಳ್ಳಲಿ, ಏನಾದ್ರೂ ಅಂದುಕೊಳ್ಳಲಿ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡರು.

ನಾನೂ ಬಿಜೆಪಿಯ ಎಂಎಲ್ಎ, ಎರಡು ಸಲ ನನ್ನ ಕ್ಷೇತ್ರಕ್ಕೆ ಎಪಿ ರಂಗನಾಥ ಬಂದಿದ್ದಾನೆ. ಕರ್ಟಿಸಿಗಾದರೂ ಅವರು ನನ್ನ ಕರೆಯಲಿಲ್ಲ. ನೀವು ಪಕ್ಷ ವಿರೋಧಿ ಚಟುವಟಿಕೆ ಅಂತಿರಾ, ನನಗೂ ಸ್ವಾಭಿಮಾನ ಇಲ್ವಾ? ಎಂದು ಪ್ರಶ್ನಿಸಿದರು.

ಸ್ವಪಕ್ಷದ ಕೆಂಗಣ್ಣಿಗೆ ಗುರಿಯಾದ ಎಸ್​​ಟಿ ಸೋಮಶೇಖರ್

ವಿಧಾನಸಭೆ ಫಲಿತಾಂಶ ಹೊರಬಂದ ಬಳಿಕ ಯಶವಂತಪುರ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್​​ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದುಕೊಂಡಿದ್ದಾರೆ. ಅಲ್ಲದೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತೆಲ್ಲಾ ಸುದ್ದಿಗಗಳು ಹರಿದಾಡುತ್ತಿವೆ. ಇದರ ಮಧ್ಯೆ ಇದೀಗ​  ಸೋಮಶೇಖರ್ ಅವರು ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ಮಾಡಿದ್ದಾರೆ. ಸೋಮವಾರದಂದು ತಮ್ಮ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಪುಟ್ಟಣ್ಣ ಪರವಾಗಿ ಮತಯಾಚಿಸಿದ್ದಾರೆ. ಇನ್ನೂ ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಗೆ ಗೈರಾಗಿದ್ದರು. ಈ ಎಲ್ಲಾ ಅಂಶಗಳಿಂದ ಶಾಸಕ ಎಸ್‌ಟಿ ಸೋಮಶೇಖರ್‌ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ