ಏಕಾದಶಿ ಉಪವಾಸ; ನಮ್ಮೊಳಗಿನ ಬೆಳಕು ಕಾಣಿಸುವ ಆಚರಣೆ

| Updated By: Lakshmi Hegde

Updated on: Dec 25, 2020 | 12:45 PM

ದೇಹದಿಂದ ಮನಸ್ಸನ್ನು, ಮನಸ್ಸಿನಿಂದ ದೇಹವನ್ನು ನಿಯಂತ್ರಿಸಬೇಕೆನ್ನುವುದು ಕ್ರಮ. ಹಸಿದ ತಕ್ಷಣ ತಿನ್ನುವುದು ದೇಹಕ್ಕೆ ಸಹಜವಾದರೆ, ಅನ್ನಿಸಿದ ತಕ್ಷಣ ಮಾತನಾಡುವುದು ಮನಸ್ಸಿಗೆ ಸಹಜ. ಈ ಎರಡನ್ನೂ ತಿಂಗಳಲ್ಲಿ ಎರಡು ದಿನವಾದರೂ ಮೀರಬೇಕು ಎನ್ನುವುದು ಏಕಾದಶಿಯ ಆಶಯ.

ಏಕಾದಶಿ ಉಪವಾಸ; ನಮ್ಮೊಳಗಿನ ಬೆಳಕು ಕಾಣಿಸುವ ಆಚರಣೆ
ತಿರುಮಲ ವೆಂಕಟೇಶ್ವರ ದೇಗುಲ
Follow us on

ದೇಹದಿಂದ ಮನಸ್ಸನ್ನು, ಮನಸ್ಸಿನಿಂದ ದೇಹವನ್ನು ನಿಯಂತ್ರಿಸಬೇಕೆನ್ನುವುದು ಕ್ರಮ. ಹಸಿದ ತಕ್ಷಣ ತಿನ್ನುವುದು ದೇಹಕ್ಕೆ ಸಹಜವಾದರೆ, ಅನ್ನಿಸಿದ ತಕ್ಷಣ ಮಾತನಾಡುವುದು ಮನಸ್ಸಿಗೆ ಸಹಜ. ಈ ಎರಡನ್ನೂ ತಿಂಗಳಲ್ಲಿ ಎರಡು ದಿನವಾದರೂ ಮೀರಬೇಕು ಎನ್ನುವುದು ಏಕಾದಶಿಯ ಆಶಯ.

ಪ್ರತಿ ತಿಂಗಳಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಏಕಾದಶಿ ಆಚರಣೆ ಮಾಡದಿದ್ದರೂ, ಕನಿಷ್ಠಪಕ್ಷ ಪುಷ್ಯಮಾಸ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯನ್ನಾದರೂ ತಪ್ಪದೇ ಆಚರಿಸಬೇಕು ಎನ್ನುವುದು ಹಲವರ ನಂಬಿಕೆ. ಇದಕ್ಕೆ ವೈಕುಂಠ ಏಕಾದಶಿ ಎಂಬ ಹಿರಿಮೆಯೂ ಇದೆ. ಅಂದು ವೈಕುಂಠದ ಉತ್ತರ ಬಾಗಿಲಿನ ಮೂಲಕ ಶ್ರೀಮನ್ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎನ್ನುವುದು ಪ್ರತೀತಿ.

ಇದೇ ಕಾರಣಕ್ಕೆ ವೈಕುಂಠ ಏಕಾದಶಿಯಂದು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ರೂಪಿಸುತ್ತಾರೆ. ಅಟ್ಟಣಿಗೆಯ ಮೇಲೆ ಕುಳಿತ ಉತ್ಸವ ಮೂರ್ತಿಯ ಕೆಳಗಿನಿಂದ ಭಕ್ತರು ಹಾದು ಬರುತ್ತಾರೆ. ಬೆಂಗಳೂರಿನ ಕೋಟೆ ವೆಂಕಟರಮಣಸ್ವಾಮಿ, ಮಾಲೂರಿನ ಬಂಗಾರತಿರುಪತಿ, ಮಾಗಡಿ ರಂಗನಾಥಸ್ವಾಮಿ, ಹಿರೇಮಗಳೂರಿನ ಕೋದಂಡರಾಮಸ್ವಾಮಿ ದೇವಾಲಯಗಳಲ್ಲಿ ಈ ಆಚರಣೆ ಪ್ರಸಿದ್ಧ. ಆದರೆ ಈ ವರ್ಷ ಮಾತ್ರ ಕೊರೊನಾ ನಿಯಮಗಳಿಂದಾಗಿ ವೈಕುಂಠ ಏಕಾದಶಿ ಕಳೆಗಟ್ಟಿಲ್ಲ. ಆದರೆ ಮನೆಮಟ್ಟಿನ ಆಚರಣೆಗಳಿಗೆ ಏನೂ ಭಂಗವಿಲ್ಲ.

ಏಕಾದಶಿಯ ಆಚರಣೆ ಎನ್ನುವುದು ಅದರ ಹಿಂದಿನ ದಿನ ಅಂದರೆ ದಶಮಿಯಿಂದಲೇ ಆರಂಭವಾಗುತ್ತೆ. ದಶಮಿಯ ರಾತ್ರಿ ಉಪವಾಸ, ಏಕಾದಶಿಯಂದು ಇಡೀ ದಿನ ಉಪವಾಸ ಮತ್ತು ಮೌನವ್ರತ, ರಾತ್ರಿಯಿಡೀ ಜಾಗರದಿಂದಿದ್ದು ಭಜನೆ-ಪಾರಾಯಣ, ಮಾರನೇದಿನ ಅಂದರೆ ದ್ವಾದಶಿಯಂದು ನಸುಕಿನಲ್ಲೇ ಊಟ ಮಾಡಿದರೆ ಮುಗಿಯಿತು. ಅಂದೂ ಮತ್ತೇನನ್ನೂ ತಿನ್ನುವಂತಿಲ್ಲ.

ಏಕಾದಶಿ ಆಚರಣೆಯ ಧಾರ್ಮಿಕ ಮಹತ್ವದ ಸಾಕಷ್ಟು ಜನರು ಮಾತನಾಡಿದ್ದಾರೆ. ಏಕಾದಶಿ ಉಪವಾಸ ಮಾಡುವುದರ ಹಿನ್ನೆಲೆಯಲ್ಲಿರುವ ಪುಣ್ಯ-ಪಾಪಗಳ ಪರಿಕಲ್ಪನೆಗಳ ಆಚೆಗೂ ಲೌಕಿಕವಾದ ಸಾಕಷ್ಟು ವಿಚಾರಗಳು ಈ ಸಂಪ್ರದಾಯದಲ್ಲಿ ಬೆರೆತುಕೊಂಡಿವೆ.

ಜ್ಞಾನವೇ ದೊಡ್ಡದು ಎಂದುಕೊಳ್ಳುವವರಿಗೆ ಏಕಾದಶಿ ಎನ್ನುವುದು ಊಟ-ತಿಂಡಿಯ ಚಿಂತೆ ಬಿಟ್ಟು ಓದು-ಮನನಕ್ಕೆ ಸಮಯ ವಿನಿಯೋಗಿಸುವ ದಿನ. ಪ್ರತಿದಿನ ತಿಂಡಿ-ಊಟದ ಚಕ್ರದಲ್ಲಿ ಸುತ್ತುವ ದಿನಚರಿಯಲ್ಲಿ ಸುಸ್ತಾದ ಹೊಟ್ಟೆಯೊಳಗಿನ ಜೀರ್ಣಾಂಗವ್ಯೂಹದ ಪುನರುಜ್ಜೀವನಕ್ಕೊಂದು ಅವಕಾಶ.

ಇಷ್ಟೆಲ್ಲದರ ಆಚೆಗೂ ಏಕಾದಶಿಯ ಆಶಯವಿದೆ. ದೇವರೇ ನಮ್ಮೊಳಗಿದ್ದಾನೆ ಎಂದಾದ ಮೇಲೆ ಅವನಿರುವ ವೈಕುಂಠವೂ, ಆ ವೈಕುಂಠ ಇರುವ ಕ್ಷೀರಸಾಗರವೂ, ಅದರಲ್ಲಿರುವ ಆದಿಶೇಷನೂ ಬೇರೆಲ್ಲೋ ಇರಲು ಸಾಧ್ಯವೇ? ಸತತ ಸಾಧನೆಯ ಮೂಲಕ ನಮ್ಮೊಳಗಿನ ಒಳಗಣ್ಣು ಚುರುಕಾದರೆ ಇವೆಲ್ಲವೂ ಇಲ್ಲಿಯೇ ಅಂದರೆ ನಮ್ಮಲ್ಲೇ ಕಾಣಿಸಿಕೊಳ್ಳಲು ಸಾಧ್ಯವಿದೆ.

ನನ್ನೊಳಗೆ, ನಿನ್ನೊಳಗೆ, ನಮ್ಮೊಳಗೆ, ನಿಮ್ಮೊಳಗೆ ಆವರಿಸಿಕೊಂಡಿರುವ ಆ ವಿಷ್ಣು ತತ್ವವನ್ನು ಕಾಣಿಸಬಲ್ಲ ಕಣ್ಣು ತೆರೆದುಕೊಳ್ಳಲು ಏಕಾದಶಿ ಉಪವಾಸವೆಂಬುದು ಒಂದು ಮೆಟ್ಟಿಲು. ಅದಕ್ಕೇ ಏಕಾದಶಿಗೆ ಅದರಲ್ಲೂ ವೈಕುಂಠ ಏಕಾದಶಿಯ ಆಚರಣೆ, ಉಪವಾಸಕ್ಕೆ ಅಷ್ಟು ಪ್ರಾಮುಖ್ಯತೆ.

ಒಂದೇ ದಿನ ಎರಡೆರಡು ಹಬ್ಬ: ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ, ಕ್ರೈಸ್ತ ಬಾಂಧವರಿಂದ ಸಿಂಪಲ್ ಕ್ರಿಸ್ ಮಸ್ ಆಚರಣೆ..