ಬೀದರ್: ಸಾವಿರ ವರ್ಷ ಪುರಾತನ ದೇವಸ್ಥಾನ ಅಧಿಕಾರಿಗಳ ನಿರ್ಲಕ್ಷದಿಂದ ಅನಾಥವಾಗಿದೆ

ಪ್ರಭು ಶ್ರೀರಾಮನೇ ಇಲ್ಲಿ ಲಿಂಗ ಸ್ಥಾಪನೆ ಮಾಡಿರುವ ಬಗ್ಗೆ ಹತ್ತಾರು ಸಂಶೋಧಕರು ಹೇಳಿದ್ದು ಇದರ ಬಗ್ಗೆ ಕೆಲವು ಕುರುಹುಗಳು ಇಲ್ಲಿ ಕೆತ್ತಿರುವ ಶಿಲಾಶಾಸನಗಳಿಂದಲೂ ತಿಳಿದುಬರುತ್ತದೆ. ಬನ್ನಳ್ಳಿ ಗ್ರಾಮದ ಹಣಮಂತರಾವ ಪಾಟೀಲ್ ಎಂಬುವರ ತೋಟದಲ್ಲಿ ಈ ರಾಮಲಿಂಗ ಮಂದಿರವಿದ್ದು ದೇವಸ್ಥಾನ ಬಹುತೇಕ ಬಿದ್ದುಹೋಗಿದ್ದು, ಅವಸಾನದ ಅಂಚಿನಲ್ಲಿದೆ.

ಬನಳ್ಳಿ ಗ್ರಾಮದ ಪುರಾತನವಾದ ಶಿವನ ರಾಮಲಿಂಗ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಥವಾಗಿದೆ. ಒಂಭತ್ತು ಶತಮಾನಗಳ ಇತಿಹಾಸವಿರುವ ಪುರಾತನ ದೇವಾಲಯ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದರೂ ಅದರ ಜಿರ್ಣೋದ್ದಾರ ಕಾರ್ಯ ಮಾತ್ರ ಇಲ್ಲಿಯವರೆಗೂ ಆಗಿಲ್ಲ.

ಕಾಯಕಲ್ಪಕ್ಕೆ ಕಾದಿದೆ ಪ್ರಾಚೀನ ರಾಮಮಂದಿರ… ಶ್ರೀರಾಮಚಂದ್ರ ಅಯೋಧ್ಯೆಗೆ ಹೋಗುತ್ತಿದ್ದಾಗ ಇಲ್ಲಿ ಲಿಂಗ ‌ಸ್ಥಾಪಿಸಿದ್ದ ಎಂಬ ಪ್ರತೀತಿ… ಒಂದು ಸಾವಿರ ವರ್ಷದಷ್ಟು ಪುರಾತನ ದೇವಸ್ಥಾನ ಇದಾಗಿದ್ದು ಶಿಲ್ಪಕಲೆಯಿಂದಲೇ ಗಮನ ಸೆಳೆಯುತ್ತದೆ… ಬೀದರ್ ಜಿಲ್ಲೆಯ ಚಿತಗುಪ್ಪಾ ತಾಲೂಕಿನ ಬನ್ನಳ್ಳಿ ಗ್ರಾಮದಲ್ಲಿ ಈ ಪುರಾತನ ಕಾಲದ ಶ್ರೀ ರಾಮಲಿಂಗ ಮಂದಿರ ಇದೆ.

ಪ್ರಭು ಶ್ರೀರಾಮನೇ ಈ ಲಿಂಗವನ್ನು ಸ್ಥಾಪನೆ ಮಾಡಿರುವ ಬಗ್ಗೆ ಹತ್ತಾರು ಸಂಶೋಧಕರು, ಈ ದೇವಸ್ಥಾನ ನೋಡಲು ಬಂದವರು ಹೇಳುತ್ತಿದ್ದು ಇದರ ಬಗ್ಗೆ ಕೆಲವು ಕುರುಹುಗಳು ಇಲ್ಲಿ ಬರೆದಿರುವ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಬನ್ನಳ್ಳಿ ಗ್ರಾಮದ ಹಣಮಂತರಾವ ಪಾಟೀಲ್ ಎಂಬುವರ ತೋಟದಲ್ಲಿ ಈ ರಾಮಲಿಂಗ ಮಂದಿರವಿದ್ದು ಶೇಕಡಾ 50 ರಷ್ಟು ದೇವಸ್ಥಾನ ಬಿದ್ದು ಹೋಗಿದ್ದು, ಅವಸಾನದ ಅಂಚಿನಲ್ಲಿದೆ.

ಶತಮಾನದಿಂದಲೂ ಇಂದಿಗೂ ಇಲ್ಲಿ ಸಂಪ್ರದಾಯದಂತೆ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಯಾವ ಕಾಲದಲ್ಲಿ ಈ ಮಂದಿರ ನಿರ್ಮಾಣವಾಗಿದೆ ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ ಲಂಕಾದಿಂದ ಅಯೋಧ್ಯೆಗೆ ಹೋಗುವ ವೇಳೆ ಶ್ರೀರಾಮ ಈ ಲಿಂಗ ಸ್ಥಾಪನೆ ಮಾಡಿದ್ದ ಎಂದು ಹೇಳಲಾಗುತ್ತದೆ. ಈ ದೇವಾಲಯ ಹಲವಾರು ವಿಶೇಷತೆಯನ್ನು ಹೊಂದಿದೆ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿಯೂ ಸುಂದರವಾದ ಕೆತ್ತನೆಯನ್ನ ಮಾಡಲಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗ ಮೂರ್ತಿ ಇದ್ದು ಮುಂದುಗಡೆ ನಂದಿ ಬಸವೇಶ್ವರನಿದ್ದಾನೆ.

ಈ ದೇವಸ್ಥಾನದ ಹೊರಗಡೆ 9 ಬೃಹದಾಕಾರದ ಕಲ್ಲಿನ ಕಂಬಗಳಿದ್ದು ಅವುಗಳ ಮೇಲೆ ಸುಂದರ ಶಿಲ್ಪಕಲೆಯ ಕೆತ್ತನೆಯನ್ನ ಮಾಡಲಾಗಿದೆ. ಹಿಂದಿನ ಕಾಲದಲ್ಲಿ ಈ ಕಲ್ಲಿನ ಕಂಬಗಳಿಂದ ಇಂಪಾದ ಸಂಗೀತ ಕೆಳುತ್ತಿತ್ತು ಎಂದು ಪೂರ್ವಜರು ಹೇಳುತ್ತಾರೆ. ಯುಗಾದಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಇಲ್ಲಿನ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ.

ಇಂತಹ ಅಪರೂಪದ ದೇವಾಲಯ ಇಂದು ಪುಂಡಪೋಕರಿಗಳ, ಶಾಲಾ ಮಕ್ಕಳು ಆಟವಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಇದು ಖೇದಕರ ವಿಚಾರವಾಗಿದೆ. ಇಲ್ಲಿನ ಕಂಬಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು ದೇವಾಲಯದ ಮೇಲ್ಚಾವಣಿಯು ಕೂಡಾ ಹಾಳಾಗಿದೆ. ಗೋಡೆಯ ಮೇಲೆ ಕೆತ್ತಲಾದ ಸುಂದರ ಕಲಾಕೃತಿಗಳು ಕೂಡಾ ಹಾಳಾಗಿವೆ.

Also Read: ಬೀದರ್ – ಶ್ರೀರಾಮ ಸ್ನಾನ ಮಾಡಿ ಪಾಪ ನಾಶ ಮಾಡಿಕೊಂಡ 125 ಎಕರೆಯ ಕೆರೆ ದುಃಸ್ಥಿತಿಯಲ್ಲಿದೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ

ಇಂತಹ ಅಪರೂಪದ ದೇವಸ್ಥಾನವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಂದಿರದ ಜೀರ್ಣೋದ್ದಾರ ಮಾಡಬೇಕೆಂಬ ಹಿನ್ನೆಲೆಯಲ್ಲಿ ಬೆಲ್ದಾಳೆ ಅವರು ಪುರಾತತ್ವ ಇಲಾಖೆ ಧಾರವಾಡ ಹಾಗೂ ಬೀದ‌ರ್ ಜಿಲ್ಲೆಯ ಅಧಿಕಾರಿಗಳಿಗೆ ಆಹ್ವಾನಿಸಿ ಪರಿಶೀಲನೆ ಮಾಡಿಸಿದ್ದಾರೆ.

ಹಂಪಿಯ ಪುರಾತತ್ವ ಇಲಾಖೆಯ ಅಧೀಕ್ಷಕ ಡಾ. ನಿಹೆಲ್ ದಾಸ್, ಅಧೀಕ್ಷಕ ಅಭಿಯಂತರ ಬರಣಿಧರನ್, ಬೀದರ್ ಉಪವಲಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ದ ದೇಸಾಯಿ, ಕಿರಣಬಾಬು ತಂಡ ಮಂದಿರದಲ್ಲಿನ ಲಿಂಗ, ವಿವಿಧ ಮೂರ್ತಿ, ಶಿಲೆಗಳು, ಕಲ್ಲಿನಲ್ಲಿ ಕೆತ್ತಲಾಗಿರುವ ಲಿಪಿ ಸೇರಿ ಸಮಗ್ರ ಪರಿಶೀಲನೆ ಹಾಗೂ ಮಂದಿರದ ಸಮೀಕ್ಷೆ ಮಾಡಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ. ಇನ್ನು ನಶಿಸಿ ಹೋಗುತ್ತಿರುವ ಈ ದೇವಸ್ಥಾನವನ್ನ ಜೀರ್ಣೋದ್ದಾರ ಮಾಡಿ ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

ಈ ಪುರಾತನ ದೇವಾಲಯವನ್ನೊಮ್ಮೆ ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಪುರಾತತ್ವ ಇಲಾಖೆಯ ಬೇಜವ್ದಾರಿತನ, ಗ್ರಾಮಸ್ಥರ ನಿರ್ಲಕ್ಷದಿಂದ ಕನ್ನಡ ನಾಡಿತ ಗಥ ಇತಿಹಾಸವನ್ನ ಸಾರುವ ದೇವಾಲಯ ಇಂದು ತೆರೆಯ ಮರೆಯಲ್ಲಿ ಸರಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿವೆ. ಇತಿಹಾಸ ಸಾರುವ ದೇವಾಲಯವನ್ನು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ದೇಗುಲದ ಜಿರ್ಣೋದ್ದಾರಕ್ಕೆ ಸೂಕ್ತ ಕ್ರಮ ಕೈಗೊಂಡು ಅದರ ಸಂರಕ್ಷಣೆಯತ್ತ ಗಮನಹರಿಸುವುದು ಅತ್ಯಗತ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us