AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಕಂಪ, ಜ್ವಾಲಾಮುಖಿ, ರೈಲು ದುರಂತ, ರಾಜಕೀಯ ನಾಯಕರ ತಲೆದಂಡದ ಬಗ್ಗೆ ಕರ್ನಾಟಕದ ಖ್ಯಾತ ಜ್ಯೋತಿಷಿ ಭವಿಷ್ಯ

ಭೂಕಂಪನ, ಜ್ವಾಲಾಮುಖಿ, ಸುನಾಮಿ, ದೊಡ್ಡ ದೊಡ್ಡ ಕಟ್ಟಡ ದುರಂತಗಳು, ರೈಲು ಅಪಘಾತಗಳು, ಇದರ ಜತೆಗೆ ಆಡಬಾರದ ಮಾತುಗಳನ್ನಾಡಿ ಅಧಿಕಾರವನ್ನು ಕಳೆದುಕೊಳ್ಳುವ ಮುಖಂಡರು, ಇವೆಲ್ಲ ನೋಡಲಿಕ್ಕೆ ಸಿಗುತ್ತದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ಭೂಕಂಪ, ಜ್ವಾಲಾಮುಖಿ, ರೈಲು ದುರಂತ, ರಾಜಕೀಯ ನಾಯಕರ ತಲೆದಂಡದ ಬಗ್ಗೆ ಕರ್ನಾಟಕದ ಖ್ಯಾತ ಜ್ಯೋತಿಷಿ ಭವಿಷ್ಯ
Famous astrologer Prakash Ammannaya
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 12, 2022 | 9:41 AM

Share

ಇನ್ನು ಒಂದು ತಿಂಗಳ ಕಾಲ ಇಡೀ ಭೂಮಿ ಮೇಲೆ ನೀವು ಪ್ರಾಕೃತಿಕ ವಿಕೋಪವನ್ನು ನೋಡುತ್ತೀರಿ. ಮುಖ್ಯವಾಗಿ ಭೂಕಂಪನ, ಜ್ವಾಲಾಮುಖಿ, ಸುನಾಮಿ, ದೊಡ್ಡ ದೊಡ್ಡ ಕಟ್ಟಡ ದುರಂತಗಳು, ರೈಲು ಅಪಘಾತಗಳು, ಇದರ ಜತೆಗೆ ಆಡಬಾರದ ಮಾತುಗಳನ್ನಾಡಿ ಅಧಿಕಾರವನ್ನು ಕಳೆದುಕೊಳ್ಳುವ ಮುಖಂಡರು, ಇವೆಲ್ಲ ನೋಡಲಿಕ್ಕೆ ಸಿಗುತ್ತದೆ, ಅಂತಲೇ ಮಾತು ಶುರು ಮಾಡಿದರು ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ. ಇತ್ತೀಚಿನ ಕೆಲವು ಬೆಳವಣಿಗೆಗಳ ಬಗ್ಗೆ ಅವರಿಗೆ ಅಸಹನೆ ಇತ್ತು. ಚಂದ್ರ ಗ್ರಹಣದ ಸಮಯದಲ್ಲಿ ಭೂಕಂಪನ ಆಗುವ ಬಗ್ಗೆ ತಾವು ಹೇಳಿದ್ದಕ್ಕೆ ಅಂಥದ್ದೆಲ್ಲ ಸಹಜ ಹಾಗೂ ಈ ರೀತಿ ಹೇಳುವುದು ಅಪರಾಧ ಎಂಬಂತೆ ಯಾರ್ಯಾರೋ ಮಾತನಾಡಿದ್ದರ ಬಗ್ಗೆ ಬೇಸರದಿಂದಲೇ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಹೇಳಿದರು. ಹೀಗೆ ಇಷ್ಟು ಸಮಯ ಇರುತ್ತದೆ, ಹೀಗೆಲ್ಲ ದುರಂತ ಆಗುತ್ತದೆ ಅಂತ ಹೇಳುವುದಕ್ಕೆ ಜ್ಯೋತಿಷ ರೀತಿಯಾಗಿ ಅವರು ಹೇಳಿದ ಗ್ರಹ ಸ್ಥಿತಿಯ ವಿವರಣೆ ಹೀಗಿತ್ತು.

ಮಕರ ರಾಶಿಯಲ್ಲಿ ಶನಿ ಗ್ರಹ ಇದೆ. ಆ ಗ್ರಹದ ಮೇಲೆ ಮಿಥುನ ರಾಶಿಯಲ್ಲಿ ಇರುವ ಕುಜ ಗ್ರಹದ ಅಷ್ಟಮ (ಎಂಟನೇ ಮನೆ) ದೃಷ್ಟಿ ಇದೆ. ಇನ್ನು ತುಲಾ ರಾಶಿಯಲ್ಲಿ ಇರುವ ನೀಚ ಸ್ಥಿತಿಯ ರವಿಯಿಂದ ಈ ಎರಡೂ ಗ್ರಹಗಳ ಅಂತರ ಎಂಬತ್ತು ಡಿಗ್ರಿಗಿಂತ ಸ್ವಲ್ಪ ಹೆಚ್ಚಿರಬಹುದಷ್ಟೇ. ಆದ್ದರಿಂದ ಈ ಮೇಲೆ ಹೇಳಿದ ಅನಾಹುತಗಳ ಪ್ರಮಾಣ ತುಂಬ ದೊಡ್ಡ ಮಟ್ಟದಲ್ಲಿ ಆಗಲಿಕ್ಕಿಲ್ಲ. ಆದರೆ ಕರ್ಕಾಟಕ ರಾಶಿಗೆ ಚಂದ್ರ ಪ್ರವೇಶಿಸಿದಾಗ ಸ್ವಲ್ಪ ಮಟ್ಟಿಗೆ ನಿರಾಳವಾಗಿ ಇರಬಹುದು. ಇನ್ನು ಕೆಲವು ನಿರ್ದಿಷ್ಟ ಡಿಗ್ರಿಗೆ ಕುಜ, ರವಿ ಹಾಗೂ ಶನಿಯು ಚಲಿಸಿದಾಗ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದರು.

ಇದನ್ನು ಓದಿ: 108.. ಈ ಸಂಖ್ಯೆಯಲ್ಲೇನಿದೆ ಪವಾಡ, ವಿಜ್ಞಾನಕ್ಕೆ ಸವಾಲಾಗುತ್ತಿದೆ ಈ ನಂಬರ್

ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಹಂತದಲ್ಲಿ ಇರುವಂಥದ್ದೇ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಕಟ್ಟಡ ನಿರ್ಮಾಣ ನಿರತ ಕಾರ್ಮಿಕರು ಅಪಘಾತಕ್ಕೆ ಈಡಾಗಬಹುದು. ಅದು ದೊಡ್ಡ ಅನಾಹುತ ಆಗುವ ಅವಕಾಶಗಳಿವೆ. ನನಗೆ ನಿಮ್ಮ ಜತೆಗೆ ಮಾತನಾಡುವ ಸಂದರ್ಭದಲ್ಲಿ ಬಹಳ ಖೇದ ಆಗುತ್ತಿರುವ ಸಂಗತಿ ಏನೆಂದರೆ, ಲೆಕ್ಕಾಚಾರ ಸಹಿತ ಇಂಥದ್ದೇ ಸ್ಥಳಗಳಲ್ಲಿ ಸಂಭವಿಸುತ್ತದೆ ಎಂದು ಮುಂದಿಡಬಹುದು. ಆದರೆ ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಠ ಪಕ್ಷ ಯಾರಾದರೂ ಎಚ್ಚರಿಕೆ ತೆಗೆದುಕೊಳ್ಳುವಂಥವರು ಇದ್ದಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಎಂಬುದು ನನ್ನ ಆಶಯ ಅಷ್ಟೇ ಎಂದು ಹೇಳಿದರು.

ಈಗಿನ ಬೆಳವಣಿಗೆ ಮೇಲೆ ಚಂದ್ರ ಗ್ರಹಣ ಹಾಗೂ ಅದಕ್ಕೂ ಮುಂಚೆ ನಡೆದ ಸೂರ್ಯ ಗ್ರಹಣ ಎರಡರ ಪ್ರಭಾವ ಇದ್ದೇ ಇದೆ. ಈಗಂತೂ ರವಿಗೆ ಸಮೀಪದಲ್ಲಿ ಹಾಗೂ ಕುಜನ ದೃಷ್ಟಿ ಶನಿಯ ಮೇಲಿರುವುದು ಹೆಚ್ಚೆಚ್ಚು ಎಚ್ಚರಿಕೆಯಿಂದ ಇರಬೇಕು ಎಂಬುದನ್ನೇ ಸಾರಿ ಸಾರಿ ಹೇಳುತ್ತಿದೆ ಎಂದರು. ಹಾಗಿದ್ದರೆ ಈಗಿನ ಈ ಅನಾಹುತದ ಮುನ್ಸೂಚನೆಗೆ ಪರಿಹಾರ ಏನು, ಅದರಿಂದ ರಕ್ಷಣೆ ಪಡೆದುಕೊಳ್ಳುವ ಬಗೆ ಹೇಗೆ ಎಂಬ ಪ್ರಶ್ನೆ ಮುಂದಿಡಲಾಯಿತು.

ಭುವನೇಶ್ವರಿ ದೇವಿಯ ಆರಾಧನೆ, ಭುವನೇಶ್ವರಿಯ ಹೋಮ ಇತ್ಯಾದಿಗಳನ್ನು ಮಾಡುವುದು ಶ್ರೇಯಸ್ಸು. ಆ ಭಗವಂತನ ಧ್ಯಾನ, ಧರ್ಮ ಮಾರ್ಗದಲ್ಲಿ ನಡೆಯುವುದೇ ಅದಕ್ಕೆ ಪ್ರಮುಖ ರಕ್ಷಣೆ. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಇನ್ನೊಮ್ಮೆ ಒತ್ತಿ ಹೇಳುತ್ತಾ ಮಾತು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.

Published On - 9:35 am, Sat, 12 November 22