Navaratri 2023: ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು? ಈ ಸಮಯದಲ್ಲಿ ಯಾಕೆ ಶಾರದೆಯನ್ನು ಪೂಜಿಸಬೇಕು? ಇಲ್ಲಿದೆ ಮಾಹಿತಿ

ಸರಸ್ವತಿಯನ್ನು ಪೂಜಿಸುವುದರಿಂದ ಏಕಾಗ್ರತೆ, ಜ್ಞಾನ, ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ. ಅದರಲ್ಲಿಯೂ ನವರಾತ್ರಿಯಲ್ಲಿ ಶಾರದೆಯ ಪೂಜೆ ಮಾಡುವ ಮೂಲಕ ಚಿಕ್ಕ ಮಕ್ಕಳಿಗೆ ವಿದ್ಯಾರಂಭ ಮಾಡುತ್ತಾರೆ. ಕರ್ನಾಟಕದ ಹಲವು ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಶಾರದಾ ಪೂಜೆ ಮಾಡಲಾಗುತ್ತದೆ. ಹಾಗಾದರೆ ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು? ಇಲ್ಲಿದೆ ಮಾಹಿತಿ.

Navaratri 2023: ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು? ಈ ಸಮಯದಲ್ಲಿ ಯಾಕೆ ಶಾರದೆಯನ್ನು ಪೂಜಿಸಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Oct 20, 2023 | 5:52 PM

ಸರಸ್ವತಿಯನ್ನು ಹಿಂದೂ ಧರ್ಮದಲ್ಲಿ ಜ್ಞಾನ ದೇವತೆ, ವಿದ್ಯಾ ದೇವತೆಯೆಂದು ಕರೆಯಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಏಕಾಗ್ರತೆ, ಜ್ಞಾನ, ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ. ಅದರಲ್ಲಿಯೂ ನವರಾತ್ರಿಯಲ್ಲಿ ಶಾರದೆಯ ಪೂಜೆ ಮಾಡುವ ಮೂಲಕ ಚಿಕ್ಕ ಮಕ್ಕಳಿಗೆ ವಿದ್ಯಾರಂಭ ಮಾಡುತ್ತಾರೆ. ಕರ್ನಾಟಕದ ಹಲವು ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಶಾರದಾ ಪೂಜೆ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಮೂಲ ನಕ್ಷತ್ರದ ದಿನ ಮನೆಯಲ್ಲಿ ಶುದ್ಧ ಮಣೆಯ ಮೇಲೆ ಪುಸ್ತಕಗಳನ್ನು ಜೋಡಿಸಿ ಪೂಜೆ ಮಾಡಲಾಗುತ್ತದೆ. ಬಳಿಕ ದಶಮಿಯಂದು ಆ ಪುಸ್ತಕಗಳನ್ನು ಓದಿ, ಶಾರದಾ ವಿಸರ್ಜನೆ ನಡೆಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ವಿಜಯ ದಶಮಿಯನ್ನು ವಿದ್ಯಾ ದಶಮಿ ಎಂದು ಆಚರಣೆ ಮಾಡಲಾಗುತ್ತದೆ. ಅಂದು ಬೆಳಿಗ್ಗೆ ಶಾರದೆಯನ್ನು ಪುಸ್ತಕ ಇಡುವ ಮೂಲಕ ಪ್ರತಿಷ್ಠಾಪನೆ ಮಾಡಿ ಅದೇ ದಿನ ಸಂಜೆ ವಿಸರ್ಜನೆ ಮಾಡಲಾಗುತ್ತದೆ. ಉದ್ದೇಶ ಒಂದೇ, ಆದರೆ ಆಚರಣೆಗಳು ಬೇರೆ ಬೇರೆ. ಇನ್ನು ಕೆಲವು ದೇವಿ ದೇವಸ್ಥಾನಗಳಲ್ಲಿ ವಿಜಯದಶಮಿಯಂದು ಅಕ್ಷರಾಭ್ಯಾಸ ಮಾಡುತ್ತಾರೆ.

ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು?

ಶಿಕ್ಷಣದ ಅಧಿದೇವತೆ ಶಾರದೆಯನ್ನು ಪ್ರತಿಷ್ಠಾಪಿಸಿ, ಶಾರದೆಯನ್ನು ಮನದಲ್ಲಿ ನೆನೆದು ಬಾಳೆ ಎಲೆಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ ಇಟ್ಟು ಜೊತೆಗೆ ಅಕ್ಕಿ ಇಟ್ಟು ಅದರ ಮೇಲೆ ಅರಿಶಿಣ ಕೊಂಬಿನಲ್ಲಿ ಓಂಕಾರ ಬರೆಯುವ ಮೂಲಕ ವಿದ್ಯಾರಂಭ ಮಾಡಲಾಗುತ್ತದೆ ಬಳಿಕ ಅ ಆ ಇ ಈ ಅಕ್ಷರಗಳನ್ನು ಬರೆಸಲಾಗುತ್ತದೆ. ಇನ್ನು ವೇದ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಅಭ್ಯಾಸಗಳನ್ನು ಆರಂಭಿಸುವವರು ಶಾರದೆಯ ಮುಂದೆ ವಿದ್ಯಾರಂಭದ ವಿಧಿಯನ್ನು ಮಾಡುತ್ತಾರೆ.

ಏಕೆ ಮಾಡಬೇಕು?

ಇದೊಂದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ. ಇದನ್ನು ಇದೇ ದಿನ ಮಾಡಬೇಕು ಎನ್ನುವ ಕಟ್ಟುಪಾಡುಗಳಿಲ್ಲ. ಆದರೆ ಈ ದಿನ ತುಂಬಾ ಶ್ರೇಷ್ಠವಾಗಿರುವುದರಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ದಿನ ಶುಭಾರಂಭ ಮಾಡುತ್ತಾರೆ. ಅದರಲ್ಲಿಯೂ ಶುಭಕಾರ್ಯಗಳನ್ನು ಮಾಡುವಾಗ ದೇವರ ಮುಂದೆ ಪ್ರಾರ್ಥಿಸುವ ಕ್ರಮ ಇದೆ. ಸಣ್ಣ ಮಕ್ಕಳಿಗೆ ಅನ್ನ ಉಣಿಸುವ ಮುನ್ನ ದೇವರ ಮುಂದೆ ಅನ್ನಪ್ರಾಶನ ಸೇವೆ ಹೇಗೇ ಮಾಡಲಾಗುತ್ತದೆಯೋ ಅದೇ ರೀತಿ ವಿದ್ಯಾಭ್ಯಾಸ ಆರಂಭಿಸುವಾಗ ದೇವರ ಮುಂದೆ ಅಕ್ಷರಾಭ್ಯಾಸ ಮಾಡಲಾಗುತ್ತದೆ. ಈ ಮೂಲಕ ಸಣ್ಣಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಲಿ ಎಂದು ಹಲವು ಪೋಷಕರು ಬೇಡಿಕೊಳ್ಳುತ್ತಾರೆ. ಜ್ಞಾನಸಂಪಾದನೆಯ ಆರಂಭಿಕ ಪ್ರಕ್ರಿಯೆಯ ಮೂರ್ತ ಸ್ವರೂಪವೇ ವಿದ್ಯಾರಂಭ ಹಾಗಾಗಿ ಇದಕ್ಕಿಂತ ಉತ್ತಮ ದಿನ ನೀವು ಹುಡುಕಿದರೂ ಸಿಗುವುದಿಲ್ಲ. ಅದಕ್ಕಾಗಿಯೇ ಈ ದಿನವನ್ನು ಪ್ರಶಸ್ತ ದಿನ ಎಂದು ಹಿರಿಯರು ಹೇಳಿದ್ದಾರೆ.

ಇದನ್ನೂ ಓದಿ: ನವರಾತ್ರಿಯ ಆರನೇ ದಿನ ದೇವಿಗೆ ಜೇನುತುಪ್ಪದಲ್ಲಿ ತಯಾರಿಸಿದ ಬಾದಾಮಿ ಹಲ್ವಾವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ

ಶಾರದೆಯನ್ನು ಒಲಿಸಿಕೊಳ್ಳಲು ಮಕ್ಕಳು ಯಾವ ಮಂತ್ರವನ್ನು ಪಠಿಸಬೇಕು?

– ಓಂ ಸರಸ್ವತ್ಯೈ ವಿದ್ಮಹೇ ಬ್ರಹ್ಮಪುತ್ರಾಯೈ ಧೀಮಹಿ
ತನ್ನೋ ದೇವಿ ಪ್ರಚೋದಯಾತ್‌

– ಓಂ ಐಂ ಸರಸ್ವತ್ಯೈ ನಮಃ

-ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ

-ಓಂ ಅರಂ ಮುಖ ಕಮಲ ವಾಸಿನಿ ಪಾಪಾತ್ಮಾಂ ಕ್ಷಯಂ ಕರಾರೀ
ವಾಡ ವಾಡ ವಾಗ್ವಾದಿನೀ ಸರಸ್ವತಿ ಐಂಗ್‌ ಹ್ರೀಂಗ್‌ ನಮಃ ಸ್ವಾಹಾ

– ವಿಧ್ಯಾಃ ಸಮಸ್ತಾಸ್ತವ ದೇವಿ ಭೇದಾಃ ಸ್ತ್ರೀಯಃ ಸಮಸ್ತಾಃ ಸಕಲ ಜಗಸ್ತು
ತ್ವಯೈಕಯಾ ಪುರಿತ್ಮಂಯೈತತ್ ಕಾ ತೇ ಸ್ತುತಿಃ ಸ್ತವ್ಯಪರಾ ಪರೋಕ್ತಿಃ

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Fri, 20 October 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us