AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಇದರಿಂದ ಸಿಗುವ ಫಲಾಫಲಗಳೇನು?

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬುದು ನಮಗೆ ತಿಳಿದಿರಬೇಕಾಗುತ್ತದೆ. ಏಕೆಂದರೆ ಪ್ರದಕ್ಷಿಣೆ ಅಥವಾ ಪರಿಕ್ರಮದ ಉಲ್ಲೇಖವು ಸನಾತನ ಧರ್ಮದ ಪ್ರಮುಖ ವೈದಿಕ ಪಠ್ಯವಾದ ಋಗ್ವೇದದಲ್ಲಿ ಕಂಡು ಬರುತ್ತದೆ. ಹಿಂದೂ ಧರ್ಮದಲ್ಲಿ ಪರಿಕ್ರಮವು, ಆರಾಧನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಪ್ರದಕ್ಷಿಣೆ ಯಲ್ಲಿರುವ ದಕ್ಷಿಣವು ಬಲ ಭಾಗವನ್ನು ಸೂಚಿಸುತ್ತದೆ. ಹಾಗಾಗಿ ನಾವು ನಮ್ಮ ಎಡಭಾಗದಿಂದ ಬಲಭಾಗಕ್ಕೆ ಸುತ್ತಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಇದರಿಂದ ಸಿಗುವ ಫಲಾಫಲಗಳೇನು?
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 24, 2024 | 10:32 AM

Share

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಏಕೆ ಗೊತ್ತಾ? ದೇವರು ತೋರಿದ ಮಾರ್ಗದಲ್ಲಿ ನಾವು ಕೂಡ ನಡೆಯುತ್ತಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಅದರಲ್ಲಿಯೂ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬುದು ನಮಗೆ ತಿಳಿದಿರಬೇಕಾಗುತ್ತದೆ. ಏಕೆಂದರೆ ಪ್ರದಕ್ಷಿಣೆ ಅಥವಾ ಪರಿಕ್ರಮದ ಉಲ್ಲೇಖವು ಸನಾತನ ಧರ್ಮದ ಪ್ರಮುಖ ವೈದಿಕ ಪಠ್ಯವಾದ ಋಗ್ವೇದದಲ್ಲಿ ಕಂಡು ಬರುತ್ತದೆ. ಹಿಂದೂ ಧರ್ಮದಲ್ಲಿ ಪರಿಕ್ರಮವು, ಆರಾಧನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಪ್ರದಕ್ಷಿಣೆ ಯಲ್ಲಿರುವ ದಕ್ಷಿಣವು ಬಲ ಭಾಗವನ್ನು ಸೂಚಿಸುತ್ತದೆ. ಹಾಗಾಗಿ ನಾವು ನಮ್ಮ ಎಡಭಾಗದಿಂದ ಬಲಭಾಗಕ್ಕೆ ಸುತ್ತಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಯಾಕಾಗಿ ಪ್ರದಕ್ಷಿಣೆ ಹಾಕಬೇಕು?

ಈ ಪ್ರದಕ್ಷಿಣೆ ಹಾಕುವ ಮುಖ್ಯ ಉದ್ದೇಶ ನಮ್ಮ ಅಹಂಕಾರವನ್ನು ಹೋಗಲಾಡಿಸುವುದಾಗಿದೆ. ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ದೇವಾಲಯಗಳಿಗೆ ಭೇಟಿ ನೀಡಿದಾಗ ಅವನು ದೇವರ ಭಕ್ತ ಮತ್ತು ಅವನ ಬಳಿ ಇರುವ ಎಲ್ಲವೂ ದೇವರದ್ದು ಹಾಗಾಗಿ ಎಲ್ಲಾ ರೀತಿಯಲ್ಲಿಯೂ ಶರಣಾಗತನಾಗಿ ತನ್ನನ್ನು ರಕ್ಷಿಸು ಎಂಬುದು ಇದರ ಉದ್ದೇಶವಾಗಿದೆ. ದೇವರನ್ನು ಸುತ್ತುವರಿಯುತ್ತಾ ಒಬ್ಬ ವ್ಯಕ್ತಿ ತನ್ನೊಳಗಿನ “ನಾನು”, “ನನ್ನದು” ಎಂಬ ಭಾವನೆಯನ್ನು ತೊಲಗಿಸಿ, ಭಕ್ತಿಯೇ ಸರ್ವಸ್ವ ಎಂದು ಅರಿತುಕೊಳ್ಳುವುದಾಗಿದೆ. ಪ್ರದಕ್ಷಿಣೆ ಒಂದು ರೀತಿಯ ಪ್ರಾಯಶ್ಚಿತ್ತವಾಗಿದೆ. ಸಂಪೂರ್ಣ ನಮ್ರತೆ ಮತ್ತು ಭಕ್ತಿಯಿಂದ ಇದನ್ನು ಮಾಡಬೇಕು ದೇವರ ಮುಂದೆ ಸಂಪೂರ್ಣ ಶರಣಾಗತಾನಾಗುವುದು ಇದರ ಉದ್ದೇಶವಾಗಿದೆ. ಜೊತೆಗೆ ಶಾಸ್ತ್ರಗಳ ಪ್ರಕಾರ, ದೇವಾಲಯ ಮತ್ತು ಭಗವಂತನ ಸುತ್ತ ಪ್ರದಕ್ಷಿಣೆ ಮಾಡುವುದರಿಂದ, ಧನಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸುತ್ತದೆ ಇದು ವ್ಯಕ್ತಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಸ್ಕಂದ ಪುರಾಣದಲ್ಲಿ ಹೇಳಿರುವ ಪ್ರಕಾರ ಮನಸ್ಸಿನಿಂದ ಮಾಡಿದ ಪಾಪಗಳು ಮೊದಲ ಹೆಜ್ಜೆಯಿಂದ, ಮಾತಿನಿಂದ ಆಡಿ ಮಾಡಿದ ಪಾಪಗಳು ಎರಡನೇ ಹೆಜ್ಜೆಯಿಂದ ಮತ್ತು ದೇಹದಿಂದ ಆದಂತಹ ಪಾಪಗಳು ಮೂರನೇ ಹೆಜ್ಜೆಯಿಂದ ನಾಶವಾಗುತ್ತವೆ.

ಇನ್ನು ಪ್ರದಕ್ಷಿಣೆಯಲ್ಲಿ ಹಲವಾರು ವಿಧಗಳಿದ್ದು ಆತ್ಮ ಪ್ರದಕ್ಷಿಣೆ (ತನ್ನ ಸುತ್ತಲೂ ಪ್ರದಕ್ಷಿಣೆ ಹಾಕುವುದು), ಮೊಣಕಾಲಿನ ಮೇಲೆ ನಿಂತು ಪ್ರದಕ್ಷಿಣೆ ಮಾಡುವುದು, ಉರುಳು ಸೇವೆ, ಆದಿ ಪ್ರದಕ್ಷಿಣೆ (ಹೆಜ್ಜೆ ಹೆಜ್ಜೆ ಇಟ್ಟು ಮಾಡುವ ಪ್ರದಕ್ಷಿಣೆ); ಒದ್ದೆ ಬಟ್ಟೆಯಲ್ಲಿ ದೇವರ ಪ್ರದಕ್ಷಿಣೆ ಹೀಗೆ ಅನೇಕ ರೀತಿಯಲ್ಲಿ ದೇವರ ಸುತ್ತು ಬರುತ್ತಾರೆ. ಇವುಗಳನ್ನು ಹರಕೆಯ ಮೂಲಕವೂ ತೀರಿಸಲಾಗುತ್ತದೆ.

ಇದನ್ನೂ ಓದಿ:ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಗ್ರಹ, ಮೈ ರೋಮಾಂಚನಗೊಳಿಸಿದ ಎಐ ವಿಡಿಯೋ 

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?

ಪ್ರತಿ ದೇವರಿಗೂ ಪ್ರದಕ್ಷಿಣೆ ಭಿನ್ನವಾಗಿರುತ್ತದೆ ಹಾಗಾಗಿ ಸೂರ್ಯ ದೇವರಿಗೆ ಏಳು ಬಾರಿ ಪ್ರದಕ್ಷಿಣೆ ಮಾಡಬೇಕು, ಹನುಮಂತನಿಗೆ ಮೂರು ಬಾರಿ, ಗಣಪತಿಗೆ ನಾಲ್ಕು ಬಾರಿ, ವಿಷ್ಣು ಮತ್ತು ಅವನ ಅವತಾರ ಪುರುಷರಿಗೆ ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಬೇಕು. ದುರ್ಗಾ ದೇವಿಗೆ ಒಂದು ಬಾರಿ ಮಾತ್ರ ಪ್ರದಕ್ಷಿಣೆಯನ್ನು ಮಾಡಬೇಕು. ಇನ್ನು ಶಿವನಿಗೆ ಮಾತ್ರ ಅರ್ಧ ಪ್ರದಕ್ಷಿಣೆ (ಗರ್ಭಗುಡಿಯಿಂದ ಗೋಮುಖಿ ಅಂದರೆ ಅಭಿಷೇಕದ ನೀರು ಬರುವವರೆಗೆ ಮಾತ್ರ). ಹಾಗೂ ಅರಳಿ ಮರಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಈ ರೀತಿಯ ನಿಯಮಕ್ಕನುಸಾರವಾಗಿ ಹಾಕುವ ಪ್ರದಕ್ಷಿಣೆ ವಿಶೇಷ ಫಲಗಳನ್ನು ನೀಡುತ್ತವೆ ಎಂದು ಪುರಾಣಗಳು ಹೇಳುತ್ತವೆ.

ಪ್ರದಕ್ಷಿಣೆ ಹಾಕುವಾಗ ಯಾವ ಮಂತ್ರವನ್ನು ಪಠಿಸಬೇಕು?

ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ|

ತಾನಿ ಸವಾರ್ಣಿ ನಶ್ಯಂತು ಪ್ರದಕ್ಷಿಣೆ ಪದೇ – ಪದೇ||

ನಾವು ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳು ಮತ್ತು ಹಿಂದಿನ ಜನ್ಮಗಳ ಎಲ್ಲಾ ಪಾಪಗಳು ಪ್ರದಕ್ಷಿಣೆಯೊಂದಿಗೆ ನಾಶವಾಗಲಿ. ಇನ್ನು ದೇವರು ನನಗೆ ಸರಿಯಾದ ದಾರಿಯಲ್ಲಿ ನಡೆಯುವ ಬುದ್ಧಿ ನೀಡಲಿ ಎಂಬುದು ಇದರ ಅರ್ಥವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ