ಮಾಘ ಪೂರ್ಣಿಮೆಯಂದು ಈ ಆಚರಣೆಗಳನ್ನು ಪಾಲನೆ ಮಾಡಿದರೆ ಸಿಗುತ್ತೆ ಪುಣ್ಯ ಫಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2024 | 10:56 AM

ಈ ಬಾರಿಯ ಮಾಘ ಪೂರ್ಣಿಮೆಯನ್ನು ಫೆ. 24 ರಂದು ಆಚರಣೆ ಮಾಡಲಾಗುತ್ತದೆ. ಮಾಘ ಹುಣ್ಣಿಮೆಯ ದಿನದಂದು ದೇವತೆಗಳು ಭೂಮಿಗೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ದಾನ- ಧರ್ಮ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಈ ದಿನದ ಮಹತ್ವವೇನು? ಆಚರಣೆ ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಘ ಪೂರ್ಣಿಮೆಯಂದು ಈ ಆಚರಣೆಗಳನ್ನು ಪಾಲನೆ ಮಾಡಿದರೆ ಸಿಗುತ್ತೆ ಪುಣ್ಯ ಫಲ
ಸಾಂದರ್ಭಿಕ ಚಿತ್ರ
Follow us on

ಹಿಂದೂ ಧರ್ಮದಲ್ಲಿ, ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಮಾಘ ಪೂರ್ಣಿಮಾ ಅಥವಾ ಮಾಘ ಹುಣ್ಣಿಮೆ ಅಥವಾ ಮಾಘ ಪೌರ್ಣಮಿ ಎಂದು ಕರೆಯಲಾಗುತ್ತದೆ. ಅದರಲ್ಲಿಯೂ ಮಾಘ ಪೂರ್ಣಿಮೆಯ ದಿನದಂದು ನದಿ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಇನ್ನು ಮಾಘ ಪೂರ್ಣಿಮೆಯಂದು, ಅನೇಕ ಯಾತ್ರಾ ಸ್ಥಳಗಳಲ್ಲಿ ಜಾತ್ರೆಗಳೂ ಕೂಡ ನಡೆಯುತ್ತದೆ. ಈ ಬಾರಿಯ ಮಾಘ ಪೂರ್ಣಿಮೆಯನ್ನು ಫೆ. 24 ರಂದು ಆಚರಣೆ ಮಾಡಲಾಗುತ್ತದೆ. ಮಾಘ ಹುಣ್ಣಿಮೆಯ ದಿನದಂದು ದೇವತೆಗಳು ಭೂಮಿಗೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ದಾನ- ಧರ್ಮ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಈ ದಿನದ ಮಹತ್ವವೇನು? ಆಚರಣೆ ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ಮೂಹೂರ್ತದಲ್ಲಿ ಆಚರಣೆ ಮಾಡಬೇಕು?

ಹುಣ್ಣಿಮೆಯಂದು ಉಪವಾಸವನ್ನು ಆಚರಿಸುವ ಮೂಲಕ ಭಕ್ತಿಯಿಂದ ವಿಷ್ಣು ದೇವನನ್ನು ಪೂಜಿಸಲಾಗುತ್ತದೆ. ಇನ್ನು ಕೆಲವರ ಮನೆಗಳಲ್ಲಿ ಸತ್ಯನಾರಾಯಣ ದೇವರನ್ನು ಪೂಜಿಸುವ ಮೂಲಕ ಅವನ ಕಥೆಗಳನ್ನು ಪಠಿಸಲಾಗುತ್ತದೆ. ಮಾಘ ಹುಣ್ಣಿಮೆಯು ಫೆ. 23 ರಂದು ಮಧ್ಯಾಹ್ನ 3:36 ಕ್ಕೆ ಪ್ರಾರಂಭವಾಗುತ್ತದೆ. ಇದು ಫೆ. 24 ರಂದು ಸಂಜೆ 6:03 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಮಾಘ ಪೂರ್ಣಿಮಾ ಅಥವಾ ಹುಣ್ಣಿಮೆಯ ಉಪವಾಸವನ್ನು ಫೆಬ್ರವರಿ 24 ರಂದು ಆಚರಿಸಲಾಗುತ್ತದೆ.

ಸ್ನಾನ ಮತ್ತು ದಾನಕ್ಕೆ ಶುಭ ಸಮಯ ಬೆಳಿಗ್ಗೆ 05.11 ರಿಂದ 06.02 ರ ವರೆಗೆ.

ಮಧ್ಯಾಹ್ನ 12:12 ರಿಂದ 12:57 ರವರೆಗೆ ಅಭಿಜಿತ್ ಮುಹೂರ್ತ.

ಬೆಳಿಗ್ಗೆ 08:18 ರಿಂದ 9:43 ರವರೆಗೆ ಸತ್ಯನಾರಾಯಣ ಪೂಜೆ.

ಚಂದ್ರೋದಯ ಸಮಯ ಸಂಜೆ 06:12.

ಮಾಘ ಹುಣ್ಣಿಮೆಯ ಉಪವಾಸ ಮತ್ತು ಪೂಜಾ ವಿಧಾನ:

ಮಾಘ ಹುಣ್ಣಿಮೆಯಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ, ವಿಷ್ಣು ದೇವನನ್ನು ಪೂಜೆ ಮಾಡಿ ಉಪವಾಸ ಆಚರಿಸಿ, ಹೋಮ- ಹವನ ಮಾಡಿ, ದಾನ ಮಾಡುವ ಮೂಲಕ ದೇವರ ಮಂತ್ರವನ್ನು ಪಠಿಸಲಾಗುತ್ತದೆ ಅದು ಅಲ್ಲದೆ ಈ ದಿನ ನಮ್ಮ ಪೂರ್ವಜರನ್ನು ಪೂಜಿಸಲಾಗುತ್ತದೆ ಮತ್ತು ದಾನಗಳನ್ನು ನೀಡಲಾಗುತ್ತದೆ. ಇನ್ನು ಸಾಧ್ಯವಾದಲ್ಲಿ ಈ ಹುಣ್ಣಿಮೆಯ ದಿನದಂದು, ಯಾವುದಾದರೂ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು ಬಳಿಕ ಸೂರ್ಯ ಮಂತ್ರವನ್ನು ಪಠಿಸುತ್ತಾ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು.

ಇದನ್ನೂ ಓದಿ: ವಸಂತ ಪಂಚಮಿ ಮದುವೆಗೆ ಶುಭ ದಿನ

ಮಾಘ ಪೂರ್ಣಿಮೆಯ ಮಹತ್ವವೇನು?

ಧರ್ಮಗ್ರಂಥಗಳ ಪ್ರಕಾರ, ಮಾಘಿ ಪೂರ್ಣಿಮೆಯು ಪವಿತ್ರ ದಿನದಂದು, ಶ್ರೀ ವಿಷ್ಣು ದೇವನು ಗಂಗಾ ನದಿಯಲ್ಲಿ ಇರುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಈ ಮಾಘ ಹುಣ್ಣಿಮೆಯಂದು ಚಂದ್ರ ಮತ್ತು ಲಕ್ಷ್ಮೀ ದೇವಿಯನ್ನು ಕೂಡ ಪೂಜಿಸುವ ಸಂಪ್ರದಾಯವಿದೆ. ಈ ದಿನ, ಚಂದ್ರೋದಯದ ಸಮಯದಲ್ಲಿ ಚಂದ್ರನನ್ನು ಪೂಜಿಸುವುದರಿಂದ ಜಾತಕದಲ್ಲಿ ಚಂದ್ರ ದೋಷವಿದ್ದಲ್ಲಿ ಪರಿಹಾರ ಸಿಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮೀ ದೇವಿಯನ್ನು ಕೂಡ ಈ ದಿನ ಹಗಲು ಮತ್ತು ರಾತ್ರಿ ಸಮಯದಲ್ಲಿ ಪೂಜಿಸುವ ಸಂಪ್ರದಾಯವೂ ಇದೆ.

ಈ ದಿನ ಏನು ಮಾಡಿದರೆ ಒಳ್ಳೆಯದು?

-ಅರಳಿ ಮರಕ್ಕೆ ಹಾಲು ಹಾಕಿ ತುಪ್ಪದ ದೀಪ ಹಚ್ಚಿ.

-ಬಡವರಿಗೆ ಮತ್ತು ಬ್ರಾಹ್ಮಣರಿಗೆ ಆಹಾರ ನೀಡಿ.

-ಬಿಳಿ ಮತ್ತು ಕಪ್ಪು ಎಳ್ಳಿನ ಬೀಜಗಳನ್ನು ಈ ದಿನದಂದು ದಾನ ಮಾಡಿ.

-ಮಾಘ ಮಾಸದಲ್ಲಿ ಹವನ ಮಾಡುವವರು ಕಪ್ಪು ಎಳ್ಳನ್ನು ಬಳಸಿಕೊಳ್ಳಿ.

-ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವವರು ಕೂಡ ಕಪ್ಪು ಎಳ್ಳನ್ನು ಬಳಸಿ.

-ಈ ದಿನದಂದು ನೀಡುವ ಅತೀ ಸಣ್ಣ ದಾನಕ್ಕೂ ಮಹತ್ತರ ಫಲವಿರುವುದರಿಂದ ದಾನ ಮಾಡಿ, ಪುಣ್ಯ ಫಲಗಳನ್ನು ಪಡೆದುಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ