MahaKumbh Mela : ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಬಹುದು, ಆದ್ರೆ ಶಾಹಿ ಸ್ನಾನಕ್ಕೆ ಇನ್ನೂ ಇದೆ ಸಮಯ ಆತುರ ಬೇಡ
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗಲು ಸಾಧ್ಯವಾಗಿಲ್ಲ ಎಂಬುವವರು ಬೇಸರ ಮಾಡಿಕೊಳ್ಳುವುದು ಬೇಡ, ಅಲ್ಲಿ ಪವಿತ್ರ ಸ್ನಾನ ಮಾಡಿ ಬರಬೇಕು ಎಂಬುದು ಭಾರತವಷ್ಟೇ ಅಲ್ಲ, ಪ್ರಪಂಚದಾದ್ಯಂತ ಈ ಸಮಯದ ವಿಶೇಷ ತಿಳಿದವರ ಬಯಕೆ ಆಗಿದೆ. ಆದರೆ ಫೆಬ್ರವರಿ 26ರಂದೇ ಕೊನೆಗೊಳ್ಳುವುದಿಲ್ಲ. ಗುರು ಗ್ರಹವು ವೃಷಭ ರಾಶಿಯಲ್ಲಿ ಇರುವಂಥ ಮೇ ತಿಂಗಳ ಹದಿನೈದನೇ ತಾರೀಕಿನ ತನಕ ಮಹಾಕುಂಭ ಮೇಳಕ್ಕೆ ತೆರಳಬಹುದು. ಅಲ್ಲಿನ ಪವಿತ್ರ ಸ್ನಾನವು ಈಗಿನಷ್ಟೇ ಪುಣ್ಯ ತರುವಂಥದ್ದು ಹಾಗೂ ಪ್ರಾಮುಖ್ಯ ಇರುವಂಥದ್ದು.

ಪ್ರಯಾಗ್ರಾಜ್, ಫೆಬ್ರವರಿ 26: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದ್ದು, ಇಂದು ಶಿವರಾತ್ರಿಯೂ ಇರುವ ಕಾರಣ ಜನರು ಬೆಳಗಿನ ಜಾವದಿಂದಲೇ ಭಕ್ತರು ಪುಣ್ಯ ಸ್ನಾನ ಮಾಡಲು ತ್ರಿವೇಣಿ ಸಂಗಮದಲ್ಲಿ ನೆರೆದಿದ್ದರು. ಆದರೆ ಮಹಾ ಕುಂಭ ಮೇಳ ಮುಗಿದಿದ್ದರೂ ಶಾಹಿ ಸ್ನಾನಕ್ಕೆ ಮೇ 15ರವರೆಗೂ ಅವಕಾಶವಿದೆ.
ಪವಿತ್ರ ಸ್ನಾನ ಹಾಗೂ ಆ ಸ್ಥಳದ ಸುತ್ತಮುತ್ತ ಇರುವಂಥ ದೇವಸ್ಥಾನಗಳ ಸಂದರ್ಶನವನ್ನು ಮಾಡುತ್ತಿದ್ದಾರೆ. ಈಗ ನಡೆಯುತ್ತಿರುವ ಮಹಾಕುಂಭ ನೂರಾ ನಲವತ್ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವಂಥದ್ದು. ಆದ್ದರಿಂದ ಇದರ ಪ್ರಾಮುಖ್ಯ ಇನ್ನೂ ಹೆಚ್ಚು. ಏಕೆಂದರೆ ಹನ್ನೆರಡು ವರ್ಷಕ್ಕೆ ಒಮ್ಮೆ ನಡೆಯುವ ಕುಂಭ ಬೇರೆ. ಅದೇ ರೀತಿ ವಿವಿಧ ಅವಧಿಯ- ಸಂದರ್ಭದ- ಸ್ಥಳದ ಕುಂಭಮೇಳಗಳು ನಡೆಯುವುದು ಹೌದಾದರೂ ಇದು ಮಾತ್ರ ಶತಮಾನಗಳಿಗೂ ದಾಟಿ ಒಮ್ಮೆ ಮಾತ್ರ ನಡೆಯುವಂಥದ್ದು. ಅಲ್ಲಿನ ಆಧ್ಯಾತ್ಮಿಕ ಸಮ್ಮಿಲನ, ಆ ಸಾಧು- ಸಂತರು, ಸಾಧಕರು, ಅಧ್ಯಾತ್ಮ ಜೀವನದಲ್ಲಿ ದೀರ್ಘವಾದ ಹಾದಿಯನ್ನು ಸವೆಸಿದವರು ಇಲ್ಲಿ ಸಂಗಮವಾಗಿದ್ದಾರೆ. ಹಾಗಂತ ಸಂಸಾರದಲ್ಲಿ ಎಲ್ಲ ಜಂಜಡದಲ್ಲಿ ಇರುವವರು ಸಹ ಈ ಪುಣ್ಯ ಸಂದರ್ಭದಲ್ಲಿ ಒಂದು ಪುಟ್ಟ ಪಾಲನ್ನಾದರೂ ಪಡೆದುಕೊಂಡು ಬಿಡೋಣ ಎಂದು ಧಾವಂತ ಪಡುವವರು ಸಹ ಕೋಟ್ಯಂತರ ಮಂದಿ ಆಗಿಬಿಟ್ಟಿದ್ದಾರೆ.
ಅದು ಈ ಮಣ್ಣಿನಲ್ಲಿ ಹುಟ್ಟಿದವರಿಗೆ ಪುಣ್ಯ ಕಾರ್ಯಗಳಿಗೆ ಇರುವಂಥ ಸಾಮರ್ಥ್ಯ ಗೊತ್ತಿರುವುದರಿಂದ ಹೀಗಾಗುತ್ತದೆ. ಇದರಿಂದ ಅನುಕೂಲವೂ ಇದೆ, ಒಂದಿಷ್ಟು ಅನನುಕೂಲವೂ ಇದೆ. ಈ ಸಂದರ್ಭವು ಅಧ್ಯಾತ್ಮ ಪಥದಲ್ಲಿ ಇರುವಂಥ ಸಾಧು, ಸನ್ಯಾಸಿಗಳಿಗೆ ಬಹಳ ಮುಖ್ಯವಾದದ್ದು. ಈ ಪವಿತ್ರಸ್ನಾನಗಳನ್ನು ಅವರು ಮಾಡಲೇಬೇಕು. ಇದು ಅವರ ಜೀವನ ಕ್ರಮದ ಭಾಗ, ಸಾಧನೆಯ ಭಾಗ ಆಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಇತರರು ಸಹ ಹೋಗಿ ಅಲ್ಲಿ ನೂಕುನುಗ್ಗಲು ಮಾಡಿ, ಸಾಧು- ಸನ್ಯಾಸಿ, ಸಾಧಕರ ಕರ್ತವ್ಯಗಳಿಗೆ ಅಡ್ಡಿ ಮಾಡಿದಲ್ಲಿ ಇದು ಖಂಡಿತಾ ಪುಣ್ಯ ಕಾರ್ಯವಲ್ಲ.
ಸನ್ಯಾಸಿ ಎಂದರೆ ಸರ್ವ ಸಂಗ ಬಿಟ್ಟವರು ಎಂದು ತಿಳಿಯಬೇಡಿ. ಸರ್ವ ಸಂಗ ಬಿಟ್ಟವರಿಗೇಕೆ ಕುಂಭ ಮೇಳ? ಸರ್ವ ಸಂಗ ಬಿಟ್ಟವರಿಗೆ ಸನಾತನ ಧರ್ಮ ಪಾಲಕರ ಚಿಂತೆ? ಸನ್ಯಾಸಿ ಎಂದರೆ ಸತ್+ನ್ಯಾಸ. ಅಂದರೆ ಉತ್ತಮವಾದ ನ್ಯಾಸ, ನಿಯಮ ಇರುವವರು ಎಂದರ್ಥ. ಸಾಧು ಎಂದರೆ ಕಾವಿ ಹಾಕಿಕೊಂಡ ಬೈರಾಗಿಗಳಲ್ಲ. ಸಾಧು ಎಂದರೆ ಸಜ್ಜನರು ಒಪ್ಪುವಂತಹ ವ್ಯಕ್ತಿತ್ವ ಉಳ್ಳವರು ಎಂದರ್ಥ.
ಸರ್ಕಾರದ ಘೋಷಣೆ ಪ್ರಕಾರವಾಗಿ ಇದೇ ಫೆಬ್ರವರಿ ಇಪ್ಪತ್ತಾರನೇ ತಾರೀಕಿಗೆ ಮಹಾ ಕುಂಭ ಮೇಳದ ಕೊನೆಯಾಗುತ್ತದೆ. ಆದರೆ ಎಲ್ಲಿಯ ತನಕ ವೃಷಭ ರಾಶಿಯಲ್ಲಿ ಗುರು ಗ್ರಹ ಇರುತ್ತದೋ ಅಲ್ಲಿಯ ತನಕವೂ ಮಹಾಕುಂಭ ಶಾಹಿ (ಪವಿತ್ರ) ಸ್ನಾನ ನಡೆಯುತ್ತದೆ. ಮತ್ತು ಪುಣ್ಯ ಸಿಕ್ಕೇ ಸಿಗುತ್ತದೆ. ಈ ವರ್ಷದ ಮೇ ಹದಿನೈದನೇ ತಾರೀಕಿನ ತನಕ ವೃಷಭ ರಾಶಿಯಲ್ಲಿ ಗುರು ಗ್ರಹ ಇರುತ್ತದೆ. ಈ ಅವಧಿಯೊಳಗಾಗಿ ಚಿತ್ರಾ ಪೌರ್ಣಮಿ, ವಸಂತ ಪೌರ್ಣಮಿ, ಆರುಗ್ರಹಗಳ ಯೋಗದ ಜೊತೆಗೆ ಅಮಾವಾಸ್ಯೆ ಹೀಗೆ ಅನೇಕ ಮಹಾ ಯೋಗದಿಂದ ಕೂಡಿದ ದಿನಗಳು ಬರುತ್ತವೆ. ಈಗ ಹೇಳುತ್ತಿರುವುದು ಎಲ್ಲವೂ 144ನೇ ವರ್ಷದ ವಿಶೇಷ ಕಾಲಗಳೇ. ಇದನ್ನು ಅರ್ಥ ಮಾಡಿಕೊಂಡರೆ ಒಂದು ಮಹಾ ಅಧ್ಯಾತ್ಮ ಸಮ್ಮೇಳನ- ಶತಮಾನಗಳಿಗೂ ದಾಟಿ ಒಮ್ಮೆ ನಡೆಯುವ ಈ ಪವಿತ್ರ ಕಾರ್ಯ ಅರ್ಥಪೂರ್ಣವಾಗುತ್ತದೆ.
ತಮ್ಮ ಜೀವನವನ್ನೇ ಅಧ್ಯಾತ್ಮಕ್ಕೆ ಮೀಸಲಿರಿಸಿದವರಿಗೆ ಯಾವುದೇ ಕಿರಿಕಿರಿ ಆಗದಂತೆ ಪವಿತ್ರ ಸ್ನಾನಗಳನ್ನು ಪೂರೈಸಿಕೊಳ್ಳಲು ಅವಕಾಶ ಮಾಡಿಕೊಡುವುದು ಸಹ ಪುಣ್ಯ ಕೆಲಸವೇ. ಈಚೆಗಷ್ಟೇ ಆದ ಮೌನಿ ಅಮಾವಾಸ್ಯೆ ಒಂದು ದಿನ ಮಾತ್ರ ಪರ್ವಕಾಲ ಅಲ್ಲ. ಇನ್ನೂ ಬೇಕಾದಷ್ಟಿವೆ. ಅದರಲ್ಲಿಯೂ ಷಡ್ಗ್ರಹ ಯೋಗ ಯುಕ್ತ ಅಮಾವಾಸ್ಯೆಯು ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಬರುತ್ತದೆ. ಅದು ಕೂಡ ಮಹಾನ್ ಪರ್ವ ಕಾಲ. ಆ ದಿನದ ಶಾಹಿ ಸ್ನಾನದ ಫಲವೂ ವಿಶೇಷವಾದುದ್ದೇ. ಇನ್ನು ಒಮ್ಮೆಯಾದರೂ ಪ್ರಯಾಗ್ ರಾಜ್ ಮಹಾಕುಂಭ ಮೇಳಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿ ಬಂದುಬಿಡಬೇಕು, ಶತಮಾನಗಳಿಗೆ ಒಮ್ಮೆ ಸಿಗುವ ಅವಕಾಶ ಇದು ಎಂಬುದು ಎಲ್ಲರ ಬಯಕೆ ಆಗಿರುತ್ತದೆ. ಅದು ಖಂಡಿತಾ ನಿಜ. ಈ ವರ್ಷದ ಮೇ ಹದಿನೈದನೇ ತಾರೀಕಿನ ತನಕ ಅದಕ್ಕೆ ಅವಕಾಶ ಇದ್ದೇ ಇದೆ. ಅಷ್ಟರೊಳಗೆ ಅಲ್ಲಿಗೆ ಹೋಗಿ, ಶಾಹಿ ಸ್ನಾನವನ್ನು ಮಾಡಿಕೊಂಡು ಬರಬಹುದು. ಪುಣ್ಯ ಫಲದಲ್ಲಿ ಎಳ್ಳಿನ ಕಾಳಷ್ಟೂ ವ್ಯತ್ಯಾಸ ಆಗುವುದಿಲ್ಲ.
ನಾವೆಲ್ಲರೂ ಬಹಳ ಅದೃಷ್ಟವಂತರು. ಈ ಹಿಂದಿನ, ಅಂದರೆ ನೂರಾ ನಲವತ್ನಾಲ್ಕು ವರ್ಷದ ಹಿಂದೆ ಜನರು ಈ ಮಹಾಕುಂಭ ಮೇಳಕ್ಕೆ ಹೇಗೆ ತೆರಳಿರಬಹುದು! ಆಗೇನು ಬಸ್ಸೇ, ವಿಮಾನವೇ, ಖಾಸಗಿ ಹೆಲಿಕಾಪ್ಟರ್ ಗಳೇ ಅಥವಾ ಇಷ್ಟು ಸವಲತ್ತು- ಸೌಕರ್ಯ, ಅನುಕೂಲ, ಮಾಹಿತಿ- ತಂತ್ರಜ್ಞಾನ ಯಾವುದಿತ್ತು? ಆದರೆ ನಮಗೆ ಯಾವುದು ಇಲ್ಲ? ತಾಳ್ಮೆ- ಸಮಾಧಾನ ಒಂದಿಲ್ಲ. ಈಗ ಇರುವ ಅನುಕೂಲಗಳನ್ನು ಬಳಸಿಕೊಂಡು, ಮೇ ಹದಿನೈದನೇ ತಾರೀಕಿನ ಒಳಗಾಗಿ ಪ್ರಯಾಗ್ ರಾಜ್ ಮಹಾಕುಂಭ ಮೇಳಕ್ಕೆ ತೆರಳಿ, ಪವಿತ್ರ ಸ್ನಾನ ಮಾಡಿ, ಸುತ್ತಮುತ್ತಲ- ಹತ್ತಿರದ ಎಲ್ಲ ಪ್ರಮುಖ ದೇವಸ್ಥಾನಗಳ ದರ್ಶನವನ್ನು ಸಮಾಧಾನವಾಗಿ ಮಾಡಿಕೊಂಡು ಬನ್ನಿ. ಧಾವಂತದ ಬದುಕು ಯಾವ ಹಾಗೂ ಯಾರ ಆರೋಗ್ಯಕ್ಕೂ, ಪುಣ್ಯ ಸಂಚಯನಕ್ಕೂ ಒಳಿತಲ್ಲ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ- ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ