AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri Day 6: ನವರಾತ್ರಿಯ 6 ನೇ ದಿನದ ವಿಶೇಷ; ಸಕಲ ಸೌಭಾಗ್ಯ ನೀಡುವ ಕಾತ್ಯಾಯಿನಿ

ನವರಾತ್ರಿಯ ಆರನೆಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಪೌರಾಣಿಕ ಕತೆಗಳ ಪ್ರಕಾರ, ಈ ದೇವಿಯ ಹೆಸರಿನ ಹಿಂದೆ ಮಹತ್ವದ ಇತಿಹಾಸವಿದೆ. ಕಾತ್ಯಾಯಿನಿ ದೇವಿಯ ರೂಪವು ಬಂಗಾರದಂತೆ ಹೊಳೆಯುತ್ತದೆ. ಆಕೆಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಹಸ್ತವು ಅಭಯ ಮುದ್ರೆ, ಕೆಳಗಿನ ಹಸ್ತವು ವರ ಮುದ್ರೆ, ಎಡಗಡೆಯ ಮೇಲಿನ ಹಸ್ತದಲ್ಲಿ ಖಡ್ಗ, ಕೆಳಗಿನ ಹಸ್ತದಲ್ಲಿ ಕಮಲ ಹೂವು. ಸಿಂಹವೇ ಆಕೆಯ ವಾಹನ. ಕಾತ್ಯಾಯಿನಿ ದೇವಿಯ ರೂಪ, ಪೂಜಾ ವಿಧಾನ ಮತ್ತು ಪೌರಾಣಿಕ ಹಿನ್ನೆಲೆಯನ್ನು ಇಲ್ಲಿ ವಿವರಿಸಲಾಗಿದೆ.

Navratri Day 6: ನವರಾತ್ರಿಯ 6 ನೇ ದಿನದ ವಿಶೇಷ; ಸಕಲ ಸೌಭಾಗ್ಯ ನೀಡುವ ಕಾತ್ಯಾಯಿನಿ
ನವರಾತ್ರಿಯ 6 ನೇ ದಿನ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on:Sep 26, 2025 | 3:47 PM

Share

ನವರಾತ್ರಿ ದಿನಗಳಲ್ಲಿ ಆರಾಧನೆಗೆ ಪಾತ್ರವಾದ ನವದುರ್ಗೆಯ ಆರನೆಯ ರೂಪವೇ ಕಾತ್ಯಾಯಿನಿ. ಪೌರಾಣಿಕ ಕತೆಗಳ ಪ್ರಕಾರ, ಈ ದೇವಿಯ ಹೆಸರಿನ ಹಿಂದೆ ಮಹತ್ವದ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ಕತ ಎಂಬ ಋಷಿ ಜೀವಿಸುತ್ತಿದ್ದರು. ಅವರ ವಂಶಸ್ಥರಾದ ಕಾತ್ಯಾಯನ ಮಹರ್ಷಿಗಳು ತಪಸ್ಸು ಮಾಡಿ ದೇವಿಯು ತಮ್ಮ ಮನೆಯಲ್ಲಿ ಮಗಳಾಗಿ ಜನಿಸಲಿ ಎಂಬ ಸಂಕಲ್ಪ ಕೈಗೊಂಡರು. ಅವರ ನಿಷ್ಠೆಯ ಫಲವಾಗಿ ದೇವಿ ಮಗಳಾಗಿ ಜನಿಸಿದಳು. ನಂತರ, ಮಹಿಷಾಸುರನ ಅತಿಕ್ರಮ ಹೆಚ್ಚಾಗುತ್ತಿದ್ದಂತೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಇತರ ದೇವತೆಗಳ ತೇಜಸ್ಸು ಒಟ್ಟುಗೂಡಿ ಈ ದೇವಿಯನ್ನು ಸೃಷ್ಟಿಸಿತು. ಅವಳು ಮಹಿಷಾಸುರನ ಸಂಹಾರದಿಗಾಗಿ ಬಂದ ಶಕ್ತಿ. ಋಷಿ ಕಾತ್ಯಾಯನರು ಮೊದಲಿಗೆ ಪೂಜಿಸಿದ ಕಾರಣದಿಂದಲೇ ಆಕೆ “ಕಾತ್ಯಾಯಿನಿ” ಎಂದು ಪ್ರಸಿದ್ಧರಾದಳು.

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ । ಕಾತ್ಯಾಯನೀ ಶುಭಂ ದದ್ಯಾದ್ದೇವಿ ದಾನವಘಾತಿನೀ ॥

ಪುರಾಣದ ಉಲ್ಲೇಖ:

ಈ ದೇವಿಯ ಅವತಾರ ಭಾದ್ರಪದ ಮಾಸದ ಕೃಷ್ಣ ಚತುರ್ದಶಿಯಂದು ಪ್ರಾರಂಭವಾಯಿತು. ಆಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿ, ಅಷ್ಟಮಿ, ನವಮಿಯ ತನಕ ಕಾತ್ಯಾಯನರು ಆಕೆಯನ್ನು ಭಕ್ತಿಯಿಂದ ಪೂಜಿಸಿದರು. ದಶಮಿಯಂದು ಮಹಿಷಾಸುರನ ಸಂಹಾರವಾದದ್ದು ಪೌರಾಣಿಕ ಇತಿಹಾಸ. ಗೋಪಿಕಸ್ತ್ರೀಯರೂ ಶ್ರೀಕೃಷ್ಣನನ್ನು ಪತಿಯಾಗಿ ಪಡೆಯುವ ಆಶಯದಿಂದ ಯಮುನಾ ತೀರದಲ್ಲಿ ಕಾತ್ಯಾಯಿನಿ ಪೂಜೆಯನ್ನು ನೆರವೇರಿಸಿದ್ದರು ಎಂಬ ಉಲ್ಲೇಖವೂ ಇದೆ.

ಕಾತ್ಯಾಯಿನಿ ಸ್ವರೂಪದ ವಿವರಣೆ:

ಕಾತ್ಯಾಯಿನಿ ದೇವಿಯ ರೂಪವು ಬಂಗಾರದಂತೆ ಹೊಳೆಯುತ್ತದೆ. ಆಕೆಯ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಹಸ್ತವು ಅಭಯ ಮುದ್ರೆ, ಕೆಳಗಿನ ಹಸ್ತವು ವರ ಮುದ್ರೆ, ಎಡಗಡೆಯ ಮೇಲಿನ ಹಸ್ತದಲ್ಲಿ ಖಡ್ಗ, ಕೆಳಗಿನ ಹಸ್ತದಲ್ಲಿ ಕಮಲ ಹೂವು. ಸಿಂಹವೇ ಆಕೆಯ ವಾಹನ.

ಇದನ್ನೂ ಓದಿ: ನವರಾತ್ರಿಯ ಐದನೇ ದಿನದ ವಿಶೇಷ; ಭಕ್ತರ ಮೇಲೆ ಸ್ಕಂದಮಾತೆಯ ಕೃಪಾದೃಷ್ಟಿ

ಆರಾಧನೆಯ ಫಲ:

ಯಾರು ಕಾತ್ಯಾಯಿನಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳು, ರೋಗ, ದುಃಖ, ದಾರಿದ್ರ್ಯದ ನಿವಾರಣೆ, ಜನ್ಮಜನ್ಮಾಂತರದ ಪಾಪಗಳ ನಾಶ, ಅಲೌಕಿಕ ತೇಜಸ್ಸು, ಕಾಂತಿ, ಸಮಾಧಾನ, ಸಂತೃಪ್ತಿ ದೊರೆಯುತ್ತವೆ.

ಈ ದೇವಿಯನ್ನು ಆರಾಧಿಸಲು ಪೌರಾಣಿಕ ಶ್ಲೋಕವೂ ಇದೆ:

ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ । ಪಾತು ನಃ ಸರ್ವಭೀತಿಭ್ಯಃ ಕಾತ್ಯಾಯನಿ ನಮೋಸ್ತು ತೇ ॥

ಈ ಆರಾಧನೆಯಿಂದ ಭಯವು ದೂರವಾಗಿ ಧೈರ್ಯ, ವಿಶ್ವಾಸ ಹಾಗೂ ಸಾಧನೆಗೆ ಅಗತ್ಯವಾದ ಶಕ್ತಿ ಬೆಳೆಯುತ್ತದೆ. ಆದ್ದರಿಂದ, ಈ ನವರಾತ್ರಿಯಲ್ಲಿ ಕಾತ್ಯಾಯಿನಿ ದೇವಿಯ ಆರಾಧನೆ ಮೂಲಕ ಸಕಲ ಸೌಭಾಗ್ಯವನ್ನು ಗಳಿಸಿ, ಜೀವನವನ್ನು ಶುಭಕರಗೊಳಿಸಿರಿ.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 26 September 25