
ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸಗಳಲ್ಲಿ ಅಧಿಕ ಜೇಷ್ಠ ಮಾಸವೂ ಒಂದು. ಇದು ಸಾಮಾನ್ಯ ಜೇಷ್ಠ ಮಾಸಕ್ಕಿಂತ ಭಿನ್ನವಾಗಿದ್ದು, ಸೂರ್ಯ ಮತ್ತು ಚಂದ್ರರ ಚಲನೆಯ ಆಧಾರದ ಮೇಲೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ವಿಶೇಷವಾದ ಹೆಚ್ಚುವರಿ ಮಾಸವಾಗಿದೆ. ಇದನ್ನು ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದನ್ನು ಮಲಮಾಸ ಎಂದೂ ಕರೆಯುವುದುಂಟು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಜೇಷ್ಠ ಎಂದರೆ ದೊಡ್ಡದು ಎಂದರ್ಥ. ಮಾಸಗಳಲ್ಲಿ ಇದು ದೊಡ್ಡ ಮಾಸ, ಪವಿತ್ರ ಮಾಸ. ಹಿಂದೂ ಪಂಚಾಂಗದ ಪ್ರಕಾರ, ಅಧಿಕ ಜೇಷ್ಠ ಮಾಸವು 2026ರ ಮೇ 17ರಿಂದ ಜೂನ್ 15ರವರೆಗೆ ಇರುತ್ತದೆ ಎಂದು ವಿಶ್ಲೇಷಿಸಲಾಗಿದೆ. ಅಧಿಕಸ್ಯ ಅಧಿಕ ಫಲಂ ಎಂಬ ಮಾತಿನಂತೆ ಈ ಮಾಸದಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳಿಂದ ಅಧಿಕ ಫಲ ದೊರೆಯುತ್ತದೆ ಎಂಬುದು ಜನರ ನಂಬಿಕೆ.
ಪುರುಷೋತ್ತಮ ಮಾಸ ಎಂಬ ಹೆಸರು ಹೇಗೆ ಬಂತು? ಪ್ರತಿ ಮಾಸಕ್ಕೂ ಒಬ್ಬ ನಿಯಾಮಕ ದೇವರಿದ್ದಾನೆ. ಆದರೆ ಅಧಿಕ ಮಾಸಕ್ಕೆ ಜವಾಬ್ದಾರಿ ವಹಿಸಿಕೊಳ್ಳಲು ದೇವರುಗಳು ಹಿಂಜರಿದಾಗ, ಸಾಕ್ಷಾತ್ ವಿಷ್ಣು ಭಗವಾನರು ಈ ಮಾಸದ ನಿರ್ವಹಣೆಯನ್ನು ವಹಿಸಿಕೊಂಡರು. ಆದ್ದರಿಂದ ಇದನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಮಾಸಕ್ಕೆ ವಿಷ್ಣುವೇ ಅಧಿಪತಿಯಾಗಿದ್ದಾನೆ.
ಈ ಮಾಸವು ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತವಾಗಿದೆ. ಈ ಅವಧಿಯಲ್ಲಿ ಮಾಡುವ ಜಪ, ಪೂಜೆ, ಉಪವಾಸ ಮತ್ತು ದಾನ ಧರ್ಮಗಳು ಶ್ರೇಷ್ಠ ಪುಣ್ಯವನ್ನು ತರುತ್ತವೆ ಮತ್ತು ಒಳ್ಳೆಯ ಯೋಗವನ್ನು ಪಡೆಯಲು ದಾರಿ ಮಾಡಿಕೊಡುತ್ತವೆ. ಇತರ ಮಾಸಗಳಲ್ಲಿ ಮಾಡುವ ಪೂಜೆ ಮತ್ತು ಜಪಗಳಿಗಿಂತ ಅಧಿಕ ಜೇಷ್ಠ ಮಾಸದಲ್ಲಿ ಮಾಡುವ ಕಾರ್ಯಗಳಿಗೆ ಹತ್ತು ಪಟ್ಟು ಹೆಚ್ಚು ಫಲ ದೊರೆಯುತ್ತದೆ.
ಈ ಮಾಸದಲ್ಲಿ 33 ಎಂಬ ಸಂಖ್ಯೆಗೆ ವಿಶೇಷ ಪ್ರಾಶಸ್ತ್ಯವಿದೆ. 33 ಬಾರಿ ಮಂತ್ರ ಜಪ ಮಾಡುವುದು, 33 ವಸ್ತುಗಳನ್ನು ದಾನ ಮಾಡುವುದು, 33 ಜನರಿಗೆ ಅನ್ನ ಅಥವಾ ಪ್ರಸಾದ ನೀಡುವುದು, ಹಾಗೂ ಮಾಸ ಪೂರ್ತಿ 33 ದೀಪಗಳನ್ನು ದಾನ ಮಾಡುವುದರಿಂದ 33 ಕೋಟಿ ದೇವತೆಗಳ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ. ದಾನಂ ದಹತಿ ಪಾಪಂ – ದಾನವು ಪಾಪಗಳನ್ನು ಸುಡುತ್ತದೆ ಎಂಬುದು ಇದರ ಹಿಂದಿನ ತತ್ವ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಅಧಿಕ ಜೇಷ್ಠ ಮಾಸದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮತ್ತು ನಾಮಕರಣದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಕಾರಣ ಈ ಮಾಸವು ಪುಣ್ಯ ಸಂಪಾದನೆಗೆ ಹೆಚ್ಚು ಒತ್ತು ನೀಡುತ್ತದೆ ಹೊರತು ಲೌಕಿಕ ಕಾರ್ಯಗಳಿಗೆ ಅಲ್ಲ. ಈ ಮಾಸವು ದೇವತಾರಾಧನೆ ಮತ್ತು ಭಕ್ತಿಯ ಪರೀಕ್ಷೆಗೆ ಮೀಸಲಾಗಿದೆ.
ಒಟ್ಟಾರೆಯಾಗಿ, ಅಧಿಕ ಜೇಷ್ಠ ಮಾಸವು ಆಧ್ಯಾತ್ಮಿಕವಾಗಿ ಮಹತ್ತರ ಅವಕಾಶಗಳನ್ನು ನೀಡುವ ಕಾಲವಾಗಿದೆ. ವಿಷ್ಣುವಿನ ಆರಾಧನೆ, ಜಪ, ತಪಸ್ಸು ಮತ್ತು ದಾನ ಧರ್ಮಗಳ ಮೂಲಕ ಶುಭ ಫಲಗಳನ್ನು ಪಡೆದು ಜೀವನದಲ್ಲಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳಲು ಈ ಮಾಸ ಸಹಕಾರಿಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ