ಶ್ರಾವಣ ಮಾಸದ ವಿಶೇಷ: ವರಲಕ್ಷ್ಮಿ ಪೂಜೆ, ಹಯಗ್ರೀವ ಜಯಂತಿ ಮತ್ತು ಲಕ್ಷ್ಮಿ ತತ್ವದ ಆಧ್ಯಾತ್ಮಿಕ ರಹಸ್ಯ

ಶ್ರಾವಣ ಮಾಸವು ಆಧ್ಯಾತ್ಮಿಕ ಜಾಗೃತಿಗೆ ಪವಿತ್ರ ಸಮಯ. ವರಲಕ್ಷ್ಮಿ ವ್ರತವು ಕುಟುಂಬದ ಸೌಭಾಗ್ಯ, ಸಂತಾನ ಮತ್ತು ಅಷ್ಟೈಶ್ವರ್ಯಕ್ಕಾಗಿ ಆಚರಿಸುವ ಪ್ರಮುಖ ಪೂಜೆಯಾಗಿದೆ. ಕೇವಲ ಹಣಕ್ಕಿಂತಲೂ ಆರೋಗ್ಯ, ಜ್ಞಾನ, ಧೈರ್ಯ ಸೇರಿದಂತೆ ಸಮಗ್ರ ಸುಖ-ಸಮೃದ್ಧಿಯೇ ಲಕ್ಷ್ಮಿಯ ನಿಜವಾದ ಸ್ವರೂಪ. ಈ ಮಾಸದಲ್ಲಿ ಶ್ರಾವಣ ಪೂರ್ಣಿಮೆಯಂದು ಹಯಗ್ರೀವ ಜಯಂತಿ, ಜ್ಞಾನಾರ್ಜನೆಗೆ ಪ್ರಾಮುಖ್ಯತೆ ಹೊಂದಿದೆ. ಭಕ್ತಿ ಮತ್ತು ನಮ್ರತೆಯಿಂದ ಆಚರಿಸುವ ವ್ರತವು ನಿಜವಾದ ಫಲ ನೀಡುತ್ತದೆ ಎಂಬ ನಂಬಿಕೆಯಿದೆ.

ಶ್ರಾವಣ ಮಾಸದ ವಿಶೇಷ: ವರಲಕ್ಷ್ಮಿ ಪೂಜೆ, ಹಯಗ್ರೀವ ಜಯಂತಿ ಮತ್ತು ಲಕ್ಷ್ಮಿ ತತ್ವದ ಆಧ್ಯಾತ್ಮಿಕ ರಹಸ್ಯ
ವರಲಕ್ಷ್ಮಿ ವ್ರತ
Image Credit source: Getty Images

Updated on: Aug 20, 2026 | 8:55 AM

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಈ ತಿಂಗಳು ಕೇವಲ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಆಧ್ಯಾತ್ಮಿಕ ಜಾಗೃತಿ, ಸಾಧನೆ ಮತ್ತು ಜ್ಞಾನಾರ್ಜನೆಗೆ ಅತ್ಯಂತ ಶ್ರೇಷ್ಠ ಸಮಯವಾಗಿದೆ. ‘ಶ್ರಾವಣ’ ನಕ್ಷತ್ರವು ಮೂಲತಃ ಜ್ಞಾನ ಮತ್ತು ಶ್ರವಣ ಅಂದರೆ ಆಲಿಸುವಿಕೆ ಗುಣಕ್ಕೆ ಸಂಬಂಧಿಸಿರುವುದರಿಂದ, ಈ ಮಾಸದಲ್ಲಿ ಮಂತ್ರ ಪಠಣ, ಸ್ತೋತ್ರ ಪಾರಾಯಣ ಹಾಗೂ ದಾನ ಧರ್ಮಗಳು ವಿಶೇಷ ಫಲವನ್ನು ನೀಡುತ್ತವೆ. ಶ್ರಾವಣ ಮಾಸದ ಶುಕ್ರವಾರಗಳಲ್ಲೇ ಅತ್ಯಂತ ವಿಶೇಷವಾದದ್ದು ವರಲಕ್ಷ್ಮಿ ವ್ರತ. ಮುತ್ತೈದೆಯರು ಮತ್ತು ಮಹಿಳೆಯರು ತಮ್ಮ ಕುಟುಂಬದ ಸೌಭಾಗ್ಯ, ಸಂತಾನ ಪ್ರಾಪ್ತಿ, ಸುಖ-ಶಾಂತಿ ಹಾಗೂ ಅಷ್ಟೈಶ್ವರ್ಯಕ್ಕಾಗಿ ಈ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ‘ವರ’ ಎಂದರೆ ಆಶೀರ್ವಾದ ಅಥವಾ ಅಭಯ. ತನ್ನನ್ನು ನಂಬಿದ ಭಕ್ತರಿಗೆ ಕೇಳಿದ ವರವನ್ನು ಕರುಣಿಸುವ ತಾಯಿಯೇ ವರಲಕ್ಷ್ಮಿ.

ವರಲಕ್ಷ್ಮಿ ವ್ರತದ ಆಚರಣೆ ಮತ್ತು ಭಕ್ತಿ ಭಾವನೆ:

ವರಲಕ್ಷ್ಮಿ ವ್ರತದ ಆಚರಣೆಯಲ್ಲಿ ಅಲಂಕಾರ, ಪೂಜಾ ಸಾಮಗ್ರಿಗಳು, ನೈವೇದ್ಯಗಳು ಮತ್ತು ಕಾಣಿಕೆಗಳು ಎಷ್ಟೇ ವೈಭವದಿಂದ ಕೂಡಿದ್ದರೂ, ದೇವಿಗೆ ಪ್ರಿಯವಾಗುವುದು ನಿಷ್ಕಲ್ಮಶವಾದ ಭಕ್ತಿ ಮಾತ್ರ. “ನನ್ನಿಂದಲೇ ಎಲ್ಲವೂ ಸಾಧ್ಯವಾಯಿತು, ನಾನು ಇದನ್ನು ಸಾಧಿಸಿದೆ” ಎಂಬ ಅಹಂಕಾರವನ್ನು ತೊರೆದು, ದೇವಿಯ ಮುಂದೆ ನಮ್ರತೆ ಹಾಗೂ ಕೃತಜ್ಞತೆಯಿಂದ ಶರಣಾಗುವುದೇ ಈ ವ್ರತದ ಮೂಲ ಉದ್ದೇಶವಾಗಿದೆ. ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ಮಾಡುವ ಉಪವಾಸ, ಪೂಜೆ ಮತ್ತು ದಾನಗಳು ಕುಟುಂಬಕ್ಕೆ ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತವೆ.

ಶ್ರಾವಣ ಪೂರ್ಣಿಮೆಯ ಪೌರಾಣಿಕ ಹಿನ್ನೆಲೆ ಮತ್ತು ಹಯಗ್ರೀವ ಜಯಂತಿ:

ಶ್ರಾವಣ ಮಾಸದ ಹುಣ್ಣಿಮೆಯು ಆಧ್ಯಾತ್ಮಿಕವಾಗಿ ಮತ್ತು ಪೌರಾಣಿಕವಾಗಿ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಕ್ಷೀರಸಾಗರ ಮಂಥನದ ಸಮಯದಲ್ಲಿ ಲಕ್ಷ್ಮಿ ದೇವಿ ಹಾಗೂ ಚಂದ್ರದೇವ ಇಬ್ಬರೂ ಅವತರಿಸಿದರು ಎಂಬುದು ಪುರಾಣಗಳ ಉಲ್ಲೇಖ. ಆದ್ದರಿಂದಲೇ ಚಂದ್ರ ಮತ್ತು ಲಕ್ಷ್ಮಿ ದೇವಿಯ ನಡುವೆ ಅಪೂರ್ವವಾದ ಸೋದರ ಹಾಗೂ ಆಧ್ಯಾತ್ಮಿಕ ಸಂಬಂಧವಿದೆ ಎಂದು ನಂಬಲಾಗುತ್ತದೆ. ಇದೇ ಶುಭ ದಿನದಂದು ಭಗವಾನ್ ವಿಷ್ಣುವು ಹಯಗ್ರೀವ ಅಂದರೆ ಕುದುರೆಯ ಮುಖವುಳ್ಳ ಅವತಾರವನ್ನು ತಾಳಿ, ಸೋಮಕಾಸುರನೆಂಬ ರಾಕ್ಷಸನಿಂದ ವೇದಗಳನ್ನು ಮರಳಿ ತಂದು ಬ್ರಹ್ಮದೇವನಿಗೆ ಹಸ್ತಾಂತರಿಸಿದನು. ಹೀಗಾಗಿ, ಶ್ರಾವಣ ಪೂರ್ಣಿಮೆಯನ್ನು ಜ್ಞಾನ, ಶಿಕ್ಷಣ ಮತ್ತು ಉಪಾಸನೆಯ ಪಾವನ ಪರ್ವವೆಂದು ಭಾವಿಸಲಾಗುತ್ತದೆ. ವೈದಿಕ ಸಂಪ್ರದಾಯವನ್ನು ಅನುಸರಿಸುವವರು ಈ ದಿನದಂದು ‘ಉಪಾಕರ್ಮ’ ಆಚರಿಸುತ್ತಾರೆ ಹಾಗೂ ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಲಕ್ಷ್ಮಿಯ ನಿಜವಾದ ಸ್ವರೂಪ:

ಸಾಮಾನ್ಯವಾಗಿ ಲಕ್ಷ್ಮಿ ಎಂದರೆ ಕೇವಲ ಹಣ, ಚಿನ್ನ ಅಥವಾ ಭೌತಿಕ ಸಂಪತ್ತು ಎಂದಷ್ಟೇ ಭಾವಿಸಲಾಗುತ್ತದೆ. ಆದರೆ ಆಧ್ಯಾತ್ಮಿಕ ದೃಷ್ಟಿಕೋನದಿಂದ, ಲಕ್ಷ್ಮಿಯನ್ನು ಸಂಪತ್ತು, ಆರೋಗ್ಯ, ಮಕ್ಕಳು, ಜ್ಞಾನ, ಧೈರ್ಯ, ಅದೃಷ್ಟ ಮತ್ತು ಶುಭ-ಸಮೃದ್ಧಿ ಮುಂತಾದ ಹಲವು ರೂಪಗಳಲ್ಲಿ ಬರುವ ದೈವಿಕ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಕ್ಷೀರಸಾಗರದಲ್ಲಿ ಜನಿಸಿದ ಲಕ್ಷ್ಮಿಯು ಶ್ರೀಮನ್ನಾರಾಯಣನ ಶಾಶ್ವತ ಶಕ್ತಿಯಾಗಿದ್ದಾಳೆ. ಧರ್ಮ, ನೀತಿ, ನಮ್ರತೆ ಮತ್ತು ಕಠಿಣ ಪರಿಶ್ರಮವಿರುವ ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯು ಸದಾ ವಾಸಿಸುತ್ತಾಳೆ.

ಕುಟುಂಬ ಸಂಪ್ರದಾಯ ಮತ್ತು ವ್ರತದ ಮುಕ್ತಾಯ:

ವರಲಕ್ಷ್ಮಿ ವ್ರತದ ಪೂಜಾ ವಿಧಾನಗಳು, ನೈವೇದ್ಯಗಳು ಮತ್ತು ಆಚರಣೆಗಳು ಆಯಾ ಪ್ರದೇಶ, ಪಂಚಾಂಗ ಹಾಗೂ ಕುಟುಂಬದ ಪದ್ಧತಿಗೆ ಅನುಗುಣವಾಗಿ ವ್ಯತ್ಯಾಸವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆತನದ ಹಿರಿಯರು ಬೆಳೆಸಿಕೊಂಡು ಬಂದ ಸಂಪ್ರದಾಯ ಹಾಗೂ ಸ್ಥಳೀಯ ಪದ್ಧತಿಯನ್ನು ಅನುಸರಿಸಿ, ಶ್ರದ್ಧೆ-ಭಕ್ತಿಗಳಿಂದ ಪೂಜೆ ಸಲ್ಲಿಸುವುದು ಅತ್ಯಂತ ಶ್ರೇಯಸ್ಕರವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us