AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಾವತಾರದಲ್ಲಿ ಮನುಕುಲದ ಧರ್ಮ, ಕರ್ಮ ಯಾವ ರೀತಿಯದ್ದಾಗಿತ್ತು? ಶ್ರೀರಾಮನಾಮದ ಜಪದಿಂದ ಸದ್ಗತಿ ಹೇಗೆ?

ರಾಮಾಯಣದ ಸಾರದ ಪ್ರಕಾರ ಆ ಯುಗದ ತತ್ವ ಹೇಳುವುದಾದರೆ ಮಾನವನು ಏನೇ ಆಗಲಿ ನಡೆದು ನುಡಿಯಬೇಕು. ಅಥವಾ ನಡೆಯೇ ನುಡಿಯಾಗಬೇಕು ಎಂದು. ವಾಸ್ತವವಾಗಿ ಧರ್ಮವೆಂದರೆ ಪರೋಪಕಾರ. ನಾವು ಮಾಡುವ ಆಚರಣೆಗಳಿಂದ ಪರರಿಗೆ ಮತ್ತು ಪ್ರಕೃತಿಗೆ ಯಾವುದೇ ನೋವಾಗದೆ ನಮ್ಮ ಸಾತ್ವಿಕ , ಆಧ್ಯಾತ್ಮಿಕ ಅಭಿಲಾಷೆಯನ್ನು ಸಾಧಿಸುವುದೇನಿದೆ ಅದೇ ಧರ್ಮ. ಅದಕ್ಕಾಗಿ ಮಾಡುವ ಕೆಲಸವೇನಿದೆ ಅದು ಕರ್ಮ.

ರಾಮಾವತಾರದಲ್ಲಿ ಮನುಕುಲದ ಧರ್ಮ, ಕರ್ಮ ಯಾವ ರೀತಿಯದ್ದಾಗಿತ್ತು? ಶ್ರೀರಾಮನಾಮದ ಜಪದಿಂದ ಸದ್ಗತಿ ಹೇಗೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 14, 2023 | 7:13 AM

Share

ಈ ಭೂಮಿಯಲ್ಲಿ ನಾಲ್ಕು ಯುಗಗಳ ವ್ಯವಸ್ಥೆ ಇದೆ. ಮೊದಲನೇಯದ್ದು ಸತ್ಯಯುಗ. ಎರಡನೇಯದ್ದು ತ್ರೇತಾಯುಗ. ಮೂರನೇಯದ್ದು ದ್ವಾಪರಯುಗ. ನಾಲ್ಕನೇಯದ್ದು ಕಲಿಯುಗ. ಆಯಾಯ ಯುಗಕ್ಕನುಗುಣವಾದ ಧರ್ಮಗಳನ್ನು ಶಾಸ್ತ್ರಗಳು ಕಾಲಕ್ಕೆ ತಕ್ಕಂತೆ ವಿಧಿಸಿವೆ. ಆಚರಿಸುವ ಧರ್ಮಗಳಲ್ಲಿ ಪ್ರಕೃತಿಗೆ ವಿರುದ್ಧವಾದ ಸಂದಿಗ್ಧ ಸ್ಥಿತಿ ಉಂಟಾದಾಗ ಮತ್ತು ಸತ್ವಮಯವಾದ ಜೀವನ ಸಾಗಿಸುವ ಸಾತ್ವಿಕ ಜನರಿಗೆ ಅಪಾಯದ ವಾತಾವರಣ ನಿರ್ಮಾಣ ಆದಕ್ಷಣದಲ್ಲಿ ಭಗವಂತ ನಾನಾ ನೆಪಗಳಿಂದ ಅವತಾರ ತಾಳುತ್ತಾನೆ. ಇಂತಹ ಒಂದು ಅವತಾರವೇ ರಾಮಾವತಾರ. ಅದು ನಡೆದದ್ದು ತ್ರೇತಾಯುಗದ ಅಂತಿಮ ಘಟ್ಟದಲ್ಲಿ. ರಾಮಾಯಣದ ಸಾರದ ಪ್ರಕಾರ ಆ ಯುಗದ ತತ್ವ ಹೇಳುವುದಾದರೆ ಮಾನವನು ಏನೇ ಆಗಲಿ ನಡೆದು ನುಡಿಯಬೇಕು. ಅಥವಾ ನಡೆಯೇ ನುಡಿಯಾಗಬೇಕು ಎಂದು. ವಾಸ್ತವವಾಗಿ ಧರ್ಮವೆಂದರೆ ಪರೋಪಕಾರ. ನಾವು ಮಾಡುವ ಆಚರಣೆಗಳಿಂದ ಪರರಿಗೆ ಮತ್ತು ಪ್ರಕೃತಿಗೆ ಯಾವುದೇ ನೋವಾಗದೆ ನಮ್ಮ ಸಾತ್ವಿಕ , ಆಧ್ಯಾತ್ಮಿಕ ಅಭಿಲಾಷೆಯನ್ನು ಸಾಧಿಸುವುದೇನಿದೆ ಅದೇ ಧರ್ಮ. ಅದಕ್ಕಾಗಿ ಮಾಡುವ ಕೆಲಸವೇನಿದೆ ಅದು ಕರ್ಮ.

ರಾಮಾಯಣದ ಕಾಲದಲ್ಲಿ ಇದ್ದ ಧರ್ಮ ಕರ್ಮವೆಂದರೆ ಅದು ಪರನಿಂದೆ ಮಾಡದಿರುವುದು. ಅದೇ ರೀತಿ ಮೊದಲು ತಾನು ನಡೆದು (ಆಚರಿಸಿ) ತೋರಿಸುವುದು ಆ ಮೇಲೆ ಹೇಳುವುದು. ಇವೆರಡು ಇಲ್ಲಿ ಮುಖ್ಯವಾಗಿತ್ತು. ಶಾಸ್ತ್ರದ ಪ್ರಕಾರವೂ ಪರನಿಂದೆ ಎನ್ನುವುದು ಅತ್ಯಂತ ಪಾಪಕಾರಕ. ಆದ ಕಾರಣ ರಾಮ ತಾನು ಎಲ್ಲೂ ಪರನಿಂದೆಯನ್ನು ಮಾಡಲಿಲ್ಲ. ಮತ್ತು ತನ್ನ ನಡೆಯೇ ಇತರರಿಗೆ ನುಡಿಯಾಗುವಂತೆ ಬಾಳಿದ. ಅವನ ಕಾಲದಲ್ಲಿ ಜ್ಞಾನಕ್ಕೆ ಅತ್ಯಂತ ಮಹತ್ವವಿತ್ತು. ವರ್ಣವೆನ್ನುವುದು ಅವನ ಕರ್ಮದಿಂದ ತೀರ್ಮಾನವಾಗುತ್ತಿತ್ತು. ಅದರೊಂದಿಗೆ ಪಿತೃವಾಕ್ಯಕ್ಕೆ ಎದುರಾಡಬಾರದು ಎಂಬ ಮಹತ್ತರ ಪಾಠ ರಾಮನ ನಡೆಯಲ್ಲಿತ್ತು. ಹಾಗೆಯೇ ಅವನು ಯಾವುದೇ ವೈಭೋಗಕ್ಕೆ ಅಂಟಿಕೊಂಡಿರಬೇಡಿ ಎಂಬ ತತ್ವವನ್ನು ತಾನು ಪಾಲಿಸಿದ ಪರಿಯೇ ಅಂದಿನ ಮನುಕುಲಕ್ಕೆ ಶ್ರದ್ಧೆಯ ಪಾಠವಾಯಿತು. ಅದು ಅರ್ಥೈಸುವ ಮನಸಿದ್ದರೆ ಇಂದಿಗೂ ಹಸಿಯಾಗಿ ಆದರ್ಶ ಪ್ರಾಯವಾಗಿದೆ.

ಇದನ್ನೂ ಓದಿ: Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ

ಸಹೋದರರು ಹೇಗಿರಬೇಕು ಎಂಬ ಧರ್ಮದ ಪಾಠ ರಾಮಾಯಣ ಕಾಲದಲ್ಲಿ ರಾಮ ಮತ್ತು ಅವನ ಸಹೋದರರು ಬಾಳಿದಷ್ಟು ಚೆನ್ನಾಗಿ ಬಾಳಿದ್ದು ಎಲ್ಲಿಯೂ ಕಾಣುವುದಿಲ್ಲ. ಪ್ರತಿಯೊಂದೂ ಜೀವಿಗಳಿಗೂ ಅದರದ್ದೇ ಧರ್ಮವಿದೆ ಅದನ್ನು ನಾವು ತಿಳಿಯಬೇಕು ಎಂಬುದನ್ನು ಕರಡಿ (ಜಾಂಬವ) ಮತ್ತು ಕಪಿಗಳ ಮೂಲಕ ಮನುಕುಲಕ್ಕೆ ತಿಳಿಸಿದ ಕಾಲ ರಾಮಾವತಾರದ ಕಾಲ ಅರ್ಥಾತ್ ತ್ರೇತಾಯುಗ. ಅಧರ್ಮ ಎಲ್ಲಿದ್ದರೂ ಖಂಡನಾರ್ಹ ಎಂಬುದನ್ನು ರಾಮನು ಸಮುದ್ರ ದಾಟಿ ಹೋಗಿ ದುಷ್ಟರ ನಾಶ ಮಾಡಿ ವಿಭೀಷಣನಿಗೆ ಪಟ್ಟಕಟ್ಟಿ ಜಗತ್ತಿಗೆ ತೋರಿಸಿದ. ಸಾತ್ವಿಕ ಮನುಕುಲವನ್ನು ಯಾವುದೇ ಸ್ವಾರ್ಥವಿಲ್ಲದೇ ಪ್ರೀತಿಸಬೇಕು ಎನ್ನುವುದೇ ಅಂದಿನ ಕಾಲದ ತಾತ್ವಿಕ ಧರ್ಮವಾಗಿತ್ತು. ಹಾಗೆಯೇ ನಾವು ಮಾಡುವ ಯಾವುದೇ ಕರ್ಮಗಳಿಂದ ವೈಭೋಗದ ಆಸೆಗಳಿಗೆ ಅಂಟಿಕೊಳ್ಳಬಾರದು ಅದರಿಂದ ದುಃಖವೇ ಹೊರತು ನೆಮ್ಮದಿಯಿಲ್ಲ ಎಂಬುದು ರಾಮಾಯಣ ಕಾಲದ ಸುಂದರ ತತ್ವವೆನ್ನಬಹುದು.

ರಾಮ ನಾಮದಿಂದ ಸದ್ಗತಿ ಹೇಗೆ ?

ರಮಂತೇ ಅಸ್ಮಿನ್ ಯೋಗಿನಃ ಇತಿ ರಾಮಃ ಅಂದರೆ ಯೋಗಿಗಳು ಯಾವತನಲ್ಲಿ ಆನಂದವನ್ನು ಕಾಣುತ್ತಾರೋ ಅವನು ರಾಮ. ಇಲ್ಲಿ ಕಾಣುವುದು ಎಂದರೆ ಜಪಿಸುವುದು ಎಂದು ನಾವು ಭಾವಿಸಬೇಕು. ಒಟ್ಟೂ ತಾತ್ಪರ್ಯ ಹೀಗಿದೆ – ಯಾವಾತನ ಜೀವನಾದರ್ಶವನ್ನು ನೋಡುತ್ತಾ ಅವನ ನಾಮವನ್ನು ಜಪಿಸಿದಾಗ ಆನಂದವುಂಟಾಗುತ್ತದೋ ಅವನೇ ರಾಮ.

ರಾಮ ಎಂಬ ಶಬ್ದಕ್ಕೆ ಪರಬ್ರಹ್ಮ ಎಂಬ ಅರ್ಥವೂ ಇದೆ. ಉಪನಿಷತ್ತಿನ ಪ್ರಕಾರ ಪರಬ್ರಹ್ಮವೆಂ(ನೆಂ)ದರೆ ಆನಂದ ಎಂದು ಅರ್ಥ. ಈ ರಾಮ ಎಂಬ ಶಬ್ದ ರಮು ಕ್ರೀಡಾಯಾಂ”ಎಂಬ ಧಾತುವಿನಿಂದ ಹುಟ್ಟಿಕೊಂಟಿದೆ. ಕ್ರೀಡೆಯೆಂಬುದು ಆನಂದ ಜನಕವಾಗಿದೆ. ಆದರೆ ಇಲ್ಲಿ ಕ್ರೀಡೆಯೆಂದರೆ ಲೌಕಿಕವಾದ ಕ್ರೀಡೆಯಲ್ಲ. ಅಲೌಕಿಕವಾದ ಧ್ಯಾನ ಇತ್ಯಾದಿಗಳನ್ನು ಗ್ರಹಿಸಬೇಕು. ಆದ್ದರಿಂದ ರಾಮ ಎಂಬ ಶಬ್ದವು ಆನಂದ ಜನಕವಾಗಿದೆ. ಆನಂದ ಜನಕವಾದ ಪದದ (ನಾಮದ) ಕಡೆಗೆ ಮನಸ್ಸು ಹೆಚ್ಚು ಶ್ರದ್ಧೆಯಿಂದ ಸಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರಾಮ ನಾಮ ಸ್ಮರಣೆಯೆಂಬುದು ಅತ್ಯಂತ ಸುಲಭವಾಗಿ ಶ್ರದ್ಧೆಯಿಂದ ಮಾಡಲ್ಪಡುತ್ತದೆ. ಆದ ಕಾರಣ ಶೀಘ್ರವಾದ ಫಲ ಈ ನಾಮದ ಸ್ಮರಣೆಯಿಂದ ಸಾಧ್ಯ. ಇಲ್ಲಿ ಹೇಳಿದ ಸದ್ಗತಿಯೆನ್ನುವುದು ಉತ್ತಮ ಸ್ಥಿತಿ ಎನ್ನುವ ಅರ್ಥದಲ್ಲಿ ಬಳಸಿದ್ದಾಗಿದೆ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು