Krishna janmashtami-Saligrama Pooja: ಜನ್ಮಾಷ್ಟಮಿ ದಿನ ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು, ಪೂಜೆಯ ವಿಧಾನ ಹೇಗೆ?

Saligrama Pooja: ಭಗವಾನ್ ವಿಷ್ಣುವಿನ ಅವತಾರಗಳು ಪುರಾಣದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಅಂತಹ ಅವತಾರಗಳಲ್ಲಿ ರಾಮ ಮತ್ತು ಕೃಷ್ಣನ ಅವತಾರವೂ ಇದೆ. ರಾಮನಿಗೆ ಮೀಸಲಾದ ರಾಮನವಮಿ ಹಾಗೂ ಕೃಷ್ಣನಿಗೆ ಮೀಸಲಾದ ಕೃಷ್ಣ ಜನ್ಮಾಷ್ಟಮಿಯಂದು ಸಾಲಿಗ್ರಾಮವನ್ನು ಪೂಜಿಸಲಾಗುವುದು. ಅದು ವಿಷ್ಣುವಿನ ಪುಟ್ಟ ರೂಪ ಎಂದು ಪರಿಗಣಿಸಲಾಗುವುದು. ಅಂದು ಸಾಲಿಗ್ರಾಮದ ಪೂಜೆ, ಶ್ಲೋಕ, ಹವನ, ಯಜ್ಞ ಮತ್ತು ಮಂತ್ರಗಳನ್ನು ಹೇಳುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಅತ್ಯಂತ ಪವಿತ್ರ ಎನ್ನಲಾಗುತ್ತದೆ.

Krishna janmashtami-Saligrama Pooja: ಜನ್ಮಾಷ್ಟಮಿ ದಿನ ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು, ಪೂಜೆಯ ವಿಧಾನ ಹೇಗೆ?
ಜನ್ಮಾಷ್ಟಮಿ ದಿನ ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು
Follow us
|

Updated on:Aug 25, 2024 | 7:16 AM

ಗಾಢವಾದ ಕಪ್ಪು ಬಣ್ಣ ಹಾಗೂ ನುಣುಪಾದ ಕಲ್ಲಿನ ರೂಪದಲ್ಲಿ ಇರುವುದೇ ಸಾಲಿಗ್ರಾಮ. ಈ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಗುವುದು. ದೈವ ಶಕ್ತಿಯನ್ನು ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಆಗಮಿಸುವುದು. ಇದನ್ನು ಮನೆಯಲ್ಲಿ ಪ್ರತಿಷ್ಠೆ ಮಾಡುವಾಗ ಅಥವಾ ಮನೆಯಲ್ಲಿ ಇಟ್ಟುಕೊಳ್ಳುವಾಗ ಸೂಕ್ತ ಕ್ರಮದಡಿ ಸಮರ್ಥವಾಗಿ ಸ್ವಾಮಿನಿಷ್ಠೆಯಿಂದ ಆರಾಧನೆ ಮಾಡಬೇಕು. ಇಲ್ಲವಾದರೆ ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು.

ವೈಷ್ಣವರು ಹಾಗೂ ವಿಷ್ಣು ಭಕ್ತರು ಸಾಲಿಗ್ರಾಮವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಭಗವಾನ್ ವಿಷ್ಣುವಿಗೆ ಗೌರವ ನೀಡಿದಂತೆ ಎಂದು ಹೇಳಲಾಗುವುದು. ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಅರ್ಪಿಸಿದರೆ ಭಗವಾನ್​ ವಿಷ್ಣು ಸಂತೃಪ್ತನಾಗುತ್ತಾನೆ. ಯಾರು ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಇಟ್ಟು ಪೂಜಿಸುತ್ತಾರೋ ಅವರು ಮನೆಯಲ್ಲಿ ನೆಮ್ಮದಿ, ಸಂತೋಷವನ್ನು ಪಡೆದುಕೊಳ್ಳುವರು. ಅವರಿಗೆ ಎಂದಿಗೂ ಬಡತನ, ಹಣದ ಸಮಸ್ಯೆ, ಅಸಮಾಧಾನ, ಆತಂಕ, ಭಯ, ಭ್ರಮೆ ಯಾವುದೂ ಉಂಟಾಗದು. ಜೊತೆಗೆ ಮನೆಯೊಳಗೆ ಯಾವುದೇ ಋಣಾತ್ಮಕ ಶಕ್ತಿ ಮತ್ತು ರೋಗವನ್ನು ತರುವ ಕೀಟಗಳು ಪ್ರವೇಶಿಸುವುದಿಲ್ಲ ಎಂಬ ನಂಬಿಕೆಯಿದೆ.

ಸಾಲಿಗ್ರಾಮ ಎನ್ನುವುದು ನೇಪಾಳದ ಗಂಡಕಿ ನದಿಯ ಭಾಗದಲ್ಲಿ ಕಂಡುಬರುತ್ತದೆ. ಸಾಲಿಗ್ರಾಮ ಎನ್ನುವುದು ದೈವ ಶಕ್ತಿಯನ್ನು ಹೊಂದಿರುವ ಒಂದು ಕಲ್ಲಿನ ರೂಪ. ಹಿಂದೂ ಧರ್ಮದಲ್ಲಿ ಪ್ರಕೃತಿಯ ಪ್ರತಿಯೊಂದು ಸಂಗತಿಯಲ್ಲೂ ದೇವರ ರೂಪವನ್ನು ಕಾಣಲಾಗುವುದು. ಅಂತೆಯೇ ಅದಕ್ಕೆ ವಿಶೇಷ ಪೂಜೆ ಪುನಸ್ಕಾರವನ್ನು ಸಲ್ಲಿಸಲಾಗುವುದು. ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ಒಂದು ಶ್ರೇಷ್ಠ ಪದ್ಧತಿ. ಈ ಪದ್ಧತಿಯ ಹಿಂದೆ ಇರುವ ಹಿನ್ನೆಲೆ, ಉಪಯೋಗ ಹಾಗೂ ಭವಿಷ್ಯಕ್ಕೆ ತರುವ ಅದೃಷ್ಟ ಹೀಗೆ ವಿವಿಧ ಸಂಗತಿಗಳನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಭಗವಾನ್ ವಿಷ್ಣುವಿನ ಅವತಾರಗಳು ಪುರಾಣ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಅಂತಹ ಅವತಾರಗಳಲ್ಲಿ ರಾಮ ಮತ್ತು ಕೃಷ್ಣನ ಅವತಾರವೂ ಒಂದು. ರಾಮನಿಗೆ ಮೀಸಲಾದ ರಾಮನವಮಿ ಹಾಗೂ ಕೃಷ್ಣನಿಗೆ ಮೀಸಲಾದ ಕೃಷ್ಣ ಜನ್ಮಾಷ್ಟಮಿಯಂದು ಸಾಲಿಗ್ರಾಮವನ್ನು ಪೂಜಿಸಲಾಗುವುದು. ಅದು ವಿಷ್ಣುವಿನ ಪುಟ್ಟ ರೂಪ ಎಂದು ಪರಿಗಣಿಸಲಾಗುವುದು. ಅಂದು ಸಾಲಿಗ್ರಾಮದ ಪೂಜೆ, ಶ್ಲೋಕ, ಹವನ, ಯಜ್ಞ ಮತ್ತು ಮಂತ್ರಗಳನ್ನು ಹೇಳುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಅತ್ಯಂತ ಪವಿತ್ರ ಎನ್ನಲಾಗುತ್ತದೆ.

ಅಂದು ಸಾಮಾನ್ಯವಾಗಿ ಸಾಲಿಗ್ರಾಮಕ್ಕೆ ಗಂಗಾ ಅಥವಾ ಪವಿತ್ರ ನೀರಿನ ಅಭಿಷೇಕ ಮಾಡುವರು. ಜೊತೆಗೆ ಐದು ಶುಭ ಪದಾರ್ಥಗಳಾದ ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು ಮತ್ತು ಹಾಲನ್ನು ಸೇರಿಸಿ ಪಂಚಾಮೃತವನ್ನು ತಯಾರಿಸುವರು. ಅದನ್ನು ಸಾಲಿಗ್ರಾಮಕ್ಕೆ ಅಭಿಷೇಕ ಮಾಡುವುದರ ಮೂಲಕ ಪೂಜೆಯನ್ನು ಮಾಡುತ್ತಾರೆ. ಸಾವಿರ ಶಿವಲಿಂಗದ ದರ್ಶನ ಪಡೆಯುವುದು ಹಾಗೂ ಒಂದು ಸಾಲಿಗ್ರಾಮದ ದರ್ಶನ ಪಡೆಯುವುದು ಒಂದೇ ಎಂದು ಶಿವ ಹೇಳಿದ್ದಾನೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ.

Krishna janmashtami and Saligrama Pooja: ಸಾಲಿಗ್ರಾಮದ ಉಗಮ ಹೇಗಾಯಿತು? ಸಾಲಿಗ್ರಾಮದ ಕಲ್ಲು ವಿಷ್ಣುವಿನ ರೂಪವಾಗಿದ್ದು ಯಾಕೆ?

ಒಮ್ಮೆ ಶಿವ ಮತ್ತು ರಾಕ್ಷಸ ಜಲಂಧರ ನಡುವೆ ಯುದ್ಧ ಪ್ರಾರಂಭವಾಯಿತು. ಆಗ ಶಿವನು ವಿಷ್ಣುವಿನ ಹತ್ತಿರ ಸಹಾಯ ಕೇಳಿದನು. ವಿಷ್ಣು ವೃಂದಾಳ ಪತಿ ಜಲಂಧರನ ರೂಪವನ್ನು ತಾಳಿ ವೃಂದಾಳ ಪವಿತ್ರತೆಯನ್ನು ಕೆಡವಿದನು. ನಂತರ ಶಿವನು ಜಲಂಧರನನ್ನು ಸೋಲಿಸಿದನು. ಆಗ ವೃಂದಾ ಕೃಷ್ಣನಿಗೆ ಕಲ್ಲು ಹುಲ್ಲುಮರವಾಗಿ ಹೋಗು ಎಂದು ಶಾಪ ನೀಡಿದಳು. ಅವಳ ಶಾಪದಿಂದ ವಿಷ್ಣು ದೇವನು ಸಾಲಿಗ್ರಾಮದ ಕಲ್ಲು, ದರ್ಬೆ ಮತ್ತು ಅಶ್ವತ್ಥ ಮರವಾಗಿ ಹುಟ್ಟಿದ ಎಂದು ಹೇಳಲಾಗುತ್ತದೆ. ದರ್ಬೆ ಹುಲ್ಲು ಮತ್ತು ಸಾಲಿಗ್ರಾಮ ಮತ್ತು ಅಶ್ವತ್ತ್ಥ ಮರದ ಪೂಜೆಯನ್ನು ಮಾಡಲಾಯಿತು. ಪ್ರತಿ ಶನಿವಾರ ಅಶ್ವತ್ತ್ಥ ಮರಕ್ಕೆ ನೀರನ್ನು ಹಾಕುವುದು ಹಾಗೂ ಪೂಜೆ ಮಾಡಿದರೆ ಅತ್ಯಂತ ಪುಣ್ಯ ಪ್ರಾಪ್ತಿಯಾಗುವುದು. ವೃಂದಾಳ ಶಾಪದಿಂದ ವಿಷ್ಣು ಕಲ್ಲಿನ ರೂಪವಾಗಿ ಸಾಲಿಗ್ರಾಮವಾದನು. ಅಂದಿನಿಂದ ಸಾಲಿಗ್ರಾಮದ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಯಿತು.

Krishna janmashtami and Saligrama Pooja: ಸಾಲಿಗ್ರಾಮದಲ್ಲಿ ಚಕ್ರದ ಗುರುತು:

ಭಗವಾನ್ ವಿಷ್ಣುವಿನ ಕೈಯಲ್ಲಿ ಸುದರ್ಶನ ಚಕ್ರ ಇರುವುದು ಸಾಮಾನ್ಯ. ಸಾಲಿಗ್ರಾಮವು ಶ್ರೀ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಸಾಲಿಗ್ರಾಮದ ಮೇಲೆ ಚಕ್ರಗಳ ಗುರುತು ಇರುವುದನ್ನು ಕಾಣಬಹುದು. ಆ ಚಕ್ರಗಳು ವಿಭಿನ್ನ ಸಂಖ್ಯೆಗಳಿಂದಲೂ ಕೂಡಿರುವುದನ್ನು ಕಾಣಬಹುದು. ವಿಷ್ಣುವಿನ ರೂಪವನ್ನು ಪ್ರತಿಬಿಂಬಿಸುವ ಈ ಕಲ್ಲಿಗೆ ಪೂಜೆಯನ್ನು ಸಲ್ಲಿಸಿದರೆ ಪುಣ್ಯ ಪ್ರಾಪ್ತಿಯಾಗುವುದು. ವಿಷ್ಣು ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಸಾಲಿಗ್ರಾಮವು ಶಂಖ, ಗಧಾ, ರಂಧ್ರ, ದೊಡ್ಡ ಮತ್ತು ಸಣ್ಣ ಗಾತ್ರ, ಸುರುಳಿ ಗಾತ್ರ, ಅಂಡಾಕಾರಗಳ ಆಕೃತಿಯಲ್ಲಿ ಹಾಗೂ ಕೆಂಪು, ಹಳದಿ, ಬಹುತೇಕವಾಗಿ ಕಪ್ಪು ಬಣ್ಣಗಳಲ್ಲಿ ಕಂಡು ಬರುತ್ತದೆ.

Krishna janmashtami and Saligrama Pooja: ಸಾಲಿಗ್ರಾಮದ ಸ್ಥಾಪನೆ:

ಸಾಲಿಗ್ರಾಮದ ಕಲ್ಲು ವಿಷ್ಣುದೇವರ ಪ್ರತಿರೂಪ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸಬಹುದು. ಸಾಲಿಗ್ರಾಮವನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಸೇರಿದಂತೆ ಇತರ ದೇವತೆಗಳನ್ನು ಹೊಂದಿದ್ದರೂ ಸಹ ಇಟ್ಟು ಪೂಜಿಸಬಹುದು. ಇದನ್ನು ಮನೆಯಲ್ಲಿ ಇಟ್ಟ ಬಳಿಕ ನಿತ್ಯವೂ ಪೂಜಿಸುವುದನ್ನು ಮರೆಯಬಾರದು.

Krishna janmashtami and Saligrama Pooja: ಸಾಲಿಗ್ರಾಮದ ಆರಾಧನೆ ಪಾಪವನ್ನು ತೊಳೆಯುವುದು:

ಸಾಲಿಗ್ರಾಮವನ್ನು ಪವಿತ್ರ ಸ್ಥಾನದಲ್ಲಿ ಇಟ್ಟು, ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಬೇಕು. ಹಾಗೆ ಮಾಡಿದಾಗ ನಮ್ಮ ಹಿಂದಿನ ಜನ್ಮದಲ್ಲಿ ಹಾಗೂ ಪ್ರಸ್ತುತ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳೆಲ್ಲವೂ ತೊಳೆದುಹೋಗುತ್ತವೆ. ಮನೆಯಲ್ಲಿ ಒಂದು ಸಾಲಿಗ್ರಾಮವನ್ನು ಇಟ್ಟು ಪೂಜಿಸಿದರೆ 1000 ಹಸುಗಳನ್ನು ಬ್ರಾಹ್ಮಣನಿಗೆ ದಾನ ಮಾಡಿದ ಪುಣ್ಯ ಬರುವುದು.

Krishna janmashtami and Saligrama Pooja: ಉತ್ತಮ ಆರೋಗ್ಯ ಲಭಿಸುವುದು:

ಮನೆಯಲ್ಲಿ ಸಾಲಿಗ್ರಾಮವನ್ನು ಇಟ್ಟು ಪೂಜಿಸುವಾಗ ಧಾರ್ಮಿಕ ರೀತಿ ನೀತಿಗಳು ಸೂಕ್ತ ಕ್ರಮದಲ್ಲಿ ನಡೆಯಬೇಕು. ಆಗ ಭಗವಾನ್ ವಿಷ್ಣುವು ವರ ಮತ್ತು ಆಶೀರ್ವಾದವನ್ನು ಕರುಣಿಸುವನು. ವ್ಯಕ್ತಿಯು ಉತ್ತಮ ಆರೋಗ್ಯ ಹಾಗೂ ಉತ್ತಮ ಆಧ್ಯಾತ್ಮಿಕ ಚಿಂತನೆಗಳನ್ನು ಮನಗೊಳ್ಳುವನು. ಇದನ್ನು ಪೂಜಿಸುವಾಗ ವಿಷ್ಣು ಸಹಸ್ರನಾಮ, ಅಷ್ಟೋತ್ತರ, ವಿಶೇಷ ಮಂತ್ರ, ಶ್ಲೋಕ ಅಥವಾ ಹಾಡನ್ನು ಹೇಳಬೇಕು. ಶುದ್ಧವಾದ ಎಣ್ಣೆಯಲ್ಲಿ ದೀಪವನ್ನು ಬೆಳಗುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು.

Krishna janmashtami and Saligrama Pooja – ಸಾಲಿಗ್ರಾಮಕ್ಕೆ ತುಳಸಿ ದಳ:

ಸಾಲಿಗ್ರಾಮದ ಕಲ್ಲಿಗೆ ತುಳಸಿ ದಳಗಳನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು. ಅದು ಅತ್ಯಂತ ಶ್ರೇಷ್ಠವಾದುದು. ಈ ರೀತಿಯ ಪೂಜೆಯಿಂದ ವಿಷ್ಣು ದೇವ ಸಂತುಷ್ಟನಾಗುವನು. ಹಾಗಾಗಿಯೇ ಪ್ರತಿ ವರ್ಷ ಮಾಡುವ ತುಳಸಿ ಪೂಜೆಯನ್ನು ಸಾಲಿಗ್ರಾಮದ ಕಲ್ಲನ್ನು ಇಟ್ಟು ವಿವಾಹ ಮಾಡುವ ಪದ್ಧತಿ ಇದೆ. ತುಳಸಿಯೊಂದಿಗೆ ಸಾಲಿಗ್ರಾಮದ ಪೂಜೆ ಮಾಡಿದರೆ ಆ ಮನೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿಯು ಸದಾ ಕಾಲ ನೆಲೆಗೊಳ್ಳುವುದು.

ಸಾಲಿಗ್ರಾಮ ಪೂಜೆಯಿಂದ ಯಮನು ದೂರ ನಿಲ್ಲುವನು!!!:

ಸಾಲಿಗ್ರಾಮದ ಪೂಜೆಯನ್ನು ಮಾಡುವವರ ಹತ್ತಿರ ಯಮದೂತನು ಬರುವುದಿಲ್ಲ. ಯಮ ಮತ್ತು ಅವನ ಸೇವಕರು ಬಂದರೆ ನರಕ ಪ್ರಾಪ್ತಿಯಾಗುವುದು. ಅದೇ ಸಾಲಿಗ್ರಾಮವನ್ನು ಪೂಜೆ ಮಾಡುವವರು ಮೋಕ್ಷದ ನಂತರ ವೈಕುಂಠ ಧಾಮ ಅಂದರೆ ವಿಷ್ಣುವಿನ ಪವಿತ್ರ ಸ್ಥಳಕ್ಕೆ ಹೋಗುವರು. ಹಾಗಾಗಿ ಸಾಲಿಗ್ರಾಮವನ್ನು ಮುಕ್ತಿನಾಥ ಸಾಲಿಗ್ರಾಮ ಎಂದು ಸಹ ಕರೆಯುವರು. ವಿಷ್ಣು ದೇವ ಪ್ರತಿಯೊಂದು ಜೀವಿಗೂ ಸ್ವಾತಂತ್ರ್ಯ ಹಾಗೂ ಮುಕ್ತಿಯನ್ನು ನೀಡುವನು ಎಂದು ಹೇಳಲಾಗುವುದು.

ಸಾಲಿಗ್ರಾಮಕ್ಕೆ ನಿತ್ಯ ಪೂಜೆ: ಸಾಲಿಗ್ರಾಮವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವಾಗ ಸರಿಯಾದ ಧಾರ್ಮಿಕ ಕ್ರಮವನ್ನು ಅನುಸರಿಸಬೇಕು. ಸಾಲಿಗ್ರಾಮದ ಪೂಜೆ ಮಾಡುವಾಗ ಮುಖ್ಯವಾಗಿ ಪಂಚಾಮೃತದ ಅಭಿಷೇಕ ಮಾಡಬೇಕು. ಅದರೊಂದಿಗೆ ಶುದ್ಧ ನೀರು ಹಾಗೂ ತುಳಸಿಯ ನೀರಿನಿಂದಲೂ ಅಭಿಷೇಕ ಮಾಡಬೇಕು. ಈ ಕ್ರಮವನ್ನು ಅನುಸರಿಸಿದರೆ ಭಗವಾನ್ ವಿಷ್ಣು ಅತ್ಯಂತ ತೃಪ್ತಿಯನ್ನು ಹೊಂದುವನು. ಜೊತೆಗೆ ಅದೃಷ್ಟವನ್ನು ಆಶೀರ್ವದಿಸುವನು.

ಸಾಲಿಗ್ರಾಮಶಿಲಾಸ್ಪರ್ಶಂ ಯಃ ಕರೋತಿ ದಿನೇ ದಿನೇ | ವಾಂಛಂತಿ ಕರಸಂಸ್ಪರ್ಶಂ ತಸ್ಯದೇವಾಃ ಸವಾಸವಾಃ ||

ಎಂದು ಗರುಡ ಪುರಾಣದಲ್ಲಿ ಹೇಳಿದೆ. ಮಾನವನ ಮನೋವಾಕ್ಕಾಯಗಳಿಂದ ಉತ್ಪನ್ನವಾದ ಬಹುವಿಧವಾದ ಪಾಪಗಳೂ, ಕಶ್ಮಲಗಳೂ ಸಾಲಿಗ್ರಾಮ ಶಿಲೆಯ ದರ್ಶನದಿಂದ ನಶಿಸುವುವು. ಸಾಲಿಗ್ರಾಮ ಶಿಲಾಂತರ್ವರ್ತಿಯಾದ ಪರಮಾತ್ಮನ ಮಹಿಮೆಯನ್ನು ಶ್ರವಣ, ಸಂಕೀರ್ತನ, ಧ್ಯಾನದರ್ಶನ, ಪ್ರಣಮಗಳಿಂದ ಮಾನವನ ಕುಲವು ಸಂಸಾರ ಸಾಗರದಿಂದ ದಾಟಿಸಲ್ಪಡುತ್ತದೆ. ಸಾಲಿಗ್ರಾಮ ಪೂಜೆಯನ್ನು ಮಾಡದಿರುವವನು ಕಣ್ಣುಳ್ಳವನಾದರೂ ಜಾತ್ಯಂಧನೇ, ಬದುಕಿದ್ದರೂ ಮೃತಸದೃಶನು, ಧನವಂತನಾದರೂ ನಿರ್ಧನನು ಎಂದು ವ್ಯಾಖ್ಯಾನಿಸಲಾಗಿದೆ.

Krishna janmashtami and Saligrama Pooja:ವಿವಿಧ ಹೆಸರಿನ ಸಾಲಿಗ್ರಾಮ

ಸಾಲಿಗ್ರಾಮಕ್ಕೆ ವಿವಿಧ ಹೆಸರುಗಳಿಂದ ಕರೆಯಲಾಗುವುದು. ಲಡ್ಡು ಗೋಪಾಲ ಸಾಲಿಗ್ರಾಮ, ಹಯಗ್ರೀವ ಸಾಲಿಗ್ರಾಮ, ಕೃಷ್ಣ ಸಾಲಿಗ್ರಾಮ, ಕೂರ್ಮ ಸಾಲಿಗ್ರಾಮ, ನರಸಿಂಹ ಸಾಲಿಗ್ರಾಮ, ಸುದರ್ಶನ ಸಾಲಿಗ್ರಾಮ, ಬಲರಾಮ ಸಾಲಿಗ್ರಾಮ, ವರಹ ಸಾಲಿಗ್ರಾಮ, ವಾಮನ ಸಾಲಿಗ್ರಾಮ, ಕಲ್ಕಿ ಸಾಲಿಗ್ರಾಮ, ಬುದ್ಧ ಸಾಲಿಗ್ರಾಮ, ಮತ್ಸ ಸಾಲಿಗ್ರಾಮ, ಪದ್ಮನಾಭ ಸಾಲಿಗ್ರಾಮ, ಪರಶುರಾಮ ಸಾಲಿಗ್ರಾಮ ಸೇರಿದಂತೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವುದು.

ಇದನ್ನೂ ಓದಿ: Lateral Entry Circus – ಏನಿದು ಲ್ಯಾಟರಲ್ ಎಂಟ್ರಿ? ನೆಹರೂವಿನಿಂದ ಹಿಡಿದು ಕಾಂಗ್ರೆಸ್ ಮಾಡಿಕೊಂಡು ಬಂದಿದ್ದೇನು? ವೀರಪ್ಪ ಮೊಯ್ಲಿ ತಂದ ಸುಧಾರಣೆಯೇ ಬೇಡವಾಯಿತೇ?

Krishna janmashtami and Saligrama Pooja:ಸಾಲಿಗ್ರಾಮ ಪೂಜೆಗೆ ಹೇಳುವ ಮಂತ್ರಗಳು

ಸಾಲಿಗ್ರಾಮವನ್ನು ಪೂಜಿಸುವಾಗ ಈ ಕೆಳಗಿನ ವಿಶೇಷ ಮಂತ್ರಗಳನ್ನು ಹೇಳಬೇಕು. ಇದರಿಂದ ದೇವರು ಸಂತುಷ್ಟವಾಗುವರು.

ಓಂ ಶ್ರೀ ಬಾಲಗೋಪಾಲಾಯ ನಮಃ I ಓಂ ಶ್ರೀ ದಾಮೋದರಾಯ ನಮಃ I ಓಂ ಶ್ರೀ ಕೇಶವಾಯ ನಮಃ I ಓಂ ಶ್ರೀ ಅನಂತಾಯ ನಮಃ I ಓಂ ಶ್ರೀ ಮಾಧವ್ಯ ನಮಃ I ಓಂ ಶ್ರೀ ಗಂದಕಿ ನಾಯಕಾಯ ನಮಃ I ಓಂ ನಮೋ ನಾರಾಯಣಾಯ ನಮಃ I ಓಂ ನಮೋ ವಾಗ್ವತೇ ಬಸುದೇವಾಯ ನಮಃ I ಓಂ ಶ್ರೀ ಮುಕ್ತ ಚಿತ್ರ ಗೋವಿಂದಾಯ ನಮಃ I ಓಂ ಶ್ರೀ ಸಾಲಿಗ್ರಾಮ ಶಿಲಾ ರೂಪಾಯ ನಮಃ I ಓಂ ಶ್ರೀ ಶಿವ ಸ್ತುತಾಯ ನಮಕ I ಓಂ ಶ್ರೀ ಕೇಶವಾಯ ನಮಃ I ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.

Krishna janmashtami and Saligrama Pooja- ಬ್ರಹ್ಮ ಹತ್ಯಾ ದೋಷ ನಿವಾರಣೆ:

ನಿತ್ಯವೂ ಸಾಲಿಗ್ರಾಮದ ಪೂಜೆ ಮಾಡಿದರೆ ನಮ್ಮ ಪಾಪ ಕರ್ಮಗಳು ತೊಳೆಯುವುದು. ಬ್ರಹ್ಮ ಹತ್ಯೆ ಮಾಡಿದ ಪಾಪವು ಸಹ ಸಾಲಿಗ್ರಾಮದ ಪೂಜೆ ಮಾಡುವುದರ ಮೂಲಕ ತೊಳೆದು ಹೋಗುವುದು.

ಸಾಲಿಗ್ರಾಮಶಿಲಾಯುಕ್ತಂ ಯೋ ದದ್ಯಾತ್ ದಾನಮುತ್ತಮಂ | ಭೂಚಕ್ರ ತೇನದತ್ತಂ ಸ್ಯಾತ್ ಸಶೈಲವನಕಾನನಮ್ ||

ಎಂದರೆ ಸಾಲಿಗ್ರಾಮ ಶಿಲೆಯಿಂದ ಕೂಡಿದ ಉತ್ತಮವಾದ ದಾನವನ್ನು ಯಾವನು ಕೊಡುತ್ತಾನೆಯೋ ಅವನಿಂದ ವನ, ಪರ್ವತ, ಕಾನನಗಳಿಂದ ಕೂಡಿದ ಅಖಂಡ ಭೂಮಂಡಲವನ್ನೇ ದಾನಮಾಡಿದಂತಾಗುತ್ತದೆ ಎಂದು “ವಾಶಿಷ್ಟ ಸಂಹಿತೆ”ಯಲ್ಲಿ ಹೇಳಲ್ಪಟ್ಟಿದೆ. ಎಲ್ಲಿ ಸಾಲಿಗ್ರಾಮ ಶಿಲೆ ಇದೆಯೋ ಅದೇ ತೀರ್ಥವು. ಅದೇ ತಪೋವನವು. ಅಲ್ಲಿ ಭಗವಾನ್ ಮಧುಸೂದನನು ಸನ್ನಿಹಿತನಾಗಿರುತ್ತಾನೆ ಎಂತಲೂ

ಎದ್ಗೃಹೇ ನಾಸ್ತಿ ತುಳಸೀ ಸಾಲಿಗ್ರಾಮ ಶಿಲಾರ್ಚನಾ | ಸ್ಮಶಾನಸದೃಶಂ ವಿದ್ಯಾತ್ ತದ್ಗೃಹಂ ಶುಭವರ್ಜಿತಮ್ ||

ಯಾವ ಮನೆಯಲ್ಲಿ ತುಳಸಿಯು ಇಲ್ಲವೋ, ಸಾಲಿಗ್ರಾಮ ಶಿಲೆಯ ಪೂಜೆಯು ಇಲ್ಲವೋ, ಆ ಮನೆಯು ಸ್ಮಶಾನಕ್ಕೆ ಸದೃಶವೆಂದೂ, ಅಮಂಗಳ ಉಳ್ಳದ್ದೆಂದೂ ತಿಳಿಯಬೇಕು ಎಂಬುದಾಗಿ “ಬೃಹನ್ನಾರದೀಯ ಪುರಾಣ”ದಲ್ಲಿ ಹೇಳಿದೆ. (ಸತ್ಸಂಗ ಸಂಗ್ರಹ)

ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 am, Sun, 25 August 24