
ವ್ಯಕ್ತಿಯ ಜೀವನದಲ್ಲಿ ಸಂಭವಿಸುವ ಶುಭ ಬೆಳವಣಿಗೆಗಳು, ಹೊಸ ಅವಕಾಶಗಳು ಮತ್ತು ಎದುರಾಗುವ ಸವಾಲುಗಳನ್ನು ನಿಖರವಾಗಿ ಊಹಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ದಶಾ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿ ‘ಯೋಗಿನಿ ದಶಾ’ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿ ಮತ್ತು ನಿಖರ ಫಲಿತಾಂಶ ನೀಡುವ ದಶಾ ಪದ್ಧತಿ ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜೀವನದ ಪ್ರಮುಖ ತಿರುವುಗಳು, ಯಶಸ್ಸು ಮತ್ತು ಅಡೆತಡೆಗಳು ಯಾವಾಗ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ಜ್ಯೋತಿಷಿಗಳು ಈ ವ್ಯವಸ್ಥೆಯನ್ನು ಪ್ರಮುಖವಾಗಿ ಬಳಸುತ್ತಾರೆ.
ಯೋಗಿನಿ ದಶಾ ಎಂಬುದು ಸಂಪೂರ್ಣವಾಗಿ ಚಂದ್ರನ ಚಲನೆಯನ್ನು ಆಧರಿಸಿದ ಒಂದು ವಿಶೇಷ ವೈದಿಕ ಜ್ಯೋತಿಷ್ಯ ವ್ಯವಸ್ಥೆಯಾಗಿದೆ. ವ್ಯಕ್ತಿಯು ಜನಿಸಿದ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿದ್ದನೋ (ಜನ್ಮ ನಕ್ಷತ್ರ), ಅದನ್ನು ಆಧರಿಸಿ ಈ ದಶಾವನ್ನು ಲೆಕ್ಕ ಹಾಕಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಒಟ್ಟು ಎಂಟು ಯೋಗಿನಿಯರಿದ್ದು, ಪ್ರತಿಯೊಬ್ಬ ಯೋಗಿನಿಯೂ ಒಂದು ನಿರ್ದಿಷ್ಟ ಅವಧಿಯವರೆಗೆ ವ್ಯಕ್ತಿಯ ಜೀವನದ ಮೇಲೆ ತನ್ನದೇ ಆದ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತಾಳೆ.
ವ್ಯಕ್ತಿಯ ಜನ್ಮ ನಕ್ಷತ್ರದ ಆಧಾರದ ಮೇಲೆ ಆತನ ಮೊದಲ ಯೋಗಿನಿ ದಶಾ ಯಾವುದು ಎಂಬುದು ನಿರ್ಧಾರವಾಗುತ್ತದೆ. ಆ ಮೊದಲ ಹಂತ ಮುಗಿದ ನಂತರ, ಉಳಿದ ಯೋಗಿನಿ ದಶಾಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಗದಿಪಡಿಸಲಾದ ಒಂದು ನಿರ್ದಿಷ್ಟ ಸ್ಥಿರ ಕ್ರಮದಲ್ಲೇ ಮುಂದುವರಿಯುತ್ತವೆ. ಈ ಕಾರಣದಿಂದಾಗಿ, ಒಂದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ವಿಭಿನ್ನ ಜನ್ಮ ನಕ್ಷತ್ರಗಳನ್ನು ಹೊಂದಿದ್ದರೆ, ಅವರ ಯೋಗಿನಿ ದಶಾಗಳು ಬೇರೆ ಬೇರೆಯಾಗಿರುತ್ತವೆ. ಪರಿಣಾಮವಾಗಿ, ಅವರ ಜೀವನದಲ್ಲಿ ಯಶಸ್ಸು ಅಥವಾ ಸವಾಲುಗಳು ಎದುರಾಗುವ ಸಮಯವೂ ವಿಭಿನ್ನವಾಗಿರುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಒಂದು ವೇಳೆ ಯೋಗಿನಿ ದಶಾವನ್ನು ಆಳುವ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದರೆ, ಕೆಟ್ಟ ಮನೆಯಲ್ಲಿದ್ದರೆ ಅಥವಾ ಪಾಪ ಗ್ರಹಗಳ ಪ್ರಭಾವಕ್ಕೆ ಒಳಗಾಗಿದ್ದರೆ ವ್ಯಕ್ತಿಯು ಜೀವನದಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತೀವ್ರ ಆರ್ಥಿಕ ತೊಂದರೆಗಳು, ಮಾಡುವ ಕೆಲಸಗಳಲ್ಲಿ ಅಡೆತಡೆಗಳು, ವ್ಯಾಪಾರದಲ್ಲಿ ನಷ್ಟ ಹಾಗೂ ಅತಿಯಾದ ಮಾನಸಿಕ ಒತ್ತಡ ಉಂಟಾಗಬಹುದು. ಇದರೊಂದಿಗೆ ಆರೋಗ್ಯ ಸಮಸ್ಯೆಗಳು ಕಾಡುವುದು ಮತ್ತು ಪ್ರತಿಯೊಂದು ಕೆಲಸಗಳೂ ವಿಳಂಬವಾಗುವಂತಹ ಪ್ರತಿಕೂಲ ಪರಿಸ್ಥಿತಿಗಳು ಎದುರಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ವೈದಿಕ ಜ್ಯೋತಿಷ್ಯದಲ್ಲಿ ಭವಿಷ್ಯದ ಪ್ರಮುಖ ಘಟನೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ನಿಖರವಾಗಿ ತಿಳಿಯಲು ಯೋಗಿನಿ ದಶಾವನ್ನು ದಿಕ್ಸೂಚಿಯಾಗಿ ಬಳಸಲಾಗುತ್ತದೆ. ವ್ಯಕ್ತಿಗೆ ಮದುವೆ ಯಾವಾಗ ಆಗಬಹುದು?, ಹೊಸ ಉದ್ಯೋಗ ಅಥವಾ ಬಡ್ತಿ ಸಿಗುವ ಸಮಯ ಯಾವುದು?, ವ್ಯವಹಾರದಲ್ಲಿ ಲಾಭದ ಮುಖ ನೋಡುವುದು ಯಾವಾಗ? ಮತ್ತು ಜೀವನದ ಕಠಿಣ ಸವಾಲುಗಳು ಎದುರಾಗುವ ನಿರ್ಣಾಯಕ ಅವಧಿ ಯಾವುದು? ಎಂಬ ಪ್ರಮುಖ ಪ್ರಶ್ನೆಗಳನ್ನು ವಿಶ್ಲೇಷಿಸಲು ಈ ದಶಾ ವ್ಯವಸ್ಥೆ ಉಪಯುಕ್ತವಾಗಿದೆ. ಆದರೆ, ಇದು ಕೇವಲ ಸಂಭಾವ್ಯ ಅವಕಾಶಗಳನ್ನು ಮಾತ್ರ ಸೂಚಿಸುವುದರಿಂದ, ವ್ಯಕ್ತಿಯ ಸ್ವಂತ ಪ್ರಯತ್ನಗಳು, ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಜಾತಕದ ಇತರ ಅಂಶಗಳೂ ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ