
ಆಗಸ್ಟ್ 12 ರಿಂದ ಆರಂಭವಾಗಿದ್ದ 15 ನೇ ಆವೃತ್ತಿಯ ಈಶಾ ಗ್ರಾಮೋತ್ಸವದ (Isha Gramotsavam) ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 23 ರಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯಲಿದೆ. ಈ ವರ್ಷ ಇದೇ ಮೊದಲ ಬಾರಿಗೆ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿಯಲ್ಲಿ ಈ ಗ್ರಾಮೋತ್ಸವದ ಸ್ಪರ್ಧೆಗಳು ನಡೆದಿದ್ದು, ಈ ಕ್ರೀಡಾಕೂಟದ ಮತ್ತಷ್ಟು ವಿಶೇಷತೆಯಾಗಿತ್ತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಈಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಅವರೊಂದಿಗೆ ಈ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಯ 60,000 ಕ್ಕೂ ಹೆಚ್ಚು ಆಟಗಾರರು 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟದ ಈವೆಂಟ್ಗಳೊಂದಿಗೆ ಈಶಾ ಗ್ರಾಮೋತ್ಸವದಲ್ಲಿ ಭಾಗವಹಿಸಿದ್ದಾರೆ ಎಂದು ಈಶಾ ಫೌಂಡೇಶನ್ ( Isha Foundation) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
10,000 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು, ಅದರಲ್ಲೂ ಮನೆಯಲ್ಲಿ ಇರುವ ಮಹಿಳೆಯರು ಕಬಡ್ಡಿ ಮತ್ತು ಥ್ರೋಬಾಲ್ನಂತಹ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. 2004 ರಿಂದ ಈ ಗ್ರಾಮೀಣ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದುವರೆಗೆ ಈ ಕ್ರೀಡಾಕೂಟದಲ್ಲಿ 8,412 ತಂಡಗಳು ಹಾಗೂ 1,00,167 ಆಟಗಾರರು ಭಾಗವಹಿಸಿದ್ದಾರೆ. ಇನ್ನು ಕ್ರೀಡೆಯ ಅಭಿವೃದ್ಧಿಗಾಗಿ ಈಶಾ ಔಟ್ರೀಚ್ ಸಂಸ್ಥೆ ಕೈಗೊಂಡಿರುವ ಕಾರ್ಯಕ್ಕಾಗಿ 2018 ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ “ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್” ಪ್ರಶಸ್ತಿಯನ್ನು ಪಡೆದುಕೊಂಡಿದೆ.
In the heart of rural southern India, Isha Gramotsavam has emerged as a powerful catalyst for transformation. Isha Foundation’s tireless efforts are turning desolate villages, formerly plagued by addiction and despair, into thriving spaces of joy, unearthing latent talents and… pic.twitter.com/KJV2cy1jhw
— Isha Foundation (@ishafoundation) September 12, 2023
ಇನ್ನು ಈ ವರ್ಷದ ಈಶಾ ಗ್ರಾಮೋತ್ಸವದಲ್ಲಿ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಹಾಗೂ ತಮಿಳುನಾಡು ನಾಗರೀಕರಿಗೆ ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿ ಆಟಗಳನ್ನು ಸೇರಿಸಲಾಗಿದೆ. ಒಟ್ಟಾರೆ ಈ ಕ್ರೀಡಾಕೂಟಕ್ಕಾಗಿ 55 ಲಕ್ಷ ರೂಗಳನ್ನು ಬಹುಮಾನದ ಮೊತ್ತವಾಗಿ ಇರಿಸಲಾಗಿದ್ದು, ವಾಲಿಬಾಲ್ ಮತ್ತು ಥ್ರೋಬಾಲ್ ವಿಜೇತರಿಗೆ ಕ್ರಮವಾಗಿ ರೂ 5 ಲಕ್ಷ ಮತ್ತು ರೂ 2 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಹಾಗೆಯೇ ಕಬಡ್ಡಿಯಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ ರೂ 5 ಲಕ್ಷ ಮತ್ತು ರೂ 2 ಲಕ್ಷ ಬಹುಮಾನವನ್ನು ಪಡೆಯುತ್ತವೆ.
ಇನ್ನು ಈ ಮೆಗಾ ಈವೆಂಟ್ ಬಗ್ಗೆ ಮಾತನಾಡಿದ ಸದ್ಗುರುಗಳು, ‘ಈಶಾ ಗ್ರಾಮೋತ್ಸವವು ಕ್ರೀಡೆಯ ಮೂಲಕ ಆಚರಿಸುವ ಒಂದು ಜೀವನದ ಆಚರಣೆಯಾಗಿದೆ. ಒಂದು ಆಟವು ಎಲ್ಲಾ ಸಾಮಾಜಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ. ಇಂತಹ ಕ್ರೀಡೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿರುವ ಜಾತಿ, ಧರ್ಮ ಮತ್ತು ಇತರ ಪಿಡುಗುಗಳನ್ನು ದೂರ ಮಾಡಬಹುದಾಗಿದೆ. ಸ್ಪರ್ಧಾತ್ಮಕ ಕ್ರೀಡಾಪಟುವನ್ನು ತಯಾರಿಸುವುದು ಈ ಈ ಕ್ರೀಡಾಕೂಟದ ಉದ್ದೇಶವಲ್ಲ. ಬದಲಿಗೆ ಜೀವನವನ್ನು ವಿನೋದಶೀಲವನ್ನಾಗಿಸುವುದು ಇದರ ಉದ್ದೇಶ. ನೀವು ಸಂಪೂರ್ಣ ಭಾಗವಹಿಸುವಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ಚೆಂಡನ್ನು ಎಸೆಯಲು ಸಾಧ್ಯವಾದರೆ, ಒಂದು ಚೆಂಡು ಜಗತ್ತನ್ನು ಬದಲಾಯಿಸಬಹುದು. ಸಂಪೂರ್ಣ ಭಾಗವಹಿಸುವಿಕೆಯಿಂದ ಆಟದಲ್ಲಿರುವ ಸಂತೋಷವನ್ನು ನೀವು ಅರಿಯುವಂತಾಗಲಿ’ ಎಂದಿದ್ದಾರೆ.
Isha #Gramotsavam is a celebration of Life through Sport. A game can unite people beyond all social divisions; this is the power of Sport- that it can erase boundaries of caste, religion and other identities with celebratory playfulness. This is not about becoming a competitive… pic.twitter.com/ujfP34X0Jd
— Sadhguru (@SadhguruJV) August 6, 2023
ಈಶಾ ಗ್ರಾಮೋತ್ಸವದ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರಾಗಿರುತ್ತಾರೆ. ಇದು ವೃತ್ತಿಪರ ಆಟಗಾರರ ಪಂದ್ಯಾವಳಿಯಲ್ಲ ಆದರೆ ಪ್ರತಿಯೊಬ್ಬರನ್ನು ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಪ್ರತಿಯೊಬ್ಬರನ್ನೂ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಹಿಡಿದು, ಗ್ರಾಮೀಣ ಆಟಗಳಲ್ಲಿರುವ ಜೀವಂತಿಕೆಯನ್ನು ಪುನರುಜ್ಜೀವನಗೊಳಿಸುವವರೆಗೆ ಹಾಗೂ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದರಿಂದಾಗಿ ಇಡೀ ಹಳ್ಳಿಯು ಒಂದು ಆಚರಣೆಯಾಗಿ ಒಟ್ಟುಗೂಡುತ್ತದೆ ಎಂದು ಸ್ವಾಮಿ ನಕುಜಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಹಿಂದೆ ನಡೆದ 15 ಆವೃತ್ತಿಗಳ ಸಮಾರೋಪ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಕರ್ಣಂ ಮಲ್ಲೇಶ್ವರಿ ಅವರಂತಹ ಕ್ರೀಡಾ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಇವರಲ್ಲದೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಪಿವಿ ಸಿಂಧು, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಇಶಾ ಗ್ರಾಮೋತ್ಸವಕ್ಕೆ ಧ್ವನಿಗೂಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Fri, 22 September 23