India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು.

India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್
ಚೆಂಡಿಗೆ ಎಂಜಲು ಮೆತ್ತಿ ವಿವಾದಕ್ಕೊಳಗಾದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್
ಅರುಣ್​ ಕುಮಾರ್​ ಬೆಳ್ಳಿ

Updated on: Mar 26, 2021 | 8:45 PM

ಪುಣೆ: ಕೊವಿಡ್-19 ಪಿಡುಗು ವಿಶ್ವದಾದ್ಯಂತ ಹಬ್ಬಿದ ನಂತರ ಕ್ರಿಕೆಟ್​ ಪಂದ್ಯಗಳಲ್ಲಿ ಚೆಂಡಿಗೆ ಆಟಗಾರರು ತಮ್ಮ ಬಾಯಿ ಎಂಜಲನ್ನು (saliva) ಹಚ್ಚಿ ಹೊಳಪು ತರುವ ಪ್ರಯತ್ನ ಮಾಡಬಾರದೆಂದು ಅಂತರರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ ಅಂತ ಎಲ್ಲಾ ಸದಸ್ಯರ ರಾಷ್ಟ್ರಗಳಿಗೆ ನಿರ್ದೇಶನ ಜಾರಿ ಮಾಡಿತು. ಆ ನಿಯಮವನ್ನು ಕೇವಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಷ್ಟೇ ಅಲ್ಲ ಆಯಾ ದೇಶಗಳಲ್ಲಿ ನಡೆಯುವ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಆ ನಿಯಮವನ್ನು ಆನೂಚಾನಾಗಿ ಪಾಲಿಸಲಾಗುತ್ತಿದೆ. ಆದರೆ, ಈ ನಿಯಮವನ್ನು ಉಲ್ಲಂಘಿಸುವ ಸಂದರ್ಭಗಳು ಕ್ರಿಕೆಟ್​ ಮೈದಾನಗಳಲ್ಲಿ ಆಗಾಗ ಘಟಿಸುತ್ತಿವೆ. ಇಂದು (ಶುಕ್ರವಾರ) ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಒಂದು ದಿನದ ಪಂದ್ಯದ ಆರಂಭಿಕ ಹಂತದಲ್ಲಿ ನಡೆದ ಘಟನೆಯನ್ನೇ ಗಮನಿಸಿ. ಭಾರತದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಇಂಗ್ಲೆಂಡ್ ಟೀಮಿನ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಚೆಂಡಿಗೆ ಎಂಜಲನ್ನು ಹಚ್ಚಿ ಫೀಲ್ಡ್​ ಅಂಪೈರ್​ನಿಂದ ಎಚ್ಚರಿಕೆಗೊಳಗಾದರು.

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು. ಅಂಪೈರ್ ಶರ್ಮ, ಸ್ಟೋಕ್ಸ್​ಗೆ ವಾರ್ನ್​ ಮಾಡಿದ ನಂತರ ಇಂಗ್ಲೆಂಡ್​ನ ಸ್ಟ್ಯಾಂಡ್-ಇನ್ ನಾಯಕ ಜೊಸ್ ಬಟ್ಲರ್ ಅವರೊಂದಿಗೆ ಸಮಾಲೋಚನೆ ನಡೆಸಿ, ಮತ್ತೊಮ್ಮೆ ಅಂಥ ಘಟನೆ ಪುನರಾವರ್ತನೆಗೊಂಡರೆ ಅವರ ತಂಡಕ್ಕೆ 5 ರನ್​ಗಳ ದಂಡ ವಿಧಿಸಲಾಗುವುದೆಂದು ಹೇಳಿದರು.

ಇಂಗ್ಲೆಂಡ್ ಎಡಗೈ ವೇಗದ ಬೌಲರ್​ ರೀಸ್ ಟಾಪ್ಲೀ ಅವರು ಭಾರತದ ಇನ್ನಿಂಗ್ಸ್​ನ 4ನೇ ಓವರ್ ಎಸೆಯುತ್ತಿದ್ದಾಗ ಮತ್ತು ಅತಿಥೇಯರ ಸ್ಕೋರ್ ವಿಕೆಟ್​ ನಷ್ಟವಿಲ್ಲದೆ 8 ಆಗಿದ್ದಾಗ ಎಂಜಲು ಹಚ್ಚುವ ಘಟನೆ ನಡೆಯಿತು. ಆದರೆ, ಸ್ಟೋಕ್ಸ್​ ಚೆಂಡಿಗೆ ಎಂಜಲು ಹಚ್ಚಿ ಸಿಕ್ಕಿ ಬಿದ್ದರೋದು ಇದೇ ಮೊದಲ ಸಲವೇನಲ್ಲ. ಭಾರತ ಮತ್ತು ಇಂಗ್ಲೆಂಡ್​ ನಡುವೆ ಅಹಮದಾಬಾದಿನಲ್ಲಿ ನಡೆದ ಪಿಂಕ್-ಬಾಲ್​ ಟೆಸ್ಟ್​ನಲ್ಲೂ ಅವರು ಹಾಗೆ ಮಾಡಿದ್ದರು.

ಅಂಗೈಗೆ ಗಾಯ ಮಾಡಿಕೊಂಡಯ ಸರಣಯಿಂದ ಹೊರಬಿದ್ದಿರುವ ಇಂಗ್ಲೆಂಡ್​ ನಾಯಕ ಅಯಾನ್ ಮೊರ್ಗನ್

ಪುಣೆಯಲ್ಲಿ ಶುಕ್ರವಾರ ನಡೆಯುತ್ತಿರುವ ಎರಡನೇ ಒಡಿಐ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮತ್ತೊಮ್ಮೆ ಮೊದಲು ಫೀಲ್ಡ್​ ಮಾಡುವ ನಿರ್ಧಾರ ತೆಗೆದುಕೊಂಡಿತು.

ಇದೇ ಮೈದಾನದಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಫೀಲ್ಡ್​ ಮಾಡುವಾಗ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯದ ಭಾಗವನ್ನು ಹರಿದುಕೊಂಡ ಇಂಗ್ಲೆಂಡ್​ ನಾಯಕ ಆಯಾನ್ ಮೊರ್ಗನ್ ಎರಡನೇ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅವರ ಅಂಗೈಯಲ್ಲಿ ನಾಲ್ಕು ಹೊಲಿಗೆಗಳು ಬಿದ್ದಿವೆ. ಗಮನಾರ್ಹ ಸಂಗತಿಯೆಂದರೆ, ಆ ಪರಿ ಗಾಯಗೊಂಡಿದ್ದರೂ ಅವರು ಬ್ಯಾಟಿಂಗ್ ಮಾಡಲು ಆಗಮಿಸಿದ್ದರು.

ಅದೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಸಹ ಭುಜದ ಸಮಸ್ಯೆಗೊಳಗಾಗಿದ್ದಿರಿಂದ ಅವರ ಸ್ಥಾನದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ಗೆ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, ವೇಗದ ಬೌಲರ್ ಮಾರ್ಕ್​ ವುಡ್​ ಅವರ ಸ್ಥಾನದಲ್ಲಿ ಟಾಪ್ಲೀ ಆಡುತ್ತಿದ್ದಾರೆ.

ಭಾರತದ ತಂಡದಲ್ಲೂ ಒಂದು ಅನಿವಾರ್ಯತೆಯ ಬದಲಾವಣೆ ಮಾಡಲಾಗಿದೆ. ಫೀಲ್ಡಿಂಗ್ ಮಾಡುವಾಗ ಭುಜದ ಮೂಳೆ ಡಿಸ್​ಪ್ಲೇಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳಲು ಕನಿಷ್ಠ 4-5 ವಾರಗಳು ಬೇಕೆಂದು ಹೇಳಲಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಕೂಡ ಆಗಿರುವ ಅಯ್ಯರ್ ಇಂಡಿಯನ್ ಪ್ರಿಮೀಯರ್ ಲೀಗ್​ನ ಮೊದಲಾರ್ಧವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಯ್ಯರ್ ಸ್ಥಾನದಲ್ಲಿ ವಿಕೆಟ್​-ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

Published On - 5:06 pm, Fri, 26 March 21

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us