
2026 ರ ಟಿ20 ವಿಶ್ವಕಪ್ನಲ್ಲಿ (T20 World Cup 2026) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬಹುನಿರೀಕ್ಷಿತ ಪಂದ್ಯ ನಾಳೆ, ಅಂದರೆ ಫೆಬ್ರವರಿ 15, 2026 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಕದನದಲ್ಲಿ ಗೆಲ್ಲುವ ತಂಡವು ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ತಯಾರಿ ನಡೆಸುತ್ತಿವೆ. ಆದರೆ ಟೀಂ ಇಂಡಿಯಾಗೆ ಆಟಗಾರರ ಅಲಭ್ಯತೆ ದೊಡ್ಡ ಚಿಂತೆಯಾಗಿತ್ತು. ಆದರೀಗ ಅದೆಲ್ಲ ನಿವಾರಣೆಯಾದಂತೆ ಕಾಣುತ್ತಿದೆ. ಪಂದ್ಯಕ್ಕೂ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕ್ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಬಳಿ, ನಾಳೆಯ ಪಂದ್ಯದಲ್ಲಿ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಆಡುತ್ತಾರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ‘ಅಭಿಷೇಕ್ ಶರ್ಮಾ ಗುಣಮುಖರಾಗಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದರು.
ವಾಸ್ತವವಾಗಿ ಅಮೆರಿಕ ವಿರುದ್ಧದ ಪಂದ್ಯದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅಭಿಷೇಕ್, ಅಂದಿನಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ ಅವರು ಗುಣಮುಖರಾಗಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಅಭಿಷೇಕ್ ಆಗಮನ ತಂಡಕ್ಕೆ ಆನೆಬಲ ತಂದಿದೆ. ಏಕೆಂದರೆ ಅಭಿಷೇಕ್ ತಮ್ಮ ಹೊಡಿಬಡಿ ಆಟದ ಮೂಲಕ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಾತ್ರವಲ್ಲದೆ ಇವರ ಜೊತೆಗಾರ ಇಶಾನ್ ಕಿಶನ್ ಕೂಡ ಅಮೋಘ ಫಾರ್ಮ್ನಲ್ಲಿದ್ದು, ಇವರಿಬ್ಬರು ಒಟ್ಟಿಗೆ ಸೇರಿ ಪಾಕ್ ಬೌಲರ್ಗಳ ಬೆಂಡೆತ್ತುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಭಿಷೇಕ್ ಜೊತೆಗೆ ಪಾಕಿಸ್ತಾನದ ವಿರುದ್ಧ ಕುಲ್ದೀಪ್ ಯಾದವ್ ಕೂಡ ಆಡಲಿದ್ದಾರೆ ಎಂಬುದನ್ನು ಸೂರ್ಯ ಖಚಿತಪಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಕುಲ್ದೀಪ್ ಪ್ರದರ್ಶನ ಅದ್ಭುತವಾಗಿದ್ದು, ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ. ಮಾತ್ರವಲ್ಲದೆ ಕೊಲಂಬೊ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣದಿಂದಾಗಿ ಕುಲ್ದೀಪ್ ಯಾದವ್ ಆಡುವುದು ಖಚಿತವಾಗಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆಯ ಬಗ್ಗೆ ಸೂರ್ಯ ಸುಳಿವು ನೀಡಿದ್ದು, ‘ಸುಂದರ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ಆಡಲು ಸಿದ್ಧರಾಗಿದ್ದಾರೆ’ ಎಂದರು.
IND vs PAK: ವಿಮಾನ, ಹೋಟೆಲ್ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ
ಇದೇ ವೇಳೆ ಪಾಕಿಸ್ತಾನದ ಆಟಗಾರರ ಜೊತೆಗೆ ಕೈಕುಲುಕುತ್ತೀರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ‘ಟಾಸ್ ಸಮಯದಲ್ಲಿ ಹ್ಯಾಂಡ್ಶೇಕ್ ಬಗ್ಗೆ ನೋಡೋಣ, ಅದಕ್ಕೆ ಇನ್ನು ಸಮಯವಿದೆ. 24 ಗಂಟೆಗಳ ಕಾಲ ಕಾಯಿರಿ.’ ಎಂದಿದ್ದಾರೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Sat, 14 February 26