
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲನುಭವಿಸಿದೆ. ರಾಯ್ಪುರ್ನಲ್ಲಿ ನಡೆದ ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 192 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಕೆಕೆಆರ್ ತಂಡಕ್ಕೆ 6 ವಿಕೆಟ್ಗಳಿಂದ ಸೋಲುಣಿಸಿದ್ದಾರೆ.
ಈ ಸೋಲಿನ ಬಳಿಕ ಮಾತನಾಡಿದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ, “ಈ ಪಿಚ್ನಲ್ಲಿ 190 ರನ್ ಗೆಲ್ಲಬಹುದಾದ ಸವಾಲಿನ ಮೊತ್ತವಾಗಿತ್ತು. ಆದರೆ ವಿರಾಟ್ ಕೊಹ್ಲಿ ಅವರ ಕ್ಯಾಚ್ ಕೈಬಿಟ್ಟಿದ್ದು ಪಂದ್ಯದ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿತು” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಆರಂಭದ ಪವರ್ಪ್ಲೇ ಓವರ್ಗಳಲ್ಲಿ ಹೊಸ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುತ್ತಿತ್ತು. ಆದರೆ ಮಧ್ಯಮ ಓವರ್ಗಳಲ್ಲಿ ವಿಕೆಟ್ ಮಂದಗತಿಯಾಗಿ ವರ್ತಿಸಿತು. ಹೊಸ ಬ್ಯಾಟರ್ಗಳಿಗೆ ಇದು ಸುಲಭದ ಪಿಚ್ ಆಗಿರಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಶ್ರಮದಿಂದಾಗಿ ತಂಡ 190 ರನ್ ತಲುಪಿತು. ಪಂದ್ಯ ಮುಗಿದ ಮೇಲೆ ಹತ್ತು-ಹದಿನೈದು ರನ್ ಕಡಿಮೆ ಆಯಿತು ಎಂದು ಹೇಳುವುದು ಸುಲಭ. ಆದರೆ ಈ ಪಿಚ್ ಸ್ಥಿತಿಗೆ ಇದು ಅತ್ಯುತ್ತಮ ಮೊತ್ತವಾಗಿತ್ತು ಎಂದು ರಹಾನೆ ಬ್ಯಾಟಿಂಗ್ ವಿಭಾಗವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Rajat Patidar: ಅವರನ್ನು ಹೊಗಳಲು ನನ್ನ ಬಳಿ ಪದಗಳೇ ಇಲ್ಲ..!
ಇನ್ನು ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಎಷ್ಟು ಅಪಾಯಕಾರಿ ಆಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ದೇವದತ್ ಪಡಿಕ್ಕಲ್ ಉತ್ತಮ ಸಾಥ್ ನೀಡಿದರು. ಈ ಇಬ್ಬರ ನಡುವಿನ ಭರ್ಜರಿ ಜೊತೆಯಾಟವೇ ಎದುರಾಳಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇದರ ನಡುವೆ ನಮ್ಮ ತಂಡ ಮಾಡಿದ ತಪ್ಪೊಂದು ನಮ್ಮ ಪಾಲಿಗೆ ದುಬಾರಿಯಾಯ್ತು. ಟೂರ್ನಿಯ ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಆದರೆ ಇಂತಹ ಟ್ರಿಕಿ ಪಿಚ್ನಲ್ಲಿ ವಿರಾಟ್ ಕೊಹ್ಲಿ ಅವರಂತಹ ಪ್ರಮುಖ ಬ್ಯಾಟರ್ಗಳ ಕ್ಯಾಚ್ಗಳನ್ನು ಕೈಬಿಟ್ಟರೆ ಪಂದ್ಯ ಉಳಿಸಿಕೊಳ್ಳುವುದು ಕಷ್ಟ ಎಂದು ರಹಾನೆ ಬೇಸರ ವ್ಯಕ್ತಪಡಿಸಿದರು.
ಇನ್ನು ಯುವ ವೇಗಿ ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ ಶೈಲಿಯನ್ನು ನಾಯಕ ಮುಕ್ತಕಂಠದಿಂದ ಶ್ಲಾಘಿಸಿದ ರಹಾನೆ. ಬೌಲಿಂಗ್ ಮಾಡುವಾಗ ಅವರು ಹೊಂದಿರುವ ಸ್ಪಷ್ಟ ಯೋಜನೆ ಮತ್ತು ಶಿಸ್ತು ತಂಡಕ್ಕೆ ಭವಿಷ್ಯದಲ್ಲಿ ದೊಡ್ಡ ಬಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಈ ಪಂದ್ಯವು ಕೆಕೆಆರ್ ತಂಡಕ್ಕೆ ತಪ್ಪುಗಳಿಂದ ಕಲಿಯಲು ಒಂದು ಉತ್ತಮ ಅವಕಾಶವಾಗಿದೆ. ಕಠಿಣ ಪಿಚ್ನಲ್ಲಿ ಬ್ಯಾಟರ್ಗಳು ನೀಡಿದ ಹೋರಾಟ ಮತ್ತು ಸ್ಪಿನ್ನರ್ಗಳ ಸ್ಥಿರ ಪ್ರದರ್ಶನ ತಂಡದ ಪ್ಲಸ್ ಪಾಯಿಂಟ್ಗಳಾದರೆ, ಫೀಲ್ಡಿಂಗ್ನಲ್ಲಿನ ಸಣ್ಣ ಲೋಪದೋಷಗಳು ಪಂದ್ಯವನ್ನು ಕೈತಪ್ಪುವಂತೆ ಮಾಡಿದವು. ಆದರೆ ನಾಯಕ ಅಜಿಂಕ್ಯ ರಹಾನೆ ಅವರ ಸಕಾರಾತ್ಮಕ ಚಿಂತನೆ ಮತ್ತು ಕಾರ್ತಿಕ್ ತ್ಯಾಗಿ ಅವರಂತಹ ಯುವ ಪ್ರತಿಭೆಗಳ ಮೇಲಿರುವ ನಂಬಿಕೆ ಮುಂದಿನ ಪಂದ್ಯಗಳಲ್ಲಿ ತಂಡ ಬಲಿಷ್ಠವಾಗಿ ಪುನರಾಗಮನ ಮಾಡಲು ದಾರಿಯಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.