Breaking: ಸೆ. 10 ರಂದು ಮಳೆ ಬಂದರೂ ಚಿಂತೆ ಇಲ್ಲ; ಭಾರತ- ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಗದಿ..!

IND vs PAK: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಮೀಸಲು ದಿನವನ್ನು ಇರಿಸುವ ತೀರ್ಮಾನಕ್ಕೆ ಎಸಿಸಿ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 10 ರಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮರುದಿನ ಅಂದರೆ ಸೆಪ್ಟೆಂಬರ್ 11 ರಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

Breaking: ಸೆ. 10 ರಂದು ಮಳೆ ಬಂದರೂ ಚಿಂತೆ ಇಲ್ಲ; ಭಾರತ- ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಗದಿ..!
ಭಾರತ- ಪಾಕಿಸ್ತಾನ
Follow us
|

Updated on:Sep 08, 2023 | 2:15 PM

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ (Asia Cup 2023) ಸೂಪರ್-4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವಾಸ್ತವವಾಗಿ ಈ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಆ ದಿನ ಕೊಲಂಬೊದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ಲೀಗ್ ಹಂತದಲ್ಲಿ ಭಾರತ- ಪಾಕ್ ನಡುವಿನ ಪಂದ್ಯ ರದ್ದಾದಂತೆ, ಸೂಪರ್ 4 ಹಂತದ ಪಂದ್ಯವೂ ರದ್ದಾಗುತ್ತಾ ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC), ಈ ಉಭಯ ತಂಡಗಳ ಹೈವೋಲ್ಟೇಜ್ ಕದನಕ್ಕೆ ಮೀಸಲು ದಿನವನ್ನು ಇರಿಸುವ ತೀರ್ಮಾನಕ್ಕೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 10 ರಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮರುದಿನ ಅಂದರೆ ಸೆಪ್ಟೆಂಬರ್ 11 ರಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಸೂಪರ್-4ರಲ್ಲಿ ಈ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ಇರಿಸಲಾಗಿದ್ದು, ಇದಲ್ಲದೇ ಏಷ್ಯಾಕಪ್ ಫೈನಲ್‌ ಪಂದ್ಯಕ್ಕೂ ಮೀಸಲು ದಿನವನ್ನೂ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ಮೇಲೆ ಹೇಳಿದಂತೆ ಏಷ್ಯಾಕಪ್‌ನ ಲೀಗ್ ಸುತ್ತಿನ ಭಾರತ-ಪಾಕಿಸ್ತಾನ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾಡಿತ್ತು, ಆದರೆ ಪಾಕಿಸ್ತಾನದ ಬ್ಯಾಟಿಂಗ್‌ ಆರಂಭಕ್ಕೂ ಮುನ್ನ ಭಾರಿ ಮಳೆ ಸುರಿದು ಪಂದ್ಯವನ್ನೇ ರದ್ದುಗೊಳಿಸಬೇಕಾಯಿತು. ಪಲ್ಲೆಕೆಲೆಯಲ್ಲಿ ನಡೆದ ಈ ಪಂದ್ಯ ರದ್ದಾದ ಕಾರಣ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಇದಾದ ಬಳಿಕ ಟೀಂ ಇಂಡಿಯಾದ ಮುಂದಿನ ಪಂದ್ಯದಲ್ಲೂ ಮಳೆ ಹಾಜರಿ ಹಾಕಿತ್ತು. ಹೇಗೋ ಟೀಂ ಇಂಡಿಯಾ ನೇಪಾಳವನ್ನು ಸೋಲಿಸಿ ಸೂಪರ್-4 ಗೆ ಲಗ್ಗೆ ಇಟ್ಟಿತು. ಇದೀಗ ಸೂಪರ್-4 ಸುತ್ತಿನಲ್ಲಿ ಪಾಕಿಸ್ತಾನ ವಿರುದ್ಧದ ಹಣಾಹಣಿಯ ಮೇಲೂ ಮಳೆಯ ಛಾಯೆ ಆವರಿಸಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತೆ ನಿರಾಸಿಯಾಗುವುದನ್ನು ತಪ್ಪಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ನಿಗದಿಪಡಿಸಿದೆ.

IND vs PAK: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಿಕೊಂಡ ಜಸ್ಪ್ರಿತ್ ಬುಮ್ರಾ

ಇತರ ತಂಡಗಳಿಗೆ ಅನ್ಯಾಯ

ಏಷ್ಯಾಕಪ್‌ನ ಹೈವೋಲ್ಟೇಜ್ ಕದನ ಎಂಬ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಎಸಿಸಿ ಮೀಸಲು ದಿನವನ್ನು ಇರಿಸಿದೆ. ಆದರೆ ಇತರ ತಂಡಗಳ ಕಥೆ ಏನು? ಇಂಬುದು ಇದೀಗ ಹುಟ್ಟಿಕೊಂಡಿರುವ ಹೊಸ ಚರ್ಚೆಯಾಗಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಕೂಡ ಸೂಪರ್-4 ಹಂತ ತಲುಪಿವೆ. ಈ ತಂಡಗಳೂ ಕೂಡ ಸೆಪ್ಟೆಂಬರ್ 9 ರಂದು ಕೊಲಂಬೊದಲ್ಲಿ ಪಂದ್ಯವನ್ನು ಆಡಬೇಕಾಗಿದೆ. ಅಲ್ಲದೆ ಈ ದಿನವೂ ಭಾರೀ ಮಳೆ ಬೀಳಬಹುದು ಎಂದು ವರದಿಯಾಗಿದೆ. ಆದರೆ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳ ಕ್ರಿಕೆಟ್ ಸಂಸ್ಥೆಗಳು ಈ ವಿಷಯದ ಕುರಿತು ಎಸಿಸಿ ಮುಂದೆ ಅಸಮಾಧಾನ ಹೊರಹಾಕುವ ಸಾಧ್ಯತೆಗಳಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Fri, 8 September 23